ಕ್ಲಾಕ್ ಟವರ್ –ಹಂಪನಕಟ್ಟೆ- ಕೆಎಸ್ ರಾವ್ ರಸ್ತೆಯಲ್ಲಿ ಅಮಿತ್ ಷಾ ರೋಡ್ ಶೋ ; ನಗರದಲ್ಲಿ ವಾಹನ ಸಂಚಾರಕ್ಕೆ ಬದಲಿ ಮಾರ್ಗ  

28-04-23 09:02 pm       Mangalore Correspondent   ಕರಾವಳಿ

ಕೇಂದ್ರ ಗೃಹ ಸಚಿವ ಅಮಿತ್ ಷಾ ಮಂಗಳೂರು ನಗರದಲ್ಲಿ ರೋಡ್ ಶೋ ನಡೆಸುವುದರಿಂದ ನಗರ ವ್ಯಾಪ್ತಿಯಲ್ಲಿ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆಯನ್ನು ಮಾಡಲಾಗಿದೆ.

ಮಂಗಳೂರು, ಎ.28: ಕೇಂದ್ರ ಗೃಹ ಸಚಿವ ಅಮಿತ್ ಷಾ ಮಂಗಳೂರು ನಗರದಲ್ಲಿ ರೋಡ್ ಶೋ ನಡೆಸುವುದರಿಂದ ನಗರ ವ್ಯಾಪ್ತಿಯಲ್ಲಿ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆಯನ್ನು ಮಾಡಲಾಗಿದೆ. ಸಂಜೆ 5 ಗಂಟೆಗೆ ಟೌನ್ ಹಾಲ್ ವೃತ್ತದಿಂದ ನವಭಾರತ ಸರ್ಕಲ್ ವರೆಗೆ ರೋಡ್ ಶೋ ನಡೆಸುವುದರಿಂದ ಈ ಭಾಗದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 7 ಗಂಟೆ ವರೆಗೆ ವಾಹನಗಳ ಸಂಚಾರವನ್ನು ರದ್ದುಪಡಿಸಲಾಗಿದೆ.

ಸ್ಟೇಟ್ ಬ್ಯಾಂಕ್ ಕಡೆಯಿಂದ ಲೇಡಿಗೋಷನ್, ಕ್ಲಾಕ್ ಟವರ್ ರಸ್ತೆಯಾಗಿ ಹಂಪನಕಟ್ಟೆಗೆ ಯಾವುದೇ ಬಸ್ ಇನ್ನಿತರ ವಾಹನಗಳು ಈ ವೇಳೆಯಲ್ಲಿ ಸಂಚರಿಸಲು ಅವಕಾಶ ಇರುವುದಿಲ್ಲ. ಉಡುಪಿ ಕಡೆಯಿಂದ ಬರುವ ವಾಹನಗಳು ಕೊಟ್ಟಾರ ಚೌಕಿಯಿಂದ ಕೆಪಿಟಿ, ನಂತೂರು ವೃತ್ತ, ಕಂಕನಾಡಿ ಮೂಲಕ ಸ್ಟೇಟ್ ಬ್ಯಾಂಕ್ ಕಡೆಗೆ ತೆರಳುವುದು ಮತ್ತು ಅದೇ ದಾರಿಯಲ್ಲಿ ಮರಳುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಉಡುಪಿಯಿಂದ ಬರುವ ಕೆಎಸ್ಸಾರ್ಟಿಸಿ ಬಸ್ ಗಳು ಕೊಟ್ಟಾರ ಚೌಕಿ, ಕೆಪಿಟಿ ದಾರಿಯಾಗಿ ಲಾಲ್ ಬಾಗ್ ಬಸ್ ನಿಲ್ದಾಣಕ್ಕೆ ಬರುವುದು ಮತ್ತು ಹಿಂತಿರುಗಿ ಕಾಪಿಕಾಡ್ ರಸ್ತೆ, ಕುಂಟಿಕಾನ ಮೂಲಕ ಉಡುಪಿ ಕಡೆಗೆ ಮರಳುವುದು.

ತಲಪಾಡಿ, ಪಡೀಲ್ ಇನ್ನಿತರ ಕಡೆಯಿಂದ ಪಂಪ್ವೆಲ್ ಮೂಲಕ ಬರುವ ಬಸ್ ಇನ್ನಿತರ ವಾಹನಗಳು ಕಂಕನಾಡಿ ಸರ್ಕಲ್, ವೆಲೆನ್ಸಿಯಾ, ಮಂಗಳಾದೇವಿ ಮೂಲಕ ಸ್ಟೇಟ್ ಬ್ಯಾಂಕ್ ವೃತ್ತಕ್ಕೆ ತೆರಳುವುದು ಮತ್ತು ಅದೇ ದಾರಿಯಾಗಿ ಮರಳುವುದು. ಕಾಸರಗೋಡು, ಪುತ್ತೂರು, ಬೆಳ್ತಂಗಡಿ ಕಡೆಯ ಕೆಎಸ್ಸಾರ್ಟಿಸಿ ಬಸ್ ಗಳು ಪಡೀಲಿನಿಂದ ನಂತೂರು ಮೂಲಕ ಕೆಪಿಟಿ ದಾರಿಯಲ್ಲಿ ಲಾಲ್ ಬಾಗ್ ಬರುವುದು ಮತ್ತು ಅದೇ ದಾರಿಯಲ್ಲಿ ಹಿಂದಕ್ಕೆ ಹೋಗುವುದು. ಕೊಟ್ಟಾರ ಚೌಕಿಯಿಂದ ಬರುವ ಲಘು ವಾಹನಗಳು ಲೇಡಿಹಿಲ್ ವೃತ್ತದಿಂದ ಮಣ್ಣಗುಡ್ಡ, ಕುದ್ರೋಳಿ, ಬಂದರು ಜಂಕ್ಷನ್ ಮೂಲಕ ಸ್ಟೇಟ್ ಬ್ಯಾಂಕ್ ವೃತ್ತದ ಕಡೆಗೆ ಚಲಿಸುವುದು.

ಇದಲ್ಲದೆ, ಅಮಿತ್ ಷಾ ಬರುವುದರಿಂದ ಬೆಳಗ್ಗಿನಿಂದಲೇ ಲೇಡಿಗೋಷನ್ ರಸ್ತೆ, ಸೆಂಟ್ರಲ್ ಮಾರ್ಕೆಟ್ ರಸ್ತೆ, ಜಿಎಚ್ಎಸ್ ರಸ್ತೆ, ಕೆಎಸ್ ರಾವ್ ರಸ್ತೆ, ಪಿಎಂ ರಾವ್ ರಸ್ತೆ, ಯೇನಪೋಯ ಆಸ್ಪತ್ರೆ ರಸ್ತೆ, ವಿಟಿ ರೋಡ್, ಶರವು ದೇವಸ್ಥಾನ ರಸ್ತೆ, ಹಂಪನಕಟ್ಟೆ ವೃತ್ತದ ಆಸುಪಾಸು, ಪಿವಿಎಸ್ ಜಂಕ್ಷನ್ನಿಂದ ಗೋವಿಂದ ಪೈ ಸರ್ಕಲ್ ಆಸುಪಾಸಿನಲ್ಲಿ ಯಾವುದೇ ವಾಹನಗಳ ನಿಲುಗಡೆಗೆ ಅವಕಾಶ ಇರುವುದಿಲ್ಲ. ಅಲ್ಲದೆ, ಈ ಭಾಗದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನೂ ನಿಷೇಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಂಪನಕಟ್ಟೆ, ಕೆಎಸ್ ರಾವ್ ರಸ್ತೆ ಮಂಗಳೂರು ನಗರದ ಹೃದಯ ಭಾಗ ಆಗಿರುವುದರಿಂದ ವಾಹನ ಸಂಚಾರ ನಿಷೇಧದಿಂದಾಗಿ ಸಂಜೆ ಹೊತ್ತಿಗೆ ನಗರ ಪೂರ್ತಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆಯಿದೆ.

Amit shah in Mangalore on April 29th, traffic diverted in city for road show.