ಎಪ್ರಿಲ್ 29 ; ಕರಾವಳಿಗೆ ಅಮಿತ್ ಷಾ ಎಂಟ್ರಿ, ಉಡುಪಿ, ಮಂಗಳೂರಿನಲ್ಲಿ ಒಂದೇ ದಿನ ರೋಡ್ ಶೋ, ಪ್ರಚಾರ ಸಭೆ  

28-04-23 05:48 pm       Mangalore Correspondent   ಕರಾವಳಿ

ಕೇಂದ್ರ ಗೃಹ ಸಚಿವ ಅಮಿತ್ ಷಾ ಎಪ್ರಿಲ್ 29ರಂದು ಕರಾವಳಿಗೆ ಎಂಟ್ರಿ ಕೊಡಲಿದ್ದು, ಕೇಸರಿ ಪಾಳಯಕ್ಕೆ ಹೊಸ ಹುರುಪು ನೀಡಲಿದ್ದಾರೆ.

ಮಂಗಳೂರು, ಎ.28: ಕೇಂದ್ರ ಗೃಹ ಸಚಿವ ಅಮಿತ್ ಷಾ ಎಪ್ರಿಲ್ 29ರಂದು ಕರಾವಳಿಗೆ ಎಂಟ್ರಿ ಕೊಡಲಿದ್ದು, ಕೇಸರಿ ಪಾಳಯಕ್ಕೆ ಹೊಸ ಹುರುಪು ನೀಡಲಿದ್ದಾರೆ. ಮಧ್ಯಾಹ್ನ 2.20ಕ್ಕೆ ಉಡುಪಿ ಜಿಲ್ಲೆಯ ಆದಿ ಉಡುಪಿ ಹೆಲಿಪ್ಯಾಡ್ ಗೆ ಅಮಿತ್ ಷಾ ಆಗಮಿಸಲಿದ್ದು, ಅಲ್ಲಿಂದ ಕಟಪಾಡಿಗೆ ತೆರಳಿ ಗ್ರೀನ್ ವ್ಯೂ ಮೈದಾನದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಆನಂತರ ಹೆಲಿಕಾಪ್ಟರ್ ನಲ್ಲಿ ಬೈಂದೂರಿಗೆ ತೆರಳಿ, ನಾಲ್ಕು ಗಂಟೆಗೆ ಅಲ್ಲಿ ರೋಡ್ ಶೋ ನಡೆಸಲಿದ್ದಾರೆ. ಬೈಂದೂರು ಕ್ಷೇತ್ರದ ಸಿದ್ದಾಪುರ ವೃತ್ತದಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಕುಂದಾಪುರ ಮತ್ತು ಬೈಂದೂರಿನ ಬಿಜೆಪಿ ಕಾರ್ಯಕರ್ತರಿಗೆ ಹುರುಪು ತುಂಬಲಿದ್ದಾರೆ. ಅಮಿತ್ ಷಾ ಬೈಂದೂರಿನ ಕಾರ್ಯಕ್ರಮ ಮುಗಿಸಿ ಹೆಲಿಕಾಪ್ಟರ್ ನಲ್ಲಿ ಮಂಗಳೂರಿಗೆ ಬರಲಿದ್ದಾರೆ.

ಮಂಗಳೂರಿನ ಮೇರಿಹಿಲ್ ಹೆಲಿಪ್ಯಾಡ್ ಗೆ 5 ಗಂಟೆಗೆ ತಲುಪಲಿದ್ದು, ಅಲ್ಲಿಂದ ರಸ್ತೆ ಮೂಲಕ ಹಂಪನಕಟ್ಟೆಗೆ ಬರಲಿದ್ದಾರೆ. ಕ್ಲಾಕ್ ಟವರ್ ವೃತ್ತದಿಂದ ಹಂಪನಕಟ್ಟೆ, ಕೆಎಸ್ ರಾವ್ ರಸ್ತೆಯಾಗಿ ಗೋವಿಂದ ಪೈ ವೃತ್ತದ (ನವಭಾರತ ಸರ್ಕಲ್) ವರೆಗೆ ರೋಡ್ ಶೋ ನಡೆಸಲಿದ್ದಾರೆ. ಮಂಗಳೂರು ದಕ್ಷಿಣ ಮತ್ತು ಉತ್ತರ ಕ್ಷೇತ್ರದ ಅಭ್ಯರ್ಥಿಗಳಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಪರ ಅಮಿತ್ ಷಾ ಪ್ರಚಾರ ನಡೆಸಲಿದ್ದಾರೆ. ರೋಡ್ ಶೋ ಕೊನೆಯಲ್ಲಿ ಸೇರಿದ ಜನಸಮೂಹ ಉದ್ದೇಶಿಸಿ ಅಮಿತ್ ಷಾ ಭಾಷಣ ಮಾಡಲಿದ್ದಾರೆ.

ಈ ಬಾರಿಯ ಚುನಾವಣೆ ಪ್ರಚಾರಕ್ಕೆ ಉತ್ತರ ಕರ್ನಾಟಕ, ಬೆಂಗಳೂರು ಸುತ್ತಾಡಿದ್ದ ಅಮಿತ್ ಷಾ ಇದೇ ಮೊದಲ ಬಾರಿಗೆ ಕರಾವಳಿಗೆ ಬರುತ್ತಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಕಳೆದ ಚುನಾವಣೆಯಲ್ಲಿ ಹಿಂದುತ್ವದ ಸೂತ್ರದಡಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಅದೇ ರೀತಿಯ ಗೆಲುವಿನ ಪತಾಕೆಯನ್ನು ಹಾರಿಸಲು ಬಿಜೆಪಿ ನಾಯಕರು ಪಣ ತೊಟ್ಟಿದ್ದಾರೆ. ಇದೇ ವೇಳೆ, ಪುತ್ತೂರಿನಲ್ಲಿ ಬಿಜೆಪಿ ವಿರುದ್ಧ ಬಂಡಾಯ ಎದ್ದಿರುವ ಅರುಣ್ ಪುತ್ತಿಲ ಸ್ಪರ್ಧೆಯನ್ನು ಅಮಿತ್ ಷಾ ಗಂಭೀರವಾಗಿ ಪರಿಗಣಿಸಿದ್ದು, ಎಪ್ರಿಲ್ 29ರಂದು ರಾತ್ರಿ ಮಂಗಳೂರಿನಲ್ಲಿ ಆ ಬಗ್ಗೆ ಸ್ಥಳೀಯ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ.

BJP Amit Shah in Mangalore on April 29th, Road show in both Udupi and Mangalore. Road show will be held at Clock tower at Hampankatta in the city,  the campaign will be held in support of MLA Vedavyas Kamat and Dr Bharath shetty