ಹಿಂಪಡೆದ ನಾಮಪತ್ರ ಮರು ಊರ್ಜಿತಕ್ಕೆ ಉಳ್ಳಾಲ ಜೆಡಿಎಸ್ ಅಭ್ಯರ್ಥಿ ಮನವಿ ; ನಾಟಕೀಯ ನಡೆಗೆ ಸ್ವಪಕ್ಷೀಯರಿಂದಲೇ ಟೀಕೆ, ಮನವಿ ತಿರಸ್ಕರಿಸಿದ ಅಧಿಕಾರಿ 

24-04-23 10:26 pm       Mangalore Correspondent   ಕರಾವಳಿ

ಒಮ್ಮೆ ಹಿಂಪಡೆದ ನಾಮಪತ್ರವನ್ನು ಮರು ಊರ್ಜಿತಗೊಳಿಸಲು ಉಳ್ಳಾಲ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮನವಿ ಸಲ್ಲಿಸಿದ್ದು, ನಾಮ‌ಪತ್ರ ಹಿಂಪಡೆಯಲು ಕೈ ಕಾರ್ಯಕರ್ತರೇ ಕಾರಣವೆಂದು ಸಬೂಬು ನೀಡಿದರೂ ಚುನಾವಣಾ ಅಧಿಕಾರಿ ಮನವಿಯನ್ನ ತಿರಸ್ಕೃತಗೊಳಿಸಿದ್ದಾರೆ. 

ಉಳ್ಳಾಲ, ಎ.24 : ಒಮ್ಮೆ ಹಿಂಪಡೆದ ನಾಮಪತ್ರವನ್ನು ಮರು ಊರ್ಜಿತಗೊಳಿಸಲು ಉಳ್ಳಾಲ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮನವಿ ಸಲ್ಲಿಸಿದ್ದು, ನಾಮ‌ಪತ್ರ ಹಿಂಪಡೆಯಲು ಕೈ ಕಾರ್ಯಕರ್ತರೇ ಕಾರಣವೆಂದು ಸಬೂಬು ನೀಡಿದರೂ ಚುನಾವಣಾ ಅಧಿಕಾರಿ ಮನವಿಯನ್ನ ತಿರಸ್ಕೃತಗೊಳಿಸಿದ್ದಾರೆ. 

ಮಂಗಳೂರು ವಿಧಾನಸಭಾ (ಉಳ್ಳಾಲ) ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಲ ಜೆಡಿಎಸ್ ಅಭ್ಯರ್ಥಿಯಾಗಿ ಎ.20ರಂದು ನಾಮಪತ್ರ ಸಲ್ಲಿಸಿದ್ದು ಮರುದಿನ ನಾಮಪತ್ರ ಕ್ರಮಬದ್ಧವಾಗಿ ಹಿಂಪಡೆದಿದ್ದರು. ಇದೀಗ ತನಗೆ ಕಾಂಗ್ರೆಸ್ ಪಕ್ಷದ ಕೆಲವು ಕಾರ್ಯಕರ್ತರಿಂದ ಒತ್ತಡ ಹಾಗೂ ಬೆದರಿಕೆ ಇದ್ದುದರಿಂದ ನಾಮಪತ್ರ ಹಿಂಪಡೆದಿರುವುದಾಗಿಯೂ ಹಿಂಪಡೆದ ನಾಮಪತ್ರ ಮರು ಊರ್ಜಿತಗೊಳಿಸಿ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಕೋರಿದ್ದಾರೆ. ಆದರೆ ಕ್ರಮಬದ್ಧವಾಗಿ ನಾಮಪತ್ರ ಹಿಂಪಡೆದ ಕಾರಣ ಸ್ಪರ್ಧಿಸಲು ಕಾನೂನು ಪ್ರಕಾರ ಅವಕಾಶ ಇಲ್ಲ ಎಂದು ಚುನಾವಣಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ನಾಟಕವಾಡಿದರೇ ಅಲ್ತಾಫ್ ಕುಂಪಲ? 

ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅಲ್ತಾಫ್ ಕುಂಪಲ ಅವರು ಕನಿಷ್ಠ ನಾಲ್ಕು ಸಾವಿರ ಮತಗಳನ್ನಾದರೂ ಪಡೆಯುವ ಸಾಧ್ಯತೆ ಇತ್ತು. ಆಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿ ಮುಂದೆ ನಮ್ಮ ಸಾಧನೆಯೂ ಕಡಿಮೆ ಇಲ್ಲ ಎಂದು ರಾಜ್ಯದ ಮುಖಂಡರಿಗೆ ತೋರಿಸಲು ಹೊರಟಿದ್ದ ಪಕ್ಷದ ಮುಖಂಡರಿಗೆ ಅಲ್ತಾಫ್ ದಿಢೀರ್ ನಾಮಪತ್ರ ಹಿಂಪಡೆದಿದ್ದು ಸಂಶಯಕ್ಕೆ ಎಡೆಮಾಡಿತ್ತು. ಉಳ್ಳಾಲದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಅಲ್ತಾಫ್ ಅವರನ್ನು ಕಿಡ್ನಾಪ್ ಮಾಡಿದ್ದರು ಎಂಬ ಗುಲ್ಲೆಬ್ಬೆಸಲಾಗಿತ್ತು. ಅಷ್ಟಕ್ಕೂ ಬಿಜೆಪಿ, ಕಾಂಗ್ರೆಸ್ ಮುಖಂಡರು ಆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. 

ಒಂದರ್ಥದಲ್ಲಿ ಉಳ್ಳಾಲದಿಂದ ಜೆಡಿಎಸ್ ನಿಂದ ನಝೀರ್ ಉಳ್ಳಾಲ್, ಮಾಜಿ ಶಾಸಕ ಜಯರಾಮ‌ ಶೆಟ್ಟಿ ಅವರು ಪಕ್ಷದ ಗೆಲುವಿಗಾಗಿ ಸ್ಪರ್ಧಿಸಿದ್ದರೇ ಹೊರತು ಇತರ ಕೆಲವು ಕಾರ್ಯಕರ್ತರು ಚುನಾವಣೆ ಸಂದರ್ಭ ನಾಮಪತ್ರ ಸಲ್ಲಿಸಿ ಅನಾರೋಗ್ಯ ಕಾರಣ ನೀಡಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗುವುದು, ಇತರ ಪಕ್ಷದ ಮುಖಂಡರ ಜೊತೆ ಟೈ ಅಪ್ ಮಾಡಿ ತನ್ನ ವೈಯಕ್ತಿಕ ಸಾಲ ತೀರಿಸಿಕೊಳ್ಳುವುದು, ವಿಧಾನ ಪರಿಷತ್ ಚುನಾವಣೆಯಲ್ಲಿ‌ ಅವಿರೋಧ ಆಯ್ಕೆ ಇದ್ದಾಗಲೂ ಸ್ಪರ್ಧಿಸುವಂತೆ ನಾಟಕವಾಡಿ ಹಣ ಬಾಚಿಕೊಂಡಿದ್ದು ವರಿಷ್ಠರಿಗೆ ಇರಿಸು ಮುರಿಸು ಉಂಟುಮಾಡಿತ್ತು. ಉಳ್ಳಾಲ‌ ನಗರಸಭೆಯ ಜೆಡಿಎಸ್ ಪ್ರತಿನಿಧಿಗಳು ಅಲ್ತಾಫ್ ನಡೆಗೆ ಕೆಂಡಾಮಂಡಲವಾಗಿದ್ದಾರೆ. 
ಕಾನೂನಿನಡಿ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಿಂದ ‌ ಅರ್ಜಿ ತಿರಸ್ಕೃತಗೊಂಡದಕ್ಕಿಂತ ಬೆದರಿಕೆ ಇದ್ದರೆ ಪೊಲೀಸರಿಗೆ ಮಾಹಿತಿ ನೀಡಬಹುದಿತ್ತಲ್ಲವೇ? ನಗುತ್ತಲೇ ತೆರಳಿ ನಾಮಪತ್ರ ಹಿಂಪಡೆದ ಅಲ್ತಾಫ್ ಮುಖಂಡರಿಂದ ಉಗಿಸಿಕೊಳ್ಳೋದು ಬೇಡ ಎಂದು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಆರೋಪ ಮಾಡುತ್ತಿದ್ದು ಅಲ್ತಾಫ್ ನನ್ನು ನಂಬಿ‌ ಕೆಟ್ಟೆವು ಎಂಬ ಕೊರಗು ನಾಯಕರಲ್ಲಿ ಹೆಚ್ಚಿಸಿದೆ.

Mangalore Ullal JDS candidate Altaf Kumpala requests reconsideration of nomination back. Altaf Kumpala, a candidate from the Janata Dal Secular (JDS) party for the Mangalore Assembly Constituency, has claimed that he was abducted by a team of MLA Khader