ಮಾನಸಿಕ ಪುನಶ್ಚೇತನ ಕೇಂದ್ರದಲ್ಲಿ ಈದುಲ್ ಫಿತರ್ ಆಚರಣೆ ; ಆಶ್ರಮ ವಾಸಿಗಳೊಂದಿಗೆ ಬಿರಿಯಾನಿ ಉಂಡು ಸಂಭ್ರಮ 

22-04-23 10:34 pm       Mangalore Correspondent   ಕರಾವಳಿ

ಮಂಗಳೂರಿನ‌ ಹೆಲ್ಪ್ ಇಂಡಿಯಾ ಫೌಂಡೇಶನ್ ಆಶ್ರಯದಲ್ಲಿ ಸೋಮೇಶ್ವರದ ಪಶ್ಚಿಮ್‌‌ ರಿಹ್ಯಾಬ್ ಸೆಂಟರ್ ನಲ್ಲಿ ಈದುಲ್ ಫಿತರ್ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದ್ದು ಆಶ್ರಮ ವಾಸಿಗಳೊಂದಿಗೆ ಹೆಲ್ಪ್ ಇಂಡಿಯಾ ಸದಸ್ಯರು ಬಿರಿಯಾನಿ ಉಂಡು ಸಂಭ್ರಮಿಸಿದರು.

ಉಳ್ಳಾಲ, ಎ.22: ಮಂಗಳೂರಿನ‌ ಹೆಲ್ಪ್ ಇಂಡಿಯಾ ಫೌಂಡೇಶನ್ ಆಶ್ರಯದಲ್ಲಿ ಸೋಮೇಶ್ವರದ ಪಶ್ಚಿಮ್‌‌ ರಿಹ್ಯಾಬ್ ಸೆಂಟರ್ ನಲ್ಲಿ ಈದುಲ್ ಫಿತರ್ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದ್ದು ಆಶ್ರಮ ವಾಸಿಗಳೊಂದಿಗೆ ಹೆಲ್ಪ್ ಇಂಡಿಯಾ ಸದಸ್ಯರು ಬಿರಿಯಾನಿ ಉಂಡು ಸಂಭ್ರಮಿಸಿದರು.

ಸೋಮೇಶ್ವರದ ನೆಹರು ನಗರದ ಪಶ್ಚಿಮ್ ಚಾರಿಟೇಬಲ್ ಟ್ರಸ್ಟ್ ನ ಪಶ್ಚಿಮ್ ರಿಹ್ಯಾಬ್ (ಮಾನಸಿಕ ಪುನಶ್ಚೇತನ ಕೇಂದ್ರ) ಸೆಂಟರ್ ನಿವಾಸಿಗಳೊಂದಿಗೆ ಹೆಲ್ಪ್ ಇಂಡಿಯಾ ಫೌಂಡೇಷನ್ ಸದಸ್ಯರು ಈದುಲ್ ಫಿತರ್ ಹಬ್ಬವನ್ನ ಆಚರಿಸಿದರು. ಮುಖ್ಯ ಅತಿಥಿಗಳಾಗಿದ್ದ ಖ್ಯಾತ ನ್ಯಾಯವಾದಿ ಅರುಣ್ ಬಂಗೇರ ಮಾತನಾಡಿ ಸುಖ, ದುಃಖಗಳು ನಮ್ಮಿಂದಲೇ ಬರುತ್ತವೆ ಹೊರತು ಬೇರೆಯವರಿಂದಲ್ಲ. ಜೀವನದಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಕೊರಗು ಇದ್ದೇ ಇರುತ್ತದೆ. ಆದಷ್ಟು ಬೇಗನೆ ಆಶ್ರಮವಾಸಿಗಳು ಗುಣಮುಖರಾಗಿ ಸಮಾಜದ ಮುಖ್ಯವಾಹಿನಿಗೆ ಸೇರಿಕೊಳ್ಳಬೇಕು. ಇಂತಹವರೊಂದಿಗೆ ಹಬ್ಬ ಆಚರಿಸಿದ ಹೆಲ್ಪ್ ಇಂಡಿಯಾದ ಕಾರ್ಯ ಶ್ಲಾಘನೀಯ.

ಕೆಲವರಿಗೆ ಹಣ ಇದ್ದರೂ ಅದನ್ನ ಸಮಾಜಕ್ಕೆ ಕೊಡುವ ಮನಸ್ಸಿರುವುದಿಲ್ಲ. ಹಣ ಕ್ರೋಢೀಕರಿಸಿ ಸಮಾಜದ ಅಶಕ್ತರಿಗೆ ಸಹಾಯ ಮಾಡುವುದಲ್ಲದೆ ತಾವು ಮನೆಯಲ್ಲಿ ಹಬ್ಬದಲ್ಲಿ ಪಾಲ್ಗೊಳ್ಳದೆ ಈ ರೀತಿ ಮಾನಸಿಕ ಪುನಶ್ಚೇತನ ಕೇಂದ್ರದಲ್ಲಿ ಹಬ್ಬ ಆಚರಿಸಿದ್ದು ಅರ್ಥಪೂರ್ಣ ಎಂದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಅರುಣ್ ಉಳ್ಳಾಲ್ ಮಾತನಾಡಿ ಹಬ್ಬ ಬದುಕಿನಲ್ಲಿ ಬರುವ ಸವಿ ಕ್ಷಣ, ಕುಟುಂಬದ ಜೊತೆ ಸಂಭ್ರಮಿಸುವುದು ಸಾಮಾನ್ಯ. ಆದರೆ ಉದ್ದೇಶವನ್ನು ಸಾರ್ವತ್ರಿಕಗೊಳಿಸುವುದು ಸಮಾಜ ಒಪ್ಪುವ ಕಾರ್ಯ. ಮಾಲ್ ಗಳಲ್ಲಿನ ಸಂಭ್ರಮ ಕ್ಷಣಮಾತ್ರ, ವೃದ್ಧಾಶ್ರಮಗಳಲ್ಲಿ ಹಬ್ಬದ ದಿನಗಳನ್ನು ಕಳೆಯುವುದು ಯುವ ಪೀಳಿಗೆಗೆ ಮಾನವೀಯತೆ ಕಲಿಸಿದಂತಾಗುತ್ತದೆ ಎಂದರು. ಶಾಸಕ ಯು.ಟಿ.ಖಾದರ್, ಕೇಂದ್ರ ಜುಮಾ ಮಸೀದಿ ಉಪಾಧ್ಯಕ್ಷ ಯು.ಹೆಚ್ ಹಸೈನಾರ್, ಸಾಮಾಜಿಕ ಕಾರ್ಯಕರ್ತೆ ಪವಿತ್ರಾ ಆಚಾರ್ಯ, ಉದ್ಯಮಿ ಜಲಾಲುದ್ದೀನ್, ಹೆಲ್ಪ್ ಇಂಡಿಯಾ ಫೌಂಡೇಶನ್ ನ ಸ್ಥಾಪಕ ರಾಝಿಕ್ ಉಳ್ಳಾಲ್, ಝಾಕೀರ್ ಇಕ್ಲಾಸ್ ಮೊದಲಾದವರು ಉಪಸ್ಥಿತರಿದ್ದರು.

Mangalore Help India members celebrate Eid 2023 with mentally challenged people at Someshwara in Ullal.