ಕಾವೂರಿನಲ್ಲಿ ಶಾಸಕ ಭರತ್ ಶೆಟ್ಟಿ ರೋಡ್ ಶೋ ; ಕ್ಷೇತ್ರದಲ್ಲಿ ಮತ ಮಾರಾಟಕ್ಕಿಲ್ಲ ಎಂದು ಘೋಷಣೆ

18-04-23 06:34 pm       Mangaluru Correspondent   ಕರಾವಳಿ

ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಡಾ.ಭರತ್ ಶೆಟ್ಟಿ ಕಾವೂರಿನಲ್ಲಿ ಅದ್ದೂರಿ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದ್ದಾರೆ.

ಮಂಗಳೂರು, ಎ.18: ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಡಾ.ಭರತ್ ಶೆಟ್ಟಿ ಕಾವೂರಿನಲ್ಲಿ ಅದ್ದೂರಿ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಸಿದ್ದಾರೆ. ಮಂಗಳವಾರ ಬೆಳಗ್ಗೆ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆಗೈದು ಅಲ್ಲಿಂದ ಕಾವೂರಿನ ವರೆಗೆ ಕಾರ್ಯಕರ್ತರ ಮೆರವಣಿಗೆ ನಡೆಯಿತು. ನೂರಾರು ಕಾರ್ಯಕರ್ತರು ಮೆರವಣಿಗೆ ನಡೆಸಿದರೆ, ಶಾಸಕ ಭರತ್ ಶೆಟ್ಟಿ ಮತ್ತು ಸ್ಥಳೀಯ ಬಿಜೆಪಿ ನಾಯಕರು ವಾಹನದಲ್ಲಿ ರೋಡ್ ಶೋ ನಡೆಸಿದರು.

ಬಳಿಕ ಕಾವೂರಿನಲ್ಲಿ ಸಾರ್ವಜನಿಕ ಸಭೆ ನಡೆಸಿದ್ದು ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಅಶೋಕ್ ಶೆಟ್ಟಿ ಮತ್ತು ಪುರಂದರದಾಸ್ ಕುಳೂರು ಬಿಜೆಪಿ ಸೇರ್ಪಡೆಯಾದರು. ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಮಂಗಳೂರು ಉತ್ತರ ಕ್ಷೇತ್ರ ಸಮಿತಿ ಅಧ್ಯಕ್ಷ ತಿಲಕರಾಜ್ ಕೃಷ್ಣಾಪುರ, ಅಭಿವೃದ್ಧಿ ಮತ್ತು ಹಿಂದುತ್ವವನ್ನು ನಾವು ಜೊತೆ ಜೊತೆಯಾಗಿಯೇ ಕೊಂಡೊಯ್ದಿದ್ದೇವೆ. ಈ ನೆಲದ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದು, ಧರ್ಮದ ರಕ್ಷಣೆಯನ್ನು ಮಾಡುವುದು ಕೋಮುವಾದ ಎನ್ನಿಸಿದರೆ, ನಾವು ಕೋಮುವಾದಿಗಳೆಂದು ಕರೆಸಿಕೊಳ್ಳಲು ರೆಡಿ ಇದ್ದೇವೆ. ಆದರೆ ನಮ್ಮ ಕ್ಷೇತ್ರದಲ್ಲಿ ಯಾವುದೇ ಮತ ಮಾರಾಟಕ್ಕಿಲ್ಲ ಎಂಬುದನ್ನು ನಾವು ಸಾರಿ ಹೇಳುತ್ತೇವೆ. ಕಳೆದ ಬಾರಿ 26 ಸಾವಿರ ಮತಗಳಿಂದ ಗೆದ್ದಿದ್ದರೆ, ಈ ಬಾರಿ 50 ಸಾವಿರ ಮತಗಳಿಂದ ಗೆಲ್ಲುವುದು ನಮ್ಮ ಗುರಿ ಎಂದರು.

ಶಾಸಕ ಭರತ್ ಶೆಟ್ಟಿ ಮಾತನಾಡಿ, ಐದು ವರ್ಷಗಳ ಕಾಲ ಮನೆಯ ಮಗನಾಗಿ ಬೆಳೆಸಿದ್ದೀರಿ. ನೀವು ಹೇಳಿದ ಕೆಲಸವನ್ನು ನಾನು ಮಾಡಿದ್ದೇನೆ. ಬಹಳಷ್ಟು ಅಭಿವೃದ್ಧಿ ಕಾರ್ಯ ಮಾಡಲು ಬಾಕಿಯಿದೆ, ಅದನ್ನು ಪೂರೈಸಲು ನಮಗೆ ಮತ್ತೊಂದು ಅವಕಾಶ ಕೊಡುತ್ತೀರೆಂದು ನಂಬಿದ್ದೇನೆ ಎಂದರು. ಕಾವೂರಿನಲ್ಲಿ ತಮ್ಮ ವಾಹನದಲ್ಲಿ ಬಂದ ಭರತ್ ಶೆಟ್ಟಿ ಮಂಗಳೂರಿನ ತಾಲೂಕು ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಜೊತೆಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ, ಮೊಗವೀರ ಮುಖಂಡ ರಾಮಚಂದ್ರ ಬೈಕಂಪಾಡಿ ಸೇರಿದಂತೆ ಹಲವಾರು ಮುಖಂಡರು ಜೊತೆಗಿದ್ದರು.

Sitting BJP Mangaluru North MLA Dr Bharath Y Shetty filed his nomination papers for the upcoming legislative assembly elections here at Mangaluru taluk office on Tuesday April 18. Before filing the nomination, Dr Shetty offered pooja rituals and took blessings at Kavoor temple in the presence of party representatives and supporters.