ನಂದಿನಿ ನಮ್ಮ ಸ್ವಾಭಿಮಾನ, ನಂದಿನಿ ನಮ್ಮ ಹೆಮ್ಮೆ ;  ಬೆಲೆಯೇರಿಕೆ ಜನಸಾಮಾನ್ಯರಿಗೆ ಸಮಸ್ಯೆ ಆಗಿಲ್ಲ ಎಂದ ಬಿಜೆಪಿ ರಾಷ್ಟ್ರೀಯ ವಕ್ತಾರ 

10-04-23 04:21 pm       Mangalore Correspondent   ಕರಾವಳಿ

ಕರ್ನಾಟಕದ ನಂದಿನಿ ಮತ್ತು ಅಮುಲ್ ವಿಲೀನ ಆರೋಪ ಕಾಂಗ್ರೆಸಿನದ್ದು. ನಂದಿನಿ ನಮ್ಮ ಸ್ವಾಭಿಮಾನ, ನಂದಿನಿ ಕರ್ನಾಟಕದ ಪಾಲಿನ ಹೆಮ್ಮೆ. ನಂದಿನಿ ಹಿತ ಕಾಯಲು ಬಿಜೆಪಿ ಬದ್ಧವಿದೆ.‌

ಮಂಗಳೂರು, ಎ.10 : ಕರ್ನಾಟಕದ ನಂದಿನಿ ಮತ್ತು ಅಮುಲ್ ವಿಲೀನ ಆರೋಪ ಕಾಂಗ್ರೆಸಿನದ್ದು. ನಂದಿನಿ ನಮ್ಮ ಸ್ವಾಭಿಮಾನ, ನಂದಿನಿ ಕರ್ನಾಟಕದ ಪಾಲಿನ ಹೆಮ್ಮೆ. ನಂದಿನಿ ಹಿತ ಕಾಯಲು ಬಿಜೆಪಿ ಬದ್ಧವಿದೆ.‌ ಕಾಂಗ್ರೆಸ್ ಸುಳ್ಳುಗಳಿಂದಲೇ ಜನರನ್ನು ತಪ್ಪು ದಾರಿಗೆಳೆಯುತ್ತಿದೆ. 2018 ರಲ್ಲಿದ್ದ ಹಾಲು ಉತ್ಪಾದನೆ ಈಗ ಡಬಲ್ ಆಗಿರುವುದು ನಮ್ಮ ಸರ್ಕಾರದ ಸಾಧನೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಹೇಳಿದ್ದಾರೆ. ‌

ಮಂಗಳೂರಿನಲ್ಲಿ ಕೊಡಗು, ಉಡುಪಿ ಮತ್ತು ದಕ್ಷಿಣ ಕನ್ನಡ ಮೂರು ಜಿಲ್ಲೆಗಳ ವ್ಯಾಪ್ತಿಯ ಬಿಜೆಪಿ ಮಾಧ್ಯಮ ಕೇಂದ್ರವನ್ನು ಉದ್ಘಾಟಿಸಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಕಾಂಗ್ರೆಸ್ ರಾಷ್ಟ್ರೀಯ ಭದ್ರತೆಗೆ ಆದ್ಯತೆ ಕೊಡಲ್ಲ. ಬಿಜೆಪಿಗೆ ರಾಷ್ಟ್ರದ ಹಿತ, ನಾಗರಿಕರ ಹಿತವೇ ಮುಖ್ಯ. ಸಿದ್ದರಾಮಯ್ಯ ಸರ್ಕಾರ 1700 ಮಂದಿ ಪಿಎಫ್ಐ, ಎಸ್ಡಿಪಿಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿತ್ತು. ಅದರಿಂದಾಗಿ ಕರಾವಳಿ ಸೇರಿ ರಾಜ್ಯದಲ್ಲಿ ಕೊಲೆ ಸರಣಿ ನಡೆದಿತ್ತು.‌ ಜನರ ಶಾಂತಿ, ನೆಮ್ಮದಿ ಕದಡುವ ಸ್ಥಿತಿ ತಲೆದೋರಿತ್ತು. ಪೊಲೀಸರ ಆತ್ಮ ಸ್ಥೈರ್ಯವನ್ನೇ ಕುಸಿಯುವಂತೆ ಮಾಡಿದ್ದು ಸಿದ್ದರಾಮಯ್ಯ ಸರ್ಕಾರ. 

ಹಾಲಿ ಬಿಜೆಪಿ ಆಡಳಿತದಲ್ಲಿ ರಾಜ್ಯದಲ್ಲಿ ಶಾಂತಿ ಸ್ಥಾಪನೆಯಾಗಿದೆ. ಅಭಿವೃದ್ಧಿ ಕಾರ್ಯಗಳಾಗಿವೆ. ನಾವು ತುಷ್ಟೀಕರಣ ಸಲುವಾಗಿ ರಾಷ್ಟ್ರದ ಹಿತ ಬಲಿಕೊಡಲ್ಲ. ಕರಾವಳಿ ಭಾಗದಲ್ಲಿ ಕಾಂಗ್ರೆಸ್ ತುಷ್ಟೀಕರಣ ಮಿತಿಮೀರಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ವೇಣುಗೋಪಾಲ್ ಸಹಿತ ಕಾಂಗ್ರೆಸ್ ನಾಯಕರು ಪಿಎಫ್ಐ ಬ್ಯಾನ್ ವಿರುದ್ಧ ಇದ್ದರು. ಆದರೆ ಮೋದಿ ಸರ್ಕಾರ ಕಠಿಣ ನಿರ್ಧಾರ ಕೈಗೊಂಡು ಪಿಎಫ್ಐ ಬ್ಯಾನ್ ಮಾಡಿತ್ತು. ಜನರಿಗೆ ನೆನಪು ಕಡಿಮೆ. ಹಾಗಂತ, ಕರ್ನಾಟಕದ ಜನ ಸೆಕೆಂಡ್ ಡಿಗ್ರಿ ಸಿಟಿಜನ್ ಅಲ್ಲ. ಡಬಲ್ ಇಂಜಿನ್ ಸರ್ಕಾರಕ್ಕಾಗಿ ಮತ ನೀಡಲಿದ್ದಾರೆಂಬ ವಿಶ್ವಾಸ ಇದೆ. 

ಕರ್ನಾಟಕದಲ್ಲಿ ಸುಳ್ಳು ಭರವಸೆಗಳಿಂದ, ಗ್ಯಾರಂಟಿ ಘೋಷಣೆಯಿಂದ ಮತ ಗಳಿಸಬಹುದು ಅಂದ್ಕೊಂಡಿದ್ದಾರೆ.‌ ಆದರೆ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಬಗ್ಗೆ ಜನರಿಗೆ ಅರಿವು ಇದೆ.‌ ಈ ಹಿಂದೆ ಛತ್ತೀಸ್ಗಢದಲ್ಲಿ ಅಧಿಕಾರಕ್ಕೆ ಬಂದರೆ ಹತ್ತು ದಿನಗಳಲ್ಲಿ ರೈತರ ಸಾಲ ಮನ್ನಾ ಮಾಡ್ತೀವಿ ಅಂತ ರಾಹುಲ್ ಗಾಂಧಿ ಹೇಳಿದ್ದರು. ಉಚಿತ ಭರವಸೆಗಳ ಘೋಷಣೆ ಮಾಡಿದ್ದರು.‌ ಆದರೆ ಅಲ್ಲಿ ಜನರಿಗೆ ಕೊಟ್ಟ ಭರವಸೆಗಳನ್ನು ಯಾಕೆ ಐದು ವರ್ಷ ಆದರೂ ಈಡೇರಿಸಲು ಆಗಿಲ್ಲ ಎಂದು ಗೌರವ್ ಭಾಟಿಯಾ ಪ್ರಶ್ನೆ ಮಾಡಿದರು. ಬಿಜೆಪಿ ಸರ್ಕಾರದ ಅಭಿವೃದ್ಧಿಗೆ ಈ ಬಾರಿ ಜನತೆ ಐತಿಹಾಸಿಕ ವಿಜಯ ತಂದುಕೊಡಲಿದ್ದಾರೆ. ಅದರಲ್ಲಿ ಸಂಶಯ ಇಲ್ಲ ಎಂದರು ಭಾಟಿಯಾ. 

ಜೀವನಾವಶ್ಯಕ ವಸ್ತುಗಳ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಿದೆ ಎಂಬ ಪ್ರಶ್ನೆಗೆ, ಜನಸಾಮಾನ್ಯರಿಗೆ ಬೆಲೆಯೇರಿಕೆಯಿಂದ ಸಮಸ್ಯೆ ಆಗಿಲ್ಲ ಎಂದ ಬಿಜೆಪಿ ಮುಖಂಡ, 2014ರಲ್ಲಿ ಹಣದುಬ್ಬರದ ಸ್ಥಿತಿ ಡಬಲ್ ಡಿಜಿಟ್ ಇತ್ತು. ಆಗ 13 ಪರ್ಸೆಂಟ್ ಇದ್ದ ಹಣದುಬ್ಬರ ಈಗ 5-6 ಪರ್ಸೆಂಟಿಗೆ ಬಂದಿದೆ ಎನ್ನುವುದನ್ನು ಗಮನಿಸಬೇಕು. ಈಗ ದೇಶದ ಜಿಡಿಪಿ ದರವೂ ಹೆಚ್ಚಿದೆ, ಗ್ಯಾಸ್ ಸಿಲಿಂಡರ್ ರೇಟೂ ಹೆಚ್ಚಾಗಿದೆ. ಇದೇ ವೇಳೆ, ದೇಶದಲ್ಲಿ 9.5 ಕೋಟಿ ಬಡವರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಕೊಟ್ಟಿದ್ದೇವೆ.‌ ಇವೆಲ್ಲದರ ಮಧ್ಯೆ ಕೆಲವು ವಸ್ತುಗಳ ಬೆಲೆ ಏರಿದೆ ಎನ್ನುವುದರಲ್ಲಿ ಅರ್ಥವಿಲ್ಲ ಎಂದರು. 

ಬಿಜೆಪಿ ಕೇಂದ್ರ, ರಾಜ್ಯದಲ್ಲಿ ಇಷ್ಟು ಪ್ರಭಾವ ಇದ್ದರೂ ಅಭ್ಯರ್ಥಿ ಪಟ್ಟಿ ವಿಳಂಬ ಯಾಕೆ ಎಂಬ ಪ್ರಶ್ನೆಗೆ, ಪಕ್ಷದ ಸಂಸದೀಯ ಕಮಿಟಿ ಚರ್ಚಿಸಿ ಅಭ್ಯರ್ಥಿ ಫೈನಲ್ ಮಾಡುತ್ತೆ. ಶೀಘ್ರದಲ್ಲೇ ಯಡಿಯೂರಪ್ಪ ಸುದ್ದಿಗೋಷ್ಟಿ ಕರೆದು ಅಭ್ಯರ್ಥಿ ಲಿಸ್ಟ್ ಬಿಡುಗಡೆ ಮಾಡಲಿದ್ದಾರೆ.‌ ಬಿಜೆಪಿ ರಾಷ್ಟ್ರೀಯ ಪಕ್ಷ, ಒಂದು ಕುಟುಂಬದ ಹಿಡಿತದಲ್ಲಿರುವ ಪಕ್ಷ ಅಲ್ಲ.‌ ಬಿಜೆಪಿ ಡಿಫರೆಂಟ್ ಪಾರ್ಟಿ ಅಂತ ಜನರಿಗೆ ಗೊತ್ತಿದೆ.‌ ಕ್ರಿಕೆಟ್ ಮ್ಯಾಚ್ ಗೆಲ್ಲಲು ಅಳೆದು ತೂಗಿ ಆಟಗಾರರನ್ನು ಇಳಿಸುತ್ತೇವೆ ಎಂದು ಹೇಳಿದರು.

Nandini is the pride of Karnataka says BJP Spokesperson Gaurav Bhatia. Earlier, he inaugurated the Mangaluru division BJP media centre. Congress has been making baseless allegations. No decision that will affect the people of Karnataka and farmers in the state have been taken,” he said and added that KMF’s turnover went up after BJP came to power in 2019. In 2022, the turnover stood at 25,000 crore, he said.