ಸರಕಾರಿ ನೌಕರರ ಮುಷ್ಕರದ ಬಿಸಿ ; ಮಿನಿ ವಿಧಾನಸೌಧ ಗೇಟಿಗೇ ಬೀಗ, ಜಿಲ್ಲಾಧಿಕಾರಿ ಕಚೇರಿಗೆ ಬರುತ್ತಿದ್ದ ಸಾರ್ವಜನಿಕರಿಂದ ಹಿಡಿಶಾಪ !

01-03-23 02:54 pm       Mangalore Correspondent   ಕರಾವಳಿ

ರಾಜ್ಯ ಸರಕಾರಿ ನೌಕರರ ದಿಢೀರ್ ಮುಷ್ಕರದಿಂದಾಗಿ ಮಂಗಳೂರು ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿಯೂ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯಿತು. ಮಂಗಳೂರಿನಲ್ಲಿ ಮಿನಿ ವಿಧಾನಸೌಧದ ಹೊರಗಿನ ಗೇಟಿಗೇ ಬೀಗ ಹಾಕಲಾಗಿದ್ದು, ನೌಕರರು ಬೆಳಗ್ಗೆ ಕರ್ತವ್ಯಕ್ಕೇ ಬಂದಿರಲಿಲ್ಲ. ಪುತ್ತೂರು, ಬಂಟ್ವಾಳದಲ್ಲಿಯೂ ಇದೇ ರೀತಿಯ ಸ್ಥಿತಿ ಇತ್ತು.

ಮಂಗಳೂರು, ಮಾ.1: ರಾಜ್ಯ ಸರಕಾರಿ ನೌಕರರ ದಿಢೀರ್ ಮುಷ್ಕರದಿಂದಾಗಿ ಮಂಗಳೂರು ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿಯೂ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯಿತು. ಮಂಗಳೂರಿನಲ್ಲಿ ಮಿನಿ ವಿಧಾನಸೌಧದ ಹೊರಗಿನ ಗೇಟಿಗೇ ಬೀಗ ಹಾಕಲಾಗಿದ್ದು, ನೌಕರರು ಬೆಳಗ್ಗೆ ಕರ್ತವ್ಯಕ್ಕೇ ಬಂದಿರಲಿಲ್ಲ. ಪುತ್ತೂರು, ಬಂಟ್ವಾಳದಲ್ಲಿಯೂ ಇದೇ ರೀತಿಯ ಸ್ಥಿತಿ ಇತ್ತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂದಾಜು 11 ಸಾವಿರ ಸರಕಾರಿ ನೌಕರರಿದ್ದು, ಯಾವುದೇ ಪ್ರತಿಭಟನೆ, ಮೆರವಣಿಗೆ ನಡೆಸದೆ ಸದ್ದಿಲ್ಲದೆ ತಮ್ಮ ಕರ್ತವ್ಯಕ್ಕೆ ಗೈರಾಗುವ ಮೂಲಕ ಮುಷ್ಕರ ನಡೆಸಿದ್ದಾರೆ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್ ಕಚೇರಿ, ಮಂಗಳೂರಿನ ಮಹಾನಗರ ಪಾಲಿಕೆ ಕಚೇರಿ ಸೇರಿದಂತೆ ಯಾವುದೇ ವಿಭಾಗದಲ್ಲೂ ನೌಕರರು ಕರ್ತವ್ಯಕ್ಕೆ ಹಾಜರಾಗಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಿ ವಿಭಾಗ ಇರಲಿಲ್ಲ. ಬದಲಿಗೆ, ತುರ್ತು ಸೇವೆ ನಿರ್ವಹಿಸುವ ಸಿಬಂದಿ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಮಂಗಳೂರಿನ ಸ್ಟೇಟ್ ಬ್ಯಾಂಕ್ ವೃತ್ತದ ಬಳಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಿಬಂದಿ ಇಲ್ಲದೆ ಬಿಕೋ ಎನ್ನುತ್ತಿತ್ತು. ಯಾವತ್ತೂ ಸಾರ್ವಜನಿಕರು ಮತ್ತು ಸರಕಾರಿ ನೌಕರರಿಂದ ಗಿಜಿಗುಟ್ಟುತ್ತಿದ್ದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಇಂದು ಖಾಲಿ ಖಾಲಿಯಾಗಿತ್ತು. ಯಾವುದೇ ವಿಭಾಗದಲ್ಲೂ ಕರ್ತವ್ಯಕ್ಕೆ ನೌಕರರು ಇರಲಿಲ್ಲ. ಜಿಲ್ಲಾಧಿಕಾರಿ ಕಚೇರಿ ಪ್ರವೇಶದ ಜಾಗದಲ್ಲಿ ರಾಜ್ಯ ಸರಕಾರಿ ನೌಕರರ ಮುಷ್ಕರದ ಬಗ್ಗೆ ಪೋಸ್ಟರ್ ಅಂಟಿಸಲಾಗಿತ್ತು. 40 ಶೇಕಡಾ ವೇತನ ಹೆಚ್ಚಿಸಬೇಕು. ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಮತ್ತೆ ಜಾರಿಗೆ ತರಬೇಕು ಎಂಬ ಬೇಡಿಕೆಯನ್ನು ಬರೆಯಲಾಗಿತ್ತು.

ಸರಕಾರಿ ನೌಕರರ ಮುಷ್ಕರದ ಬಗ್ಗೆ ಅರಿವಿರದ ಕೆಲವು ಸಾರ್ವಜನಿಕರು ತಮ್ಮ ಕೆಲಸ ಕಾರ್ಯಕ್ಕಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ನಿರಾಸೆಯಿಂದ ಹಿಂತಿರುಗುತ್ತಿದ್ದರು. ಸಾರ್ವಜನಿಕರನ್ನು ಬಾಗಿಲಲ್ಲಿ ನಿಂತಿದ್ದ ಸೆಕ್ಯುರಿಟಿ ಗಾರ್ಡ್ ಹಿಂದಕ್ಕೆ ಕಳಿಸುತ್ತಿದ್ದರು. ಲಾಲ್ ಬಾಗಿನ ಕಾರ್ಪೊರೇಶನ್ ಕಚೇರಿಯ ಬಳಿಯೂ ಇದೇ ರೀತಿಯ ಸ್ಥಿತಿ ಇತ್ತು. ಕೆಲವು ಸಾರ್ವಜನಿಕರು ಎಂದಿನಂತೆ ಪಾಲಿಕೆ ಕಚೇರಿಗೆ ಬಂದು ಬರಿಗೈಲಿ ವಾಪಸಾಗುತ್ತಿದ್ದರು. ಮುಷ್ಕರ ನಿರತ ಸರಕಾರಿ ನೌಕರರು ಮಿನಿ ವಿಧಾನಸೌಧ ಬಳಿಯ ತಮ್ಮ ಸಂಘದ ಕಚೇರಿಯ ಮುಂದೆ ಸೇರಿದ್ದರು. ಬೆಳಗ್ಗೆ ಕೆಲಹೊತ್ತು ಸಭೆ ನಡೆಸಿ, ರಾಜ್ಯ ಸಂಘದ ಸೂಚನೆಯನ್ನು ಪಾಲಿಸುವುದಾಗಿ ನಿರ್ಧರಿಸಿ ಹಿಂದಕ್ಕೆ ಹೋಗಿದ್ದರು. ಮಧ್ಯಾಹ್ನ ಹೊತ್ತಿಗೆ ಮುಷ್ಕರ ಅಂತ್ಯದ ಬಗ್ಗೆ ಘೋಷಣೆ ರಾಜ್ಯ ಘಟಕದಿಂದ ಹೊರಬಿದ್ದಿದೆ.

The state government employees have resorted to indefinite protests from Wednesday March 1 for their various demands following calls from their union. The heat of the protests has touched Dakshina Kannada district and government services were unavailable for ordinary people.