ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತನ ಅಸಹಾಯಕ ಕೂಗು ; ಬದುಕಿದ್ದಾಗಲೇ ತಿಥಿಗೆ ಆಹ್ವಾನ! ಬೆಳಗ್ಗೆ ಸಂತಾಪ, ಮಧ್ಯಾಹ್ನ ತಿಥಿ ಊಟ! 

09-02-26 12:29 pm       HK News Desk   ಕರ್ನಾಟಕ

ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ರೈತರೊಬ್ಬರು ಬದುಕಿದ್ದಾಗಲೇ ತನ್ನ ತಿಥಿ ಹಾಗೂ ಶ್ರದ್ಧಾಂಜಲಿ ಸಭೆಗೆ ಅಧಿಕಾರಿಗಳಿಗೆ ಆಹ್ವಾನ ನೀಡಿರುವ ಅಪರೂಪದ ಮತ್ತು ಆಕ್ರೋಶಭರಿತ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ.

ಚಿಕ್ಕಮಗಳೂರು, ಫೆ.9 : ಸರ್ಕಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತ ರೈತರೊಬ್ಬರು ಬದುಕಿದ್ದಾಗಲೇ ತನ್ನ ತಿಥಿ ಹಾಗೂ ಶ್ರದ್ಧಾಂಜಲಿ ಸಭೆಗೆ ಅಧಿಕಾರಿಗಳಿಗೆ ಆಹ್ವಾನ ನೀಡಿರುವ ಅಪರೂಪದ ಮತ್ತು ಆಕ್ರೋಶಭರಿತ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ.

ಗಂಧದ ಬೆಳೆಗಾರ ವಿಶುಕುಮಾರ್ ಎಂಬವರು ಹಲವು ವರ್ಷಗಳಿಂದ ತಮ್ಮ ಜಮೀನನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಕಳೆದ ಕೆಲ ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ತಮ್ಮ ಜಮೀನು ಹಾಗೂ ಜಮೀನಿನಲ್ಲಿದ್ದ ಬೆಲೆಬಾಳುವ ಗಂಧದ ಮರಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿದೆ. ಆದರೆ ಸರ್ಕಾರ ಇದಕ್ಕೆ ಸೂಕ್ತ ಪರಿಹಾರ ನೀಡದೆ ವಿಶುಕುಮಾರ್‌ ಅವರನ್ನು ಸತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಬೇಸತ್ತ ವಿಶುಕುಮಾರ್‌ ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ.

ವಿಶುಕುಮಾರ್ ವಿತರಿಸಿರುವ ಆಹ್ವಾನ ಪತ್ರಿಕೆಯಲ್ಲಿ, “ನಾಳೆ ಬೆಳಗ್ಗೆ 10 ಗಂಟೆಗೆ ನನ್ನ ಸಂತಾಪ ಸಭೆ ಹಾಗೂ ಮಧ್ಯಾಹ್ನ 1 ಗಂಟೆಗೆ ಊಟದ ವ್ಯವಸ್ಥೆ ಇದೆ. ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಧಿಕಾರಿಗಳು, ಅರಣ್ಯ ಇಲಾಖೆಯ ಭ್ರಷ್ಟ ಅಧಿಕಾರಿಗಳು, ಪೊಲೀಸ್ ಇಲಾಖೆಯ ಒಳ್ಳೆಯ ಅಧಿಕಾರಿಗಳು ಹಾಗೂ ವಿಶೇಷ ಭೂಸ್ವಾಧೀನ ಅಧಿಕಾರಿಗಳು ತಪ್ಪದೇ ಹಾಜರಾಗಬೇಕು” ಎಂದು ವ್ಯಂಗ್ಯಭರಿತವಾಗಿ ಬರೆಸಿದ್ದಾರೆ. ಈ ಆಹ್ವಾನವು ವ್ಯವಸ್ಥೆಯ ವಿರುದ್ಧ ಅವರ ಅಸಹಾಯಕತೆ ಮತ್ತು ಆಕ್ರೋಶವನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಅಧಿಕಾರಿಗಳ ಅವೈಜ್ಞಾನಿಕ ದರ ನಿಗದಿಯೇ ಈ ಪ್ರತಿಭಟನೆಯ ಮೂಲ ಕಾರಣವಾಗಿದೆ. ರೈತನ ಹೇಳಿಕೆಯಂತೆ, ಜಮೀನು ಸ್ವಾಧೀನದ ವೇಳೆ ಇತರ ಮರಗಳಿಗೆ ಲಕ್ಷಾಂತರ ರೂಪಾಯಿ ಪರಿಹಾರ ನಿಗದಿಪಡಿಸಲಾಗಿದೆ. ಒಂದು ಮಾವಿನ ಮರಕ್ಕೆ 63 ಸಾವಿರ ರೂ., ತೆಂಗಿನ ಮರಕ್ಕೆ 37 ಸಾವಿರ ರೂ., ನಿಂಬೆ ಗಿಡಕ್ಕೆ 3,400 ರೂ. ಹಾಗೂ ಬೇವಿನ ಮರಕ್ಕೆ 2,200 ರೂ. ನೀಡಲಾಗುತ್ತಿದೆ. ಆದರೆ ಅತ್ಯಂತ ಬೆಲೆಬಾಳುವ ಶ್ರೀಗಂಧದ ಮರಕ್ಕೆ ಕೇವಲ 420 ರೂ. ಮಾತ್ರ ನಿಗದಿಪಡಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯಾಯಾಲಯವು ಶ್ರೀಗಂಧದ ಮರಕ್ಕೆ ಕನಿಷ್ಠ 25 ಸಾವಿರ ರೂ. ವೈಜ್ಞಾನಿಕ ದರ ನಿಗದಿಪಡಿಸುವಂತೆ ಸೂಚಿಸಿದ್ದರೂ, ಅದನ್ನು ಕಡೆಗಣಿಸಿ ತೀರಾ ಕಡಿಮೆ ಮೊತ್ತ ನಿಗದಿಪಡಿಸಲಾಗಿದೆ ಎಂದು ವಿಶುಕುಮಾರ್ ಆರೋಪಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ರೋಸಿಹೋಗಿರುವ ಅವರು, ವಾರದ ಹಿಂದೆಯಷ್ಟೇ ರಾಷ್ಟ್ರಪತಿಗಳಿಗೆ ದಯಾಮರಣಕ್ಕೆ ಮನವಿ ಸಲ್ಲಿಸಿದ್ದಲ್ಲದೆ, ಶಿವಮೊಗ್ಗದ ಸಿಸಿಎಫ್ ಕಚೇರಿ ಬಳಿ ಕಾರಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಆದರೂ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ, ಇದೀಗ ಬದುಕಿದ್ದಾಗಲೇ ತನ್ನ ತಿಥಿಗೆ ಆಹ್ವಾನ ನೀಡುವ ಮೂಲಕ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

In a shocking protest against alleged negligence by National Highway authorities, a sandalwood farmer from Tarikere in Chikkamagaluru has invited officials to attend his own condolence meeting and death ritual while still alive. Vishukumar, whose land and valuable sandalwood trees were acquired for highway construction, claims he received grossly unfair compensation — just ₹420 for a sandalwood tree despite court directions suggesting much higher rates.