ಪಜೀರು ಮಸೀದಿಗೆ ಕನ್ನ ಹಾಕಿದ ಕಳ್ಳರು ; ಮಸೀದಿಗೆ ನುಗ್ಗಿ ಆರು ಕಾಣಿಕೆ ಡಬ್ಬಿಗಳನ್ನು ಒಡೆದು ನಗದು ಕಳವು 

02-11-22 05:59 pm       Mangalore Correspondent   ಕರಾವಳಿ

ಕೊಣಾಜೆ ಠಾಣೆ ವ್ಯಾಪ್ತಿಯ ಪಜೀರು ಗ್ರಾಮದ ಅರ್ಕಾಣ ಬದ್ರಿಯಾ ಜುಮಾ ಮಸೀದಿಗೆ ಕಳ್ಳರು ನುಗ್ಗಿ ಆರು ಕಾಣಿಕೆ ಹುಂಡಿಯಿಂದ ನಗದು ಕಳವುಗೈದ ಘಟನೆ ಮಂಗಳವಾರ ತಡರಾತ್ರಿ‌ ನಡೆದಿದೆ. 

ಉಳ್ಳಾಲ, ನ.2 : ಕೊಣಾಜೆ ಠಾಣೆ ವ್ಯಾಪ್ತಿಯ ಪಜೀರು ಗ್ರಾಮದ ಅರ್ಕಾಣ ಬದ್ರಿಯಾ ಜುಮಾ ಮಸೀದಿಗೆ ಕಳ್ಳರು ನುಗ್ಗಿ ಆರು ಕಾಣಿಕೆ ಹುಂಡಿಯಿಂದ ನಗದು ಕಳವುಗೈದ ಘಟನೆ ಮಂಗಳವಾರ ತಡರಾತ್ರಿ‌ ನಡೆದಿದೆ. 

ಮಂಗಳವಾರ ಮಧ್ಯರಾತ್ರಿ ವೇಳೆ ಮಸೀದಿಯ ಪಕ್ಕದ ಕೋಣೆಯೊಂದರಲ್ಲಿದ್ದ ಪಿಕ್ಕಾಸು, ಹಾರೆಯನ್ನ ಬಳಸಿ ಮಸೀದಿಯ ಆವರಣ ಗೋಡೆಯಲ್ಲಿದ್ದ ಒಟ್ಟು ಆರು ಕಾಣಿಕೆ ಹುಂಡಿಗಳನ್ನ ಒಡೆದು ನಗದು ಕಳವುಗೈಯಲಾಗಿದೆ. ಕಳ್ಳತನದ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಓರ್ವ ವ್ಯಕ್ಯಿಯೇ ಕಳವುಗೈದಿರುವ ದೃಶ್ಯ ಕಂಡುಬಂದಿದೆ. 

ಮೊದಲು ಹೊರಗಿನ ಕಾಣಿಕೆ ಡಬ್ಬಿಯನ್ನು ಮುರಿದ ಕಳ್ಳ ಬಳಿಕ ಹಾರೆಯ ಸಹಾಯದಿಂದ ಮಸೀದಿಯ ಬಾಗಿಲಿನ ಚಿಲಕವನ್ನು ಒಡೆದು ಒಳಗೆ ನುಗ್ಗಿದ್ದಾನೆ. ಅಲ್ಲಿದ್ದ ಕಾಣಿಕೆ ಡಬ್ಬಿಗಳನ್ನು ಒಡೆದು ನಗದು ದೋಚಿದ್ದಾನೆ. ಮಸೀದಿ ಕಚೇರಿಯ ಬಾಗಿಲನ್ನೂ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಶಾಸಕ ಯು.ಟಿ ಖಾದರ್, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕೃತ್ಯಕ್ಕೆ ಮಸೀದಿಗೆ ಸಂಬಂಧಿಸಿದ ಪಿಕ್ಕಾಸು, ಹಾರೆ ಬಳಕೆ, ಎಲ್ಲಾ ಕಾಣಿಕೆ ಡಬ್ಬಿಗಳನ್ನು ಸ್ಪಷ್ಟವಾಗಿ ತಿಳಿದು ಕಳವುಗೈದಿರುವುದನ್ನು ಗಮನಿಸಿದರೆ ಮಾಹಿತಿ ಇರುವ ವ್ಯಕ್ತಿಯೇ ಕಳ್ಳತನ ನಡೆಸಿರುವ ಶಂಕೆಯಿದೆ ಎಂದು ಮಸೀದಿ ಕಾರ್ಯದರ್ಶಿ ಶಫೀಕ್ ತಿಳಿಸಿದ್ದಾರೆ.

Mangalore Robbers break into Phajeer mosque, flee with cash from six offering boxes in Konaje. The police are now investigating the case.