ನಿಂದನೆ ವಿಡಿಯೋ ಪ್ರಕರಣ ; ಪೊಲೀಸರು ಎಸ್ಡಿಪಿಐ ಬಗ್ಗೆ ಟಾರ್ಗೆಟ್ ಇಟ್ಕೊಂಡು ಕ್ರಮ ಜರುಗಿಸಿದ್ದಾರೆ, ಬೆಂಗಳೂರಿನಲ್ಲಿ ರೂಂ ಮೇಟ್ ಇದ್ದವರನ್ನೂ ಬಂಧಿಸುತ್ತಿದ್ದಾರೆ ! 

01-06-22 10:43 pm       Mangalore Correspondent   ಕರಾವಳಿ

ಪೊಲೀಸರಿಗೆ ನಿಂದನೆ ವಿಡಿಯೋ ಪ್ರಕರಣದಲ್ಲಿ ಕೆಲವೇ ಜನರು ಮಾಡಿದ ತಪ್ಪಿಗೆ ಹಲವು ಅಮಾಯಕರನ್ನು ಬಂಧಿಸಲಾಗುತ್ತಿದೆ.ಸಮಾವೇಶದಲ್ಲಿ ಭಾಗವಹಿಸದೇ ಇರುವವರ ಬಂಧನವೂ ಆಗಿದೆ. ಇದರಲ್ಲಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರೂ ಸೇರಿದ್ದಾರೆ.‌

ಮಂಗಳೂರು, ಜೂನ್  1: ಪೊಲೀಸರಿಗೆ ನಿಂದನೆ ವಿಡಿಯೋ ಪ್ರಕರಣದಲ್ಲಿ ಕೆಲವೇ ಜನರು ಮಾಡಿದ ತಪ್ಪಿಗೆ ಹಲವು ಅಮಾಯಕರನ್ನು ಬಂಧಿಸಲಾಗುತ್ತಿದೆ. ಸಮಾವೇಶದಲ್ಲಿ ಭಾಗವಹಿಸದೇ ಇರುವವರ ಬಂಧನವೂ ಆಗಿದೆ. ಇದರಲ್ಲಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರೂ ಸೇರಿದ್ದಾರೆ.‌ ಬೆಂಗಳೂರಿನಲ್ಲಿ ರೂಂ ಮಾಡಿದ್ದ ಜೊತೆಗಿದ್ದವರನ್ನೂ ಬಂಧಿಸಲಾಗಿದೆ. ಆಶ್ರಯ ನೀಡಿದ ಆರೋಪದಲ್ಲಿ ರೂಂಮೇಟ್ ಗಳ ಬಂಧಿಸಿದ್ದು ತಪ್ಪು ಎಂದು ಎಸ್ಡಿಪಿಐ ನಾಯಕರು ಕಿಡಿಕಾರಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿದ ದ.ಕ. ಜಿಲ್ಲಾ ಎಸ್ಡಿಪಿಐ ಕಾರ್ಯದರ್ಶಿ ಅನ್ವರ್ ಬಜತ್ತೂರು, ಸಮಾವೇಶದ ಮುನ್ನವೇ ಆ ಘೋಷಣೆ ಕೂಗಲಾಗಿತ್ತು. ವೀಡಿಯೋ ರಾತ್ರಿ ವೇಳೆ ವೈರಲ್ ಆಗಿತ್ತು. ಆದರೆ ಪೊಲೀಸರು ತಮ್ಮ ಮೇಲೂ ವಾಹನ ಹಾಯಿಸಲು ಯತ್ನಿಸಿದ್ದಾಗಿ ಆರೋಪಿಸಿದ್ದಾರೆ.‌ SDPI ಬೆಳವಣಿಗೆ ಸಹಿಸದೇ ಸಂಘ ಪರಿವಾರದ ಅಣತಿಯಂತೆ ಪೊಲೀಸರು ವರ್ತಿಸುತ್ತಿದ್ದಾರೆ. ಜಗದೀಶ್ ಕಾರಂತ ಈ ಹಿಂದೆ ಹಲವು ಬಾರಿ ಪೊಲೀಸರಿಗೆ, ಡಿಸಿ ಗೆ ಬಹಿರಂಗ ಧಮ್ಕಿ ಹಾಕಿದ್ದರು.‌ ಆಗ ಕಾರಂತ ಬಂಧಿಸಲು ಇಲ್ಲಿನ ಪೊಲೀಸರಿಗೆ ಸಾಧ್ಯವಾಗಿಲ್ಲ. ಕ್ರಿಮಿನಲ್ ಹಿನ್ನೆಲೆಯುಳ್ಳ ಪ್ರಮೋದ್ ಮುತಾಲಿಕ್ ಗೆ ಪೊಲೀಸ್ ಆಯುಕ್ತರು ರಾಜಾತಿಥ್ಯ ನೀಡಿದ್ದನ್ನು ಖಂಡಿಸಿ SDPI ನಾಯಕರು ಪೋಸ್ಟ್ ಮಾಡಿದ್ದರು. ಅಂದಿನಿಂದ SDPI ಹತ್ತಿಕ್ಕಲು ಪೊಲೀಸ್ ಇಲಾಖೆ ಮುಂದಾಗಿದೆ.‌ ಇದು ಪೊಲೀಸ್ ಆಯುಕ್ತರಿಗೆ ಶೋಭೆ ತರುವುದಿಲ್ಲ ಎಂದಿದ್ದಾರೆ. 

ಪೊಲೀಸರ ಈ ರೀತಿಯ ವರ್ತನೆ ವಿರುದ್ಧ SDPI ಕಾನೂನು ಹೋರಾಟ ಮಾಡಲಿದೆ. ಮಾನವ ಹಕ್ಕು ಆಯೋಗಕ್ಕೂ ದೂರು ನೀಡಲಿದೆ. ಘೋಷಣೆ ಕೂಗಿದವರನ್ನು ಆರೋಪಿಗಳೆಂದು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಘಟನೆ ಸಂಬಂಧಪಡದವರನ್ನು ಬಂಧಿಸಿದ್ದು ಎಷ್ಟು ಸರಿ. ಸಂಘ ಪರಿವಾರವರನ್ನು ತೃಪ್ತಿ ಪಡಿಸಲು ಈ ರೀತಿ ಮಾಡಲಾಗಿದೆ ಎನ್ನುವ ಅನುಮಾನ ಇದೆ. ಇದರ ಹಿಂದೆ ಇಲ್ಲಿನ ಶಾಸಕ, ಸಂಸದರ ಕೈವಾಡವೂ ಇದೆ ಎಂದು ಆರೋಪಿಸಿದರು.

Mangalore Police have targeted SDPI, unknown youths are arrested in Abusing case slams SDPI today at a press meet held at their office.