29ನೇ ಹರೆಯದಲ್ಲೇ ಸಚಿವ, ಬಂಗಾರಪ್ಪ- ಎಸ್ಸೆಂ ಕೃಷ್ಣ ಗರಡಿಯಲ್ಲಿ ಬೆಳೆದ ಹುಡುಗನಿಗೆ ರಾಜ್ಯದ ಗದ್ದುಗೆ ! ಮೊದಲ ಚುನಾವಣೆಯಲ್ಲೇ ದೊಡ್ಡ ಗೌಡ್ರನ್ನು ಎದುರಿಸಿದ್ದ ಡಿಕೆ !

03-06-26 03:51 pm       HK News Staffer   ಕರ್ನಾಟಕ

ರಾಜಕೀಯದಲ್ಲಿ ಅಧಿಕಾರ ಸಿಗುವುದು ಸುಲಭವಲ್ಲ. ಹತ್ತಾರು ವರ್ಷ ಶಾಸಕರಾಗಿದ್ದರೂ ಅಧಿಕಾರ ಅನುಭವಿಸುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಅದಕ್ಕೆ ಯೋಗ ಮತ್ತು ಯೋಗ್ಯತೆ ಇರಬೇಕು. ಈ ಎರಡನ್ನೂ ಪಡೆದು ಅಧಿಕಾರದ ಏಣಿಯನ್ನು ಏರುತ್ತಾ ಬಂದವರು ಡಿಕೆ ಶಿವಕುಮಾರ್. ಪಕ್ಷ ಸಂಘಟನೆ, ದಿಗ್ಗಜ ನಾಯಕರ ಕೃಪೆಯೊಂದಿಗ ತನ್ನ 29ನೇ ವರ್ಷದಲ್ಲೇ ಸಚಿವರಾಗಿದ್ದ ಶಿವಕುಮಾರ್ ಇದೀಗ ರಾಜ್ಯದ ಮುಖ್ಯಮಂತ್ರಿ ಗದ್ದುಗೆ ಏರುತ್ತಿದ್ದಾರೆ.

ಬೆಂಗಳೂರು, ಜೂನ್ 3: ರಾಜಕೀಯದಲ್ಲಿ ಅಧಿಕಾರ ಸಿಗುವುದು ಸುಲಭವಲ್ಲ. ಹತ್ತಾರು ವರ್ಷ ಶಾಸಕರಾಗಿದ್ದರೂ ಅಧಿಕಾರ ಅನುಭವಿಸುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಅದಕ್ಕೆ ಯೋಗ ಮತ್ತು ಯೋಗ್ಯತೆ ಇರಬೇಕು. ಈ ಎರಡನ್ನೂ ಪಡೆದು ಅಧಿಕಾರದ ಏಣಿಯನ್ನು ಏರುತ್ತಾ ಬಂದವರು ಡಿಕೆ ಶಿವಕುಮಾರ್. ಪಕ್ಷ ಸಂಘಟನೆ, ದಿಗ್ಗಜ ನಾಯಕರ ಕೃಪೆಯೊಂದಿಗ ತನ್ನ 29ನೇ ವರ್ಷದಲ್ಲೇ ಸಚಿವರಾಗಿದ್ದ ಶಿವಕುಮಾರ್ ಇದೀಗ ರಾಜ್ಯದ ಮುಖ್ಯಮಂತ್ರಿ ಗದ್ದುಗೆ ಏರುತ್ತಿದ್ದಾರೆ. ಬಂದೀಖಾನೆ, ನಗರಾಭಿವೃದ್ಧಿ, ಇಂಧನ, ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸೇರಿದಂತೆ ಪ್ರಮುಖ ಖಾತೆಗಳನ್ನು ನಿಭಾಯಿಸಿ ರಾಜ್ಯದ ದೊರೆಯಾಗಿ ರಾಜ್ಯಭಾರ ಆರಂಭಿಸಿದ್ದಾರೆ.‌

1991ರಲ್ಲಿ ಬಂಗಾರಪ್ಪ ಸರ್ಕಾರದಲ್ಲಿ ಮಂತ್ರಿ 

1991ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅನಾರೋಗ್ಯದ ಕಾರಣ ಮುಖ್ಯಮಂತ್ರಿ ಪದವಿಯನ್ನು ತ್ಯಜಿಸಬೇಕಾಗಿ ಬಂದಿತ್ತು. ಆಗ ಪಾಟೀಲ್ ಉತ್ತರಾಧಿಕಾರಿಯನ್ನಾಗಿ ಸಾರಕೊಪ್ಪ ಬಂಗಾರಪ್ಪ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದರು. ಈ ವೇಳೆ, ತನ್ನ ಜೊತೆಗೆ ನಿಂತು ಎಲ್ಲ ಶಾಸಕರನ್ನೂ ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದ ಯುವಕ ಡಿಕೆಶಿಗೆ ಬಂಗಾರಪ್ಪನವರು ತಮ್ಮ ಸಂಪುಟದಲ್ಲಿ ಸಚಿವರನ್ನಾಗಿ ಮಾಡಿದ್ದರು. ಆಗ ಬಂಧೀಖಾನೆ ಸಚಿವರಾಗಿದ್ದ ಡಿಕೆಶಿ ಮೊದಲ ಬಾರಿಗೆ ಅಧಿಕಾರದ ರುಚಿ ಕಂಡಿದ್ದರು. 

ಎಸ್.ಎಂ.ಕೃಷ್ಣ ಗರಡಿಯಲ್ಲಿ ಬೆಳೆದ ಹುಡುಗ 

1999ರಲ್ಲಿ ಎಸ್.ಎಂ. ಕೃಷ್ಣ ಕೆಪಿಸಿಸಿ ಅಧ್ಯಕ್ಷರಾದಾಗ ಅವರ ಹಿಂದೆ ಬೆನ್ನೆಲುಬಾಗಿ ನಿಂತ ಡಿ.ಕೆ. ಶಿವಕುಮಾ‌ರ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಜಯ ಗಳಿಸಿ ಸರ್ಕಾರ ರಚಿಸಲು ಕಾರಣವಾಗಿದ್ದರು. ಎಸ್.ಎಂ.ಕೃಷ್ಣ ಚುನಾವಣಾ ಪೂರ್ವದಲ್ಲಿ ನಡೆಸಿದ್ದ 'ಪಾಂಚಜನ್ಯ' ಯಾತ್ರೆಯನ್ನು ಸಂಘಟಿಸಿದ್ದು ಡಿ.ಕೆ.ಶಿವಕುಮಾರ್. ಇದರ ಪರಿಣಾಮವಾಗಿ ಕಾಂಗ್ರೆಸ್ ಪಕ್ಷ 139 ಸ್ಥಾನಗಳನ್ನು ಗಳಿಸಿ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವಂತಾಯಿತು. ಆ ಚುನಾವಣೆಯಲ್ಲಿ ದೇವೇಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಾತನೂರಿನಿಂದ ಸೋಲಿಸಿ ಗೆದ್ದು ಬಂದ ಡಿ.ಕೆ.ಶಿವಕುಮಾರ್ ಅವರನ್ನು ಎಸ್.ಎಂ.ಕೃಷ್ಣ ಅವರು ಕ್ಯಾಬಿನೆಟ್ ದರ್ಜೆ ಸಚಿವರನ್ನಾಗಿ ನೇಮಿಸಿ ಮಹತ್ವದ ಸಹಕಾರ ಖಾತೆ ನೀಡುವ ಮೂಲಕ ಶ್ರಮಕ್ಕೆ ತಕ್ಕ ಮನ್ನಣೆ ನೀಡಿದ್ದರು. ಇದರ ಜೊತೆಗೆ, 2002ರಲ್ಲಿ ನಗರಾಭಿವೃದ್ಧಿ ಖಾತೆ ಸಚಿವರಾಗಿಯೂ ರಾಜ್ಯ ನಗರ ಯೋಜನಾ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ರಾಜೀವ್ ಯುವಶಕ್ತಿ ಸಂಘಟನೆಗಳು ರಾಜ್ಯದಲ್ಲಿ ತಲೆ ಎತ್ತಲು ಕೊಡುಗೆ ನೀಡಿದ್ದರು. 

2013ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆಂದು ಪಕ್ಷದ ವರಿಷ್ಠರಿಗೆ ದೂರು ಕೊಡಿಸಿ ಸಚಿವ ಸ್ಥಾನ ತಪ್ಪುವಂತೆ ಮಾಡಲಾಗಿತ್ತು. ಇದರ ಬಗ್ಗೆ ನ್ಯಾಯಾಂಗ ತಜ್ಞರಿಂದ ವಿಮರ್ಶೆ ನಡೆದು ಡಿ.ಕೆ.ಶಿವಕುಮಾರ್ ಯಾವುದೇ ರೀತಿ ತಪ್ಪೆಸಗಿಲ್ಲ ಎಂಬ ವರದಿ ನೀಡಿದ್ದರಿಂದ ಆರೋಪ ಮುಕ್ತರಾಗಿದ್ದರು. ಇದರಿಂದ ಏಳು ತಿಂಗಳ ಬಳಿಕ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಗಿಟ್ಟಿಸಿ ಇಂಧನ ಖಾತೆಯನ್ನು ನಿಭಾಯಿಸಿದ್ದರು. 

ಮೊದಲ ಚುನಾವಣೆಯಲ್ಲೇ ದೊಡ್ಡ ಗೌಡ್ರನ್ನು ಎದುರಿಸಿದ್ದ ಡಿಕೆ 

ಚಿಕ್ಕ ವಯಸ್ಸಿನಲ್ಲೇ ಜನತಾ ಪರಿವಾರದ ದಿಗ್ಗಜ ದೇವೇಗೌಡರ ಜೊತೆಗೆ ಸ್ಪರ್ಧಿಸಿ ಕೇಂದ್ರ ನಾಯಕರ ಗಮನ ಸೆಳೆದಿದ್ದರು. 1975ರಲ್ಲಿ ಸಾತನೂರು ಕ್ಷೇತ್ರದಿಂದ ಗೌಡರ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸಿನಲ್ಲಿ ಸೂಕ್ತ ಅಭ್ಯರ್ಥಿ ಇರಲಿಲ್ಲ. ಆಗ ನೀಲಿ ಕಣ್ಣಿನ ಹುಡುಗ ಡಿಕೆ ಶಿವಕುಮಾರ್ ಅವರನ್ನು ನಿಲ್ಲಿಸಲಾಗಿತ್ತು. ಪ್ರಭಾವಿ ನಾಯಕನ ಎದುರಲ್ಲಿ ಸೆಣಸಾಡಿ 29 ಸಾವಿರಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದಲ್ಲದೆ, ಹೆಚ್.ಡಿ. ದೇವೇಗೌಡ ಪ್ರಯಾಸದ ಗೆಲುವು ಕಾಣುವಂತಾಗಿತ್ತು. ರಾಜಕೀಯದ ಪರಿಚಯವೇ ಇಲ್ಲದಿದ್ದ ಶೈವ ಕುಮಾರ್ ವಿರುದ್ಧ ಎಚ್.ಡಿ.ದೇವೇಗೌಡರು 45,612 ಮತಗಳನ್ನು ಪಡೆದು ಜಯ ಸಾಧಿಸಿದ್ದರು.