ಪಿಲಾತಬೆಟ್ಟು ; ದೈವಕ್ಕೆ ತಂಬಿಲ ಮಾಡ್ತಿದ್ದಾಗಲೇ ಕುಡಿದ ಮತ್ತಿನಲ್ಲಿ ಗದ್ದಲ, ಪ್ರಶ್ನೆ ಮಾಡಿದ್ದಕ್ಕೆ ಚಿಕ್ಕಪ್ಪನಿಗೇ ಬಿಯರ್ ಬಾಟಲಿಯಿಂದ ಇರಿದು ಹತ್ಯೆ !

01-06-26 12:40 pm       HK News Staffer   ಕ್ರೈಂ

ಪುಂಜಾಲಕಟ್ಟೆ ಠಾಣೆ ವ್ಯಾಪ್ತಿಯ ಪಿಲಾತಬೆಟ್ಟು ಗ್ರಾಮದ ಕಾಡಬೆಟ್ಟು ಎಂಬಲ್ಲಿ ಭಾನುವಾರ ರಾತ್ರಿ ಸಣ್ಣ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಯುವಕನೊಬ್ಬ ತನ್ನ ಚಿಕ್ಕಪ್ಪನ ಕುತ್ತಿಗೆಗೆ ಬಿಯರ್ ಬಾಟಲಿಯಿಂದ ಇರಿದು ಕೊಲೆಗೈದಿದ್ದಾನೆ.

ಬಂಟ್ವಾಳ, ಜೂನ್ 1: ಪುಂಜಾಲಕಟ್ಟೆ ಠಾಣೆ ವ್ಯಾಪ್ತಿಯ ಪಿಲಾತಬೆಟ್ಟು ಗ್ರಾಮದ ಕಾಡಬೆಟ್ಟು ಎಂಬಲ್ಲಿ ಭಾನುವಾರ ರಾತ್ರಿ ಸಣ್ಣ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಯುವಕನೊಬ್ಬ ತನ್ನ ಚಿಕ್ಕಪ್ಪನ ಕುತ್ತಿಗೆಗೆ ಬಿಯರ್ ಬಾಟಲಿಯಿಂದ ಇರಿದು ಕೊಲೆಗೈದಿದ್ದಾನೆ.

ಮನೆಯಲ್ಲಿ ದೈವಿಕ ಕಾರ್ಯಕ್ರಮ ನಡೆಸಿದ ಬಳಿಕ ಊಟದ ವೇಳೆ ಮದ್ಯದ ಅಮಲಿನಲ್ಲಿ ಯುವಕರು ಮಾತಾಡಿಕೊಂಡಿದ್ದು ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ತನ್ನ ಸ್ವಂತ ಚಿಕ್ಕಪ್ಪನಿಗೇ ಇರಿದಿದ್ದಾನೆ.‌ ಕಾಡಬೆಟ್ಟು ನಿವಾಸಿ ಮಧುಸೂಧನ ( 38) ಕೊಲೆಯಾದವರಾಗಿದ್ದು, ಅವರ ಅಣ್ಣ ಕೇಶವ ಪೂಜಾರಿಯ ಪುತ್ರ ರಾಹುಲ್ (23) ಕೊಲೆಗೈದ ಆರೋಪಿಯಾಗಿದ್ದು ಪೊಲೀಸರು ಬಂಧಿಸಿದ್ದಾನೆ. ಕೇಶವ ಪೂಜಾರಿ ಅವರ ಮನೆಯಲ್ಲಿ ನಿನ್ನೆ ರಾತ್ರಿ ದೈವಕ್ಕೆ ವಾರ್ಷಿಕ ತಂಬಿಲ ಸೇವೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕೇಶವ ಪೂಜಾರಿ ಅವರ ಪುತ್ರ ರಾಹುಲ್ (23) ಮತ್ತು ಆತನ ಸ್ನೇಹಿತರು ಮನೆಯ ಹೊರಗಡೆ ಮದ್ಯಸೇವಿಸಿ ಗದ್ದಲ ಎಬ್ಬಿಸುತ್ತಿದ್ದರು. ಮನೆಯಲ್ಲಿ ದೈವದ ಕಾರ್ಯಕ್ರಮ ನಡೆಯುತ್ತಿರುವುದರಿಂದ ಹೊರಗೆ ಗಲಾಟೆ ಮಾಡದಂತೆ ಚಿಕ್ಕಪ್ಪ, ವೃತ್ತಿಯಲ್ಲಿ ಇಲೆಕ್ಟ್ರಿಷಿಯನ್ ಆಗಿದ್ದ ಮಧುಸೂಧನ (38) ಆಕ್ಷೇಪ ವ್ಯಕ್ತಪಡಿಸಿ ಬುದ್ಧಿವಾದ ಹೇಳಿದ್ದಾರೆ. 

ಚಿಕ್ಕಪ್ಪ ಜೊತೆಗೆ ಮಾತಿಗೆ ಮಾತು ಬೆಳೆಸುತ್ತ ಕೋಪಗೊಂಡ ರಾಹುಲ್ ತನ್ನ ಕೈಯಲ್ಲಿದ್ದ ಬಿಯರ್ ಬಾಟಲಿಯಿಂದ ಮಧುಸೂಧನ ಅವರ ಕುತ್ತಿಗೆಯ ಭಾಗಕ್ಕೆ ಬಲವಾಗಿ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ. ಬಿಯರ್ ಬಾಟಲಿ ಚುಚ್ಚಿದ ರಭಸಕ್ಕೆ ತೀವ್ರ ರಕ್ತಸ್ರಾವ ಉಂಟಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಮಧುಸೂಧನ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ, ಅತಿಯಾದ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.‌

ಮಧುಸೂಧನ ಅವರು ಅವಿವಾಹಿತರಾಗಿದ್ದು, ಇಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ರಾಹುಲ್ ಪೆಟ್ರೋಲ್ ಬಂಕ್‌ ಉದ್ಯೋಗಿಯಾಗಿದ್ದ. ಘಟನಾ ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.