10ನೇ ಕ್ಲಾಸ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ; ಲವ್ ಜಿಹಾದ್ ಕೃತ್ಯ, ಹುಡುಗಿ ಮೇಲೆ ವಾಮಾಚಾರ ಶಂಕೆ, ಹಿಂದು ಸಂಘಟನೆಗಳಿಂದ ತನಿಖೆಗೆ ಆಗ್ರಹ   

05-05-22 08:14 pm       Mangalore Correspondent   ಕರಾವಳಿ

ಮುಸ್ಲಿಂ ಯುವಕನ ಪ್ರೇಮ ಪಾಶಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾದ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಕಣಿಯೂರಿನ ಅಪ್ರಾಪ್ತ ಯುವತಿ ಮನೆಗೆ ಹಿಂದು ಸಂಘಟನೆಗಳ ಮುಖಂಡರು ಭೇಟಿ ನೀಡಿದ್ದು ಮನೆಯವರಿಗೆ ಸಾಂತ್ವನ ಹೇಳಿದ್ದಾರೆ.

ಮಂಗಳೂರು, ಮೇ 5: ಮುಸ್ಲಿಂ ಯುವಕನ ಪ್ರೇಮ ಪಾಶಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾದ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಕಣಿಯೂರಿನ ಅಪ್ರಾಪ್ತ ಯುವತಿ ಮನೆಗೆ ಹಿಂದು ಸಂಘಟನೆಗಳ ಮುಖಂಡರು ಭೇಟಿ ನೀಡಿದ್ದು ಮನೆಯವರಿಗೆ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ, ಹಿಂದು ಸಂಘಟನೆಯ ಮುಖಂಡರ ಜೊತೆಗೆ ಯುವತಿಯ ತಾಯಿ ಆರೋಪಿ ಸಾಹುಲ್ ಹಮೀದ್ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಯುವತಿ ತಾಯಿ ನೀಡಿರುವ ಮಾಹಿತಿ ಪ್ರಕಾರ, ಆರೋಪಿ ಯುವತಿಗೆ ವಾಮಾಚಾರ ನಡೆಸಿರುವ ಶಂಕೆಯನ್ನು ಹಿಂದು ಸಂಘಟನೆ ಮುಖಂಡರು ವ್ಯಕ್ತಪಡಿಸಿದ್ದಾರೆ.

ಹಲವು ಸಮಯಗಳಿಂದ ಸಾಹುಲ್ ಹಮೀದ್ ಬಡ ಯುವತಿ ಮನೆಗೆ ಬಂದು ಹೋಗುತ್ತಿದ್ದು, ಪ್ರೀತಿಯ ನಾಟಕವಾಡಿ ಲೈಂಗಿಕವಾಗಿ ಬಳಸಿಕೊಂಡಿದ್ದ. ಆನಂತರ ಹುಡುಗಿಯ ಹೆತ್ತವರಿಗೆ ವಿಷಯ ತಿಳಿದು ಆಕೆಯಿಂದ ಮೊಬೈಲನ್ನು ದೂರ ಇಟ್ಟಿದ್ದರು. ಅಲ್ಲದೆ, ಸಾಹುಲ್ ಹಮೀದ್ ಮತ್ತು ಆತನ ಮನೆಯವರನ್ನು ಕರೆಸಿ ಎಚ್ಚರಿಕೆ ನೀಡಿದ್ದರು. ನಮ್ಮ ತಂಟೆಗೆ ಬರುವುದು ಬೇಡ, ಆಕೆ 9ನೇ ಕ್ಲಾಸಿನ ಸಣ್ಣ ವಯಸ್ಸಿನ ಹುಡುಗಿ. ನಿನಗೆ 30 ವರ್ಷ ಪ್ರಾಯ ಆಗಿದೆ, ಪ್ರೀತಿ ಗೀತಿ ಏನೂ ಬೇಡ ಎಂದು ಕಳಿಸಿಕೊಟ್ಟಿದ್ದೆವು.

ಆದರೆ ಈ ನಡುವೆ, ಮಗಳು ತನ್ನ ಕೂದಲನ್ನು ಎತ್ತಿಕೊಂಡು ಹೋಗಿದ್ದಾನೆ. ಆನಂತರ ಮತ್ತೊಂದು ದಿನ ಬಂದು ಅಯ್ಯಪ್ಪನ ಪ್ರಸಾದ ಎಂದು ಹೇಳಿ ಏನೋ ಭಸ್ಮವನ್ನು ಬಾಯಿಗೆ ಹಾಕಿದ್ದಾನೆ ಎಂದು ಹೇಳಿದ್ದಳು. ಇದರಿಂದ ವಾಮಾಚಾರ ಮಾಡಿರುವ ಬಗ್ಗೆ ಶಂಕೆ ಆಗುತ್ತಿದೆ ಎಂದು ಹುಡುಗಿ ತಾಯಿ ಹಿಂದು ಮುಖಂಡರ ಬಳಿ ಅಳಲು ತೋಡಿಕೊಂಡಿದ್ದಾರೆ. ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್, ಹುಡುಗಿ ತಾಯಿ ಮತ್ತು ಕುಟುಂಬಸ್ಥರಲ್ಲಿ ಈ ಬಗ್ಗೆ ಸಮಗ್ರ ತನಿಖೆಯಾಗಬೇಕು, ಆರೋಪಿಯನ್ನು ಶಿಕ್ಷಿಸುವ ತನಕ ನಾವು ನಿಮ್ಮ ಜೊತೆಗಿದ್ದೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ಮಾಧ್ಯಮಕ್ಕೆ ಮಾತನಾಡಿದ ಶರಣ್ ಪಂಪ್ವೆಲ್, ಸಾಹುಲ್ ಹಮೀದ್ ಹುಡುಗಿಯ ಕೂದಲು ತೆಗೆದುಕೊಂಡು ಹೋಗಿ ಬಾಯಿಗೆ ಭಸ್ಮ ಹಾಕಿದ್ದಾನೆಂದು ತಾಯಿ ಹೇಳಿರುವುದನ್ನು ನೋಡಿದರೆ ವಾಮಾಚಾರ ಆಗಿರುವ ಶಂಕೆ ಮೂಡುತ್ತಿದೆ. ಈ ಬಗ್ಗೆ ಪೊಲೀಸರು ಆರೋಪಿ ಮತ್ತು ಆತನ ಮನೆಯವರನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕು. ಲವ್ ಜಿಹಾದ್ ಪರಿಣಾಮ ಕೃತ್ಯ ಆಗಿದ್ದು, ಇದು ಆತ್ಮಹತ್ಯೆಯಲ್ಲ, ವ್ಯವಸ್ಥಿತ ಕೊಲೆ. ಲವ್ ಜಿಹಾದ್ ಗೆ ಬಲಿಯಾದ ಹುಡುಗಿಯರ ಸಾಲಿಗೆ ಆತ್ಮಿಕಾ ಸೇರ್ಪಡೆಯಾಗಿದ್ದಾಳೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಆರೋಪಿಯ ಹಿನ್ನೆಲೆಯನ್ನು ಹೊರಗೆಳೆಯಬೇಕು ಎಂದು ಪೊಲೀಸರನ್ನು ಆಗ್ರಹಿಸಿದ್ದಾರೆ.

ವಿಟ್ಲ ಠಾಣೆ ವ್ಯಾಪ್ತಿಯ ಕನ್ಯಾನ ಗ್ರಾಮದ ಕಣಿಯೂರಿನಲ್ಲಿ ಮಸೀದಿ ಹಿಂಭಾಗದಲ್ಲಿ ಬಾಡಿಗೆ ಮನೆಯಲ್ಲಿದ್ದ ಪರಿಶಿಷ್ಟ ವರ್ಗದ ಕುಟುಂಬದ ಸಂಜೀವ ಎಂಬವರ ಪುತ್ರಿ ಆತ್ಮಿಕಾ ಬುಧವಾರ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಘಟನೆ ಬಗ್ಗೆ ವಿಟ್ಲ ಠಾಣೆಯಲ್ಲಿ ಆರೋಪಿ ಸಾಹುಲ್ ಹಮೀದ್ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

A 14-year-old Dalit girl was reportedly found hanging in her house on Wednesday. According to a complaint filed at the Vittal police station limits, the parents of the girl accused Sahul Hammed aka Kutta, aged around 30 years, to be responsible for her death. VHP sharan pumpwell visits residence demands action.