ಬ್ರೇಕಿಂಗ್ ನ್ಯೂಸ್
30-06-26 03:48 pm HK News Staffer ಕ್ರೈಂ
ಕಾರವಾರ, ಜೂನ್ 30 : ತುಮಕೂರು ಬಳಿ ಪಾಗಲ್ ಪ್ರೇಮಿಯೊಬ್ಬ ಕಾರಿನಲ್ಲೇ ಪೆಟ್ರೋಲ್ ಬಾಂಬ್ ಸ್ಫೋಟಿಸಿಕೊಂಡ ಪ್ರಕರಣದ ತನಿಖೆ ಇದೀಗ ಬೆಚ್ಚಿಬೀಳಿಸುವ ತಿರುವು ಪಡೆದುಕೊಂಡಿದೆ. ಘಟನೆಯ ಜಾಡು ಹಿಡಿದು ತನಿಖೆ ಆರಂಭಿಸಿದ ವಿಶೇಷ ತನಿಖಾ ತಂಡ (ಎಸ್ಐಟಿ), ಉತ್ತರ ಕನ್ನಡ ಜಿಲ್ಲೆಯ ದಟ್ಟ ಅರಣ್ಯಗಳ ಒಳಗೆ ಕಾರ್ಯ ನಿರ್ವಹಿಸುತ್ತಿದ್ದ ನಾಡಬಾಂಬ್, ಪೆಟ್ರೋಲ್ ಬಾಂಬ್ ಹಾಗೂ ಕಳ್ಳ ಬಂದೂಕು ತಯಾರಿಸುವ ಬೃಹತ್ ಅಕ್ರಮ ಜಾಲವನ್ನು ಪತ್ತೆಹಚ್ಚಿದೆ. ಈ ಬೆಳವಣಿಗೆ ಇಡೀ ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸಿದ್ದು, ರಾಜ್ಯದ ಹಲವು ಭಾಗಗಳಿಗೆ ಈ ಜಾಲದ ನಂಟಿರುವ ಶಂಕೆ ವ್ಯಕ್ತವಾಗಿದೆ.
ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ಈವರೆಗೆ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುಮಾರು 60ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪೈಕಿ ಸ್ಫೋಟದಲ್ಲಿ ಮೃತಪಟ್ಟ ನಾಗೇಂದ್ರ ಗೌಡನಿಗೆ ಸಹಕರಿಸಿದ್ದರೆಂದು ಶಂಕಿಸಲಾಗಿರುವ ಮೂವರು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದು ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.
ಬಂಧಿತರಲ್ಲಿ ಇಬ್ಬರು ಅಂಕೋಲಾ ತಾಲೂಕಿನ ಸರಳಬೈಲ್ ಗ್ರಾಮದವರಾಗಿದ್ದು, ಒಬ್ಬ ನಾಗೇಂದ್ರ ಗೌಡನ ಆಪ್ತ ಸಂಬಂಧಿ ಹಾಗೂ ಮತ್ತೊಬ್ಬ ಆತನ ಆತ್ಮೀಯ ಸ್ನೇಹಿತ ಎಂದು ಗುರುತಿಸಲಾಗಿದೆ. ಮೂರನೇ ಆರೋಪಿ ಹೊನ್ನಾವರ ತಾಲೂಕಿನ ಚಂದಾವರ ಮೂಲದವನಾಗಿದ್ದು, ಬಾಂಬ್ ಪೂರೈಕೆ ಮತ್ತು ತಯಾರಿಕೆ ಜಾಲದ ಕುರಿತು ಮಹತ್ವದ ಮಾಹಿತಿ ನೀಡುತ್ತಿರುವ ಶಂಕೆ ಇದೆ.
ಅಕ್ರಮ ಜಾಲದ ಸಂಪೂರ್ಣ ಬೇರು ಪತ್ತೆಹಚ್ಚಲು ಪೊಲೀಸರು ಮೂರು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದಾರೆ. ತುಮಕೂರು ಪೊಲೀಸ್ ತಂಡ, ಅಂಕೋಲಾ ಸಿಪಿಐ ತಂಡ ಹಾಗೂ ಗೋಕರ್ಣ ಸಿಪಿಐ ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಕಾಡು ಪ್ರದೇಶಗಳು, ಅರಣ್ಯದ ಒಳಭಾಗ ಹಾಗೂ ಸಂಶಯಾಸ್ಪದ ತಾಣಗಳ ಮೇಲೆ ನಿರಂತರ ನಿಗಾ ಇಟ್ಟಿವೆ. ಬಾಂಬ್ ತಯಾರಿಕೆ, ಪೂರೈಕೆ ಹಾಗೂ ಮಾರಾಟದ ಹಿಂದಿರುವ ಕಿಂಗ್ಪಿನ್ಗಳನ್ನು ಬಂಧಿಸುವತ್ತ ತನಿಖೆ ವೇಗ ಪಡೆದುಕೊಂಡಿದೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿ ನಾಗೇಂದ್ರ ಗೌಡ ಅತ್ಯಂತ ಚಾಣಾಕ್ಷತನದಿಂದ ತನ್ನ ಚಟುವಟಿಕೆ ನಡೆಸಿದ್ದ ಎಂಬ ಅಚ್ಚರಿಯ ಮಾಹಿತಿ ಬೆಳಕಿಗೆ ಬಂದಿದೆ. ಬಾಂಬ್ ಖರೀದಿ ಅಥವಾ ಪೂರೈಕೆದಾರರೊಂದಿಗೆ ಆತ ಎಲ್ಲಿಯೂ ಮೊಬೈಲ್ ಮೂಲಕ ಸಂಪರ್ಕ ಸಾಧಿಸಿರಲಿಲ್ಲ. ಕಾಲ್ ಡೀಟೇಲ್ಸ್ ಪೊಲೀಸರಿಗೆ ಸಿಗದಂತೆ ಮಾಡಲು ಖುದ್ದಾಗಿ ಭೇಟಿ ನೀಡಿ ವ್ಯವಹಾರ ನಡೆಸುತ್ತಿದ್ದ ಎನ್ನುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಈ ಕಾರಣದಿಂದಲೇ ತನಿಖೆ ಆರಂಭದಲ್ಲಿ ಸಾಕಷ್ಟು ಸವಾಲಿನದ್ದಾಗಿತ್ತು ಎಂದು ಮೂಲಗಳು ತಿಳಿಸಿವೆ.
ಪೊಲೀಸರ ತನಿಖೆಯಲ್ಲಿ ಮತ್ತೊಂದು ಆತಂಕಕಾರಿ ಸಂಗತಿಯೂ ಬೆಳಕಿಗೆ ಬಂದಿದೆ. ಯಲ್ಲಾಪುರ ಹಾಗೂ ಹಳಿಯಾಳ ಭಾಗದ ದಟ್ಟ ಅರಣ್ಯಗಳ ನಡುವೆ ಅಕ್ರಮವಾಗಿ ನಾಡಬಾಂಬ್ಗಳನ್ನು ತಯಾರಿಸಲಾಗುತ್ತಿದ್ದು, ಕೇವಲ 100 ರಿಂದ 300 ರೂಪಾಯಿಗಳ ಅಗ್ಗದ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಬಳಸುವ ರಾಸಾಯನಿಕ ನೈಟ್ರೇಟ್ ಪ್ರಮಾಣದ ಆಧಾರದ ಮೇಲೆ ಬಾಂಬ್ಗಳ ಸ್ಫೋಟದ ತೀವ್ರತೆ ನಿರ್ಧಾರವಾಗುತ್ತಿತ್ತು.
ಈ ನಾಡಬಾಂಬ್ಗಳು ಮತ್ತು ಕಳ್ಳಬಂದೂಕುಗಳನ್ನು ಪ್ರಮುಖವಾಗಿ ಕಾಡು ಪ್ರಾಣಿಗಳ ಬೇಟೆಗೆ ಬಳಸಲಾಗುತ್ತಿತ್ತು. ಕಾಡುಹಂದಿ ಬೇಟೆಗೆ ಕೋಳಿಯ ಮಾಂಸದೊಳಗೆ ನಾಡಬಾಂಬ್ ಅಡಗಿಸಿ ಕಾಡಿನ ಅಂಚಿನಲ್ಲಿ ಇಡಲಾಗುತ್ತಿತ್ತು. ಆಹಾರ ಅರಸಿ ಬರುವ ಕಾಡುಹಂದಿ ಅದನ್ನು ಅ
ಜಗಿಯುತ್ತಿದ್ದಂತೆಯೇ ಒತ್ತಡದಿಂದ ಬಾಂಬ್ ಸ್ಫೋಟಗೊಂಡು, ತಲೆ ಮತ್ತು ಮುಖದ ಭಾಗ ಛಿದ್ರಗೊಂಡು ಸ್ಥಳದಲ್ಲೇ ಸಾವನ್ನಪ್ಪುತ್ತಿತ್ತು. ಬಳಿಕ ಬೇಟೆಯಾಡಿದ ಹಂದಿಯನ್ನು ಕಳ್ಳಮಾರುಕಟ್ಟೆಯಲ್ಲಿ 7 ರಿಂದ 8 ಸಾವಿರ ರೂಪಾಯಿ ವರೆಗೆ ರಹಸ್ಯವಾಗಿ ಮಾರಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.
ಇದೇ ರೀತಿಯಲ್ಲಿ ಜಲಚರಗಳ ಬೇಟೆಗೂ ಪೆಟ್ರೋಲ್ ಬಾಂಬ್ ಬಳಸಲಾಗುತ್ತಿತ್ತು. ಪ್ಲಾಸ್ಟಿಕ್ನಲ್ಲಿ ಸುತ್ತಿದ ಪೆಟ್ರೋಲ್ ಬಾಂಬ್ಗಳನ್ನು ನೀರಿನೊಳಗೆ ಎಸೆದು ಸ್ಫೋಟಿಸಿದಾಗ ಅದರ ಪ್ರಭಾವಕ್ಕೆ ನೂರಾರು ಮೀನುಗಳು ಸತ್ತು ನೀರಿನ ಮೇಲಕ್ಕೆ ತೇಲಿಬರುವುದು ಅಥವಾ ಪ್ರಜ್ಞೆ ತಪ್ಪಿ ಬಲೆಗೆ ಸಿಲುಕುವುದು ಸಾಮಾನ್ಯವಾಗಿತ್ತು ಎನ್ನಲಾಗಿದೆ.
ಇನ್ನು ಉಡಾ, ಕಾಡುಕೋಣ ಹಾಗೂ ಕಡವೆ ಸೇರಿದಂತೆ ಕಾಡುಪ್ರಾಣಿಗಳ ಬೇಟೆಗೆ ಕಳ್ಳಬಂದೂಕುಗಳನ್ನು ಬಳಸಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಪೊಲೀಸ್ ದಾಳಿ ಹೆಚ್ಚಾದ ಹಿನ್ನೆಲೆಯಲ್ಲಿ ಈ ಬಂದೂಕುಗಳನ್ನು ತೋಟಗಳು ಹಾಗೂ ಗದ್ದೆಗಳ ಮಣ್ಣಿನಲ್ಲಿ ಹೂತು ಬಚ್ಚಿಡಲಾಗುತ್ತಿತ್ತು ಎಂಬ ಮಾಹಿತಿಯೂ ತನಿಖೆಯಲ್ಲಿ ಹೊರಬಿದ್ದಿದೆ.
ಸದ್ಯ ಈ ಸಂಪೂರ್ಣ ಅಕ್ರಮ ಜಾಲದ ಹಿಂದಿರುವ ಪ್ರಮುಖ ಸೂತ್ರಧಾರರು, ಬಾಂಬ್ ತಯಾರಕರು, ಪೂರೈಕೆದಾರರು ಹಾಗೂ ಖರೀದಿದಾರರ ಜಾಲವನ್ನು ಪತ್ತೆಹಚ್ಚಲು ಪೊಲೀಸರು ಬಹುಮುಖ ತನಿಖೆ ಮುಂದುವರಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆ ಇದೆ.
29-06-26 10:33 pm
HK News Desk
ಬಿಜೆಪಿಯಲ್ಲಿ ಆಡಿಯೋ ಬಿರುಗಾಳಿ ; ವಿಜಯೇಂದ್ರರನ್ನು ಈ...
29-06-26 10:22 pm
ಅಮಲು ಪದಾರ್ಥ ಬೆರೆಸಿದರೆ ರಾಜ್ಯದಲ್ಲಿ ಎಲ್ಲಾ ಪಾನ್ ಮ...
28-06-26 06:30 pm
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್...
27-06-26 08:31 pm
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
30-06-26 08:06 pm
HK News Staffer
“ಟಿವಿ ನೋಡಬೇಡ, ಓದಬೇಕು!” ಎಂದು ಬೈಯುವ ಪೋಷಕರಿಗೆ ಶಾ...
30-06-26 04:34 pm
“ಟಿವಿ ನೋಡಬೇಡ, ಓದಬೇಕು!” ಎಂದು ಬೈಯುವ ಪೋಷಕರಿಗೆ ಶಾ...
30-06-26 04:34 pm
ಮೊಹರಂ ಮೆರವಣಿಗೆಯಲ್ಲಿ 15,000 ಜನರ ಹತ್ಯೆಗೆ ಸ್ಕೆಚ್...
29-06-26 03:35 pm
3-6 ತಿಂಗಳಲ್ಲಿ ವಿಜಯ್ ಸರ್ಕಾರ ಪತನ ; ಇದು ಅಲುಗಾಡುವ...
29-06-26 12:41 pm
30-06-26 11:39 am
HK News Staffer
ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ಬಗ್ಗೆ ಅವಹೇಳನ...
27-06-26 02:44 pm
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
30-06-26 03:48 pm
HK News Staffer
ಮಂಗಳೂರು ಕೋರ್ಟಿಗೆ ಕೆಮಿಕಲ್ ಬಾಂಬ್ ಬೆದರಿಕೆ ; ಜೆನ್...
29-06-26 07:25 pm
ನಡುರಾತ್ರಿ ಬೆಡ್ ರೂಮ್ ಕಿಟಕಿಗೆ ಕೈಹಾಕಿ ಮಹಿಳೆಯ ಸರ...
29-06-26 06:45 pm
ತಾಯಿಯ ಹೆಸರಿನಲ್ಲಿದ್ದ ಆಸ್ತಿ ಕಿತ್ತುಕೊಂಡ ಮಗ, ತಂದೆ...
29-06-26 04:45 pm
ವಿಟ್ಲ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್...
29-06-26 02:00 pm