CM Siddaramaiah, Mangalore, Narayan Guru: ದೇವಸ್ಥಾನಕ್ಕೆ ಬಿಡದಿದ್ದರೆ ನಿಮ್ಮದೇ ದೇವಸ್ಥಾನ ಕಟ್ಟಿ ಎಂದಿದ್ದು ನಾರಾಯಣ ಗುರುಗಳು, ಆ ಕಾಲಕ್ಕೆ ಅದೊಂದು ದೊಡ್ಡ ಕ್ರಾಂತಿ ; ಶಿವಗಿರಿ ಮಠದ ಶಾಖೆಗೆ ಐದೆಕರೆ ಜಮೀನು, ಗುರು -ಗಾಂಧಿ ಸಂವಾದ ಶತಮಾನೋತ್ಸವದಲ್ಲಿ ಸಿಎಂ ಸಿದ್ಧರಾಮಯ್ಯ 

03-12-25 04:52 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಯಲ್ಲಿ ಶಿವಗಿರಿ ಮಠದ ಶಾಖೆ ನಿರ್ಮಾಣಕ್ಕೆ ಐದು ಎಕರೆ ಜಮೀನು ನೀಡಬೇಕೆಂದು ಶಿವಗಿರಿ ಮಠದ ಪೀಠಾಧಿಪತಿ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮಿಯವರು ಪ್ರಸ್ತಾಪಿಸಿದ್ದು, ಸಂಬಂಧಪಟ್ಟವರು ಜಾಗ ಗುರುತಿಸಿದಲ್ಲಿ ಸರಕಾರದ ವತಿಯಿಂದ ಜಮೀನು ಮಂಜೂರು ಮಾಡಲಾಗುವುದೆಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ‌

ಉಳ್ಳಾಲ, ಡಿ‌.3 : ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಯಲ್ಲಿ ಶಿವಗಿರಿ ಮಠದ ಶಾಖೆ ನಿರ್ಮಾಣಕ್ಕೆ ಐದು ಎಕರೆ ಜಮೀನು ನೀಡಬೇಕೆಂದು ಶಿವಗಿರಿ ಮಠದ ಪೀಠಾಧಿಪತಿ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮಿಯವರು ಪ್ರಸ್ತಾಪಿಸಿದ್ದು, ಸಂಬಂಧಪಟ್ಟವರು ಜಾಗ ಗುರುತಿಸಿದಲ್ಲಿ ಸರಕಾರದ ವತಿಯಿಂದ ಜಮೀನು ಮಂಜೂರು ಮಾಡಲಾಗುವುದೆಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ‌

ಶಿವಗಿರಿ ಮಠ ವರ್ಕಲ, ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ನಾರಾಯಣ ಗುರು ಅಧ್ಯಯನ ಪೀಠ ಆಶ್ರಯದಲ್ಲಿ ಬುಧವಾರ ಕೊಣಾಜೆಯ ಮಂಗಳೂರು ವಿವಿ ಕ್ಯಾಂಪಸ್‌ ಮೈದಾನದಲ್ಲಿ ನಡೆದ ಶತಮಾನದ ಮಹಾಪ್ರಸ್ಥಾನ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮಾಗಾಂಧಿ ಐತಿಹಾಸಿಕ ಗುರು-ಗಾಂಧಿ ಸಂವಾದ ಶತಮಾನೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾರಾಯಣ ಗುರುಗಳು ಜಾತ್ಯಾತೀತರಾಗಿದ್ದು ಒಂದು ಜಾತಿ, ಒಂದು ಮತ, ಒಂದೇ ದೇವರೆಂಬ ಸಂದೇಶವನ್ನ ಜೀವನದುದ್ದಕ್ಕೂ ಸಾರಿದವರು. ಗುರುಗಳು ತಾವು ನಂಬಿರುವ ವಿಚಾರಗಳನ್ನ ಗಾಂಧಿ-ಗುರು ಸಂವಾದದಲ್ಲಿ ಗಾಂಧೀಜಿ ಮುಂದೆ ಮಂಡಿಸಿದ್ದರು. ಜಾತಿ ವ್ಯವಸ್ಥೆ ಎಂಬುದು ಈಗಲೂ ಸಮಾಜದಲ್ಲಿ ಚಾಲನೆಯಲ್ಲಿದೆ. ಈ ವ್ಯವಸ್ಥೆ ಬದಲಾವಣೆ ಆಗಬೇಕಾದರೆ ಮನುಷತ್ವ ಕೂಡಿದ ಸಮಾಜ ಕಟ್ಟುವ ಕೆಲಸ ಮಾಡಬೇಕಿದೆ. ಯಾವ ಧಾರ್ಮಿಕ ಕ್ಷೇತ್ರಕ್ಕೆ ಪ್ರವೇಶ ನಿರಾಕರಿಸುತ್ತಾರೋ ಅಂತಹ ಕ್ಷೇತ್ರಗಳಿಗೆ ಹೋಗದೆ, ನೀವೇ ದೇವಸ್ಥಾನ ಕಟ್ಟಿ ನೀವೇ ಪೂಜಾರಿ ಆಗಿಯೆಂದು ಸಮಾನತೆಯ ಸಂದೇಶ ಸಾರಿ ದೇಶದಲ್ಲೇ ಹೊಸ ಇತಿಹಾಸ ನಿರ್ಮಿಸಿದ ಮಹಾನ್ ವ್ಯಕ್ತಿ ನಾರಾಯಣ ಗುರುಗಳಾಗಿದ್ದಾರೆ. 

ಸಾಮಾಜಿಕ ಅಸಮಾನತೆ ತೊಲಗಿಸಲು ರಾಜ್ಯ ಸರಕಾರವೂ ಕೂಡ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪಂಚ ಗ್ಯಾರಂಟಿ ಯೋಜನೆಗಳೂ ಅದರ ಭಾಗವಾಗಿದೆ. ಮಹಿಳೆಯರು ಸ್ವತಂತ್ರರಾಗಿ ಎಲ್ಲಾ ಸಂಕೋಲೆಗಳಿಂದ ಹೊರ ಬರಬೇಕೆಂದು ಯೋಜನೆಗಳನ್ನ ರೂಪಿಸಲಾಗಿದೆ. ಗುರುಗಳ ಸಂದೇಶದಂತೆ ಶಿಕ್ಷಣದಿಂದ‌ ಮಾತ್ರ ಎಲ್ಲಾ ಜಾತಿ ಪದ್ಧತಿ, ಅಸಮಾನತೆಯಿಂದ ವಿಮೋಚನೆ ಸಾಧ್ಯ. ಗುಲಾಮಗಿರಿಯನ್ನ ಕಿತ್ತೆಸೆಯದೆ ಸ್ವಾಭಿಮಾನ ಮೈಗೂಡಿಸಲು ಸಾಧ್ಯವಿಲ್ಲ. ನಮ್ಮೊಳಗೆ ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ಬೆಳೆಸಬೇಕಿದ್ದು, ಇದನ್ನೇ ಗಾಂಧೀಜಿಯವರು ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರತಿಪಾದಿಸಿದ್ದರು. 2016ರಲ್ಲಿ ನಮ್ಮ ಸರಕಾರವೇ ನಾರಾಯಣ ಗುರು ಜಯಂತಿ ಆಚರಣೆಗೆ ಆದೇಶಿಸಿತ್ತು. ಎಲ್ಲಾ ಧರ್ಮಗಳು ಪರಸ್ಪರ ಪ್ರೀತಿಸಲು ಹೇಳಿವೆ ಹೊರತು ಧರ್ಮ, ಜಾತಿ ಹೆಸರಲ್ಲಿ ಸಮಾಜ ಒಡೆಯುವುದಕ್ಕೆ ಹೇಳಿಲ್ಲ ಎಂದರು.

ಶಿವಗಿರಿ ಮಠದ ಪೀಠಾಧಿಪತಿ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮಿ ಆಶೀರ್ವಚನ ನೀಡಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಪ್ರಧಾನ ಸಂದೇಶ ಭಾಷಣ ಮಾಡಿದರು. ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಾಂಗ್ರೆಸ್ ಮುಖಂಡರಾದ ಜನಾರ್ಧನ ಪೂಜಾರಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವರಾದ ದಿನೇಶ್ ಗುಂಡೂರಾವ್, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್, ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಹರೀಶ್ ಪೂಂಜ, ಅಶೋಕ್ ಕುಮಾರ್ ರೈ, ಭಾಗೀರಥಿ ಮುರುಳ್ಯ, ರಾಜೇಶ್ ನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಐವನ್ ಡಿಸೋಜ, ಮಂಜುನಾಥ ಭಂಡಾರಿ, ಕಾರ್ಯಕ್ರಮ ಸಂಯೋಜಕರಾದ ಪಿ.ವಿ.ಮೋಹನ್, ರಕ್ಷಿತ್ ಶಿವರಾಮ್, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ಸಿಎಂ ಸಿದ್ಧರಾಮಯ್ಯ ಅವರು ಕಾಂಗ್ರೆಸಿನ ಸಾಮಾನ್ಯ ಕಾರ್ಯಕರ್ತ ನಝರ್ ಷಾ ಪಟ್ಟೋರಿಯವರ ಮನೆಯಲ್ಲಿ ಉಪಹಾರ ಸೇವಿಸಿದರು. ಕೆಸಿ ವೇಣುಗೋಪಾಲ್ ಅವರು ಕಾಸರಗೋಡು ಜಿಲ್ಲೆಯಲ್ಲಿ ಕಾರ್ಯಕ್ರಮ ಇದೆಯೆಂದು ಸ್ವಲ್ಪ ಮೊದಲೇ ನಿರ್ಗಮಿಸಿದ್ದರು.

At the centenary event commemorating the historic Guru–Gandhi dialogue, Karnataka Chief Minister Siddaramaiah highlighted the revolutionary message of Sri Narayana Guru, who encouraged equality and social reform by urging people to “build your own temples” when entry into existing temples was denied.