ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನವ’ ವಿನೂತನ ಕಾರ್ಯಕ್ರಮಕ್ಕೆ ಯೋಜನೆ ; ಸಂಸದ ಕ್ಯಾ. ಚೌಟ 

03-11-25 05:20 pm       Mangalore Correspondent   ಕರಾವಳಿ

ಯುವ ಜನರು ಸೇರಿದಂತೆ ಸಮಾನ ಮನಸ್ಕರ ಒಗ್ಗಟ್ಟು, ಧರ್ಮದ ಚಿಂತನೆ, ಸ್ವಾರ್ಥ ರಹಿತ ಕೆಲಸಕ್ಕೆ ಭಗವಂತನ ಆಶೀರ್ವಾದ ಸದಾ ಇರುತ್ತದೆ ಎನ್ನುವುದಕ್ಕೆ ಮಂಗಳೂರು ಕಂಬಳವೇ ಸಾಕ್ಷಿ ಎಂದು ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಹೇಳಿದ್ದಾರೆ. 

ಮಂಗಳೂರು, ನ.3 : ಯುವ ಜನರು ಸೇರಿದಂತೆ ಸಮಾನ ಮನಸ್ಕರ ಒಗ್ಗಟ್ಟು, ಧರ್ಮದ ಚಿಂತನೆ, ಸ್ವಾರ್ಥ ರಹಿತ ಕೆಲಸಕ್ಕೆ ಭಗವಂತನ ಆಶೀರ್ವಾದ ಸದಾ ಇರುತ್ತದೆ ಎನ್ನುವುದಕ್ಕೆ ಮಂಗಳೂರು ಕಂಬಳವೇ ಸಾಕ್ಷಿ ಎಂದು ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಹೇಳಿದ್ದಾರೆ. 

ಡಿ.27ರಂದು ನಡೆಯಲಿರುವ ಮಂಗಳೂರು ಕಂಬಳದ ಕುರಿತಂತೆ ನಗರದ ಪತ್ತುಮುಡಿ ಸೌಧದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಯುವಕರು ಸೇರಿಕೊಂಡು ಆರಂಭಿಸಿದ್ದ ಮಂಗಳೂರು ಕಂಬಳಕ್ಕೆ ಈ ಬಾರಿ 9ನೇ ವರ್ಷದ ಸಂಭ್ರಮ. ಈ ನಿಟ್ಟಿನಲ್ಲಿ ಒಂಬತ್ತು ರೀತಿಯ ವಿಭಿನ್ನ ಕಾರ್ಯಕ್ರಮ ಆಯೋಜಿಸುವ ಯೋಚನೆ ಇಟ್ಟುಕೊಂಡಿದ್ದೇವೆ ಎಂದು ಕ್ಯಾ. ಚೌಟ ತಿಳಿಸಿದ್ದಾರೆ.

ಕರಾವಳಿಯ ಜನಪದ ಕ್ರೀಡೆಯಾದ ಕಂಬಳ ನಿಷೇಧವಾಗುತ್ತದೆ ಎಂದಾಗ ಅದರ ವಿರುದ್ಧ ಮಂಗಳೂರಿನಲ್ಲಿ ಪಕ್ಷ-ಬೇಧವಿಲ್ಲದೆ ದೊಡ್ಡ ಪ್ರತಿಭಟನೆ ನಡೆಸಲಾಗಿತ್ತು. ಮಂಗಳೂರು ನಗರದಲ್ಲಿ ಕಂಬಳ ಆರಂಭಗೊಳ್ಳಲು ಆ ದಿನವೇ ಪ್ರೇರಣೆಯಾಗಿತ್ತು. ಅದೇ ಹುಮ್ಮಸ್ಸಿನಲ್ಲಿ ಗೋಲ್ಡ್ ಫಿಂಚ್ ಸಮೂಹ ಸಂಸ್ಥೆಯ ಮಾಲೀಕ ಪ್ರಕಾಶ್ ಶೆಟ್ಟಿ ಸಹಕಾರದಲ್ಲಿ ಮಂಗಳೂರು ಕಂಬಳ ಆರಂಭಿಸಿ, ಸತತ 8 ವರ್ಷಗಳಿಂದ ವಿಭಿನ್ನ ರೀತಿಯಲ್ಲಿ ನಡೆಸುತ್ತ ಬರಲಾಗಿದೆ.  ಈ ಬಾರಿ 9ನೇ ವರ್ಷ ಆಗಿರುವುದರಿಂದ ಒಂಬತ್ತು ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದರಲ್ಲಿ ಮರೆಯಾಗುತ್ತಿರುವ ಜನಪದ ಕ್ರೀಡೆ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವುದು ಸೇರಿದಂತೆ ದೇಶ-ವಿದೇಶಗಳಿಗೆ ತೆರಳಿ ಉದ್ಯಮ ಕಟ್ಟಿದ ನಮ್ಮ ಊರಿನ ಸಾಧಕರನ್ನು ಕಂಬಳಕ್ಕೆ ಕರೆಸಿ ಸನ್ಮಾನಿಸುವ ಚಿಂತನೆ ಕೂಡ ಸೇರಿವೆ. ಶೀಘ್ರದಲ್ಲೇ ಈ ಎಲ್ಲ 9 ಕಾರ್ಯಕ್ರಮಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಕ್ಯಾ. ಚೌಟ ಹೇಳಿದ್ದಾರೆ. 

ಸಭೆಯಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ನಾಗರಾಜ ಶೆಟ್ಟಿ ಮಾತನಾಡಿ, ಸಂಸದರಾಗಿ ಹಾಗೂ ಕಂಬಳದ ರುವಾರಿಯಾಗಿ ಕ್ಯಾ. ಬ್ರಿಜೇಶ್‌ ಚೌಟ ಅವರು ದಕ್ಷಿಣ ಕನ್ನಡ ಅಭಿವೃದ್ಧಿ ಜತೆಗೆ ತುಳುನಾಡಿನ ನಮ್ಮ ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವುದು ಶ್ಲಾಘನೀಯ. ಪ್ರಧಾನಿ ಮೋದಿ ಸೇರಿದಂತೆ ದೆಹಲಿಯಲ್ಲಿರುವ ಹಲವು ಗಣ್ಯರಿಗೆ ಕ್ಯಾ. ಚೌಟ ಅವರು ನಮ್ಮ ಕಂಬಳದ ಬಗೆಗಿನ ಸ್ಮರಣಿಕೆಯನ್ನು ನೀಡುವ ಮೂಲಕ ಈ ಜಾನಪದ ಕ್ರೀಡೆಯ ಅರಿವನ್ನು ರಾಷ್ಟ್ರರಾಜಧಾನಿಯಲ್ಲಿಯೂ ಮೂಡಿಸುತ್ತಿದ್ದಾರೆ. ಮುಂದೆ ಇದು ವಿಶ್ವಮಟ್ಟದಲ್ಲಿಯೂ ಹರಡುವ ಕೆಲಸವು ಕ್ಯಾ. ಚೌಟ ಅವರಿಂದ ಆಗಲಿ ಎಂದು ಹಾರೈಸಿದರು. 

ಕಂಬಳ ಸಮಿತಿ ಉಪಾಧ್ಯಕ್ಷ, ಮಾಜಿ ಕಾರ್ಪೊರೇಟರ್ ಅನಿಲ್ ಕುಮಾರ್ ಮಾತನಾಡಿ, ಕುಳೂರಿನಲ್ಲಿ ಕಂಬಳ ನಡೆಸಿಕೊಂಡು ಬಂದಿದ್ದು ಆ ಭಾಗದಲ್ಲಿ ಹಬ್ಬದ ಕಳೆ ಪಡೆಯುವಂತಾಗಿದೆ. ಕಂಬಳದಿಂದಾಗಿ ಕುಳೂರಿನಲ್ಲಿ ವ್ಯಾಪಾರ ಸಮೃದ್ಧಿಯಾಗಿ ಸ್ಥಳೀಯವಾಗಿ ಅಭಿವೃದ್ಧಿಗೂ ಕಾರಣವಾಗಿದೆ. ಇದರಿಂದ ಈ ಪ್ರದೇಶದಲ್ಲಿ ಬೇರೆ-ಬೇರೆ ಕಾರ್ಯಕ್ರಮಗಳಿಗೂ ನಾಂದಿ ಹಾಡಿದೆ. ಈ ಭಾಗದ ಪ್ರತಿನಿಧಿಯಾಗಿ ಮಂಗಳೂರು ಕಂಬಳಕ್ಕೆ ಸದಾ ನನ್ನ ಬೆಂಬಲವಿರುತ್ತದೆ ಎಂದು ಹೇಳಿದರು. 

ಮಂಗಳೂರು ಕಂಬಳ ಸಮಿತಿಯ ಗೌರವ ಸಲಹೆಗಾರರಾದ ಪ್ರಸಾದ್ ಕುಮಾರ್ ಶೆಟ್ಟಿ, ಕುಳೂರು ಪೊಯ್ಯೆಲು ಪಿ.ಆರ್ ಶೆಟ್ಟಿ, ಮಾಜಿ ಕಾರ್ಪೊರೇಟರ್ ಕದ್ರಿ ಮನೋಹರ್ ಶೆಟ್ಟಿ, ಭರತ್ ಸೂಟರ್ ಪೇಟೆ, ಸಂದೀಪ್ ಗರೋಡಿ, ಸಂಜಯ ಪ್ರಭು, ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಜಿತ್ ಪ್ರತಾಪ್ ಮಂಗಲ್ಪಾಡಿ ಉಪಸ್ಥಿತರಿದ್ದರು. ಈಶ್ವರ್ ಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಮನ್ಮಥ್ ಶೆಟ್ಟಿ ಪುತ್ತೂರು ನಿರೂಪಿಸಿ, ಕಂಬಳ ಸಮಿತಿ ಸಂಚಾಲಕ ಸಚಿನ್ ಶೆಟ್ಟಿ ಸಾಂತ್ಯ ವಂದಿಸಿದರು.

The Mangaluru Kambala, a symbol of unity, culture, and selfless teamwork, will celebrate its 9th anniversary on December 27, announced Dakshina Kannada MP and Kambala Committee President Capt. Brijesh Chowta.