ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷಿ ನಾಶ‌ ವಿರುದ್ಧ ಸಿಡಿದೆದ್ದ ರೈತರು, ಸರ್ಕಾರದ ಅವೈಜ್ಞಾನಿಕ ನಿರ್ಧಾರಗಳಿಂದ ರೈತರು ಕಾರ್ಮಿಕರಾಗುತ್ತಿದ್ದಾರೆ 

01-11-25 11:02 pm       Mangalore Correspondent   ಕರಾವಳಿ

ಉಡುಪಿ -ಕಾಸರಗೋಡು 440 ಕೆ.ವಿ. ವಿದ್ಯುತ್ ಲೈನ್ ಕಾಮಗಾರಿಯ ಸಂದರ್ಭದಲ್ಲಿ ರೈತರ ಕೃಷಿ ನಾಶ ಮಾಡಿದ್ದಲ್ಲದೆ ಪೊಲೀಸ್ ಬಲವನ್ನು ಬಳಸಿಕೊಂಡು ರೈತರ ಮೇಲೆ ದೌರ್ಜನ್ಯವೆಸಗಿದ್ದಾರೆಂದು ಸ್ಟಾರ್ ಲೈಟ್ ವಿದ್ಯುತ್ ಕಂಪೆನಿ ವಿರುದ್ಧ ಬೃಹತ್ ಸಂಖ್ಯೆಯಲ್ಲಿ ಸೇರಿದ ರೈತರು ಶನಿವಾರ ಮೂಡುಬಿದ್ರೆ ಬಳಿಯ ಅಶ್ವತ್ಥಪುರದಲ್ಲಿ ಪ್ರತಿಭಟನಾ ಜಾಥಾ, ಸಭೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರು, ನ.1 : ಉಡುಪಿ -ಕಾಸರಗೋಡು 440 ಕೆ.ವಿ. ವಿದ್ಯುತ್ ಲೈನ್ ಕಾಮಗಾರಿಯ ಸಂದರ್ಭದಲ್ಲಿ ರೈತರ ಕೃಷಿ ನಾಶ ಮಾಡಿದ್ದಲ್ಲದೆ ಪೊಲೀಸ್ ಬಲವನ್ನು ಬಳಸಿಕೊಂಡು ರೈತರ ಮೇಲೆ ದೌರ್ಜನ್ಯವೆಸಗಿದ್ದಾರೆಂದು ಸ್ಟಾರ್ ಲೈಟ್ ವಿದ್ಯುತ್ ಕಂಪೆನಿ ವಿರುದ್ಧ ಬೃಹತ್ ಸಂಖ್ಯೆಯಲ್ಲಿ ಸೇರಿದ ರೈತರು ಶನಿವಾರ ಮೂಡುಬಿದ್ರೆ ಬಳಿಯ ಅಶ್ವತ್ಥಪುರದಲ್ಲಿ ಪ್ರತಿಭಟನಾ ಜಾಥಾ, ಸಭೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಶ್ವತ್ಥಪುರ ಸೀತಾರಾಮ ದೇವಸ್ಥಾನದ ಬಳಿ ಬೃಹತ್ ಸಂಖ್ಯೆಯಲ್ಲಿ ಜಮಾಯಿಸಿದ ರೈತರು ಕಂಪೆನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಒಂಟಿಮಾರ್ ಪ್ರದೇಶದಲ್ಲಿ ಬೆಳೆ ಹಾನಿಗೆ ಒಳಗಾದ ರೈತ ಭಾಸ್ಕರ ಶೆಟ್ಟಿ ಅವರ ಜಮೀನಿನ ವರೆಗೂ ಜಾಥಾ ನಡೆಸಿದರು. ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಕೇಮಾರು ಸಾಂದೀಪನಿ ಮಠದ ಈಶ ವಿಠಲದಾಸ ಸ್ವಾಮೀಜಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಸರ್ಕಾರಗಳು ಕಸದ ಬುಟ್ಟಿಯಂತೆ ಭಾವಿಸಿದ್ದು ಇಲ್ಲಿನ ಜನರಿಗೆ ಅಗತ್ಯವೇ ಇಲ್ಲದ ಕಾರ್ಖಾನೆಗಳನ್ನು ಇಲ್ಲಿಗೆ ತಂದು ಹಾಕಿ ಜನರ ನೆಮ್ಮದಿ ಹಾಳು ಮಾಡುತ್ತಿದೆ. ಇದು ನಮ್ಮ ದುರಾದೃಷ್ಟ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಕೋಟಿ ವಿದ್ಯೆಗಿಂತ ಲೂಟಿ ವಿದ್ಯೆಯೇ ಮೇಲು ಎಂಬಂತಾಗಿದ್ದು ರೈತರಿಗೆ ಅನ್ಯಾಯವಾಗುತ್ತಿದೆ. ರೈತನ ಅಭಿವೃದ್ಧಿಯೇ ದೇಶದ ಅಭಿವೃದ್ಧಿ. ಕೃಷಿ ಅಭಿವೃದ್ಧಿಯಾದರೆ ಮಾತ್ರ ಮನುಷ್ಯ ಪಾಣಿ ಪಕ್ಷಿ ಸಂಕುಲ ಅಭಿವೃದ್ಧಿಯಾಗುತ್ತದೆ. ಕೃಷಿ ನಾಶವಾದರೆ ಮನುಕುಲದ ಜೊತೆಗೆ ಸಂಬಂಧ ಹೊಂದಿರುವ ಎಲ್ಲವೂ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಬಳಿಕ ಕಟೀಲು ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಅರ್ಚಕರಾದ ಅನಂತ ಅಸ್ರಣ್ಣ ಮಾತನಾಡಿದರು. ಸಭೆಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಮುಖಂಡ ನಾರಾಯಣ ಸ್ವಾಮಿ, ಒಬ್ಬ ರೈತನ ಸಮಸ್ಯೆ ಎಲ್ಲ ರೈತರ ಸಮಸ್ಯೆ. ಒಬ್ಬರ ಸಮಸ್ಯೆಗೆ ಎಲ್ಲರೂ ಒಗ್ಗೂಡಿ ಹೋರಾಡಬೇಕಿದೆ. ರೈತರ ಅನುಮತಿ ಇಲ್ಲದೆ ಆಕ್ರಮಿಸಿಕೊಂಡು ಬೆಳೆ ನಾಶ ಮಾಡಿಕೊಂಡು ತಮ್ಮ ಕಾರ್ಯ ಸಾಧನೆ ಮಾಡುತ್ತಿದೆ. ಕಂಪೆನಿಗೆ ರೈತರ ಜಮೀನಿಗೆ ಅನಧಿಕೃತ ದಾಳಿ ಮಾಡಿ ಬೆಳೆ ಹಾನಿ ಮಾಡಲು ಪರವಾನಿಗೆ ನೀಡಿದವರು ಯಾರು ಎಂದು ಪ್ರಶ್ನಿಸಿದರು. ಸರಕಾರದ ಅವೈಜ್ಞಾನಿಕ ನಿರ್ಧಾರಗಳಿಂದ ರೈತರು ಕೃಷಿ ಬಿಟ್ಟು ಕಾರ್ಮಿಕರಾಗುತ್ತಿದ್ದಾರೆ. ಆದಷ್ಟು ಕೃಷಿ ಭೂಮಿಗಳಿಂದ ದೂರದಿಂದ ಈ ಕಾಮಗಾರಿ ನಡೆಸಬೇಕು. ಈ ಕಾಮಗಾರಿಗೆ ರೈತರು ಒಂದು ಇಂಚೂ ಜಾಗವನ್ನು ನೀಡುವುದಿಲ್ಲ ಎಂದು ಕಂಪೆನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
 
ಸುಚರಿತ ಶೆಟ್ಟಿ, ಕೃಷ್ಣಪ್ರಸಾದ್ ತಂತ್ರಿ, ಗ್ರಾ.ಪಂ. ಅಧ್ಯಕ್ಷೆ ಶಾಲಿನಿ, ಪ್ರವೀಣ್ ಭಂಡಾರಿ, ವಸಂತ ಭಟ್, ರವಿರಾಜ್, ಸುರೇಶ್ ಶೆಟ್ಟಿ ದೋಟ, ಬಾಲಕೃಷ್ಣ ದೇವಾಡಿಗ, ಭಾಸ್ಕರ ಶೆಟ್ಟಿ, ಅಲ್ಫೋನ್ಸ್ ನಿಡ್ಡೋಡಿ, ಇನ್ನಾ ಚಂದ್ರಹಾಸ ಶೆಟ್ಟಿ, ಹೊನ್ನಪ್ಪಗೌಡ, ಕೃಷ್ಣಮೂರ್ತಿ, ಜಾಕಿಂ ಪಿಂಟೊ, ಸುದೇಶ್ ದೇವಾಡಿಗ, ಹರೀಶ್ ಉಳ್ಳಾಲ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.

A large group of farmers staged a protest at Ashwatthapura near Moodbidri on Saturday against the Udupi–Kasaragod 440 kV power line project, accusing the Star Light Power Company of destroying agricultural lands and using police force to suppress farmers’ voices.