ಮನವಿ ಕೊಡಲು ಬಂದವರನ್ನು ತಡೆದ ಪೊಲೀಸರು, ಬೆಳ್ತಂಗಡಿ ತಾಲೂಕು ಕಚೇರಿ ಮುಂದೆ ಹೈಡ್ರಾಮಾ ; ಸುಳ್ಳು ಕೇಸು ಹಾಕುತ್ತಿದ್ದಾರೆಂದು ತಹಸೀಲ್ದಾರ್ ಗೆ ದೂರು, ಎಸ್ಐಟಿ ವಿಚಾರಣೆಗೆ ಬರದ ಹೋರಾಟಗಾರರು  

27-10-25 04:36 pm       Mangalore Correspondent   ಕರಾವಳಿ

ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಅವರ ಜೊತೆಗಿದ್ದವರ ಮೇಲೆ ವಿನಾಕಾರಣ ಸುಳ್ಳು ಕೇಸುಗಳನ್ನು ಹಾಕಿ ಹಿಂಸಿಸಲಾಗುತ್ತಿದೆ ಎಂದು ಆರೋಪಿಸಿ ತಹಸೀಲ್ದಾರ್ ಗೆ ದೂರು ಕೊಡಲು ಆಗಮಿಸಿದ್ದವರನ್ನು ಪೊಲೀಸರು ತಡೆದಿದ್ದರಿಂದ ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ಹೈಡ್ರಾಮಾ ನಡೆಯಿತು.

ಬೆಳ್ತಂಗಡಿ, ಅ.27 : ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಅವರ ಜೊತೆಗಿದ್ದವರ ಮೇಲೆ ವಿನಾಕಾರಣ ಸುಳ್ಳು ಕೇಸುಗಳನ್ನು ಹಾಕಿ ಹಿಂಸಿಸಲಾಗುತ್ತಿದೆ ಎಂದು ಆರೋಪಿಸಿ ತಹಸೀಲ್ದಾರ್ ಗೆ ದೂರು ಕೊಡಲು ಆಗಮಿಸಿದ್ದವರನ್ನು ಪೊಲೀಸರು ತಡೆದಿದ್ದರಿಂದ ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ಹೈಡ್ರಾಮಾ ನಡೆಯಿತು.

ಇಂದು ಬೆಳಗ್ಗೆ 10.30ಕ್ಕೆ ಸೌಜನ್ಯಾ ತಾಯಿ ಕುಸುಮಾವತಿ, ಮಹಿಳಾ ಹೋರಾಟಗಾರ್ತಿ ಪ್ರಸನ್ನ ರವಿ ನೇತೃತ್ವದಲ್ಲಿ ಮನವಿ ಕೊಡುವುದಕ್ಕೆ ಸಿದ್ಧತೆ ನಡೆಸಲಾಗಿತ್ತು. ಇದೇ ವೇಳೆ, ಸೌಜನ್ಯಾ ಹೋರಾಟದ ಪರವಾಗಿದ್ದವರು ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ಸೇರಿದ್ದಾರೆ. ಆದರೆ ಬೆಳ್ತಂಗಡಿ ಠಾಣೆ ಪೊಲೀಸರು ಮನವಿ ಕೊಡುವುದಕ್ಕೆ ಅವಕಾಶ ನೀಡುವುದಿಲ್ಲ. ಇಲ್ಲಿ ಜನ ಸೇರಿಸುವುದೇ ತಪ್ಪು ಎಂದು ಅವರನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.

ನಿಮಗೆ ಪ್ರತಿಭಟನೆ ನಡೆಸುವುದಕ್ಕೆ ಅವಕಾಶ ಇಲ್ಲವೆಂದು ಹೇಳಿದ್ದೇವೆ. ಇಲ್ಲಿ ಜನ ಸೇರುವುದಕ್ಕೆ ಬಿಡುವುದಿಲ್ಲ ಎಂದು ಹೇಳಿ ಬೆಳ್ತಂಗಡಿ ಇನ್ಸ್ ಪೆಕ್ಟರ್ ಅಲ್ಲಿದ್ದವರನ್ನು ಪೊಲೀಸ್ ವಾಹನದೊಳಗೆ ತುಂಬಿಸಲು ಮುಂದಾಗಿದ್ದಾರೆ. ಇದೇ ವೇಳೆ, ಜನರು ಪೊಲೀಸರ ವಿರುದ್ಧ ಘೋಷಣೆ ಕೂಗಿದ್ದು ನಮ್ಮನ್ನು ಎನ್ಕೌಂಟರ್ ಮಾಡಿ, ಇಲ್ಲಾಂದ್ರೆ ಮನವಿ ಕೊಡುವುದಕ್ಕೆ ಅವಕಾಶ ಕೊಡಿ ಎಂದು ಹೇಳಿದ್ದಾರೆ. ಪ್ರಸನ್ನ ರವಿ ಪೊಲೀಸರನ್ನು ತರಾಟೆಗೆತ್ತಿಕೊಂಡಿದ್ದು ನಾವು ಪ್ರತಿಭಟನೆ ನಡೆಸಲು ಬಂದಿಲ್ಲ, ತಹಸೀಲ್ದಾರ್ ಗೆ ಮನವಿ ಕೊಡುವುದಕ್ಕೆ ಬಂದಿರೋದು. ನೀವು ಮನವಿ ಕೊಡಲು ಬಿಡಲ್ಲ ಎಂದರೆ ಹೇಗೆ ಎಂದು ಪೊಲೀಸ್ ಅಧಿಕಾರಿಯನ್ನು ಪ್ರಶ್ನಿಸಿದ್ದಾರೆ.

ಕೊನೆಗೆ ಮೆತ್ತಗಾದ ಪೊಲೀಸರು, ಐದು ಜನ ಮಾತ್ರ ತಹಸೀಲ್ದಾರ್ ಕಚೇರಿಗೆ ಹೋಗುವಂತೆ ತಿಳಿಸಿದ್ದಾರೆ. ಇದರಂತೆ, ಪ್ರಸನ್ನ ರವಿ, ಕುಸುಮಾವತಿ, ಮಹೇಶ್ ಶೆಟ್ಟಿ ಸೋದರ ಮೋಹನ್ ಕುಮಾರ್ ಶೆಟ್ಟಿ ಸೇರಿದಂತೆ ಐದು ಮಂದಿ ತಹಸೀಲ್ದಾರ್ ಕಚೇರಿಯೊಳಗೆ ತೆರಳಿ ಮನವಿ ಕೊಟ್ಟಿದ್ದಾರೆ. ನಮ್ಮ ಹೋರಾಟದಲ್ಲಿ ಸಕ್ರಿಯವಾಗಿದ್ದವರನ್ನು ಸುಳ್ಳು ಕೇಸು ಹಾಕಿ ದಮನಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ತಹಸೀಲ್ದಾರ್ ಪೃಥ್ವಿ ಸಾನಿಕಂ ಅನುಪಸ್ಥಿತಿಯಲ್ಲಿ ಉಹ ತಹಸೀಲ್ದಾರ್ ಗೆ ದೂರು ಪತ್ರ ನೀಡಿದ್ದಾರೆ. ಅದರೊಂದಿಗೆ ಅಲ್ಲಿ ಸೇರಿದ್ದ ಜನರೂ ಚದುರಿದ್ದಾರೆ.

ಎಸ್ಐಟಿ ನೋಟೀಸಿಗೆ ಹಾಜರಾಗದ ತಂಡ

ಇದೇ ವೇಳೆ, ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಪಿತೂರಿ ನಡೆಸಿದ್ದಾರೆಂಬ ಆರೋಪಕ್ಕೀಡಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್, ವಿಠಲ ಗೌಡರನ್ನು ಸೋಮವಾರ ಬೆಳಗ್ಗೆ 10.30ಕ್ಕೆ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿತ್ತು. ಆದರೆ ಹೋರಾಟಗಾರರು ಎಸ್ಐಟಿ ವಿಚಾರಣೆಗೆ ಹಾಜರಾಗದೆ ಮೌನ ತಾಳಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ಮತ್ತೊಮ್ಮೆ ನೋಟೀಸ್ ಕೊಡುವ ಸಾಧ್ಯತೆಯಿದ್ದು, ಅದಕ್ಕೂ ಸ್ಪಂದಿಸದಿದ್ದರೆ ಬಂಧಿಸುವುದಕ್ಕೆ ಮುಂದಾಗಲಿದ್ದಾರೆ ಎನ್ನಲಾಗುತ್ತಿದೆ.

High drama unfolded outside the Belthangady taluk office on Sunday morning after police blocked activists supporting Soujanya’s family from submitting a petition to the Tahsildar, alleging that false cases were being filed against them.