Banglegudde, Dharmasthala, SIT: ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತಷ್ಟು ತಲೆಬುರುಡೆ, ಅಸ್ಥಿಪಂಜರ ಪತ್ತೆ ; 13 ಎಕರೆಯಲ್ಲಿ ಪೂರ್ತಿ ಶೋಧ, ನೆಲದ ಮೇಲ್ಭಾಗದಲ್ಲೇ ಶವದ ಅವಶೇಷಗಳು, ಕುತೂಹಲ ಕೆರಳಿಸಿದ ಕಾರ್ಯಾಚರಣೆ

18-09-25 07:40 pm       Mangalore Correspondent   ಕರಾವಳಿ

ಧರ್ಮಸ್ಥಳ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಎರಡನೇ ದಿನವೂ ಬಂಗ್ಲೆಗುಡ್ಡೆ ಕಾಡಿನಲ್ಲಿ ಶೋಧ ಕಾರ್ಯ ಮುಂದುವರಿಸಿದ್ದು, ಮತ್ತಷ್ಟು ಮಾನವ ತಲೆಬುರುಡೆ ಮತ್ತು ಅವಶೇಷಗಳನ್ನು ಪತ್ತೆ ಮಾಡಿದ್ದಾರೆ. ಬುಧವಾರ ಐದು ಕಡೆ ತಲೆಬುರುಡೆ ಮತ್ತು ನೂರಕ್ಕೂ ಹೆಚ್ಚು ಮೂಳೆಗಳನ್ನು ಅಧಿಕಾರಿಗಳು ಸಂಗ್ರಹ ಮಾಡಿದ್ದರು.

ಮಂಗಳೂರು, ಸೆ.18 : ಧರ್ಮಸ್ಥಳ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಎರಡನೇ ದಿನವೂ ಬಂಗ್ಲೆಗುಡ್ಡೆ ಕಾಡಿನಲ್ಲಿ ಶೋಧ ಕಾರ್ಯ ಮುಂದುವರಿಸಿದ್ದು, ಮತ್ತಷ್ಟು ಮಾನವ ತಲೆಬುರುಡೆ ಮತ್ತು ಅವಶೇಷಗಳನ್ನು ಪತ್ತೆ ಮಾಡಿದ್ದಾರೆ. ಬುಧವಾರ ಐದು ಕಡೆ ತಲೆಬುರುಡೆ ಮತ್ತು ನೂರಕ್ಕೂ ಹೆಚ್ಚು ಮೂಳೆಗಳನ್ನು ಅಧಿಕಾರಿಗಳು ಸಂಗ್ರಹ ಮಾಡಿದ್ದರು.

ಎರಡನೇ ದಿನವೂ ಎರಡು ತಲೆಬುರುಡೆ ಸಿಕ್ಕಿದೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಬಂಗ್ಲೆಗುಡ್ಡೆ ಬೆಟ್ಟವು 13 ಎಕರೆ ವ್ಯಾಪ್ತಿಯಲ್ಲಿ ದಟ್ಟ ಕಾಡನ್ನು ಹೊಂದಿದ್ದು, ಪೂರ್ತಿಯಾಗಿ ಶೋಧ ನಡೆಸುವುದಕ್ಕೆ ಎಸ್ಐಟಿ ಮುಖ್ಯಸ್ಥರು ಸೂಚನೆ ನೀಡಿದ್ದಾರೆ. ಇದರಂತೆ, ಎಸ್ಐಟಿ ಎಸ್ಪಿ ಜಿತೇಂದ್ರ ದಯಾಮ ಮತ್ತು ಸೈಮನ್ ನೇತೃತ್ವದಲ್ಲಿ ಕಾಡಿನಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದ್ದು ಮೊದಲ ದಿನ ಐದು ಎಕರೆ ವ್ಯಾಪ್ತಿಯಲ್ಲಿ ಎರಡು ತಂಡಗಳಲ್ಲಾಗಿ ಶೋಧ ನಡೆದಿತ್ತು.

ಎರಡನೇ ದಿನ ಮೂರು ತಂಡಗಳು ಕಾಡಿನ ಒಳಗಡೆ ಶವದ ಅವಶೇಷಗಳ ಹುಡುಕಾಟದಲ್ಲಿ ತೊಡಗಿದೆ. ಇವರಿಗೆ ಎಫ್ಎಸ್ಎಲ್ ತಜ್ಞರು ಸೋಕೋ (ಸೀನ್ ಆಫ್ ಕ್ರೈಮ್ ಆಫೀಸರ್) ಹೆಸರಲ್ಲಿ ಸಾಥ್ ಕೊಟ್ಟಿದ್ದಾರೆ. ದಟ್ಟ ಕಾಡು ಮತ್ತು ಕಲ್ಲು ಬಂಡೆಗಳಿಂದ ಕೂಡಿದ ಕಾಡಿನಲ್ಲಿ ಪ್ರತಿ ಸ್ಥಳವನ್ನೂ ಶೋಧಿಸುತ್ತಿದ್ದಾರೆ. ಬುಧವಾರ ರಾತ್ರಿ ವರೆಗೂ ಅಧಿಕಾರಿಗಳ ತಂಡ ಶೋಧ ನಡೆಸಿದ್ದು, ಆನಂತರ ಬಕೆಟ್ ನಲ್ಲಿ ಎಲುಬುಗಳನ್ನು ತುಂಬಿಸಿ ತಂದಿತ್ತು.

ಗುರುವಾರವೂ ಹಲವಾರು ಬಕೆಟ್ ಗಳಲ್ಲಿ ಎಲುಬು, ತಲೆಬುರುಡೆಗಳನ್ನು ತುಂಬಿಸಿ ಕಾಡಿನಿಂದ ಹೊರಗಡೆ ತರಲಾಗಿದೆ. ಕೆಲವು ಕಡೆ ಅಸ್ಥಿಪಂಜರ ಮಾದರಿಯಲ್ಲಿ ಪೂರ್ತಿಯಾಗಿ ಎಲುಬು, ಬುರುಡೆಗಳಿದ್ದುದೂ ಪತ್ತೆಯಾಗಿದೆ. ಬಂಗ್ಲೆಗುಡ್ಡೆ ಕಾಡಿನಲ್ಲಿ ಬಹುತೇಕ ಶೋಧ ಕಾರ್ಯ ಇಂದಿಗೆ ಮುಗಿಯುವ ಸಾಧ್ಯತೆಯಿದ್ದು, ಅಲ್ಲಿ ದೊರೆತ ಎಲುಬು, ಬುರುಡೆಗಳನ್ನು ಬೆಂಗಳೂರಿನ ಮಡಿವಾಳದಲ್ಲಿರುವ ಎಫ್ಎಸ್ಎಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದಲ್ಲದೆ, ಕಾಡಿನ ಮಧ್ಯೆ ವಾಮಾಚಾರ ನಡೆಸಿರುವ ಕುರುಹು ಇತ್ತೆಂದು ವಿಠಲ ಗೌಡ ಹೇಳಿರುವುದರಿಂದ ಅಲ್ಲಿ ಸಿಕ್ಕಿರುವ ಇತರ ವಸ್ತುಗಳನ್ನೂ ಸಂಗ್ರಹಿಸಿದ್ದಾರೆ. ಬ್ಯಾಗ್, ಬಟ್ಟೆಯ ವಸ್ತುಗಳು, ವಾಮಾಚಾರಕ್ಕೆ ಬಳಸಿದ ವಸ್ತುಗಳನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಇದೇ ವೇಳೆ, ಕಾಡಿನ ಮಧ್ಯೆ ಯಾರಾದ್ರೂ ವಾಮಾಚಾರ ನಡೆಸಿದ್ದಾರೆಯೇ ಎನ್ನುವ ಬಗ್ಗೆಯೂ ಪ್ರತ್ಯೇಕ ಪೊಲೀಸರ ತಂಡ ಶೋಧಕ್ಕಿಳಿದಿದೆ. ಇದಲ್ಲದೆ, ಗ್ರಾಪಂನಲ್ಲಿ ಪಡೆದ ದಾಖಲೆಗಳಲ್ಲಿ ಶವ ಹೂತಿರುವ ಜಾಗ ಬಂಗ್ಲೆಗುಡ್ಡೆಯಲ್ಲಿ ಇದೆಯೇ ಎನ್ನುವ ಬಗ್ಗೆಯೂ ತಲಾಶ್ ಮಾಡಲಾಗಿದೆ. ಕೆಲವು ಕಡೆ ಅಸ್ಥಿಪಂಜರ ಮಾದರಿಯಲ್ಲಿ ಪೂರ್ತಿಯಾಗಿ ಶವದ ಅವಶೇಷಗಳೂ ಸಿಕ್ಕಿದ್ದು ಇದು ಹೂತು ಹಾಕಿರುವ ಶವದ ಅಸ್ಥಿಪಂಜರವೇ, ಆತ್ಮಹತ್ಯೆ ಮಾಡಿಕೊಂಡಿದ್ದಿರಬಹುದೇ ಎನ್ನುವ ಚರ್ಚೆಯೂ ನಡೆದಿದೆ.

The Special Investigation Team (SIT) probing the mysterious Dharmasthala case has intensified its search operations in the dense Banglegudde forest for a second consecutive day, unearthing more human remains — including skulls and skeletal fragments — that have sparked public curiosity and concern.