Elevate Brand Mangalore 2025: 'ಎಲಿವೇಟ್ ಬ್ರ್ಯಾಂಡ್ ಮಂಗಳೂರು' ಯೋಜನೆ ಅನಾವರಣ ; ಸುರಕ್ಷತೆ ದೃಷ್ಟಿಯಿಂದ ವಿಮಾನ ನಿಲ್ದಾಣ ವಿಸ್ತರಣೆ ಅತ್ಯಗತ್ಯ, ಶೀಘ್ರದಲ್ಲೇ 45 ಎಕ್ರೆ ಭೂಸ್ವಾಧೀನ

25-08-25 05:24 pm       Mangalore Correspondent   ಕರಾವಳಿ

ಮಂಗಳೂರು ವಿಮಾನ ನಿಲ್ದಾಣದ ಸುರಕ್ಷತೆ ದೃಷ್ಟಿಯಿಂದ ರನ್ ವೇ ವಿಸ್ತರಣೆ ಅಗತ್ಯವಾಗಿದ್ದು ಶೀಘ್ರದಲ್ಲೇ 45 ಎಕ್ರೆ ಭೂಮಿಯನ್ನು ವಶಕ್ಕೆ ಪಡೆದು ವಿಸ್ತರಣೆ ಕಾರ್ಯ ನಡೆಯಲಿದೆ  ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು. 

ಮಂಗಳೂರು, ಆ.25 : ಮಂಗಳೂರು ವಿಮಾನ ನಿಲ್ದಾಣದ ಸುರಕ್ಷತೆ ದೃಷ್ಟಿಯಿಂದ ರನ್ ವೇ ವಿಸ್ತರಣೆ ಅಗತ್ಯವಾಗಿದ್ದು ಶೀಘ್ರದಲ್ಲೇ 45 ಎಕ್ರೆ ಭೂಮಿಯನ್ನು ವಶಕ್ಕೆ ಪಡೆದು ವಿಸ್ತರಣೆ ಕಾರ್ಯ ನಡೆಯಲಿದೆ  ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು. 

ಕೆನರಾ ಕೈಗಾರಿಕಾ ಸಂಸ್ಥೆ ಹಮ್ಮಿಕೊಂಡ 'ಎಲಿವೇಟ್ ಬ್ರ್ಯಾಂಡ್ ಮಂಗಳೂರು' ಯೋಜನೆಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು. ಮಂಗಳೂರು ವಿಮಾನ ನಿಲ್ದಾಣಕ್ಕೆ ಪಾಯಿಂಟ್ ಆಫ್ ಕಾಲ್ ಮಾನ್ಯತೆ ಒದಗಿಸಲು ವಿಮಾನಯಾನ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದೇನೆ. ಪ್ರಯಾಣಿಕರ ಬೇಡಿಕೆ ಹೆಚ್ಚಿದ್ದರೆ ಹೊಸ ತಾಣಗಳಿಗೆ ವಿಮಾನ ಯಾನ ಸಾಧ್ಯ. ಆದರೆ ವೈಡ್‌ ಬಾಡಿ ಏರ್ ಕ್ರಾಫ್ಟ್ ಚಾಲನೆಗೆ ಇನ್ನಷ್ಟು ಕಾಲ ಬೇಕು ಎಂದರು. ಹೊರಗಿನಿಂದ ಇಲ್ಲಿಗೆ ಹೊಸ ಹೂಡಿಕೆಗಳನ್ನು ಆಕರ್ಷಿಸುವುದಕ್ಕಿಂತ ಮಂಗಳೂರು ಮೂಲದವರೇ ಇಲ್ಲಿಗೆ ಮರಳಿ ಅಭಿವೃದ್ಧಿ ಕೈಗೊಳ್ಳುವುದು ಸುಲಭ. ಇದಕ್ಕಾಗಿ ಬೊಲ್ಪು ಹಾಗೂ ಬ್ಯಾಕ್ ಟು ಊರು ಎನ್ನುವ ಪರಿಕಲ್ಪನೆಯಡಿ ಯೋಜನೆ ರೂಪಿಸಲಾಗಿದೆ ಎಂದರು.

ಬಂದರು ನಮ್ಮ ಅಭಿವೃದ್ಧಿಗೆ ದೊಡ್ಡ ಶಕ್ತಿ. ಚತುಷ್ಪಥ ರಸ್ತೆ ಇನ್ನೂ ರಾಷ್ಟ್ರೀಯ ಹೆದ್ದಾರಿ ಲಾಜಿಸ್ಟಿಕ್ಸ್ ವಿಭಾಗದ ಅಧೀನದಲ್ಲಿರುವುದು ಬಂದರು ಮುಖೀ ಯೋಜನೆಗಳನ್ನು ರೂಪಿಸಲು ಅಡ್ಡಿಯಾಗಿದೆ. ಇದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸುವಂತೆ ಸಚಿವ ನಿತಿನ್ ಗಡ್ಕರಿಯವರಲ್ಲಿ ಕೋರಿದ್ದೇನೆ. ಫಲಪ್ರದವಾಗುವ ನಿರೀಕ್ಷೆ ಇದೆ ಎಂದು ಸಂಸದ ಚೌಟ ಹೇಳಿದರು.

ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಕೆಸಿಸಿಐ ಅಧ್ಯಕ್ಷ ಆನಂದ್ ಜಿ. ಪೈ ಮಾತನಾಡಿ, ದೇಶದ ಪ್ರಗತಿಗೆ ನಮ್ಮ ಮಂಗಳೂರು ದೊಡ್ಡ ಕೊಡುಗೆ ನೀಡಲು ಸಾಧ್ಯವಿದೆ. ಸುಸ್ಥಿರ ಅಭಿವೃದ್ಧಿಯ ದೃಷ್ಟಿಕೋನದೊಂದಿಗೆ ನಮ್ಮ ಸಂಸ್ಕೃತಿ-ಪರಂಪರೆಯ ಒಟ್ಟು ಯೋಜನೆಯೊಂದಿಗೆ ಸಾಗಬೇಕು ಎಂದರು. ಕೆಸಿಸಿಐ ಮಾಜಿ ಅಧ್ಯಕ್ಷ ಗಣೇಶ್ ಕಾಮತ್ ಸಂವಾದ ನಿರೂಪಿಸಿದರು. ನಿರ್ದೇಶಕಿ ಆತ್ಮಿಕಾ ಅಮೀನ್ 'ಎಲಿವೇಟ್ ಬ್ರ್ಯಾಂಡ್ ಮಂಗಳೂರು' ಬಗ್ಗೆ ವಿವರಿಸಿದರು.

ಸಂವಾದದಲ್ಲಿ ರೋಬೋಸಾಫ್ಟ್ ಸ್ಥಾಪಕ ರೋಹಿತ್ ಭಟ್, ಕರಾವಳಿ ಭಾಗದಿಂದಲೇ 500 ಮಿಲಿಯನ್ ಡಾಲರ್ ಪ್ರಮಾಣದ ರಫ್ತು ನಡೆಯುತ್ತಿದ್ದು, ಐಟಿ ಕೇಂದ್ರಿತ ಅಭಿವೃದ್ಧಿಯ ಆಶಾಭಾವ ಸೃಷ್ಟಿಸಿದೆ ಎಂದರು, ನಮ್ಮಲ್ಲಿನ ತಾಂತ್ರಿಕ ಶಿಕ್ಷಣದ ಗುಣಮಟ್ಟ ಚೆನ್ನಾಗಿದೆ. ಪ್ರತಿಭೆಗಳನ್ನು ಇನ್ನಷ್ಟು ಪ್ರದರ್ಶಿಸುವ ಕೆಲಸ ಆಗಬೇಕು ಎಂದು ಲ್ಯಾಮಿನಾ ಫೌಂಡೇಶನ್ನಿನ ಎಸ್. ವಿಶಾಲ್ ಹೆಗ್ಡೆ ಹೇಳಿದರು.  ಮಂಗಳೂರಿನಲ್ಲಿರುವ ಅವಕಾಶಗಳನ್ನು ಪೂರ್ಣವಾಗಿ ಬಳಸಿಕೊಂಡಿಲ್ಲ ಎಂದು ಸಮರ್ಷ್ ಕ್ಯಾಪಿಟಲ್ ಸ್ಥಾಪಕ ಸಂದೀಪ್ ಶೆಣೈ ಹೇಳಿದರು. 

ಕೇರಳದ ಮಾದರಿಯಲ್ಲಿ ನಮ್ಮ ಪ್ರವಾಸೋದ್ಯಮ ನೀತಿ ರೂಪಿಸಬೇಕು ಎಂದು ಶಂಕರ್ ವಿಠಲ್ ಸಮೂಹದ ಕಾರ್ಯಕಾರಿ ನಿರ್ದೇಶಕ ಪ್ರಶಾಂತ್ ಆರೂರ್ ಅಭಿಪ್ರಾಯ ಪಟ್ಟರು. ಮಂಗಳೂರು ಹೊಸ ಅವಕಾಶಗಳತ್ತ ತೆರೆದುಕೊಳ್ಳುತ್ತಿದ್ದು ಸಿನಿಮಾದಲ್ಲು ಕ್ರಾಂತಿಯಾಗುತ್ತಿದೆ. ಈಗ ಮಿನಿ ಸಿನಿಮಾ ಇಂಡಸ್ಟ್ರಿಯಾಗಿಯೂ ರೂಪ ಪಡೆಯುತ್ತಿದೆ. ಇಲ್ಲೇ ಚಿತ್ರಗಳು ನಿರ್ಮಾಣ ಆಗುತ್ತಿರುವುದು ಹೊಸ ಭವಿಷ್ಯದತ್ತ ಆಶಾಭಾವ ಮೂಡಿಸಿದೆ ಎಂದು ರಂಗ ಕಲಾವಿದ ವಿಜಯಕುಮಾರ್ ಕೊಡಿಯಾಲಬೈಲ್ ಅಭಿಪ್ರಾಯಿಸಿದರು.

Expansion of the Mangaluru International Airport is essential from a safety perspective, and around 45 acres of land will be acquired soon to facilitate the extension of the runway, said MP Captain Brijesh Chowta.