MP Brijesh Chowta, Mangalore: ಅಡಿಕೆ ಹಳದಿ ರೋಗ ಪರಿಶೀಲನೆಗೆ ಶೀಘ್ರದಲ್ಲೇ ಕೇಂದ್ರ ಕೃಷಿ ಸಚಿವರು ಜಿಲ್ಲೆಗೆ, ಕೆಐಒಸಿಎಲ್ ಪುನರಾರಂಭಕ್ಕೆ ಹಣಕಾಸು ಸಚಿವರಿಗೆ ಮನವಿ ; ಸಂಸದ ಚೌಟ

23-08-25 09:00 pm       Mangalore Correspondent   ಕರಾವಳಿ

ಹಳದಿ ರೋಗ, ಕೊಳೆರೋಗದಿಂದಾಗಿ ಅಡಿಕೆ ಬೆಳೆಗಾರರು ದೊಡ್ಡ ಮಟ್ಟದಲ್ಲಿ ನಷ್ಟಕ್ಕೀಡಾಗಿದ್ದಾರೆ.

ಮಂಗಳೂರು, ಆ.23 : ಹಳದಿ ರೋಗ, ಕೊಳೆರೋಗದಿಂದಾಗಿ ಅಡಿಕೆ ಬೆಳೆಗಾರರು ದೊಡ್ಡ ಮಟ್ಟದಲ್ಲಿ ನಷ್ಟಕ್ಕೀಡಾಗಿದ್ದಾರೆ. ಹಳದಿ ರೋಗ ಪೀಡಿತ ಪ್ರದೇಶದಲ್ಲಿ ಸಂಶೋಧನೆ ಕೈಗೊಳ್ಳುವುದು, ರೈತರಿಗೆ ಗರಿಷ್ಠ ಪರಿಹಾರದ ಮೊತ್ತ ನೀಡುವುದು, ಅಲ್ಲಿ ಪರ್ಯಾಯ ಬೆಳೆ ಬೆಳೆಸುವುದಕ್ಕಾಗಿ ಅಡಿಕೆ ಬೆಳೆಯುವ ಜಿಲ್ಲೆಗಳ ಸಂಸದರು, ರಾಜ್ಯದ ಸಚಿವರು, ಅಡಿಕೆ ಬೆಳೆಗಾರ ಸಂಸ್ಥೆಗಳು ಜಂಟಿಯಾಗಿ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿದ್ದೇವೆ. ಶೀಘ್ರದಲ್ಲೇ ಕೇಂದ್ರ ಕೃಷಿ ಸಚಿವರು ರೋಗ ಪೀಡಿತ ಅಡಿಕೆ ಕೃಷಿ ಪ್ರದೇಶಕ್ಕೆ ಭೇಟಿ ನೀಡುತ್ತೇನೆಂದು ತಿಳಿಸಿದ್ದಾರೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ. 

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಅಡಿಕೆ ಬೆಳೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚೆ ಮಾಡಿದ್ದೇವೆ. ಅಡಿಕೆ ಕ್ಯಾನ್ಸರ್ ಕಾರಕ ಎನ್ನುವ ಸುದ್ದಿಯನ್ನು ಅಲ್ಲಗಳೆಯುವುದಕ್ಕಾಗಿ ಏಮ್ಸ್, ಐಸಿಐಆರ್ ನಿಂದ ಸಂಶೋಧನೆ ಕೈಗೊಂಡಿದ್ದು, ಆದಷ್ಟು ಬೇಗ ಬೆಳೆಗೆ ಅಂಟಿರುವ ಹಣೆಪಟ್ಟಿ ನಿವಾರಿಸಬೇಕೆಂದು ಕೇಳಿಕೊಂಡಿದ್ದೇವೆ. ಹಳದಿ ರೋಗ ಪೀಡಿತ ಪ್ರದೇಶದಲ್ಲಿ ಬದಲಿ ಕೃಷಿ ಬೆಳೆಯುವುದಕ್ಕಾಗಿ ಪ್ಲಾನ್ ಮಾಡಬೇಕೆಂದು ಬೇಡಿಕೆ ಇರಿಸಿದ್ದೇವೆ. ಹಣಕಾಸು ಸಚಿವರ ಜೊತೆಗೂ ಅಹವಾಲು ಇಟ್ಟಿದ್ದು ದೀರ್ಘ ಕಾಲದ ಸಮಸ್ಯೆ ಪರಿಹರಿಸಲು ಒತ್ತಡ ಹೇರಿದ್ದೇವೆ ಎಂದರು. 

ಅಡಿಕೆಗೆ ಬದಲಿ ಬೆಳೆಯಾಗಿ ಕಾಫಿ ಬೆಳೆಸಲು ಕಾಫಿ ಬೋರ್ಡ್ ಒಪ್ಪಿಗೆ ‌ನೀಡಿದ್ದು ಬೆಳ್ತಂಗಡಿ, ಸುಳ್ಯದಲ್ಲಿ ಪ್ರಾಯೋಗಿಕವಾಗಿ ಮಾಡಲಿದೆ. ಆ.25ರಂದು ಸುಳ್ಯದಲ್ಲಿ 'ಕಾಫಿ ಕೋ' ಹೆಸರಲ್ಲಿ ಕಾಫಿ ಬೋರ್ಡ್ ಮೂಲಕ ಕಾರ್ಯಕ್ರಮ ಮಾಡುತ್ತಿದ್ದೇವೆ. ಈ ಬಗ್ಗೆ ಒಂದಿಬ್ಬರ ಪ್ರಯತ್ನ ಅಲ್ಲ, ಸಾಂಸ್ಥಿಕ ಪ್ರಯತ್ನ ಆಗಬೇಕು. ಬೆಳ್ತಂಗಡಿಯಲ್ಲಿ ಕಾಫಿ ಬೆಳೆಯಲು 10-12 ಗ್ರಾಮಗಳನ್ನು ಗುರುತಿಸಿದ್ದಾರೆ ಎಂದರು. 

ಕುದುರೆಮುಖ ಕೆಐಒಸಿಎಲ್ ಕಂಪ‌ನಿಗೆ ಅದಿರು ಪೂರೈಸುವ ವಿಚಾರದಲ್ಲಿ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಂಪನಿಯ ಮಜ್ದೂರ್ ಸಂಘದ ನಿಯೋಗದ ಜೊತೆಗೆ, ಉಕ್ಕು ಸಚಿವ ಕುಮಾರಸ್ವಾಮಿ ಅವರೊಂದಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿದ್ದು, ಮಂಗಳೂರಿನ ಕಂಪನಿ ಪುನರಾರಂಭಿಸಬೇಕೆಂದು ಮನವಿ ಮಾಡಿದ್ದೇವೆ. ರಾಜ್ಯ ಸರ್ಕಾರಕ್ಕೂ ಕಂಪನಿಯಿಂದ ಹಣ ಸಂದಾಯ ಮಾಡಿದೆ. ಅದಿರು ಪೂರೈಸಿ ಈ ಕಂಪನಿಯನ್ನು ಉಳಿಸಿಕೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡುತ್ತೇನೆ ಎಂದರು. 

ಅಡಿಕೆ ಅಕ್ರಮ ಆಮದು ತಡೆಯಲು ಕಸ್ಟಮ್ಸ್ ಇಲಾಖೆಯಿಂದ ಪರಿಣಾಮಕಾರಿ ಕೆಲಸ ಆಗಬೇಕೆಂದು ಹಣಕಾಸು ಸಚಿವರಿಗೆ ಬೇಡಿಕೆ ಇರಿಸಿದ್ದೇವೆ. ಆದರೆ ಅಭಿವೃದ್ಧಿ ಹೊಂದಿಲ್ಲದ ದೇಶಗಳಿಂದ ಆಮದು ತೆರಿಗೆ ಇಲ್ಲದಿರುವುದನ್ನು ಬಂಡವಾಳ ಮಾಡಿಕೊಂಡು ಅಲ್ಲಿ ಅಡಿಕೆ ಬೆಳೆಯದಿದ್ದರೂ ಕೆಲವರು ಸುಂಕ ತಪ್ಪಿಸಲು ಅಲ್ಲಿಂದ ಅಡಿಕೆ ಆಮದು ಮಾಡಿಸುತ್ತಿದ್ದಾರೆ. ಇದೇ ಆಧಾರದಲ್ಲಿ ನೇಪಾಳ ಮೂಲಕ ಅಡಿಕೆ ತರುವ ಕೆಲಸ ಆಗುತ್ತಿದೆ ಎಂದು ಚೌಟ ಹೇಳಿದರು. 

ಧರ್ಮಸ್ಥಳ ಪ್ರಕರಣದ ಕುರಿತ ಪ್ರಶ್ನೆಗೆ, ಇದರಲ್ಲಿ ಬಿಜೆಪಿ ನಿಲುವು ಸ್ಪಷ್ಟ ಇದೆ. ಹಿಂದು ಶ್ರದ್ಧಾಕೇಂದ್ರವನ್ನು ಯಾವುದೋ ಅಪರಾಧ ಪ್ರಕರಣದ ನೆಪದಲ್ಲಿ ಅಲ್ಲಿನ ಭಕ್ತರ ಭಾವನೆಗೆ ಘಾಸಿ ತರುವುದು ಸರಿಯಲ್ಲ. ಪಕ್ಷದ ರಾಜ್ಯಾಧ್ಯಕ್ಷರು ಈ ಬಗ್ಗೆ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ. ಎಸ್ಐಟಿ ತನಿಖೆಯ ವಿಚಾರದಲ್ಲಿ ಟೀಕೆ ಮಾಡುವುದಿಲ್ಲ. ಸೌಜನ್ಯಾ ಪ್ರಕರಣದಲ್ಲಿ ಮರು ತನಿಖೆ ಆಗಬೇಕು ಎಂದು ಬೆಳ್ತಂಗಡಿ ಶಾಸಕರು ಸದನದಲ್ಲಿಯೇ ಹೇಳಿದ್ದಾರೆ, ಅದಕ್ಕೆ ಬಿಜೆಪಿಯದ್ದೂ ಸಹಮತ ಇದೆ ಎಂದು ಹೇಳಿದರು.‌

ಸುದ್ದಿಗೋಷ್ಟಿಯಲ್ಲಿ ನಂದನ್ ಮಲ್ಯ, ಸತೀಶ್ ಪ್ರಭು, ರಾಜಗೋಪಾಲ ರೈ, ವಸಂತ ಪೂಜಾರಿ ಇದ್ದರು.

Arecanut growers in coastal Karnataka, reeling under heavy losses due to yellow leaf disease and rot, may soon receive relief measures as Union Agriculture Minister Shivraj Singh Chouhan has assured a visit to affected regions. This was disclosed by Dakshina Kannada MP Captain Brijesh Chowta while addressing the media at the BJP office in Mangaluru.