ಹಿಂದುಗಳ ಹಬ್ಬ, ಆಚರಣೆಗೆ ತೊಂದರೆ ಇಲ್ಲ, ಬಿಜೆಪಿ ಶಾಸಕರಿಗೆ ಧರ್ಮ ವಿಚಾರ ಕೆದಕುವುದಷ್ಟೇ ಕೆಲಸ ; ಪದ್ಮರಾಜ್ ಸಮರ್ಥನೆ 

22-08-25 05:07 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ, ಉಡುಪಿಯಲ್ಲಿ ಹಿಂದುಗಳ ಹಬ್ಬಗಳಿಗೆ ಅಡಚಣೆ ಉಂಟು ಮಾಡುತ್ತಿದ್ದಾರೆ ಎಂದು ಇಲ್ಲಿನ ಇಬ್ಬರು ಶಾಸಕರು ಸದನದಲ್ಲಿ ವಿಚಾರ ಎತ್ತಿದ್ದಾರೆ. ಇವರಿಗೆ ಬಂಡವಾಳವೇ ಧರ್ಮದ ವಿಚಾರದಲ್ಲಿ ಅಡಚಣೆ ಮಾಡುವುದಾಗಿದ್ದು, ಅದನ್ನು ಅವರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಇಲ್ಲಿ ಯಾವುದೇ ಧರ್ಮದ ಹಬ್ಬಗಳ ಆಚರಣೆಗೆ ತೊಂದರೆ ಆಗಿಲ್ಲ.

ಮಂಗಳೂರು, ಆ.22 : ದಕ್ಷಿಣ ಕನ್ನಡ, ಉಡುಪಿಯಲ್ಲಿ ಹಿಂದುಗಳ ಹಬ್ಬಗಳಿಗೆ ಅಡಚಣೆ ಉಂಟು ಮಾಡುತ್ತಿದ್ದಾರೆ ಎಂದು ಇಲ್ಲಿನ ಇಬ್ಬರು ಶಾಸಕರು ಸದನದಲ್ಲಿ ವಿಚಾರ ಎತ್ತಿದ್ದಾರೆ. ಇವರಿಗೆ ಬಂಡವಾಳವೇ ಧರ್ಮದ ವಿಚಾರದಲ್ಲಿ ಅಡಚಣೆ ಮಾಡುವುದಾಗಿದ್ದು, ಅದನ್ನು ಅವರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಇಲ್ಲಿ ಯಾವುದೇ ಧರ್ಮದ ಹಬ್ಬಗಳ ಆಚರಣೆಗೆ ತೊಂದರೆ ಆಗಿಲ್ಲ. ಪೊಲೀಸರು ಬಿಜೆಪಿ ಸರ್ಕಾರದಲ್ಲಿ ಮಾಡಿದ್ದ ನಿಯಮಗಳನ್ನಷ್ಟೆ ಹೇಳಿದ್ದಾರೆ. ‌ನಿಯಮಗಳಿಂದ ತೊಂದರೆ ಆಗಿಲ್ಲ. ಮೊನ್ನೆ ತೊಕ್ಕೊಟ್ಟಿನಲ್ಲಿ ವಿಜೃಂಭಣೆಯ ಮೊಸರು ಕುಡಿಕೆ ಆಗಿಲ್ಲವೇ.. ಧರ್ಮದ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದು ಇವರ ಚಾಳಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.

ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಇರುವಾಗಲೇ ಸಮಯ ಮಿತಿ ಬಗ್ಗೆ ಕಾನೂನು ತಂದಿದ್ದರು. ಅಧಿಕಾರಿಗಳ ಕೆಲಸ ಕಾನೂನನ್ನು ಪಾಲನೆ ಮಾಡುವುದಷ್ಟೇ ಆಗಿದೆ. ಆದರೂ ಆಯಾ ಭಾಗದಲ್ಲಿ ನಡೆಯುವ ಯಾವುದೇ ಧಾರ್ಮಿಕ ಆಚರಣೆ, ಹಬ್ಬಗಳಿಗೆ ಜಿಲ್ಲಾಡಳಿತ ಅವಕಾಶ ಕೊಡುತ್ತದೆ. ಯಾವುದೇ ತೊಂದರೆ ಇಲ್ಲ. ಈ ಬಾರಿಯೂ ಮುಂದೆ ಬರುವ ಗಣೇಶೋತ್ಸವ, ದಸರಾ ಹಬ್ಬಗಳು ಹಿಂದೆ ಹೇಗೆ ನಡೆದು ಬಂದಿತ್ತೋ ಅದೇ ರೀತಿ ಅದ್ದೂರಿಯಾಗಿ ಮಾಡಲು ತೊಂದರೆ ಇಲ್ಲ. 

ಈ ಬಗ್ಗೆ ಮಂಗಳೂರು ಪೊಲೀಸ್ ಕಮೀಷನರ್ ಅವರನ್ನು ಭೇಟಿಯಾಗಿ ಮಾತನಾಡಿದ್ದೇನೆ. ಕಾನೂನನ್ನು ಮೀರಿದರೆ ಮಾತ್ರ ಕ್ರಮ ಎಂದು ಅವರು ಹೇಳಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಕಾರ್ಯಕ್ರಮ ಮಾಡಿ, ಆದರೆ ಡಿಜೆಗೆ ಅವಕಾಶವಿಲ್ಲ. ಅದು ನಮ್ಮ ಸಂಸ್ಕೃತಿಯೂ ಅಲ್ಲ. ಅದನ್ನು ನಿಷೇಧಿಸಬೇಕು ಎಂದು ಹಿಂದಿನಿಂದಲೂ ಆಗ್ರಹವಿದ್ದು, ಅದರ ಬಗ್ಗೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ.  

ತೊಕ್ಕೊಟ್ಟಿನಲ್ಲಿ ಮೊಸರು ಕುಡಿಕೆ ಆಚರಣೆ ಅಡಚಣೆ ಇಲ್ಲದೆ ಆಗಿದೆ. ಯಾವುದೇ ತೊಂದರೆ ಆಗಿಲ್ಲ. ಸಮಯಾವಕಾಶ 11 ಗಂಟೆ ಇದ್ದರೂ ರಾತ್ರಿ 2 ಗಂಟೆಯ ವರೆಗೆ ಮೆರವಣಿಗೆ ನಡೆದಿದೆ. ಪೊಲೀಸರು ಯಾರಿಗೂ ತೊಂದರೆ ಮಾಡಿಲ್ಲ. ಟೈಮಿಂಗ್ಸ್ ಬಗ್ಗೆ ಸಂಬಂಧಪಟ್ಟ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಿರಿ, ನಿಮ್ಮ ಸಂಸ್ಕೃತಿ ಪ್ರಕಾರ ಆಚರಣೆಗೆ ನಮ್ಮ ಅಭ್ಯಂತರವಿಲ್ಲ. ಯಾವುದೇ ತೊಂದರೆಯನ್ನೂ ಕೊಡುವುದಿಲ್ಲ ಎಂದು ತಿಳಿಸಿದರು.

ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಎಂ.ಎಸ್.ಮಹಮ್ಮದ್, ನವೀನ್ ಡಿಸೋಜ, ಸುಭಾಶ್ಚಂದ್ರ ಶೆಟ್ಟಿ, ಅಪ್ಪಿ, ಲತಾ, ಶಶಿಧರ ಹೆಗ್ಡೆ, ಚಿತ್ತರಂಜನ್, ಶಾಹುಲ್ ಹಮೀದ್, ನವಾಜ್, ದಿನೇಶ್, ವಿಕಾಸ್, ನೀರಜ್‌ಪಾಲ್, ಪ್ರೇಮ್ ಬಳ್ಳಾಲ್‌ಬಾಗ್ ಮೊದಲಾದವರು ಉಪಸ್ಥಿತರಿದ್ದರು.

KPCC General Secretary Padmaraj R. Poojary has hit out at two BJP MLAs from coastal Karnataka for alleging in the Assembly that Hindu festivals are being disrupted in Dakshina Kannada and Udupi districts.