ಬ್ರೇಕಿಂಗ್ ನ್ಯೂಸ್
21-06-25 03:56 pm Giridhar Shetty, Mangaluru ಕರಾವಳಿ
ಮಂಗಳೂರು, ಜೂನ್ 21: ಯಾವುದೇ ಸರಕಾರಿ ನೌಕರ ಅಥವಾ ಅಧಿಕಾರಿ ಭ್ರಷ್ಟಾಚಾರ ಇನ್ನಿತರ ಪ್ರಕರಣಗಳಲ್ಲಿ ಬಂಧಿತನಾಗಿ ಕನಿಷ್ಠ 24 ಗಂಟೆ ಕಾಲ ಜೈಲಿನಲ್ಲಿದ್ದರೆ, ಕಾನೂನು ಪ್ರಕಾರ ಆತ ತನ್ನ ಹುದ್ದೆಯಿಂದ ಅಮಾನತು ಆಗುತ್ತಾನೆ. ಸುಪ್ರೀಂ ಕೋರ್ಟ್ ಆದೇಶ ಪ್ರಕಾರ, ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿತರಾದ ಅಧಿಕಾರಿಗಳು ಆರೋಪ ಮುಕ್ತನಾಗೋ ವರೆಗೂ ಮತ್ತೆ ಸೇವೆಗೆ ಹಾಜರಾಗುವಂತಿಲ್ಲ. ಆದರೆ ಮಂಗಳೂರಿನಲ್ಲಿ ಮಾತ್ರ ಈ ನಿಯಮ ಅನ್ವಯ ಆದಂತಿಲ್ಲ. ಗಣಿ ಇಲಾಖೆಯ ಅಧಿಕಾರಿಯೊಬ್ಬರು ಭ್ರಷ್ಟಾಚಾರ ಪ್ರಕರಣದಲ್ಲಿ ರೆಡ್ ಹ್ಯಾಂಡ್ ಸಿಕ್ಕಿಬಿದ್ದು ಬರೋಬ್ಬರಿ 18 ದಿನ ಜೈಲಿನಲ್ಲಿದ್ದರೂ ಜಾಮೀನಿನಲ್ಲಿ ಹೊರಬಂದು ಮತ್ತೆ ಅದೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಗಣಿ ಮತ್ತು ವಿಜ್ಞಾನ ಇಲಾಖೆಯಲ್ಲಿ ಉಪ ನಿರ್ದೇಶಕಿ ಸ್ಥಾನದಲ್ಲಿರುವ, ಒಂದೇ ವರ್ಷದಲ್ಲಿ ಎರಡೆರಡು ಬಾರಿ ಲೋಕಾಯುಕ್ತ ದಾಳಿಗೀಡಾಗಿ ಕಡು ಭ್ರಷ್ಟ ಎಂದು ಹಣೆಪಟ್ಟಿ ಹೊತ್ತಿರುವ ಕೃಷ್ಣವೇಣಿ ಎಂಬ ಮಹಿಳಾ ಅಧಿಕಾರಿ ಇತ್ತೀಚೆಗೆ ವ್ಯಕ್ತಿಯೊಬ್ಬರಿಂದ 50 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತಕ್ಕೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಕಳೆದ ಮೇ 28ರಂದು ಕೃಷ್ಣವೇಣಿ ಮತ್ತು ಆಕೆಯ ಸಹಾಯಕ ಪ್ರದೀಪ್ ವಿರುದ್ಧ ಪ್ರಕರಣ ದಾಖಲಾಗಿದ್ದಲ್ಲದೆ, ಲೋಕಾಯುಕ್ತ ಅಧಿಕಾರಿಗಳು ಬಂಧಿಸಿ ಜೈಲಿಗಟ್ಟಿದ್ದರು. ಈ ಪೈಕಿ ಪ್ರದೀಪ್ ಸರಕಾರಿ ಸೇವೆಯಿಂದ ಅಮಾನತುಗೊಂಡಿದ್ದರೆ, ಜಿಲ್ಲಾ ಉಪ ನಿರ್ದೇಶಕಿಯಾಗಿದ್ದರಿಂದ ಆಕೆಯನ್ನು ಅಮಾನತುಗೊಳಿಸುವಂತೆ ಲೋಕಾಯುಕ್ತ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದರು.

ಬಾಳೆಪುಣಿ ಗ್ರಾಮದ ವ್ಯಕ್ತಿಯೊಬ್ಬರು ವರ್ಷದ ಹಿಂದೆ ಮನೆ ಕಟ್ಟುವ ಸಲುವಾಗಿ ಕಲ್ಲು ತೆಗೆದು ಜಾಗ ಸಮತಟ್ಟು ಮಾಡಲು ಅನುಮತಿ ಕೇಳಿ ಗಣಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಇತ್ತೀಚೆಗೆ ಅರ್ಜಿದಾರರು ಅರ್ಜಿ ಬಗ್ಗೆ ವಿಚಾರಿಸಲು ಕಚೇರಿಗೆ ತೆರಳಿದ್ದಾಗ, ಉಪ ನಿರ್ದೇಶಕಿ ಕೃಷ್ಣವೇಣಿ ಅವರು ಸಿಬ್ಬಂದಿ ಪ್ರದೀಪ್ ಅವರನ್ನು ಕರೆಸಿ ಈ ಫೈಲ್ಗೆ 50 ಸಾವಿರ ತೆಗೆದುಕೊಳ್ಳಿ ಎಂದು ನೇರವಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆಬಳಿಕ ಲೋಕಾಯುಕ್ತಕ್ಕೆ ದೂರು ಹೋಗಿದ್ದು ಮೇ 28ರಂದು ಕೃಷ್ಣವೇಣಿ 50 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗಲೇ ಬಂಧಿಸಲಾಗಿತ್ತು. ಆನಂತರ, ಕೃಷ್ಣವೇಣಿ ಮತ್ತು ಪ್ರದೀಪ್ ಇಬ್ಬರೂ ಜೈಲು ಸೇರಿದ್ದು, 16 ದಿನಗಳ ಕಾಲ ಜೈಲೂಟ ಉಂಡಿದ್ದರು.

ಈ ನಡುವೆ, ಕೃಷ್ಣವೇಣಿಯನ್ನು ಗಣಿ ಇಲಾಖೆಯಿಂದ ಅಮಾನತು ಮಾಡುವಂತೆ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು ವಿಭಾಗಕ್ಕೆ ಪತ್ರ ಬರೆದಿದ್ದರು. ಅಲ್ಲದೆ, ಲೋಕಾಯುಕ್ತ ವರದಿ ಆಧರಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರೂ ಗಣಿ ಇಲಾಖೆ ಆಯುಕ್ತರಿಗೆ ಕ್ರಮ ಕೈಗೊಳ್ಳುವಂತೆ ವರದಿ ಸಲ್ಲಿಸಿದ್ದರು. ಆದರೆ ರಾಜ್ಯ ಸರಕಾರ ಈ ಬಗ್ಗೆ ಮೌನ ವಹಿಸಿರುವುದು ಇಲಾಖೆಯೊಳಗೆ ಲಂಚಗುಳಿತನ ಎಷ್ಟರ ಮಟ್ಟಿಗೆ ತಳವೂರಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಇದೇ ವೇಳೆ, ಲೋಕಾಯುಕ್ತ ತನ್ನ ಮೇಲೆ ದಾಖಲಿಸಿದ ಪ್ರಕರಣ ವಿರುದ್ಧ ಕೃಷ್ಣವೇಣಿ ಹೈಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದು, ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ. ಆದರೆ ರಾಜ್ಯ ಸರಕಾರ ಅಮಾನತು ಆದೇಶ ಮಾಡಿರದ ಕಾರಣ ಮತ್ತೆ ಅದೇ ಹುದ್ದೆಯಲ್ಲಿ ಮುಂದುವರಿದಿದ್ದು, ಎರಡು ದಿನಗಳಿಂದ ನೂತನ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಗಣಿ ಇಲಾಖೆಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

12 ಕೋಟಿ ಆಸ್ತಿ ಸಿಕ್ಕದ್ದು, ಸಿಗದ್ದು ಎಷ್ಟೋ..?
ಕೃಷ್ಣವೇಣಿ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿರುವುದು ಮೊದಲೇನಲ್ಲ. ಒಂದು ವರ್ಷದ ಹಿಂದೆ ಮಂಗಳೂರಿಗೆ ಬರೋದಕ್ಕು ಮುನ್ನ ಚಿಕ್ಕಬಳ್ಳಾಪುರದಲ್ಲಿ ಗಣಿ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದರು. ಭ್ರಷ್ಟಾಚಾರದಿಂದಾಗಿ ಆದಾಯಕ್ಕಿಂತ ಅಧಿಕ ಆಸ್ತಿ ಮಾಡಿಕೊಂಡಿದ್ದಾರೆ ಎಂಬ ದೂರಿನಂತೆ ಲೋಕಾಯುಕ್ತ ದಾಳಿ ನಡೆಸಿ, ಬೆಂಗಳೂರು, ಮೈಸೂರಿನಲ್ಲಿ ಆಸ್ತಿ ಮಾಡಿರುವುದನ್ನು ಪತ್ತೆ ಮಾಡಿದ್ದರು. ಬೆಂಗಳೂರಿನ ಯಲಹಂಕದಲ್ಲಿ ಒಂದು ಫ್ಲಾಟ್, ನಿರ್ಮಾಣ ಹಂತದಲ್ಲಿರುವ ವಾಣಿಜ್ಯ ಸಂಕೀರ್ಣ, 26 ಎಕರೆ ಕಾಫಿ ಪ್ಲಾಂಟೇಷನ್ ಸೇರಿದಂತೆ ಒಟ್ಟು 11.93 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿತ್ತು. ಇದು ಸಿಕ್ಕಿರುವ ಆಸ್ತಿ, ಯಾರ್ಯಾರದ್ದೋ ಹೆಸರಲ್ಲಿ ಕೂಡಿಟ್ಟ ಅನಧಿಕೃತ ಆಸ್ತಿ ಎಷ್ಟಿದೆಯೋ ಗೊತ್ತಾಗಿಲ್ಲ. ಕಳೆದ ಬಾರಿ ಅತ್ಯಧಿಕ ಆಸ್ತಿ ಗಳಿಕೆ ಪತ್ತೆಯಾದರೂ, ಆಕೆಯನ್ನು ಸಸ್ಪೆಂಡ್ ಮಾಡಿರಲಿಲ್ಲ. ಕರ್ತವ್ಯದಲ್ಲಿ ಮುಂದುವರಿದಿದ್ದ ಕೃಷ್ಣವೇಣಿ ಈ ಸಲ ರೆಡ್ ಹ್ಯಾಂಡ್ ಸಿಕ್ಕಿಬಿದ್ದು ಜೈಲು ಸೇರಿದ್ದರು.

ಇಂಥ ಭ್ರಷ್ಟರ ಹಿಂದಿರುವ ವ್ಯಕ್ತಿ ಯಾರು ?
ಭ್ರಷ್ಟಾಚಾರದಲ್ಲಿ ಕುಖ್ಯಾತಿ ಗಳಿಸಿರುವ ಕೃಷ್ಣವೇಣಿ, ಇಷ್ಟೆಲ್ಲಾ ಆದರೂ ಮಂಗಳೂರಿನ ಗಣಿ ಇಲಾಖೆಯಲ್ಲೇ ಮುಂದುವರಿಯುವ ಮೂಲಕ ವ್ಯವಸ್ಥೆಯ ಬಗ್ಗೆಯೇ ಅಣಕಿಸಿದ್ದಾರೆ. ಇಂಥವರನ್ನು ಸರ್ಕಾರಿ ಸೇವೆಯಿಂದಲೇ ವಜಾ ಮಾಡಬೇಕಿತ್ತು. ಆದರೆ ರಾಜ್ಯ ಸರಕಾರ ಕನಿಷ್ಠ ಅಮಾನತು ಆದೇಶವನ್ನೂ ಮಾಡದೆ ಉಳಿಸಿಕೊಂಡಿರುವುದು ಗಣಿ ಇಲಾಖೆ ಪ್ರಧಾನ ಕಚೇರಿಯ ಅಧಿಕಾರಿಗಳ ಬಗ್ಗೆಯೇ ಅನುಮಾನ ಮೂಡಿಸುತ್ತಿದೆ. ವಿಶೇಷ ಅಂದ್ರೆ, ಕಳೆದ ಬಾರಿ ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದರೂ ಮಂಗಳೂರಿನಲ್ಲೇ ಅಧಿಕಾರಿಯನ್ನು ಉಳಿಸಿಕೊಂಡಿದ್ದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬಳಿ ಪ್ರಶ್ನಿಸಿದಾಗ, ಈ ಬಗ್ಗೆ ಗಣಿ ಇಲಾಖೆಯ ಸಚಿವರೊಂದಿಗೆ ಮಾತನಾಡುತ್ತೇನೆ ಎಂದಿದ್ದರು. ಈಕೆಯ ಬಗ್ಗೆ ಮಂಗಳೂರು ಲೋಕಾಯುಕ್ತದಿಂದ ಎರಡೆರಡು ಬಾರಿ ಸರಕಾರಕ್ಕೆ ಬರೆದಿದ್ದರೂ, ಜಿಲ್ಲಾಧಿಕಾರಿಯೂ ವರದಿ ಸಲ್ಲಿಸಿದ್ದರೂ ಕ್ರಮ ಜರುಗಿಸದೇ ಇರುವುದು ಕಾಂಗ್ರೆಸ್ ಆಡಳಿತದಲ್ಲಿ ಅದ್ಯಾವ ರಾಜಕಾರಣಿ ಈ ಲಂಚಕೋರ ಅಧಿಕಾರಿಯ ಬೆನ್ನಿಗೆ ನಿಂತಿದ್ದಾನೆ ಎಂಬ ಪ್ರಶ್ನೆ ಏಳುವಂತಾಗಿದೆ.
Mangalore Despite 18 Days in Jail, Mining Officer Krishnaveni Back on Duty, No Suspension, No Action. In a case that highlights the deep-rooted administrative negligence and systemic apathy toward corruption, a senior mining department officer, Krishnaveni, has returned to duty in Mangaluru despite being arrested in a Lokayukta trap and spending 18 days in judicial custody.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm