ಬ್ರೇಕಿಂಗ್ ನ್ಯೂಸ್
19-02-24 11:06 am Mangalore Correspondent ಕರಾವಳಿ
ಮಂಗಳೂರು, ಫೆ.19: ಕನ್ನಡ ನಾಡಿನ ಹೆಸರಾಂತ ಲೇಖಕ, ಕಾದಂಬರಿಕಾರ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಜನಪ್ರಿಯ ಕಥೆಗಾರ ಕೆ.ಟಿ.ಗಟ್ಟಿ(85) ನಿಧನರಾಗಿದ್ದಾರೆ.
ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯ ಕೂಡ್ಲುವಿನವರಾದ ಕೂಡ್ಲು ತಿಮ್ಮಪ್ಪ ಗಟ್ಟಿ (ಕೆಟಿ ಗಟ್ಟಿ) ಪ್ರಾಧ್ಯಾಪಕರಾಗಿ ದುಡಿದು ನಿವೃತ್ತರಾಗಿದ್ದರು. ಸಣ್ಣ ವಯಸ್ಸಿನಲ್ಲಿಯೇ ಪತ್ರಿಕೆಗಳಿಗೆ ಸರಣಿ ಕಾದಂಬರಿಗಳನ್ನು, ರೇಡಿಯೋ ನಾಟಕಗಳನ್ನು ಬರೆಯುವ ಮೂಲಕ ಹೆಸರುವಾಸಿಯಾಗಿದ್ದರು.
ಮೊದಲಿಗೆ ಉಡುಪಿಯ ಟಿ.ಎಂ.ಪೈ. ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು. ಬಳಿಕ ಭಾರತ ಸರಕಾರದಿಂದ ಪ್ರಾಧ್ಯಾಪಕರಾಗಿ ಇಥಿಯೋಪಿಯಕ್ಕೆ ಪ್ರಯಾಣಿಸಿದ್ದರು. ಕಲಿಕೆಯಲ್ಲಿ ನಿರಂತರ ಆಸಕ್ತಿ ಹೊಂದಿದ್ದ ಅವರು ಇಂಗ್ಲೆಂಡಿನ ಟ್ರಿನಿಟಿ ಮತ್ತು ಆಕ್ಸಫರ್ಡ್ ಕಾಲೇಜುಗಳಿಂದ ಇಂಗ್ಲಿಷ್ ಕಲಿಕೆಯಲ್ಲಿ ಡಿಪ್ಲೋಮ ಪದವಿ ಪೂರೈಸಿದ್ದರು.
ಇಥಿಯೋಪಿಯದಿಂದ ಹಿಂತಿರುಗಿದ ನಂತರ ಅವರು ಉಜಿರೆಯಲ್ಲಿ ವಾಸವಾಗಿ ಕೃಷಿ ಮತ್ತು ಸಾಹಿತ್ಯ ರಚನೆಯಲ್ಲಿ ತೊಡಗಿದ್ದರು. ಶಬ್ದಗಳು (೧೯೭೬), ಸೌಮ್ಯ (೧೯೭೮), ಮನೆ, ರಾಮಯಜ್ಞ, ನಿರಂತರ, ಅಬ್ರಾಹ್ಮಣ, ಅಮುಕ್ತ, ಅವಿಭಕ್ತರು, ಕರ್ಮಣ್ಯೇ ವಾಧಿಕಾರಸ್ತೇ, ಕೂಪ, ಪೂಜಾರಿ, ಬಿಸಿಲುಗುದುರೆ, ಮೃತ್ಯೋರ್ಮಾ ಅಮೃತಂ ಗಮಯ, ಯುಗಾಂತರ, ಶಿಲಾತಪಸ್ವಿ, ಸ್ವರ್ಣಮೃಗ, ಅರಗಿನ ಮನೆ ಇತ್ಯಾದಿ ಪ್ರಮುಖ ಕಾದಂಬರಿಗಳಾಗಿದ್ದವು.
ಕೆಟಿ ಗಟ್ಟಿ ಬಗ್ಗೆ ಕಣಜ ವಿಕಿಪೀಡಿಯ ಮಾಹಿತಿ ಹೀಗಿದೆ
1939, ಜುಲೈ 22ರಂದು ಜನನ. ಕಾಸರಗೋಡಿನ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ಕ್ರಮಬದ್ಧವಾಗಿ ಕಲಿತದ್ದು ಎಂಟನೆಯ ತರಗತಿಯ ವರೆಗೆ ಮಾತ್ರ. ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾಗಿ ಬಳಿಕ ಕಾಸರಗೋಡು ಏಕೀಕರಣ ಚಳುವಳಿಯಲ್ಲಿ ಭಾಗಿ. ನಂತರ ಪಿ.ಯು. ಹಾಗೂ ಬಿ.ಎ. ಪದವಿಗಳನ್ನು ಕೇರಳ ವಿಶ್ವವಿದ್ಯಾಲಯದಿಂದ ಖಾಸಗಿಯಾಗಿ ಪಡೆದಿದ್ದರು. ಎರಡು ವರ್ಷಗಳ ಶಿಕ್ಷಕರ ತರಬೇತಿ ಪಡೆದದ್ದು ಮಾಯಿಪ್ಪಾಡಿಯ ಸರಕಾರಿ ಬೇಸಿಕ್ ಟ್ರೈನಿಂಗ್ ಶಾಲೆಯಿಂದ ಮತ್ತು ತಲಚೇರಿಯ ಸರಕಾರಿ ಟ್ರೈನಿಂಗ್ ಕಾಲೇಜಿನಿಂದ ಒಂದು ವರ್ಷದ ಬಿ.ಎಡ್. ಪದವಿ. ಶಿಕ್ಷಕರಾಗಿ ಸೇರಿದ್ದು ಕಾಸರಗೋಡಿದ ಸರಕಾರಿ ಪ್ರೌಢಶಾಲೆಯಲ್ಲಿ. ಬಿಡುವಿನ ವೇಳೆಯಲ್ಲಿ ಖಾಸಗಿಯಾಗಿ ಕುಳಿತು ಕೇರಳ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸ್ನಾತಕೋತ್ತರ ಪದವಿ ಪಡೆದರು. ೧೯೬೮ ರಲ್ಲಿ ಮಣಿಪಾಲದ ಎಂ.ಐ.ಟಿ. ಸಂಸ್ಥೆಯಲ್ಲಿ ಆರು ವರ್ಷಗಳ ಕಾಲ ಇಂಗ್ಲಿಷ್ ಉಪನ್ಯಾಸಕರಾಗಿ ಸೇವೆ, ಒಂದು ವರ್ಷ ಉಡುಪಿಯ ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇವೆ. ಭಾರತ ಸರಕಾರದಿಂದ ಪ್ರಾಧ್ಯಾಪಕರಾಗಿ ನಿಯುಕ್ತರಾಗಿ ನಿಯುಕ್ತಗೊಂಡು ಇಥಿಯೋಪಿಯಾದಲ್ಲಿರುವಾಗಲೇ ಲಂಡನ್ನಿನ ಟ್ರಿನಿಟಿ ಕಾಲೇಜಿನಿಂದ ಇಂಗ್ಲಿಷ್ ಕಲಿಕೆಯಲ್ಲಿ ಡಿಪ್ಲೊಮ ಮತ್ತು ಆಕ್ಸ್ಫರ್ಡಿನ ಕಾಲೇಜ್ ಆಫ್ ಪ್ರಿಸೆಪ್ಟರ್ಸ್ನಿಂದ ಪಡೆದ ಡಿಪ್ಲೊಮ.
೧೯೫೭ ರಿಂದಲೇ ಸಾಹಿತ್ಯ ಕೃಷಿ ಪ್ರಾರಂಭಿಸಿದ ಗಟ್ಟಿಯವರಿಗೆ ತಂದೆ ತಾಯಿಗಳೇ ಪ್ರೇರಣೆ. ಯಕ್ಷಗಾನ ಪ್ರಿಯರಾದ ತಂದೆ ಧೂಮಪ್ಪನವರು ಕೂಡ್ಲು ಯಕ್ಷಗಾನ ನಾಟಕ ಮಂಡಳಿ (ಮಂಗಳೂರು)ಯೊಡನೆ ಊರೂರು ಸುತ್ತುತ್ತಿದ್ದು, ಸಿಕ್ಕಿದ ಪುಸ್ತಕಗಳನ್ನು ಮನೆಗೆ ತಂದಿಡುತ್ತಿದ್ದುದು ಗಟ್ಟಿಯವರಿಗೆ ಓದಲು ಪ್ರಚೋದನೆ ನೀಡಿತ್ತು. ತಾಯಿಯವರು ಮನೆಯಲ್ಲಿ ಹಾಡುತ್ತಿದ್ದ ತುಳು-ಮಲಯಾಳಂ ಪಾಡ್ದನಗಳು ಸಾಹಿತ್ಯದಲ್ಲಿ ಆಸಕ್ತಿ ಬೆಳೆಯುವಂತೆ ಮಾಡಿದವು. ಇವರ ಮೊದಲ ಕಾದಂಬರಿ ‘ಶಬ್ದಗಳು’ ಧಾರಾವಾಹಿಯಾಗಿ ಸುಧಾ ವಾರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು (೧೯೭೬). ಇದು ಸುಧಾ ವಾರಪತ್ರಿಕೆಯ ಪ್ರಸಾರದ ಸಂಖ್ಯೆಯನ್ನೂ ಹೆಚ್ಚು ಮಾಡಿದ್ದಲ್ಲದೆ ಜನಪ್ರಿಯ ಕಾದಂಬರಿ ಎನಿಸಿ ನಾಲ್ಕು ಮುದ್ರಣಗಳನ್ನೂ ಕಂಡ ಖ್ಯಾತಿಗೂ ಪಾತ್ರವಾಯಿತು. ನಂತರ ೧೯೭೮ ರಲ್ಲಿ ಬರೆದ ‘ಸಾಫಲ್ಯ’ ಕಾದಂಬರಿಯೂ ಸೇರಿ ೨೦೦೪ ರ ವರೆಗೆ ಸುಮಾರು ೧೪ ಕಾದಂಬರಿಗಳು ಸುಧಾ ವಾರಪತ್ರಿಕೆಯಲ್ಲಿಯೇ ಧಾರಾವಾಹಿಯಾಗಿ ಪ್ರಕಟಗೊಂಡಿವೆ. ಬಹುಶಃ ಒಬ್ಬ ಲೇಖಕರದ್ದೇ ಇಷ್ಟೊಂದು ಕಾದಂಬರಿಗಳು ಧಾರಾವಾಹಿಯಾಗಿ ಒಂದೇ ಪತ್ರಿಕೆಯಲ್ಲಿ ಪ್ರಕಟವಾಗಿರುವುದೂ ದಾಖಲೆಯೇ.
ಇದಲ್ಲದೆ ತುಷಾರ ಮಾಸ ಪತ್ರಿಕೆಯಲ್ಲಿ ‘ಮನೆ’, ಕಾಮಯಜ್ಞ ಕಾದಂಬರಿಗಳು, ಗೆಳತಿ ಪತ್ರಿಕೆಯಲ್ಲಿ ‘ಪೂಜಾರಿ’, ಕಾದಂಬರಿ ಪತ್ರಿಕೆಯಲ್ಲಿ ‘ಅವಿಭಕ್ತರು’, ತರಂಗ ವಾರ ಪತ್ರಿಕೆಯಲ್ಲಿ ‘ನಿರಂತರ’, ಮಲ್ಲಿಗೆ ಮಾಸಪತ್ರಿಕೆಯಲ್ಲಿ ‘ನವಂಬರ್ ೧೦’, ಕರ್ಮವೀರ ವಾರಪತ್ರಿಕೆಯಲ್ಲಿ ‘ಸನ್ನಿವೇಶ’, ಪ್ರಜಾವಾಣಿ ದಿನಪತ್ರಿಕೆಯಲ್ಲಿ ‘ಕಾರ್ಮುಗಿಲು’, ಮಂಗಳ ವಾರಪತ್ರಿಕೆಯಲ್ಲಿ ‘ರಸಾತಳ’ ಮುಂತಾದವುಗಳು ವಿವಿಧ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದ್ದೂ ಸೇರಿ ರಚಿಸಿದ ಕಾದಂಬರಿಗಳು ಸುಮಾರು ೪೬. ವಿದೇಶಕ್ಕೆ ಹೊರಡುವ ಮುನ್ನ ಬರೆದ ಕಾದಂಬರಿ ‘ಶಬ್ದಗಳು’. ಇಥಿಯೋಪಿಯಾದಲ್ಲಿದ್ದಾಗ ಒಮ್ಮೆ ನಡೆದ ಘಟನೆ ಇವರ ಮನಸ್ಸಿನ ಮೇಲೆ ಅಚ್ಚೊತ್ತಿತು. ಇವರು ಪ್ರೀತಿಯಿಂದ ಬೆಳೆಸಿದ ನಿಂಬೆಗಿಡವನ್ನು ಕುರಿಯೊಂದು ಬಂದು ತಿನ್ನತೊಡಗಿದಾಗ ಕೋಪಗೊಂಡು ಓಡಿಸಿದ ಮೇಲೆ ಗಟ್ಟಿಯವರಿಗೆ ಕಾಡಿದ ಪ್ರಶ್ನೆ. ಬೇರೆಯವರ ದೇಶ, ಅವರ ಮಣ್ಣು, ಅವರ ಗಿಡ, ಅವರ ಕುರಿ-ನಾನು ಓಡಿಸಿದ್ದು ಸರಿಯಾ? ಅನುಭವಿಸಿದ ಈ ಗೊಂದಲದಿಂದ ಹುಟ್ಟಿ ಬಂದದ್ದೇ ‘ಅರಗಿನ ಅರಮನೆ’ ಕಾದಂಬರಿ. ಸ್ವದೇಶಕ್ಕೆ ಮರಳಿಬಂದ ಗಟ್ಟಿಯವರು (೧೯೮೨) ಪೂರ್ಣಾವಧಿ ಲೇಖಕರಾಗಿ ಬದುಕಲು ನಿರ್ಧರಿಸಿ, ದ.ಕ. ಜಿಲ್ಲೆಯ ಉಜಿರೆಯ ಬಳಿ ಜಮೀನು ಖರೀದಿಸಿ ‘ವನಸಿರಿ’ ಯಲ್ಲಿ ಕೃಷಿ, ಸಾಹಿತ್ಯ ಕೃಷಿ ಎರಡರಲ್ಲೂ ತೊಡಗಿಸಿಕೊಂಡಿದ್ದರು.
ಆಗಾಗ್ಗೆ ಪತ್ರಿಕೆಗೆ ಬರೆದ ಕಥೆಗಳು ‘ಮನುಷ್ಯನ ವಾಸನೆ ಮತ್ತು ಇತರ ಕಥೆಗಳು’, ‘ನೀಲಿ ಗುಲಾಬಿ ಮತ್ತು ಇತರ ಕಥೆಗಳು’, ‘ಭೂಗತ ಮತ್ತು ಇತರ ಕಥೆಗಳು’,‘ವಿಶ್ವ ಸುಂದರಿ ಮತ್ತು ಇತರ ಕಥೆಗಳು’ ಹಾಗೂ ‘ಪ್ರೀತಿ ಎಂಬ ಮಾಯೆ ಮತ್ತು ಇತರ ಕಥೆಗಳು’ ಎಂಬ ಸಂಕಲನಗಳಲ್ಲಿ ಸೇರಿವೆ. ಶಿಕ್ಷಣ, ಸಾಹಿತ್ಯ, ಸಾಮಾಜಿಕ ಈ ವಿಷಯಗಳ ಬಗ್ಗೆ ಚಿಂತನೆಗೆ ಹಚ್ಚುವ ಹಲವಾರು ಮೌಲಿಕ ಲೇಖನಗಳು ಆಗಾಗ್ಗೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ‘ಮೂರನೆಯ ಧ್ವನಿ’ (ಸಾಹಿತ್ಯ ಚಿಂತನ), ‘ನಿನ್ನೆ ನಾಳೆಗಳ ನಡುವೆ’ (ಸಾಮಾಜಿಕ ಚಿಂತನ), ‘ನಮ್ಮ ಬದುಕಿನ ಪುಟಗಳು’, ನಮ್ಮೊಳಗಿನ ಆಕಾಶ, ನಾಲ್ಕುದಿಕ್ಕು ಮತ್ತು ಅಂತರಾಳದ ತಂತಿ (ವೈಚಾರಿಕ ಲೇಖನಗಳ ಕೃತಿಗಳು) ಪ್ರಕಟಗೊಂಡಿವೆ. ‘ಝೇಂಕಾರದ ಹಕ್ಕಿ’ ಇವರ ಕವನಗಳ ಸಂಗ್ರಹವು ೧೯೯೪ ರಲ್ಲಿ ಪ್ರಕಟಗೊಂಡಿದ್ದು ಇಂಗ್ಲಿಷ್ ಗೀತೆಗಳ ಅನುವಾದ ‘ನನ್ನ ಪ್ರೇಮದ ಹುಡುಗಿ’ (೨೦೦೧) ರಲ್ಲಿ ಪ್ರಕಟವಾಗಿದೆ. ತಂದೆತಾಯಿಯಿಂದ ಬಂದ ಬಳುವಳಿಯಾಗಿ ರಂಗಭೂಮಿಯ ಬಗ್ಗೆ ವಿಶೇಷ ಒಲವಿದ್ದು ರಚಿಸಿದ ನಾಟಕ ಕೃತಿಗಳೆಂದರೆ ನಾಟ್ಕ, ಕೆಂಪುಕಾಗೆ, ಸತ್ಯಕ್ಕೆ ಜಯ, ಕುರುಡರು, ನಗರ ಪರ್ವ, ಬೊಂಬೆಯಾಟ, ಜುಜುಬಿದೇವರ ಜುಗಾರಿ ಮುಂತಾದ ೧೮ ನಾಟಕಗಳು ಪ್ರಕಟವಾಗಿದ್ದು ಇವುಗಳಲ್ಲಿ ಕೆಲವು ಬಾನುಲಿಯಲ್ಲೂ ಪ್ರಸಾರಗೊಂಡು ಜನಪ್ರಿಯ ನಾಟಕಗಳೆನಿಸಿವೆ. ಪ್ರೌಢರಿಗಷ್ಟೇ ಅಲ್ಲದೆ ಮಕ್ಕಳಿಗಾಗಿಯೂ ೩೦ ನಾಟಕಗಳನ್ನೂ ರಚಿಸಿದ್ದು ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಪಂಜಾಬಿಗೂ ಅನುವಾದಗೊಂಡಿವೆ.
Mangalore kasaragod native poet KT Gatti passes away at 85.
09-06-25 04:41 pm
HK News Desk
BK Hariprasad, Suhas Shetty, NIA: ರೌಡಿಗಳಿಗೆಲ್...
09-06-25 03:02 pm
Union Minister Prahlad Joshi, Mangalore SP Ar...
09-06-25 02:00 pm
Suhas Shetty Murder, NIA, Home Minister: ಸುಹಾ...
09-06-25 12:35 pm
ಕಾಲ್ತುಳಿತ ಸಂತ್ರಸ್ತರಿಗೆ ಒಂದು ತಿಂಗಳ ವೇತನ ಬಿಟ್ಟು...
08-06-25 06:03 pm
09-06-25 05:16 pm
HK News Desk
# Arrest kohli ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್...
07-06-25 09:54 pm
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
09-06-25 11:03 pm
Mangalore Correspondent
Mangalore BY Vijayendra, BJP: ಕಾಂಗ್ರೆಸ್ ಆಡಳಿತ...
09-06-25 09:56 pm
Suhas Shetty Murder, NIA, Mangalore: ಸುಹಾಸ್ ಶ...
08-06-25 10:51 pm
Suhas Sheety Murder, NIA, Mangalore: ಸುಹಾಸ್ ಶ...
08-06-25 05:24 pm
ಮುಸ್ಲಿಂ ವಾಟ್ಸಪ್ ಗ್ರೂಪಿನಲ್ಲಿ ಸ್ಪೀಕರ್ ಖಾದರ್, ಸಿ...
07-06-25 11:02 pm
09-06-25 09:20 pm
HK News Desk
ತನ್ನನ್ನು ಕಾರ್ಡಿಯೋಲಜಿಸ್ಟ್ ಅಂತ ಹೇಳಿಕೊಂಡು 50ಕ್ಕೂ...
08-06-25 10:29 pm
ಸ್ಟಾಕ್ ಮಾರ್ಕೆಟ್ ಹುಚ್ಚಾಟ ; ಬ್ಯಾಂಕಿನ ಹಿರಿಯ ಗ್ರಾ...
08-06-25 03:59 pm
ಆನ್ಲೈನ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ; ಇನ್ ಸ್ಟಾ...
08-06-25 02:58 pm
Mangalore Crime, Yeyyadi Stabbing, Bar, Polic...
07-06-25 10:39 pm