Narayana Guru, Satyajit Surathkal: ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಘೋಷಿಸಿ ; ಡಿಸೆಂಬರ್ ಒಳಗೆ ಘೋಷಣೆ ಮಾಡದಿದ್ದರೆ, ಜನವರಿಯಲ್ಲಿ ಜನಾಂದೋಲನ ; ಸತ್ಯಜಿತ್‌ ಎಚ್ಚರಿಕೆ 

14-12-23 10:13 pm       Mangalore Correspondent   ಕರಾವಳಿ

ಚುನಾವಣೆಗೆ ಮೊದಲೇ ಬಿಲ್ಲವ ಸಮುದಾಯದಿಂದ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಬೇಡಿಕೆ ಇಡಲಾಗಿತ್ತು. ಬಿಜೆಪಿ ಸರಕಾರ ಕೊನೆಯ ಕ್ಷಣದಲ್ಲಿ ನಿಗಮ ರಚನೆ ಮಾಡಿ ಘೋಷಣೆ ಮಾಡಿತ್ತು.‌

ಮಂಗಳೂರು, ಡಿ.14: ಚುನಾವಣೆಗೆ ಮೊದಲೇ ಬಿಲ್ಲವ ಸಮುದಾಯದಿಂದ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಬೇಡಿಕೆ ಇಡಲಾಗಿತ್ತು. ಬಿಜೆಪಿ ಸರಕಾರ ಕೊನೆಯ ಕ್ಷಣದಲ್ಲಿ ನಿಗಮ ರಚನೆ ಮಾಡಿ ಘೋಷಣೆ ಮಾಡಿತ್ತು.‌ ಆದರೆ, ಯಾವುದೇ ಅನುದಾನವನ್ನೂ ನೀಡದೆ, ಪ್ರಕ್ರಿಯೆಯನ್ನೂ ಮಾಡಿರಲಿಲ್ಲ. ಈಗ ಮತ್ತೆ ಕಾಂಗ್ರೆಸ್ ಸರ್ಕಾರಕ್ಕೆ ಬಿಲ್ಲವ ಮುಖಂಡರು ಬೇಡಿಕೆ ಇರಿಸಿದ್ದು 500 ಕೋಟಿ ರು. ಅನುದಾನವನ್ನು ಇದೇ ಡಿಸೆಂಬರ್ ಒಳಗೆ ನೀಡಬೇಕೆಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್‌ ಸುರತ್ಕಲ್ ಆಗ್ರಹಿಸಿದ್ದಾರೆ. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸತ್ಯಜಿತ್ ಸುರತ್ಕಲ್, ಈ ಹಿಂದೆ ನಿಗಮ ರಚನೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದೆವು. ಅಧಿವೇಶನದ ಸಮಯದಲ್ಲಿ ನಿಗಮ ರಚನೆ ಮಾಡಲು ತೊಡಕಾಗುತ್ತದೆ. ಅದರ ಬಳಿಕ ಮಾಡುವುದಾಗಿ ಭರವಸೆ ನೀಡಿದ್ದರು. ಈಗ ಚಳಿಗಾಲದ ಅಧಿವೇಶನ ಮುಗಿದು 15 ದಿನಗಳ ಒಳಗೆ ನಾರಾಯಣ ಗುರು ನಿಗಮ ರಚನೆ ಮಾಡಬೇಕು. ಇಲ್ಲದಿದ್ದರೆ ಜ.1 ರ ನಂತರ ಸಮಾಜದ ಎಲ್ಲ ಸ್ವಾಮೀಜಿಗಳು, ಸಂಘ ಸಂಸ್ಥೆಗಳು, ಸಂಘಟನೆಗಳು, ಕ್ಷೇತ್ರದ ಪ್ರಮುಖರನ್ನು ಒಗ್ಗೂಡಿಸಿ ಬೀದಿಗಿಳಿದು ಜನಾಂದೋಲನ ರೂಪಿಸಲಾಗುವುದು ಎಂದು ಎಚ್ಚರಿಸಿದ್ದಾರೆ. 

ನಾರಾಯಣ ಗುರು ಜಯಂತಿ ವೇಳೆ ಅನುದಾನ ಘೋಷಿಸಬಹುದೆಂಬ ನಿರೀಕ್ಷೆಯಿತ್ತು. ಆದರೆ ಅದೂ ಹುಸಿಯಾಗಿದೆ. ಇತ್ತೀಚೆಗೆ ನಡೆದ ಸಮುದಾಯದ ಸಭೆಯಲ್ಲಿ ಸಮಾಜದ ಎಲ್ಲಾ ನಾಯಕರು ಈ ಬಗ್ಗೆ ಬೇಡಿಕೆ ಇಟ್ಟಿದ್ದರು. ಆದರೆ ಅಧಿವೇಶನದಲ್ಲಿ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಲು ಅವಕಾಶವಿಲ್ಲವೆಂದು ಸರಕಾರ ನುಣುಚಿಕೊಂಡಿದೆ‌. ಅಧಿವೇಶನದ ಬಳಿಕ ಸಮಾಜದ ಪ್ರಮುಖರ ಸಭೆ ಕರೆದು ಕ್ರಮ ಕೈಗೊಳ್ಳುವುದಾಗಿ ಸರಕಾರ ಹೇಳಿದೆ. 

ಆದ್ದರಿಂದ ಅಧಿವೇಶನ ಮುಗಿದ ಕೂಡಲೇ ಡಿಸೆಂಬರ್ 31ರೊಳಗೆ ನಿಗಮದ ಹೆಸರಲ್ಲಿ 500 ಕೋಟಿ ರೂ. ಅನುದಾನ ನೀಡಬೇಕು. ಇಲ್ಲದಿದ್ದಲ್ಲಿ ಜ.1ರ ಬಳಿಕ ಹೋರಾಟ ಅನಿವಾರ್ಯ. ಅಲ್ಲದೆ ಕಾಂತರಾಜು ಆಯೋಗ ವರದಿ ಜಾರಿಗೊಳಿಸಬೇಕು. ಪ್ರವರ್ಗ – ಎ ಯಲ್ಲಿ ಈಗಿರುವ 102 ಜಾತಿ ಸಮುದಾಯಗಳಿಗಿರುವ 15 ಪ್ರತಿಶತ ಮೀಸಲಾತಿಯಲ್ಲಿ ಯಾವುದೇ ವ್ಯತ್ಯಾಸ ಆಗಬಾರದು ಎಂದು ಸತ್ಯಜಿತ್‌ ಸುರತ್ಕಲ್ ಎಚ್ಚರಿಕೆ ನೀಡಿದರು. 

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ರಾಕೇಶ್ ಪೂಜಾರಿ, ಶಶಿಧರ್ ಅಮೀನ್, ನವೀನ್ ಪೂಜಾರಿ ಮತ್ತಿತರರಿದ್ದರು.

Mangalore Announce 500 crores for Narayana Guru development cell warns Satyajit Surathkal.