ಸಂಪಾಜೆಯಲ್ಲಿ ಭೀಕರ ಅಪಘಾತ ; ಮಕ್ಕಳು ಸಹಿತ ಮಂಡ್ಯ ಮೂಲದ ಆರು ಮಂದಿ ಸಾವು 

14-04-23 04:29 pm       Mangalore Correspondent   ಕರಾವಳಿ

ಮಡಿಕೇರಿ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಆರು ಮಂದಿ ಸಾವನಪ್ಪಿದ ಘಟನೆ ಸಂಪಾಜೆ ಬಳಿ ಹೆದ್ದಾರಿಯಲ್ಲಿ ನಡೆದಿದೆ.

ಸುಳ್ಯ, ಎ.14 : ಮಡಿಕೇರಿ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಆರು ಮಂದಿ ಸಾವನಪ್ಪಿದ ಘಟನೆ ಸಂಪಾಜೆ ಬಳಿ ಹೆದ್ದಾರಿಯಲ್ಲಿ ನಡೆದಿದೆ.

ಸುಳ್ಯದಿಂದ ವಿರಾಜಪೇಟೆಗೆ ತೆರಳುತ್ತಿದ್ದ ಬಸ್ ಹಾಗೂ ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಮಡಿಕೇರಿ ಕಡೆಯಿಂದ ಬಂದ ಸ್ವಿಫ್ಟ್ ಕಾರು ಸಂಪಾಜೆ ಪೆಟ್ರೋಲ್ ಪಂಪ್ ನಲ್ಲಿ ಪೆಟ್ರೋಲ್ ಹಾಕಿ ರಸ್ತೆಗೆ ಇಳಿಯುತ್ತಿದ್ದಂತೆ ಸುಳ್ಯದಿಂದ ಮಡಿಕೇರಿಗೆ ಹೋಗುತ್ತಿದ್ದ ಬಸ್ ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರ ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಗಾಯಗೊಂಡವರನ್ನು ಸುಳ್ಯದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ.

ಇದಲ್ಲದೆ, ಕಾರಿನಲ್ಲಿದ್ದ ಮೂವರು ಮಕ್ಕಳು, ಇಬ್ಬರು ಮಹಿಳೆಯರು, ಓರ್ವ ಗಂಡಸು ಮೃತಪಟ್ಟಿದ್ದಾರೆ. ಮೃತದೇಹ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಹಾಗೂ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮೃತರ ಗುರುತು ಪತ್ತೆಯಾಗಿಲ್ಲ. ಕಾರಿನಲ್ಲಿ ಒಟ್ಟು 8 ಮಂದಿ ಇದ್ದರು ಎಂದು ಹೇಳಲಾಗಿದೆ. ಒಬ್ಬ ಗಂಡಸು ಮತ್ತು ಮಗು ಗಂಭೀರ ಸ್ಥಿತಿಯಲ್ಲಿ ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿದ್ದವರು ಮಂಡ್ಯ ಮೂಲದ ಮಳವಳ್ಳಿಯವರು ಎಂದು ತಿಳಿದುಬಂದಿದೆ.

Sampaje accident, Six people killed and two seriously injured after a KSRTC bus collided with a car in Sampaje on Friday, April 14.