ಮರಳು ಮಾಫಿಯಾಕ್ಕೆ ಬಿಸಿ ಮುಟ್ಟಿಸಿದ ಕಮಿಷನರ್ ; ನಾಲ್ಕು ಕಡೆ ಪೊಲೀಸ್ ದಾಳಿ, ಲಕ್ಷಾಂತರ ಮೌಲ್ಯದ ಮರಳು, ಆರು ಟಿಪ್ಪರ್ ವಶಕ್ಕೆ

01-03-23 03:09 pm       Mangalore Correspondent   ಕರಾವಳಿ

ಮಂಗಳೂರು ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಕುಲದೀಪ್ ಆರ್ ಜೈನ್ ಅಕ್ರಮ ಚಟುವಟಿಕೆ ವಿರುದ್ಧ ಕಾರ್ಯಾಚರಣೆ ನಡೆಸುತ್ತೇವೆ ಎಂದು ಹೇಳಿದ್ದರು.

ಮಂಗಳೂರು, ಮಾ.1: ಮಂಗಳೂರು ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಕುಲದೀಪ್ ಆರ್ ಜೈನ್ ಅಕ್ರಮ ಚಟುವಟಿಕೆ ವಿರುದ್ಧ ಕಾರ್ಯಾಚರಣೆ ನಡೆಸುತ್ತೇವೆ ಎಂದು ಹೇಳಿದ್ದರು. ಅದರಂತೆ, ಅತಿ ಹೆಚ್ಚು ಮರಳು ಮಾಫಿಯಾ ನಡೆಯುತ್ತಿದ್ದ ಉಳ್ಳಾಲ, ಕಂಕನಾಡಿ, ಪಣಂಬೂರು ಠಾಣೆ ವ್ಯಾಪ್ತಿಯ ನಾಲ್ಕು ಕಡೆಗಳಲ್ಲಿ ಪೊಲೀಸರು ದಾಳಿ ನಡೆಸಿದ್ದು, ಲಕ್ಷಾಂತರ ಮೌಲ್ಯದ ಮರಳನ್ನು ಜಪ್ತಿಗೈದಿದ್ದಾರೆ.

ಫೆ.25ರಂದು ರಾತ್ರಿ ಪಣಂಬೂರು ಠಾಣೆ ವ್ಯಾಪ್ತಿಯ ಎಂಆರ್ ಪಿಎಲ್ ಮೇಲ್ಸೇತುವೆ ಬಳಿ ಹತ್ತು ಟನ್ ಅಕ್ರಮ ಮರಳು ಸಾಗಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದು ಎರಡು ಲಾರಿಯನ್ನು ವಶಕ್ಕೆ ಪಡೆದು ಮರಳು ಸಹಿತ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ವಶಕ್ಕೆ ಬಿಟ್ಟುಕೊಟ್ಟಿದ್ದಾರೆ. ಫೆ.26ರಂದು ತಣ್ಣೀರುಬಾವಿ ರಸ್ತೆಯಲ್ಲಿ 12-15 ಟನ್ ಮರಳನ್ನು ಎರಡು ಲಾರಿಯಲ್ಲಿ ಒಯ್ಯುತ್ತಿದ್ದಾಗ ಪೊಲೀಸರು ತಡೆಹಾಕಿದ್ದು, ವಶಕ್ಕೆ ಪಡೆದು ಗಣಿ ಇಲಾಖೆಗೆ ಒಪ್ಪಿಸಲಾಗಿದೆ.

ಫೆ.28ರಂದು ಉಳ್ಳಾಲ ಸೇತುವೆ ಬಳಿಯ ಆಡಂಕುದ್ರು ಎಂಬಲ್ಲಿ ಕಂಕನಾಡಿ ನಗರ ಠಾಣೆ ಪೊಲೀಸರು ದಾಳಿ ನಡೆಸಿ, ಎರಡು ಟಿಪ್ಪರ್ ಲಾರಿಯಲ್ಲಿ ಮರಳು ಒಯ್ಯುತ್ತಿದ್ದಾಗ ವಶಕ್ಕೆ ಪಡೆದಿದ್ದಾರೆ. ಮಾ.1ರಂದು ಬೆಳಗ್ಗೆ 7 ಗಂಟೆಗೆ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಮುನ್ನೂರು ಗ್ರಾಮದ ಸೋಮನಾಥ ಉಳಿಯ ದೇವಸ್ಥಾನದ ಬಳಿ ಅಕ್ರಮವಾಗಿ ಮರಳು ದಾಸ್ತಾನು ಮಾಡಿರುವುದನ್ನು ತಿಳಿದು ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ, ಸ್ಥಳದಲ್ಲಿ ಹತ್ತು ಲೋಡ್ ಮರಳು ಮತ್ತು ಒಂದು ಹಿಟಾಚಿ ಯಂತ್ರ ವಶಕ್ಕೆ ಪಡೆದಿದ್ದು ಎಲ್ಲವನ್ನೂ ಗಣಿ ಇಲಾಖೆಯ ವಶಕ್ಕೆ ಒಪ್ಪಿಸಲಾಗಿದೆ.

Mangalore police commissioner Kuldeep kumar who has taken charge is now in full action against illegal activities in the city, raids illegal sand mining centres, 6 trucks have been seized, 12-15 tons of sand also has been seized.