ಕಾರ್ಕಳ ಶಾಸಕರು ಮುಖ್ಯಮಂತ್ರಿ ಆಗುತ್ತಿದ್ದಾರೆ, ಅವರನ್ನು ಸೋಲಿಸಲು ಸಿಎಂ ರೇಸಿನಲ್ಲಿರುವ ಶಾಸಕ, ಸಚಿವರೇ ಸಹಕರಿಸುತ್ತಿದ್ದಾರೆ ; ಮುತಾಲಿಕ್

13-02-23 04:47 pm       Mangalore Correspondent   ಕರಾವಳಿ

​​​​​​​ ಕಾರ್ಕಳ ಶಾಸಕರನ್ನು ಮುಂದಿನ ಮುಖ್ಯಮಂತ್ರಿಯೆಂದು ಅವರ ಬೆಂಬಲಿಗರು ಬಿಂಬಿಸುತ್ತಿದ್ದಾರೆ. ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಲು ಸರತಿ ಸಾಲಿನಲ್ಲಿ ನಿಂತವರಿದ್ದಾರೆ.

ಮಂಗಳೂರು, ಫೆ.13: ಕಾರ್ಕಳ ಶಾಸಕರನ್ನು ಮುಂದಿನ ಮುಖ್ಯಮಂತ್ರಿಯೆಂದು ಅವರ ಬೆಂಬಲಿಗರು ಬಿಂಬಿಸುತ್ತಿದ್ದಾರೆ. ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಲು ಸರತಿ ಸಾಲಿನಲ್ಲಿ ನಿಂತವರಿದ್ದಾರೆ. ಅವರಲ್ಲೇ ಕೆಲವು ಶಾಸಕರು, ಸಚಿವರು ಕಾರ್ಕಳದ ಶಾಸಕರನ್ನು ಸೋಲಿಸಬೇಕೆಂದು ಪಣ ತೊಟ್ಟಿದ್ದಾರೆ. ಅದಕ್ಕಾಗಿ ನನಗೆ ತನು ಮನ ಧನದ ಸಹಕಾರ ನೀಡುವುದಾಗಿ ಹೇಳಿದ್ದಾಗಿ ಕಾರ್ಕಳದಲ್ಲಿ ಪಕ್ಷೇತರ ಸ್ಪರ್ಧೆಗೆ ಇಳಿದಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಮುತಾಲಿಕ್, ಕಾರ್ಕಳದ ಶಾಸಕರು ಮೊದಲ ಬಾರಿ 2004ರಲ್ಲಿ ಶಾಸಕರಾದ ವೇಳೆ ಎಷ್ಟು ಆಸ್ತಿ ಹೊಂದಿದ್ದರು. ಮೂರನೇ ಬಾರಿ ಗೆದ್ದು ಈಗ ಸಚಿವರಾಗಿರುವ ಅವರ ಬಳಿ ಎಷ್ಟು ಆಸ್ತಿ ಇದೆಯೆಂದು ಲೆಕ್ಕ ಹಾಕಿ. ಇವರ ಭ್ರಷ್ಟಾಚಾರಕ್ಕೆ ಬೇರೆ ದಾಖಲೆ ಬೇಕಿಲ್ಲ. ಮೂರು ಬಾರಿ ಶಾಸಕರಾಗಿ ಎಷ್ಟು ಲೂಟಿ ಹೊಡೆದಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಹೇಳುತ್ತದೆ. ಹಿಂದುತ್ವ, ಪ್ರಾಮಾಣಿಕತೆಗೆ ಅಲ್ಲಿ ಗೆಲುವಾಗುತ್ತದೆ. ಇವರನ್ನು ಸೋಲಿಸಬೇಕೆಂದು ಹಲವರು ಮುಂದೆ ಬಂದಿದ್ದಾರೆ. ಇಲ್ಲಿ ವರೆಗೂ ಯಾವುದೇ ರೀತಿಯ ಸಹಾಯ ಪಡೆದಿಲ್ಲ. ಯಾವ ರೂಪದಲ್ಲಿ ಸಹಾಯ ಮಾಡುತ್ತಾರೆಂದು ನೋಡುತ್ತೇನೆ ಎಂದು ಹೇಳಿದ್ದಾರೆ.

ಕಾರ್ಕಳದಲ್ಲಿ ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಈಗಾಗಲೇ ಅಧಿಕೃತವಾಗಿ ಕಚೇರಿ ಉದ್ಘಾಟನೆ ಮಾಡಿದ್ದೇನೆ. ನೂರಕ್ಕೆ ನೂರು ಗೆದ್ದೇ ಗೆಲ್ತೀನಿ. ನನಗೆ ಅಲ್ಲಿ ಹಿಂದು ಕಾರ್ಯಕರ್ತರೇ ಶಕ್ತಿ ಎಂದು ಹೇಳಿದ ಮುತಾಲಿಕ್, ಹಿಂದುತ್ವ, ಹಿಂದು ನಾಯಕರಿಗೆ ಅತಿ ಹೆಚ್ಚು ಕಿರುಕಳ ಕೊಟ್ಟಿದ್ದು ಬಿಜೆಪಿಯವರು. ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದವರೇ ಹೆಚ್ಚು ಕೇಸು ದಾಖಲಿಸಿದ್ದಾರೆ. ಗಡೀಪಾರಿನಂತಹ ನಿರ್ಬಂಧ ಹಾಕಿದ್ದೂ ಬಿಜೆಪಿಯವರೇ ಎಂದು ಹೇಳಿದರು. ಕಾರ್ಕಳಕ್ಕೆ ಹೋಗದಂತೆ ನಿರ್ಬಂಧ ಹಾಕಿದರೆ, ಅಲ್ಲಿ ಹೋಗದೆಯೂ ನಾನು ಗೆಲ್ಲಬಲ್ಲೆ. ಅದಕ್ಕಾಗಿ ನಾನು ಕೋರ್ಟಿಗೆ ಹೋಗಲ್ಲ. ಅಲ್ಲಿನ ಕಾರ್ಯಕರ್ತರೇ ನನ್ನನ್ನು ಗೆಲ್ಲಿಸುತ್ತಾರೆಂಬ ವಿಶ್ವಾಸ ಇದೆ. ಈ ಬಗ್ಗೆ ಮಾತುಕತೆ, ಹೊಂದಾಣಿಕೆ ಮಾಡುವ ಜಾಯಮಾನ ಇಲ್ಲ. ಹಿಂದುತ್ವದ ಜಯ ಕಾರ್ಕಳದಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಲಿದೆ ಎಂದರು.

ವ್ಯಾಲೆಂಟೈನ್ಸ್ ಡೇ ಬಗ್ಗೆ ಕೇಳಿದ ಪ್ರಶ್ನೆಗೆ, ವ್ಯಾಲೆಂಟೈನ್ಸ್ ಡೇಯನ್ನು ನಾವು ಮೊದಲಿನಿಂದಲೂ ವಿರೋಧಿಸುತ್ತ ಬಂದಿದ್ದೇವೆ. ನಾಳೆಯೂ ನಾವು ಪೊಲೀಸರ ಸಹಕಾರದಲ್ಲಿಯೇ ಕಾರ್ಯಾಚರಣೆ ಮಾಡುತ್ತೇವೆ. ರಾಜ್ಯಾದ್ಯಂತ ಪಾರ್ಕ್, ಹೊಟೇಲ್ ಗಳಲ್ಲಿ ಅನೈತಿಕ ದಂಧೆ ನಡೆಸುವುದನ್ನು ತಡೆಯುತ್ತೇವೆ ಎಂದರು.

ಧಾರ್ಮಿಕ ದತ್ತಿ ಇಲಾಖೆಯಡಿ ರಾಜ್ಯದಲ್ಲಿ 34500 ದೇವಸ್ಥಾನಗಳು ಇವೆ. ಆ ಪೈಕಿ 325 ದೇವಸ್ಥಾನಗಳು ಎ ಕೆಟಗರಿಯಲ್ಲಿದ್ದು 25 ಲಕ್ಷಕ್ಕೂ ಹೆಚ್ಚು ಆದಾಯ ಪಡೆಯುತ್ತಿವೆ. ಕುಕ್ಕೆಯಲ್ಲಿ ನೂರು ಕೋಟಿ, ಕೊಲ್ಲೂರಿನಲ್ಲಿ 50 ಕೋಟಿ, ಮೈಸೂರು ಚಾಮುಂಡೇಶ್ವರಿಯಲ್ಲಿ 50 ಕೋಟಿಗೂ ಹೆಚ್ಚು ಆದಾಯ ಬರುತ್ತದೆ. ವಾರ್ಷಿಕ ಒಂದೂವರೆ ಸಾವಿರ ಕೋಟಿ ಆದಾಯ ಇದೆ. ಆದರೆ ಈ ಹಣವನ್ನು ಇವರು ಏನು ಮಾಡುತ್ತಾರೆಂದು ಯಾರಿಗೂ ಗೊತ್ತಿಲ್ಲ. ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಗೋಶಾಲೆ ಮಾಡಬೇಕೆಂಬ ನಿಯಮ ಇದ್ದರೂ, ಅದನ್ನು ಮಾಡಿಲ್ಲ. ಈ ಹಣವನ್ನು ದುರುಪಯೋಗ ಮಾಡಿದ್ದೇ ಹೆಚ್ಚು ಎಂದು ಹೇಳಿದರು.

Few BJP MLAs and MPs have extended financial support to me so that I can contest in the coming assembly elections from Karkala constituency,” Muthalik said. Chief of right-wing outfit Sri Ram Sene Pramod Muthalik claimed that the BJP leaders have assured to help him contest from Karkala constituency against Minister Sunil Kumar.