ಉಡುಪಿಯಲ್ಲಿ ಹಾಲಿ ಶಾಸಕರಿಗಿಲ್ಲ ಟಿಕೆಟ್ ; ಹಾಲಾಡಿ, ರಘುಪತಿ, ಸುಕುಮಾರ ಶೆಟ್ಟಿ ಬದಲು ಸಾಧ್ಯತೆ, ಬಿಜೆಪಿಯಿಂದ ಹೊಸ ಮುಖಗಳಿಗೆ ಮಣೆ !  

01-11-22 08:04 pm       Giridhar Shetty, HK   ಕರಾವಳಿ

ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಭ್ಯರ್ಥಿಗಳು ಯಾರೆನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಕರಾವಳಿ ಮಟ್ಟಿಗೆ ಬಿಜೆಪಿಯಲ್ಲಿ ಅಭ್ಯರ್ಥಿಗಳನ್ನು ನಿರ್ಣಯಿಸುವುದು ಆರೆಸ್ಸೆಸ್ ಆಗಿರುವುದರಿಂದ ಹಾಲಿ ಶಾಸಕರಲ್ಲಿಯೂ ತಮ್ಮ ಸ್ಥಾನ ಉಳಿಯುತ್ತಾ ಎನ್ನುವ ನಡುಕ ಇದೆ.

ಉಡುಪಿ, ನ.1: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಭ್ಯರ್ಥಿಗಳು ಯಾರೆನ್ನುವ ಬಗ್ಗೆ ಚರ್ಚೆ ಶುರುವಾಗಿದೆ. ಕರಾವಳಿ ಮಟ್ಟಿಗೆ ಬಿಜೆಪಿಯಲ್ಲಿ ಅಭ್ಯರ್ಥಿಗಳನ್ನು ನಿರ್ಣಯಿಸುವುದು ಆರೆಸ್ಸೆಸ್ ಆಗಿರುವುದರಿಂದ ಹಾಲಿ ಶಾಸಕರಲ್ಲಿಯೂ ತಮ್ಮ ಸ್ಥಾನ ಉಳಿಯುತ್ತಾ ಎನ್ನುವ ನಡುಕ ಇದೆ. ಆರೆಸ್ಸೆಸ್ ಒಳಗಿನ ಮಾಹಿತಿಗಳ ಪ್ರಕಾರ, ಉಡುಪಿ ಜಿಲ್ಲೆಯಲ್ಲಿ ಬಹುತೇಕ ಹಾಲಿ ಶಾಸಕರನ್ನು ಬದಲಾವಣೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ಕುಂದಾಪುರ, ಬೈಂದೂರು, ಉಡುಪಿ, ಕಾಪು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಮಣೆ ಹಾಕಲಾಗುತ್ತದೆ ಎನ್ನುವ ಮಾಹಿತಿಗಳಿವೆ.

MLA Haladi Srinivas Shetty tests positive for Covid-19 | Deccan Herald

ಹಾಲಾಡಿ ಬದಲು ಕಿರಣ್ ಕೊಡ್ಗಿಗೆ ಟಿಕೆಟ್ 

ಕುಂದಾಪುರದ ವಾಜಪೇಯಿ ಎಂದು ಹೆಸರಾಗಿರುವ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕ್ಷೇತ್ರದಲ್ಲಿ ಐದು ಬಾರಿ ಸತತ ಗೆದ್ದಿದ್ದು, ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ. ಸದ್ಯಕ್ಕೆ 71 ವಯಸ್ಸಿನ ಶೆಟ್ಟರು ಆರೋಗ್ಯ ತೊಂದರೆಯಿಂದಾಗಿ ಮುಂದಿನ ಚುನಾವಣೆಯಿಂದ ದೂರ ನಿಲ್ಲಲಿದ್ದಾರೆ ಎಂದು ಹೇಳಲಾಗುತ್ತಿದೆ. ಕುಂದಾಪುರದಲ್ಲಿ ಬಿಜೆಪಿ ಪ್ರಾಬಲ್ಯ ಇದ್ದರೂ, 2013ರಲ್ಲಿ ಪಕ್ಷದ ವಿರುದ್ಧವೇ ರೆಬೆಲ್ ಆಗಿದ್ದ ಶ್ರೀನಿವಾಸ ಶೆಟ್ಟಿ ಪಕ್ಷೇತರ ಸ್ಪರ್ಧಿಸಿ ಬಿಜೆಪಿ ಮತ್ತು ಕಾಂಗ್ರೆಸಿಗೆ ತನ್ನ ಶಕ್ತಿ ತೋರಿಸಿದ್ದರು. ಹಾಗಾಗಿ ಶ್ರೀನಿವಾಸ ಶೆಟ್ಟಿ ಹೇಳುವ ವ್ಯಕ್ತಿಯೇ ಚುನಾವಣೆಗೆ ನಿಲ್ಲಬೇಕು ಅನ್ನುವ ಲೆಕ್ಕಾಚಾರ ಅಲ್ಲಿಂದ ಕೇಳಿಬರುತ್ತಿದೆ. ಮಾಹಿತಿ ಪ್ರಕಾರ, ಮಾಜಿ ಸಹಕಾರಿ ಧುರೀಣ ದಿವಂಗತ ಎಜಿ ಕೊಡ್ಗಿಯವರ ಪುತ್ರ ಕಿರಣ್ ಕೊಡ್ಗಿ ಅವರಿಗೆ ಟಿಕೆಟ್ ದೊರೆಯಲಿದೆ ಎನ್ನಲಾಗುತ್ತಿದೆ. ಕುಂದಾಪುರ ಕ್ಷೇತ್ರ ಸಮಿತಿ ಅಧ್ಯಕ್ಷ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಪಕ್ಷದಲ್ಲಿ ಸಕ್ರಿಯವಾಗಿರುವ ಕಿರಣ್ ಕೊಡ್ಗಿ ಪರವಾಗಿ ಆರೆಸ್ಸೆಸ್ ಕೃಪೆಯೂ ಸಿಗುವ ನಿರೀಕ್ಷೆಯಿದೆ.

Udupi MLA Raghupathi Bhat seeks NIA probe into hijab row

ರಘುಪತಿ ಭಟ್ ಬದಲಾಗುತ್ತಾರೆಯೇ ?

ಉಡುಪಿ ಕ್ಷೇತ್ರದಲ್ಲಿ 2008 ಮತ್ತು 2018ರಲ್ಲಿ ಗೆಲುವು ಕಂಡಿರುವ ರಘುಪತಿ ಭಟ್ ಹಿಜಾಬ್ ಪ್ರಕರಣದಲ್ಲಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದರು. 2018ರಲ್ಲಿ ಬಿಜೆಪಿಯ ರಘುಪತಿ ಭಟ್ (84,946) ತನ್ನ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸಿನ ಪ್ರಮೋದ್ ಮಧ್ವರಾಜ್(72,902) ಅವರನ್ನು 12 ಸಾವಿರ ಮತಗಳಿಂದ ಸೋಲಿಸಿದ್ದರು. 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸುಧಾಕರ ಶೆಟ್ಟಿ(47,344), ಕಾಂಗ್ರೆಸಿನ ಪ್ರಮೋದ್ ಮಧ್ವರಾಜ್ (86868) ವಿರುದ್ಧ 39 ಸಾವಿರ ಮತಗಳಿಂದ ಸೋಲು ಕಂಡಿದ್ದರು. 2013ರಲ್ಲಿ ಯಡಿಯೂರಪ್ಪ ಕೆಜೆಪಿಯಲ್ಲಿದ್ದ ಕಾರಣ ಮತ್ತು 2018ರಲ್ಲಿ ಬಿಜೆಪಿಯ ಹಿಂದುತ್ವದ ರಾಜಕಾರಣದಿಂದಾಗಿ ಎರಡು ಚುನಾವಣೆಗಳಲ್ಲಿ ಬಿಜೆಪಿಯ ಏರಿಳಿತ, ಮತ ಗಳಿಕೆಯಲ್ಲಿ ವ್ಯತ್ಯಾಸ ಎದ್ದು ಕಾಣುತ್ತದೆ. ಉಡುಪಿ ಬಿಜೆಪಿಯ ಮಟ್ಟಿಗೆ ಭದ್ರಕೋಟೆ ಎನಿಸಿದ್ದರೂ, ಕುಂದಾಪುರದಲ್ಲಿ ಬ್ರಾಹ್ಮಣ ಕೋಟಾದಡಿ ಕಿರಣ್ ಕೊಡ್ಗಿ ಟಿಕೆಟ್ ಪಡೆದಲ್ಲಿ ಇತ್ತ ಉಡುಪಿಯಲ್ಲಿ ರಘುಪತಿ ಭಟ್ ಅದೇ ಕೋಟಾದಡಿ ಟಿಕೆಟ್ ಕಳಕೊಳ್ಳುತ್ತಾರೆ. ಈ ಲೆಕ್ಕಾಚಾರ ಹಿಡಿದಲ್ಲಿ ಉಡುಪಿಯಲ್ಲಿ ಯಶಪಾಲ್ ಸುವರ್ಣ ಅಥವಾ ಪ್ರಮೋದ್ ಮಧ್ವರಾಜ್ ಟಿಕೆಟ್ ಪಡೆಯುವ ನಿರೀಕ್ಷೆಯಿದೆ.

Kundapur: Rumours joining Congress are untrue - Byndoor MLA Sukumar Shetty  - Daijiworld.com

ಬೈಂದೂರಿನಲ್ಲಿ ಕಣಕ್ಕಿಳಿಯುತ್ತಾರಾ ಕೋಟ ?  

ಬೈಂದೂರಿನಲ್ಲಿ ಸುಕುಮಾರ ಶೆಟ್ಟಿ 2018ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಶಾಸಕರಾದ ಬಳಿಕ ಜನರ ಜೊತೆ ನಿಂತಿಲ್ಲ, ಕಾರ್ಯಕರ್ತರ ಒಡನಾಟ ಇಲ್ಲವೆಂಬ ಟೀಕೆ ಕೇಳಿಬಂದಿತ್ತು. ಏಕ್ಟಿವ್ ಇರದ ಕಾರಣಕ್ಕೇ ಸುಕುಮಾರ ಶೆಟ್ಟಿ ಅವರನ್ನು ಬದಲಾವಣೆ ಮಾಡಬೇಕೆಂಬ ಮಾತು ಕೇಳಿಬರುತ್ತಿದೆ. ಬಂಟ ಅಥವಾ ಬಿಲ್ಲವರು ಕಾಂಗ್ರೆಸ್ ಅಥವಾ ಬಿಜೆಪಿಯಿಂದ ಈ ಕ್ಷೇತ್ರದಲ್ಲಿ ಹೆಚ್ಚು ಗೆಲ್ಲುತ್ತ ಬಂದಿದ್ದರು. 2013ರಲ್ಲಿ ಕಾಂಗ್ರೆಸಿನ ಕೆ.ಗೋಪಾಲ ಪೂಜಾರಿ(82,277) ಬಿಜೆಪಿಯ ಸುಕುಮಾರ ಶೆಟ್ಟಿ (51128) ಅವರನ್ನು ಭಾರೀ ಅಂತರದಿಂದ ಸೋಲಿಸಿದ್ದರು. 2008ರಲ್ಲಿ ಕೆ.ಲಕ್ಷ್ಮೀನಾರಾಯಣ(62196) ಅವರು ಬಿಜೆಪಿಯಿಂದ ಸ್ಪರ್ಧಿಸಿ, ಕಾಂಗ್ರೆಸಿನ ಗೋಪಾಲ ಪೂಜಾರಿ(54,226) ಅವರನ್ನು ಸೋಲಿಸಿದ್ದರು. ಈ ನೆಲೆಯಲ್ಲಿ ನೋಡಿದರೆ, ಸುಕುಮಾರ ಶೆಟ್ಟಿ ಅವರನ್ನು ಬದಲಿಸಿದರೆ ಜಿಲ್ಲಾ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಅಥವಾ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕಣಕ್ಕಿಳಿಸಲಾಗುತ್ತದೆ ಅನ್ನುವ ಲೆಕ್ಕಾಚಾರ ಇದೆ.

Kaup MLA Lalaji Mendon appointed KSBCC president, order withdrawn within  hours - Daijiworld.com

ಲಾಲಾಜಿ ಸೀಟು ಉಳಿಸಿಕೊಳ್ಳುತ್ತಾರೆಯೇ ?

ಕಾಪು ವಿಧಾನಸಭೆ ಕ್ಷೇತ್ರದಲ್ಲಿ ಲಾಲಾಜಿ ಮೆಂಡನ್ 2004, 2008 ಮತ್ತು 2018ರಲ್ಲಿ ಬಿಜೆಪಿಯಿಂದ ಗೆಲುವು ಕಂಡಿದ್ದಾರೆ. ಮೊಗವೀರ ಸಮುದಾಯಕ್ಕೆಂದು ಬಿಜೆಪಿ ಈ ಸೀಟನ್ನು ಬಿಟ್ಟುಕೊಟ್ಟಿದ್ದು ಲಾಲಾಜಿ ಮೂರು ಅವಧಿಗೆ ಇಲ್ಲಿ ಶಾಸಕರಾಗಿದ್ದಾರೆ. 2013ರಲ್ಲಿ ಮಾತ್ರ ಲಾಲಾಜಿಯವರು (50,927) ಕಾಂಗ್ರೆಸಿನ ವಿನಯ ಕುಮಾರ್ ಸೊರಕೆ(52,782) ವಿರುದ್ಧ ಸೋಲು ಕಂಡಿದ್ದರು. 2018ರಲ್ಲಿ ಲಾಲಾಜಿ ಮೆಂಡನ್ (75893) ಅವರು ವಿನಯ ಕುಮಾರ್ ಸೊರಕೆ(63976) ವಿರುದ್ಧ 12 ಸಾವಿರ ಮತಗಳಿಂದ ಗೆದ್ದಿದ್ದರು. ಕಾಪು ಕ್ಷೇತ್ರದ ಮೇಲೆ ಮೀನುಗಾರ ಮುಖಂಡನಾಗಿ ಗುರುತಿಸಿರುವ ಯಶಪಾಲ್ ಸುವರ್ಣ ಕಣ್ಣಿಟ್ಟಿದ್ದು, ಸೀಟು ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ.

Coalition candidate Pramod Madhwaraj in Udupi | udayavani

ಪ್ರಮೋದ್ ಮಧ್ವರಾಜ್, ಯಶಪಾಲ್ ಸುವರ್ಣ ಮತ್ತು ಲಾಲಾಜಿ ಮೆಂಡನ್ ಈ ಮೂವರೂ ಮೊಗವೀರ ಸಮುದಾಯದವರಾಗಿದ್ದು, ಬಿಜೆಪಿಯ ಪ್ರಬಲ ಮತಬ್ಯಾಂಕನ್ನು ಪ್ರತಿನಿಧಿಸುತ್ತಾರೆ. ಇವರಲ್ಲಿ ಪ್ರಮೋದ್ ಮಧ್ವರಾಜ್ ಮುಂದಿನ ಬಾರಿ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ ಎನ್ನುವ ಮಾತುಗಳಿವೆ. ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಬೆಂಗಳೂರು ಅಥವಾ ಕರಾವಳಿಯ ಯಾವುದಾದ್ರೂ ಕ್ಷೇತ್ರದಲ್ಲಿ ವಿಧಾನಸಭೆಗೆ ಸ್ಪರ್ಧಿಸುವ ಮಾತುಗಳೂ ಕೇಳಿಬರುತ್ತಿವೆ. ಇಲ್ಲಿ ತೆರವಾಗುವ ಸಂಸದ ಸ್ಥಾನಕ್ಕೆ ಪ್ರಮೋದ್ ಕಣಕ್ಕಿಳಿಯುವ ಲೆಕ್ಕಾಚಾರ ಇದೆ.

Bjp to revive politics in Udupi region, Halady Srinivas and Sukumara shetty to be changed and new faces are expected in Udupi. Kundapur MLA is said to be replaced with Kiran. Raghupati Bhat is also in the urge to lose ticket this coming election.