ಕೊಲ್ಲೂರಿನಲ್ಲಿ ತೀರ್ಥ ಸ್ನಾನ ; ನದಿಗೆ ಬಿದ್ದ ಮಗನ ರಕ್ಷಣೆಗೆ ಹೋಗಿ ಕೊಚ್ಚಿ ಹೋದ ಕೇರಳದ ಮಹಿಳೆ

11-09-22 03:08 pm       HK News Desk   ಕರಾವಳಿ

ಓಣಂ ರಜೆ ಹಿನ್ನೆಲೆಯಲ್ಲಿ ಕೇರಳದಿಂದ ಪ್ರಸಿದ್ಧ ಯಾತ್ರಾಸ್ಥಳ ಕೊಲ್ಲೂರಿಗೆ ಆಗಮಿಸಿದ್ದ ಮಹಿಳೆಯೊಬ್ಬರು ನದಿಯಲ್ಲಿ ತೀರ್ಥಸ್ನಾನ ಮಾಡುತ್ತಿದ್ದಾಗ ಮುಳುಗಿದ ಮಗನ ರಕ್ಷಣೆಗೆ ಹೋಗಿ ತಾನೇ ನೀರು ಪಾಲಾದ ಘಟನೆ ನಡೆದಿದೆ.

ಕುಂದಾಪುರ, ಸೆ.11: ಓಣಂ ರಜೆ ಹಿನ್ನೆಲೆಯಲ್ಲಿ ಕೇರಳದಿಂದ ಪ್ರಸಿದ್ಧ ಯಾತ್ರಾಸ್ಥಳ ಕೊಲ್ಲೂರಿಗೆ ಆಗಮಿಸಿದ್ದ ಮಹಿಳೆಯೊಬ್ಬರು ನದಿಯಲ್ಲಿ ತೀರ್ಥಸ್ನಾನ ಮಾಡುತ್ತಿದ್ದಾಗ ಮುಳುಗಿದ ಮಗನ ರಕ್ಷಣೆಗೆ ಹೋಗಿ ತಾನೇ ನೀರು ಪಾಲಾದ ಘಟನೆ ನಡೆದಿದೆ.

ಕೇರಳದ ತಿರುವನಂತಪುರಂ ಜಿಲ್ಲೆಯ ಕಾಚಗಡ ನಿವಾಸಿ ಚಾಂದಿನಿ ಶೇಖರ್‌ (42) ನೀರು ಪಾಲಾದ ಮಹಿಳೆ. ಚಾಂದಿಶೇಖರ್‌ ಪತಿ ಮುರುಗನ್‌ ಮತ್ತು ಮಕ್ಕಳೊಂದಿಗೆ ಓಣಂ ಹಬ್ಬದ ಹಿನ್ನೆಲೆಯಲ್ಲಿ ಮೂಕಾಂಬಿಕೆಯ ದರ್ಶನಕ್ಕಾಗಿ ಕೊಲ್ಲೂರಿಗೆ ಬಂದಿದ್ದರು. ಕುಟುಂಬವು ಕೊಲ್ಲೂರಿನ ಯಮುನಾ ವಿಹಾರ್‌ ವಸತಿ ಗೃಹದಲ್ಲಿ ಉಳಿದುಕೊಂಡಿದ್ದರು.

ಶನಿವಾರ ಸಂಜೆ 5.15ರ ಸುಮಾರಿಗೆ ಕೊಲ್ಲೂರಿನ ಸೌಪರ್ಣಿಕಾ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಮಗ ಆದಿತ್ಯನ್‌ ನದಿಯ ನೀರಿನ ಸೆಳೆತಕ್ಕೆ ಒಳಗಾಗಿದ್ದಾನೆ. ಜೊತೆಗಿದ್ದ ತಾಯಿ ಮಗನ ರಕ್ಷಣೆಗೆ ಮುಂದಾಗಿದ್ದು ನೀರಿಗೆ ಧುಮುಕಿದ್ದಾರೆ. ನಂತರ ತಂದೆ ಮುರುಗನ್‌ ಕೂಡ ನೀರಿಗೆ ಹಾರಿದ್ದು ಇಬ್ಬರ ರಕ್ಷಣೆಗೆ ಮುಂದಾಗಿದ್ದಾರೆ. ಸ್ಥಳೀಯರು ಸೇರಿ ಮುರುಗನ್‌ ಹಾಗೂ ಮಗ ಆದಿತ್ಯನ್‌ ಅವರನ್ನು ರಕ್ಷಣೆ ಮಾಡಲಾಗಿದೆ. ಆದರೆ ನದಿ ನೀರಿನಲ್ಲಿ ಕೊಚ್ಚಿ ಹೋದ ಚಾಂದಿ ಶೇಖರ್‌ ನೀರು ಪಾಲಾಗಿದ್ದಾರೆ. ಸೌಪರ್ಣಿಕಾ ನದಿಯಲ್ಲಿ ಕೊಚ್ಚಿ ಹೋಗಿರುವ ಮಹಿಳೆಗಾಗಿ ಅಗ್ನಿಶಾಮಕ ದಳ ಹಾಗೂ ಕೊಲ್ಲೂರು ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಶೋಧ ಕಾರ್ಯವನ್ನು ನಡೆಸುತ್ತಿದ್ದಾರೆ. ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kerala woma drowns in the river while saving her son who was drowning in Kundapur Kollur. The deceased has been identified as Chandini Shekar (42).