ಡಬಲ್ ಇಂಜಿನ್ ಸರ್ಕಾರದಿಂದ ಡಬಲ್ ದೋಖಾ, ಕಮಿಷನ್ನಲ್ಲಷ್ಟೇ ಇವರಿಗೆ ಆಸಕ್ತಿ, ಬಿಟ್ ಕಾಯಿನ್ ತನಿಖೆ ನಡೆಸಿದ್ರೆ ಸರಕಾರವೇ ಬಿದ್ದು ಹೋಗುತ್ತದೆ! ನಳಿನ್ ಮಾತಿಗೆ ಕಾರ್ಯಕರ್ತರೇ ಕಿಮ್ಮತ್ತು ಕೊಡಲ್ಲ

06-09-22 06:33 pm       Mangalore Correspondent   ಕರಾವಳಿ

ಮೋದಿ ಎಂಟು ವರ್ಷಗಳಲ್ಲಿ ಜನಸಾಮಾನ್ಯರಿಗೆ ಏನೂ ಮಾಡಿಲ್ಲ. ಈಗ ಡಬಲ್ ಇಂಜಿನ್ ಸರಕಾರದಿಂದ ಲಾಭ ಎನ್ನುತ್ತಿದ್ದಾರೆ.

ಮಂಗಳೂರು, ಸೆ.6: ಮೋದಿ ಎಂಟು ವರ್ಷಗಳಲ್ಲಿ ಜನಸಾಮಾನ್ಯರಿಗೆ ಏನೂ ಮಾಡಿಲ್ಲ. ಈಗ ಡಬಲ್ ಇಂಜಿನ್ ಸರಕಾರದಿಂದ ಲಾಭ ಎನ್ನುತ್ತಿದ್ದಾರೆ. ಏನು ಲಾಭ ಮಾಡಿದ್ದಾರೆ ಇವರು. ಪೆಟ್ರೋಲ್, ಅವಶ್ಯಕ ವಸ್ತುಗಳಿಗೆಲ್ಲ ಬೆಲೆ ಹೆಚ್ಚಿಸಿದ್ದಾರೆ. ಈ ರಾಜ್ಯಕ್ಕೆ ಇವರಿಂದ ಯಾವುದೇ ಲಾಭ ಆಗಿಲ್ಲ. ಕಾಂಗ್ರೆಸ್ ಮಾಡಿಟ್ಟ ಆಸ್ತಿಯನ್ನು ಎಂಟು ವರ್ಷದಲ್ಲಿ ಮಾರಾಟ ಮಾಡಿದ್ದೀರಿ. ಡಬಲ್ ಇಂಜಿನ್ ಸರ್ಕಾರದಿಂದ ಡಬಲ್ ದೋಖಾ ಆಗಿದೆ. ರಾಜ್ಯದಲ್ಲಿ ಇವರು ಕತ್ತೆ ಕಾಯ್ತಿದಾರೆಯೇ ಎಂದು ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ಕಟುವಾಗಿ ಟೀಕಿಸಿದ್ದಾರೆ.  

ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಕರಾವಳಿ ಇವರಿಗೆ ಪ್ರಯೋಗ ಶಾಲೆ ಅಷ್ಟೇ. ಧರ್ಮದ ಅಮಲನ್ನು ತುಂಬಿ ಯುವಕರನ್ನು ಬರಡು ಮಾಡುತ್ತಿದ್ದಾರೆ. ಅದಕ್ಕಾಗಿ ಮೊನ್ನೆ ಮೋದಿಯನ್ನು ಕರೆಸಿ ಪುಶ್ ಕೊಡುವ ಕೆಲಸ ಮಾಡಿದ್ದಾರೆ. ಮೋದಿ ಬರುವಾಗ ಏನೋ ಅಚ್ಚೇ ದಿನ್ ಆಗುವ ಕನಸುಗಳಿದ್ದವು. ಏನ್ ಅಚ್ಚೇ ದಿನ್ ಬಂತು ಇವರ ಕಾಲದಲ್ಲಿ. ಮೋದಿ ಕರಾವಳಿಗೆ ಬಂದು ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಘೋಷಣೆ ಮಾಡುತ್ತಾರೆಂಬ ಆಸೆ ಜನರಲ್ಲಿತ್ತು. ಆದರೆ ಮೋದಿ ಅದ್ಯಾವುದೇ ಘೋಷಣೆಯನ್ನೂ ಮಾಡಿಲ್ಲ. ಇದರಿಂದ ಜನರಿಗೆ ನಿರಾಸೆಯಾಗಿದೆ.

ಗುರುನಾರಾಯಣ ಪೀಠ ಮತ್ತು ನಿಗಮ ಸ್ಥಾಪನೆ ಮಾಡುತ್ತಾರೆ ಎಂಬ ನಿರೀಕ್ಷೆ ಜನರಲ್ಲಿತ್ತು. ಇವರು ಘೋಷಣೆ ಮಾಡಿಲ್ಲ ಅಂತ ನನಗೇನೂ ಆಶ್ಚರ್ಯ ಆಗಲ್ಲ. ಯಾಕಂದ್ರೆ, ಬಿಜೆಪಿ ಸರ್ಕಾರ ನಾರಾಯಣ ಗುರುಗೆ ಪದೇ ಪದೇ ಅವಮಾನ ಮಾಡ್ತಾನೇ ಬಂದಿದೆ. ಪಠ್ಯ ಪುಸ್ತಕ, ಗಣರಾಜ್ಯೋತ್ಸವ ಟ್ಯಾಬ್ಲೋದಲ್ಲೂ ನಾರಾಯಣ ಗುರುಗಳಿಗೆ ಅವಮಾನ ಮಾಡಿದ್ದಾರೆ. ಆದರೆ ಈ ರೀತಿ ಅವಮಾನ ಆದಾಗ ಬಿಜೆಪಿ ಶಾಸಕ, ಸಚಿವರು ಯಾರೂ ಮಾತನಾಡಿಲ್ಲ. ನಾರಾಯಣ ಗುರು ಹೆಸರಲ್ಲಿ ವೋಟ್ ತೆಗೆದುಕೊಳ್ಳುತ್ತಾರೆ. ಅನ್ಯಾಯ ಆದಾಗ ಮಾತ್ರ ಬಾಯಿ ಮುಚ್ಚಿಕೊಳ್ಳುತ್ತಾರೆ ಎಂದು ಟೀಕಿಸಿದರು.

Modi in Mangaluru | Government keen on developing maritime strength, says  PM - The Hindu

ಬಿಜೆಪಿ ನಾಯಕರೇ ಭ್ರಷ್ಟಾಚಾರ ಹೇಳುತ್ತಿದ್ದಾರೆ

ಅತೀವೃಷ್ಠಿಯಿಂದ ಎಲ್ಲವೂ ನಾಶವಾಗಿದೆ. ಮಲೆನಾಡು, ಕರಾವಳಿಯಲ್ಲಿ ಬೆಳೆ ನಾಶವಾಗಿದ್ದರೂ, ಇವರಿಗೆ ಕೇಂದ್ರದಲ್ಲಿ ಪ್ಯಾಕೇಜ್ ಕೇಳುವ ಧೈರ್ಯ ಇಲ್ಲ. ಈಗಿನ ಸರ್ಕಾರಕ್ಕೆ ಕಮಿಷನ್ ನಲ್ಲಿ ಮಾತ್ರ ಆಸಕ್ತಿ ಇದೆ. ಇವರ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ನವರು ಹೇಳುತ್ತಿಲ್ಲ. ಬಿಜೆಪಿಯವರೇ ಹೇಳುತ್ತಿದ್ದಾರೆ. ಯೋಗೀಶ್ವರ್, ವಿಶ್ವನಾಥ್, ಯತ್ನಾಳ್, ರೇಣುಕಾಚಾರ್ಯ, ಮಾಧುಸ್ವಾಮಿ ಸೇರಿದಂತೆ ಬಿಜೆಪಿ ನಾಯಕರೇ ಸರಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಕೆ.ಎಸ್ ಈಶ್ವರಪ್ಪ ರಾಜ್ಯಪಾಲರಿಗೇ ಪತ್ರ ಬರೆದು ಸರಕಾರದ ಬಗ್ಗೆ ಆಕ್ಷೇಪಿಸಿದ್ದಾರೆ. ಇನ್ನೇನು ಬೇಕು ಇವರ ಸರಕಾರದ ಬಗ್ಗೆ ಹೇಳೋದಕ್ಕೆ. ಬಿಜೆಪಿಯವರೇ ಭ್ರಷ್ಟಾಚಾರ ನಡೀತಿರುವ ಬಗ್ಗೆ ಹೇಳುತ್ತಿದ್ದಾರೆ.  

ಕಟೀಲ್ ಮಾತಿಗೆ ಕರಾವಳಿಯಲ್ಲೇ ಕಿಮ್ಮತ್ತಿಲ್ಲ

ಕರಾವಳಿ ಭಾಗದಲ್ಲಿ ಕಟೀಲ್ ರನ್ನು ಪವರ್ ಫುಲ್ ಅಂತ ಭಾವಿಸಿದ್ದೆ. ಆದರೆ ಇಲ್ಲಿ ಅವರ ಮಾತಿಗೆ ಕಾರ್ಯಕರ್ತರೇ ಕವಡೆ ಕಾಸಿನ ಕಿಮ್ಮತ್ತು ಕೊಡಲ್ಲ. ಎರಡ್ಮೂರು ಸಚಿವರು, ರಾಜ್ಯಾಧ್ಯಕ್ಷರ ಕಾರನ್ನೇ ಕಾರ್ಯಕರ್ತರು ಹಿಡಿದು ಜಗ್ಗಾಡಿದ್ದಾರಲ್ಲಾ.. ನಳಿನ್ ಅವರಲ್ಲಿ ಸುಮ್ಮನೆ ಕೇಳಿ ನೋಡಿ, ಬಿಟ್ ಕಾಯಿನ್ ಹಗರಣದ ಬಗ್ಗೆ. ಯಾಕೆ ಅವರು ಮಾತನಾಡಲ್ಲ. ಯಾಕೆ ನ್ಯಾಯಾಂಗ ತನಿಖೆ ಮಾಡಲ್ಲ ಅನ್ನೋದನ್ನು ಕೇಳಿನೋಡಿ. ಬಿಟ್ ಕಾಯಿನ್ ಬಗ್ಗೆ ಸರಿಯಾದ ತನಿಖೆ ನಡೆದರೆ ಈ ಸರಕಾರ ಬಿದ್ದು ಹೋಗುತ್ತದೆ ಎಂದು ಹೇಳಿದರು ಖರ್ಗೆ.

Karnataka BJP chief Nalin Kumar Kateel rules out possibility of leadership  change- The New Indian Express

ನಳಿನ್ ಕುಮಾರ್ ಒಬ್ಬ ದುರ್ಬಲ ವ್ಯಕ್ತಿ

ಮೊನ್ನೆ ಮೋದಿಯವರು, ನಳಿನ್ ಹೆಸರನ್ನು ವೇದಿಕೆಯಲ್ಲಿ ಹೇಳಿದ್ರಾ? ನಳಿನ್ ಪಕ್ಷದ ರಾಜ್ಯಾಧ್ಯಕ್ಷ ಮತ್ತು ಇಲ್ಲಿನ ಸಂಸದ ಅಲ್ವೇ. ಮೋದಿ ಇವರ ಹೆಸರನ್ನೇ ಹೇಳದೇ ಇದ್ದುದು ಏನನ್ನು ಸೂಚಿಸುತ್ತದೆ. ಈ ವ್ಯಕ್ತಿ ಅಷ್ಟು ದುರ್ಬಲ ಅಂತಲ್ಲವೇ ಎಂದು ಪ್ರಿಯಾಂಕ್ ಪ್ರಶ್ನೆ ಮಾಡಿದರು. ನಳಿನ್ ಎಷ್ಟು ದುರ್ಬಲ ಅಂದ್ರೆ, ಪಕ್ಷದ ವಿರುದ್ಧ ಮಾತನಾಡಿದ ಅವರದ್ದೇ ಪಕ್ಷದವರಿಗೆ ಒಂದು ನೋಟಿಸ್ ನೀಡಿದ್ರಾ? ಯತ್ನಾಳ್ 2500 ಸಾವಿರ ಕೊಟ್ಟರೆ ನಾನೇ ಸಿಎಂ ಆಗ್ತೀನಿ ಎಂದಿದ್ದರಲ್ಲಾ.. ಇವರು ಏನು ಮಾಡಿದ್ರು ಆಯಪ್ಪನಿಗೆ. ಇಂಥವರು ನಮ್ಮ ಪಕ್ಷದ ಶಿಸ್ತು ಬಗ್ಗೆ ಮಾತನಾಡುತ್ತಾರೆ. ಮೋದಿ ಬರುವ ವೇಳೆಗೆ ಸಾಮಾಜಿಕ ಜಾಲತಾಣದಲ್ಲಿ ಸಂಸದರ ಬದಲಾವಣೆಗೆ ಕಾರ್ಯಕರ್ತರೇ ಅಭಿಯಾನ ಮಾಡುತ್ತಿದ್ದಾರೆ. ಇಂಥ ಸ್ಥಿತಿ ನಳಿನ್ ಅವರದ್ದು ಎಂದು ಛೇಡಿಸಿದರು.

ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡಿದರೆ, ಹಲಾಲ್ ಜಟ್ಕಾ ಬಗ್ಗೆ ಕೇಳುತ್ತಾರೆ. ಅಭಿವೃದ್ಧಿ ಬಗ್ಗೆ ಕೇಳಿದ್ರೆ ಕಾಶ್ಮೀರ್ ಫೈಲ್ ನೋಡಿದ್ರಾ ಅಂತಾ ಹೇಳುತ್ತಾರೆ. ಬಿಜೆಪಿ ಶಾಸಕರು, ಸಚಿವರ ಭ್ರಷ್ಟಾಚಾರದ ಬ್ರೋಕರ್ ಗಳಾಗಿದ್ದಾರೆ. ಬಿಜೆಪಿಯವರ ಮಕ್ಕಳು ವಿದೇಶದಲ್ಲಿ ಉದ್ಯೋಗ, ವಿದ್ಯಾರ್ಜನೆ ಮಾಡುತ್ತಿದ್ದಾರೆ. ಯಾರಾದ್ರೂ ಇಲ್ಲಿ ಶಾಲೆ ಕಲಿತು ಗೋವು ರಕ್ಷಣೆಯಲ್ಲಿ ತೊಡಗಿದ್ದಾರೆಯೇ.. ಗೋವನ್ನು ದತ್ತು ತೆಗೆದುಕೊಳ್ಳುವ ಯೋಜನೆ ಮಾಡಿದ್ರಲ್ಲ. ಎಷ್ಟು ಮಂದಿ ಬಿಜೆಪಿಯವರು ಗೋವನ್ನು ದತ್ತು ತೆಗೆದುಕೊಂಡಿದ್ದಾರೆ ಹೇಳಿ. ಬಡವರು, ಹಿಂದುಳಿದ ಯುವಕರಿಗೆ ಕೇಸರಿ ಶಾಲು ಹಾಕಿ ಧರ್ಮ ರಕ್ಷಣೆಗೆ ಕಳುಹಿಸುತ್ತಾರೆ.

ಯುಪಿ ಮಾಡೆಲ್ ಆಗೋದು ಹೇಗೆ ?

ಕೆಲವರು ಯುಪಿ ಮಾಡೆಲ್ ಅಂತ ಹೇಳುತ್ತಾರಲ್ಲಾ.. ಯುಪಿಯ ಜನರು ಕೆಲಸಕ್ಕೆ, ಕಲಿಯೋದಕ್ಕೆ ಕರ್ನಾಟಕಕ್ಕೆ ಬರುತ್ತಾರೆ. ಅಲ್ಲಿನ ಲೇಸರ್ ಷೋಗೆ ದುಡ್ಡು ಕಟ್ಟುತ್ತಿರೋದು ಕರ್ನಾಟಕದವರು. ಕನ್ನಡಿಗರ ದುಡ್ಡಲ್ಲಿ ಅಲ್ಲಿ ಡ್ಯಾಮ್ ಕಟ್ಟುತ್ತಿದ್ದಾರೆ. ನಮ್ಮ ದುಡ್ಡು ಅನ್ನೋಕೆ ನಮಗೆ ಹೆಮ್ಮೆಯಿದೆ. ಆದರೆ ವಾಸ್ತವ ಹೀಗಿದ್ದರೆ, ಯುಪಿ ಮಾಡೆಲ್ ಆಗೋದು ಹೇಗೆ. ಆರೆಸ್ಸೆಸ್, ಬಿಜೆಪಿ ನಾಯಕರ ಬಲೆಗೆ ಕರಾವಳಿಯ ಯುವಕರು ಬಲಿ ಬೀಳಬಾರದು. ನೂರು ಶೇಕಡಾ ಸಾಕ್ಷರರು  ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾಕೆ ಇಂಥವರಿಗೆ ಅವಕಾಶ ನೀಡುತ್ತೀರಿ. ನಾನು ನಿಮಗೆಲ್ಲ ಮನವಿ ಮಾಡಿಕೊಳ್ತಿರೋದು ಇಷ್ಟೇ, ನೀವು ಯಾರು ಕೂಡ ಬಿಜೆಪಿ-ಆರೆಸ್ಸೆಸ್ ನಾಯಕರ ಧರ್ಮದ ಟ್ರ್ಯಾಪ್ ಗೆ ಬಲಿ ಬೀಳಬೇಡಿ ಎಂದು ಮಾಜಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.

ಏನೂ ಆಗಿಲ್ಲ ಎನ್ನುತ್ತಿದ್ದ ಪಿಎಸ್ಐ ಹಗರಣದಲ್ಲಿ ಐಪಿಎಸ್ ಅಧಿಕಾರಿಯೇ ಅರೆಸ್ಟ್ ಆದ್ರಲ್ಲ. ರಾಜ್ಯದಲ್ಲಿ 2.50 ಲಕ್ಷ ಸರಕಾರಿ ಹುದ್ದೆಗಳು ಖಾಲಿಯಿವೆ. ಒಂದಾದ್ರೂ ಅಪಾಯಿಂಟ್ಮೆಂಟ್ ಮಾಡೋಕೆ ಇವರಿಂದ ಆಗಿದ್ಯಾ. ಪಿಎಸ್ಐ ಹುದ್ದೆಗೆ 54 ಸಾವಿರ ಜನ ಪರೀಕ್ಷೆ ಬರೆದಿದ್ದಾರೆ. ಕೆಪಿಟಿಸಿಎಲ್ ಹುದ್ದಗೆ 3 ಲಕ್ಷ ಜನ ಪರೀಕ್ಷೆ ಬರೆದಿದ್ದಾರೆ. ಈವರೆಗೆ 20 ಜನ ಅರೆಸ್ಟ್ ಆಗಿದ್ದಾರೆ. ಪಿಎಸ್ಐ ಎಕ್ಸಾಂ ಮಧ್ಯಸ್ಥಿಕೆ ವಹಿಸಿದ್ದು ನಾನೇ ಎಂತ ನಿಮ್ಮದೇ ಎಂಎಲ್ಎ ಹೇಳಿದ್ದಾರಲ್ಲಾ. ಅವರನ್ನು ಯಾವಾಗ ಅರೆಸ್ಟ್ ಮಾಡುತ್ತೀರಾ ಎಂದು ಖರ್ಗೆ ಪ್ರಶ್ನೆ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಧು ಬಂಗಾರಪ್ಪ, ರಮಾನಾಥ ರೈ, ಮಂಜುನಾಥ ಭಂಡಾರಿ, ಹರೀಶ್ ಕುಮಾರ್ ಮತ್ತಿತರರಿದ್ದರು.

Former minister, president of KPCC social media and MLA Priyank Kharge said on Tuesday September 6 that the BJP government is not a double engine but a double dhokha (cheat) government. Addressing media he said, “The BJP party workers had much expectations from Prime Minister Narendra Modi during his visit to Mangaluru. The public was disappointed with the double engine government as the visit of PM Modi did not live up to their expectations. The party workers have realised that this is double dhokha government.