ತೊಕ್ಕೊಟ್ಟಿನ ವಾಣಿಜ್ಯ ಕಟ್ಟಡದ ಮುಂದೆ ರಾತ್ರಿ-ಹಗಲೆನ್ನದೆ ಹಾರುತ್ತಿದೆ ರಾಷ್ಟ್ರ ಧ್ವಜ! ಸ್ವಾತಂತ್ರ್ಯಕ್ಕೆ ಏರಿಸಿದ್ದು ಇನ್ನೂ ಇಳಿಸಿಲ್ವೇ..?  

30-08-22 09:21 pm       Mangalore Correspondent   ಕರಾವಳಿ

ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು- ತೊಕ್ಕೊಟ್ಟು ಹೆದ್ದಾರಿ ನಡುವಿನ ಕಲ್ಲಾಪಿನಲ್ಲಿ ವಾಣಿಜ್ಯ ಮಳಿಗೆ ಕಟ್ಟಡದ ಮುಂದೆ ರಾತ್ರಿ- ಹಗಲೆನ್ನದೆ ರಾಷ್ಟ್ರ ಧ್ವಜ ಹಾರಾಡುತ್ತಿದೆ.

ಮಂಗಳೂರು, ಆಗಸ್ಟ್ 29: ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರು- ತೊಕ್ಕೊಟ್ಟು ಹೆದ್ದಾರಿ ನಡುವಿನ ಕಲ್ಲಾಪಿನಲ್ಲಿ ವಾಣಿಜ್ಯ ಮಳಿಗೆ ಕಟ್ಟಡದ ಮುಂದೆ ರಾತ್ರಿ- ಹಗಲೆನ್ನದೆ ರಾಷ್ಟ್ರ ಧ್ವಜ ಹಾರಾಡುತ್ತಿದೆ. ಸ್ವಾತಂತ್ರ್ಯ ದಿನಾಚರಣೆಗೆ ಹಾಕಿದ್ದ ಧ್ವಜ ಇನ್ನೂ ತೆಗೆದಿಲ್ಲವೇ ಅನ್ನುವ ಅನುಮಾನ ಎದುರಾಗಿದ್ದು, ಅದು ಸತ್ಯವೇ ಆಗಿದ್ದರೆ ದೊಡ್ಡ ಪ್ರಮಾದವೇ ಸರಿ.

ಈ ಬಾರಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ರಾಷ್ಟ್ರ ಧ್ವಜ ಹಾರಿಸಲು ಅನುಮತಿ ನೀಡಲಾಗಿತ್ತು. ದೇಶಾದ್ಯಂತ ಪ್ರತಿ ಮನೆ, ವಾಣಿಜ್ಯ ಕಟ್ಟಡ, ಸರಕಾರಿ ಕಚೇರಿಗಳ ಮುಂದೆ ರಾಷ್ಟ್ರ ಧ್ವಜ ಹಾರಿಸಲು ಹರ್ ಘರ್ ತಿರಂಗಾ ಹೆಸರಲ್ಲಿ ಅಭಿಯಾನ ನಡೆಸಲಾಗಿತ್ತು. ಮೂರು ದಿನವೂ ಬೆಳಗ್ಗಿನಿಂದ ಸಂಜೆಯ ವರೆಗೆ ರಾಷ್ಟ್ರ ಧ್ವಜ ಹಾರಿಸಲು ಸೂಚಿಸಲಾಗಿತ್ತು. ಆದರೆ ಕೆಲವು ಮನೆಗಳಲ್ಲಿ ಮೂರು ದಿನವೂ ರಾತ್ರಿ- ಹಗಲೆನ್ನದೆ ಧ್ವಜ ಹಾರಾಟ ಆಗಿತ್ತು. ಕೆಲವೊಂದು ಫ್ಲಾಟ್, ಮನೆಗಳಲ್ಲಿ ಆಗಸ್ಟ್ 15ರ ನಂತರವೂ ತ್ರಿವರ್ಣ ಹಾರಾಡುತ್ತಿದ್ದುದು ಕಂಡುಬಂದಿತ್ತು. ಇದೆಲ್ಲವೂ ಧ್ವಜ ಸಂಹಿತೆಯ ಉಲ್ಲಂಘನೆಯೇ ಆಗಿದ್ದರೂ, ಅಮೃತ ಮಹೋತ್ಸವದ ನೆಪದಲ್ಲಿ ಮುಗಿದು ಹೋಗಿತ್ತು.

ಆದರೆ ಕಲ್ಲಾಪಿನ ಸ್ಟ್ರೀಟ್ ವಾಕ್ ಎನ್ನುವ ವಾಣಿಜ್ಯ ಮಳಿಗೆಯಿರುವ ಕಟ್ಟಡದ ಮುಂದಿನ ಧ್ವಜ ಸ್ತಂಭದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಳೆದು 15 ದಿನವಾದ್ರೂ ರಾಷ್ಟ್ರ ಧ್ವಜ ಹಾರಾಡುತ್ತಿದೆ. ಈ ಬಗ್ಗೆ ಹೆಡ್ ಲೈನ್ ಕರ್ನಾಟಕದ ಪ್ರತಿನಿಧಿ ಕಳೆದ ಎರಡು ದಿನಗಳಿಂದ ಗಮನಿಸಿದ್ದು, ಅಲ್ಲಿಗೆ ತೆರಳಿ ಧ್ವಜ ಹಾರಾಡುವುದನ್ನು ಖಚಿತ ಪಡಿಸಿದ್ದಾರೆ. ರಾಷ್ಟ್ರ ಧ್ವಜ ಮಂಗಳವಾರ, ಆಗಸ್ಟ್ 30ರ ರಾತ್ರಿಯೂ ಹಾರಾಡುತ್ತಿರುವುದನ್ನು ಖಚಿತ ಪಡಿಸಿದ್ದಾರೆ. ತ್ರಿವರ್ಣ ಧ್ವಜ ಕಟ್ಟಡದ ಮುಂದಿನ ಕಂಬದಲ್ಲಿ ಪಟ ಪಟನೆ ಹಾರಾಡುತ್ತಿದೆ. ಸೋಮವಾರ ಈ ಬಗ್ಗೆ ಅಲ್ಲಿರುವ ಸೆಕ್ಯುರಿಟಿ ಗಾರ್ಡ್ ಬಳಿ ಕೇಳಿದರೆ, ರಾಷ್ಟ್ರ ಧ್ವಜ ಒದ್ದೆಯಾಗಿತ್ತು. ಅದಕ್ಕಾಗಿ ಕಂಬದಲ್ಲಿ ಏರಿಸಿ, ಒಣಗಲು ಹಾಕಿದ್ದೆವು ಎಂದಿದ್ದರು. ಒದ್ದೆಯಾದ ರಾಷ್ಟ್ರ ಧ್ವಜವನ್ನು ಒಣಗಿಸುವುದಿದ್ದರೂ ಧ್ವಜ ಸ್ತಂಭಕ್ಕೆ ಏರಿಸುವ ಕ್ರಮ ಇಲ್ಲ.

ವಿಶೇಷ ದಿನಗಳಂದು ರಾಷ್ಟ್ರ ಧ್ವಜಾರೋಹಣ ನಡೆಸಿದರೂ, ಅದಕ್ಕೆ ಅದರದ್ದೇ ಆದ ಗೌರವ ಮತ್ತು ನಿಯಮ ಇದೆ. ಬೆಳಗ್ಗೆ ಆರೋಹಣ ನಡೆಸಿದರೂ, ಸಂಜೆ ಸೂರ್ಯಾಸ್ತ ಆಗುವ ಮುನ್ನ ಅವರೋಹಣ ಮಾಡಬೇಕು. ಆದರೆ ಕಲ್ಲಾಪಿನ ವಾಣಿಜ್ಯ ಮಳಿಗೆಯ ಕಟ್ಟಡದ ಮುಂದೆ ತ್ರಿವರ್ಣ ಧ್ವಜ ರಾತ್ರಿ ಹಗಲೆನ್ನದೆ ಹಾರಾಡುತ್ತಿದೆ. ತೊಕ್ಕೊಟ್ಟಿನಲ್ಲಿ ಉಳ್ಳಾಲ ನಗರಸಭೆಯ ವಿಶೇಷ ಅನುಮತಿಯಲ್ಲಿ ಶಾಸಕ ಯುಟಿ ಖಾದರ್ ಬೃಹತ್ ರಾಷ್ಟ್ರ ಧ್ವಜ ಹಾರಿಸಿದ್ದಾರೆ. ಅದೇ ಪ್ರೇರಣೆಯಿಂದ ವಾಣಿಜ್ಯ ಮಳಿಗೆಯ ಮುಂದೆಯೂ ಧ್ವಜ ಹಾರಿಸುತ್ತಿದ್ದಾರೆಯೇ ಎನ್ನೋದು ಗೊತ್ತಿಲ್ಲ. ಏನಿದ್ದರೂ, ರಾತ್ರಿ ಹಗಲೆನ್ನದೆ ಎಲ್ಲೆಂದರಲ್ಲಿ ರಾಷ್ಟ್ರ ಧ್ವಜ ಹಾರಿಸುವುದು ಕಾನೂನು ಉಲ್ಲಂಘನೆಯಾಗುತ್ತದೆ.

Thokottu commercial complex Indian flag still standing in Mangalore even after independence day is over.