ಪದೇ ಪದೇ ಕಾಂಕ್ರೀಟ್ ರಸ್ತೆ ಅಗೆತ ; ಅಧಿಕಾರಿಗಳ ಸಮನ್ವಯ ಕೊರತೆಯಿಂದ ಜನರಿಗೆ ತೊಂದರೆ, ಕಾಮಗಾರಿ ಒಂದೇ ಹಂತದಲ್ಲಿ ನಡೆಸಲು ಸಚಿವ ಸುನಿಲ್ ಸೂಚನೆ

13-06-22 02:40 pm       Mangalore Correspondent   ಕರಾವಳಿ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಡಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ, ಮತ್ತಿತರ ಕಾಮಗಾರಿಗಳಲ್ಲಿ ಕಾಂಕ್ರೀಟ್ ರಸ್ತೆಗಳನ್ನು ಮತ್ತೆ ಮತ್ತೆ ಅಗೆದು ಹಾಕುವುದು, ಜನರಿಗೆ ಕಿರಿಕಿರಿ ಉಂಟು ಮಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು.

ಮಂಗಳೂರು, ಜೂನ್ 13: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಡಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ, ಮತ್ತಿತರ ಕಾಮಗಾರಿಗಳಲ್ಲಿ ಕಾಂಕ್ರೀಟ್ ರಸ್ತೆಗಳನ್ನು ಮತ್ತೆ ಮತ್ತೆ ಅಗೆದು ಹಾಕುವುದು, ಜನರಿಗೆ ಕಿರಿಕಿರಿ ಉಂಟು ಮಾಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ನೇತೃತ್ವದಲ್ಲಿ ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಲಾಗಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವ ಸುನಿಲ್ ಕುಮಾರ್, ಕೆಯುಡಿಎಫ್ ಸಿ, ಪೈಪ್ ಲೈನ್ ವಿಚಾರಕ್ಕೆ ಪದೇ ಪದೇ ಕಾಂಕ್ರೀಟ್ ರಸ್ತೆ ಅಗೆಯುವ ವಿಚಾರದಲ್ಲಿ ಅಧಿಕಾರಿಗಳನ್ನು ಕರೆದು ಸಭೆ ನಡೆಸಿದ್ದೇನೆ. ಬೇರೆ ಬೇರೆ ಇಲಾಖೆಗಳ ನಡುವೆ ಸಮನ್ವಯ ಕೊರತೆ ಕಂಡುಬಂದಿದ್ದು, ಇದಕ್ಕಾಗಿ ಶೀಘ್ರದಲ್ಲಿ ಸಂಬಂಧಪಟ್ಟ ಇಲಾಖೆಗಳ ರಾಜ್ಯ ಮಟ್ಟದ ಅಧಿಕಾರಿಗಳನ್ನು ಕರೆದು ಸಭೆ ನಡೆಸಲಾಗುವುದು. ಒಂದೇ ಸಂದರ್ಭದಲ್ಲಿ ರಸ್ತೆಗಳನ್ನು ಅಗೆದು ಹಾಕುವುದು, ಅದರಿಂದ ಜನರಿಗೆ ಕಿರಿಕಿರಿ ಉಂಟು ಮಾಡುವುದನ್ನು ತಪ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಒಂದು ಭಾಗದಲ್ಲಿ ಪೈಪ್ ಲೈನ್, ಒಳಚರಂಡಿ, ಕುಡಿಯುವ ನೀರಿನ ಪೈಪ್ ಇನ್ನಿತರ ಯಾವುದೇ ಕಾಮಗಾರಿ ಇದ್ದರೂ, ಅವನ್ನು ಒಂದೇ ಬಾರಿಗೆ ನಡೆಸಬೇಕು. ಎಲ್ಲ ಕಡೆಯೂ ರಸ್ತೆಗಳನ್ನು ಅಗೆದು ಹಾಕಬಾರದು ಎಂದು ಸೂಚನೆ ನೀಡಿದ್ದಾಗಿ ತಿಳಿಸಿದ್ದಾರೆ. ಮಹಾನಗರ ಪಾಲಿಕೆಗೆ ಕೆಯುಡಿಎಫ್ ಸಿ ವತಿಯಿಂದ ದೊಡ್ಡ ಮಟ್ಟದಲ್ಲಿ ಅನುದಾನ ಬಂದಿದೆ. ಅದನ್ನು ಸೂಕ್ತವಾಗಿ ಬಳಸಿಕೊಳ್ಳಲು ಯೋಜನೆ ರೂಪಿಸಬೇಕು. ಕಂಕನಾಡಿ, ಕದ್ರಿ ಮತ್ತು ಸುರತ್ಕಲ್ ಮಾರುಕಟ್ಟೆಗಳನ್ನು ಡಿಸೆಂಬರ್ ವೇಳೆಗೆ ಪೂರ್ತಿಗೊಳಿಸಲು ಗುರಿ ಇಟ್ಟುಕೊಳ್ಳಲಾಗಿದೆ ಎಂದರು.

ಸುರತ್ಕಲ್ ವ್ಯಾಪ್ತಿಯ ಇಡ್ಯಾದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ನಿರ್ಧರಿಸಿದ್ದು, ಕೂಡಲೇ ಕಾಮಗಾರಿ ನಡೆಸಲಾಗುವುದು. ಇಡ್ಯಾದಲ್ಲಿ 600 ಮನೆಗಳನ್ನು ನಿರ್ಮಿಸಲಿದ್ದು, ಅದರ ಫಲಾನುಭವಿಗಳನ್ನು ಗುರುತಿಸಲು ಶಾಸಕರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿಸಿದ ಸಚಿವರು, ಮಹಾತ್ಮಗಾಂಧಿ ಯೋಜನೆಯಡಿ 19 ಪ್ಯಾಕೇಜ್ ಮಂಗಳೂರು ನಗರಕ್ಕೆ ಬಂದಿದೆ. ಇದರಡಿ ತಡೆಗೋಡೆ, ರಸ್ತೆ ದುರಸ್ತಿ ಇತ್ಯಾದಿ ಕೆಲಸ ನಡೆಸಲಾಗುವುದು ಎಂದು ಹೇಳಿದರು.

Take severe legal action against cattle thieves: MLA Bharath Shetty |  udayavani

ಇದೇ ವೇಳೆ, ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಶಾಸಕ ಭರತ್ ಶೆಟ್ಟಿ ಬಳಿ ಸುರತ್ಕಲ್ ಎನ್ಐಟಿಕೆ ಟೋಲ್ ಗೇಟ್ ಬಗ್ಗೆ ಪ್ರಶ್ನೆ ಮಾಡಲಾಯಿತು. ಟೋಲ್ ಗೇಟನ್ನು ಹೆಜಮಾಡಿ ಟೋಲ್ ಗೇಟ್ ಜೊತೆಗೆ ವಿಲೀನ ಮಾಡುವ ಪ್ರಕ್ರಿಯೆ ನಡೆದಿದೆ. ಇದರ ಬಗ್ಗೆ ಕೇಂದ್ರ ಸಚಿವ ಗಡ್ಕರಿಯವರೂ 60 ಕಿಮೀ ಒಳಗೆ ಒಂದೇ ಟೋಲ್ ಗೇಟ್ ಅನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.

Union Minister Nitin Gadkari to inaugurate multiple projects in Nagpur  today | India News | Zee News

ಸುದ್ದಿಗೋಷ್ಠಿಯಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಪಾಲಿಕೆ ಕಮಿಷನರ್ ಅಕ್ಷಯ್ ಶ್ರೀಧರ್ ಇದ್ದರು.

Minister Sunil Kumar slams smart city officers for repeatedly cutting concentrate roads for repairs during a press meet held at Mangalore city corporation. He ordered that whatever work is there it should be done before the finishing of the work and not repeatedly cutting the roads and disturbing public life.