ಲವ್ ಜಿಹಾದ್ ವಿರುದ್ಧ ಕಾನೂನು ; ಉತ್ತರ ಪ್ರದೇಶದಲ್ಲಿ ಸುಗ್ರೀವಾಜ್ಞೆ

25-11-20 11:02 am       Headline Karnataka News Network   ದೇಶ - ವಿದೇಶ

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ಲವ್ ಜಿಹಾದ್ ವಿರುದ್ಧ ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಗೆ ತಂದಿದೆ.

ನವದೆಹಲಿ, ನವೆಂಬರ್ 25: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ಲವ್ ಜಿಹಾದ್ ವಿರುದ್ಧ ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಗೆ ತಂದಿದೆ. ಧರ್ಮ ಆಧರಿತ ಮತಾಂತರ ವಿರೋಧಿ ಕಾಯ್ದೆ – 2020 ಅನ್ನು ಜಾರಿಗೆ ತಂದಿದ್ದು, ಮುಂದಿನ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯ ಅಂಕಿತ ಪಡೆಯಲು ಯೋಜನೆ ಹಾಕಿದೆ.

ಲವ್ ಜಿಹಾದ್ ಕೃತ್ಯವನ್ನು ಮಟ್ಟ ಹಾಕಲು ಕಠಿಣ ಕಾನೂನು ಜಾರಿಗೆ ತರುವ ಬಗ್ಗೆ ಉತ್ತರ ಪ್ರದೇಶ ಬಿಜೆಪಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದರು. ಪ್ರೀತಿ, ಪ್ರೇಮದ ಹೆಸರಲ್ಲಿ ಹಿಂದು ಹುಡುಗಿಯರನ್ನು ಮದುವೆಯಾಗಿ ಮತಾಂತರಿಸುವ ಕಾರ್ಯದ ವಿರುದ್ಧ ಕಾನೂನು ತರುವ ಬಗ್ಗೆ ಯೋಗಿ, ಅಧಿಕಾರಿಗಳಿಂದ ವರದಿಯನ್ನು ಕೇಳಿದ್ದರು.

ಈ ಕಾನೂನಿನಲ್ಲಿ ಲವ್ ಜಿಹಾದ್ ಬಗ್ಗೆ ಉಲ್ಲೇಖ ಇಲ್ಲ. ಆದರೆ, ಎಲ್ಲ ರೀತಿಯ ಮತಾಂತರ ಚಟುವಟಿಕೆಗಳು ಈ ಕಾನೂನಿನ ವ್ಯಾಪ್ತಿಗೆ ಬರಲಿವೆ. ಅಲ್ಲದೆ, ಈ ಕಾನೂನು ಹಿಂದು- ಮುಸ್ಲಿಮರ ಮತಾಂತರದ ಬಗ್ಗೆ ಮಾತ್ರ ಟಾರ್ಗೆಟ್ ಆಗಿಲ್ಲ. ಮದುವೆ ಕಾರಣಕ್ಕೆ ಮತಾಂತರಿಸುವುದನ್ನು ಟಾರ್ಗೆಟ್ ಇಟ್ಟುಕೊಂಡು ಈ ಕಾನೂನು ತರಲಾಗಿದೆ ಎಂದು ಕಾನೂನು ಆಯೋಗದ ಅಧ್ಯಕ್ಷ ಜಸ್ಟಿಸ್ ಆದಿತ್ಯ ಮಿತ್ತಲ್ ಹೇಳಿದ್ದಾರೆ.

ಬಲವಂತದ ಮತಾಂತರದ ವಿರುದ್ಧ ಕಾನೂನು ರೂಪಿಸಲು ಕಳೆದ ವರ್ಷ ಆಯೋಗದಿಂದ ವರದಿ ನೀಡಲಾಗಿತ್ತು. ಈಗ ಅದನ್ನೇ ಸ್ವಲ್ಪ ಬದಲಾಯಿಸಿಕೊಂಡು ಹೊಸ ರೀತಿಯ ಕಾನೂನು ತರಲಾಗಿದೆ ಎಂದು ಮಿತ್ತಲ್ ಹೇಳಿದ್ದಾರೆ.

ಸ್ವಾತಂತ್ರ್ಯ ಪೂರ್ವ ಮ್ತತು ಅನಂತರ ಕಾಲದಲ್ಲಿ ಇದ್ದ ಕಾನೂನುಗಳು ಮತ್ತು ನೆರೆಯ ದೇಶಗಳಾದ ನೇಪಾಳ, ಮ್ಯಾನ್ಮಾರ್, ಭೂತಾನ್, ಶ್ರೀಲಂಕಾ ಮತ್ತು ಪಾಕಿಸ್ತಾನದ ಕೋರ್ಟ್ ಗಳಲ್ಲಿ ಮತಾಂತರ ವಿಚಾರದಲ್ಲಿ ನೀಡಿರುವ ತೀರ್ಪುಗಳನ್ನು ಆಧರಿಸಿ ಈ ಕಾನೂನು ರೂಪಿಸಲಾಗಿದೆ ಎಂದಿದ್ದಾರೆ. ಆದರೆ, ಇದೇ ವೇಳೆ, ಮತಾಂತರ ವಿಚಾರದಲ್ಲಿ ಸ್ಪಷ್ಟ ಕಾನೂನು ನಮ್ಮಲ್ಲಿ ಇಲ್ಲ ಎಂದು ಮಿತ್ತಲ್ ಹೇಳಿದ್ದಾರೆ.

The Uttar Pradesh government Tuesday approved the draft of a stringent law to check unlawful conversions — which BJP leaders refer to as “love jihad” — in the state.