PM Narendra Modi, Bharat Ratna, Lal Krishna Advani: ಬಿಜೆಪಿ ಪಾಲಿನ ಭೀಷ್ಮ ಎಲ್.ಕೆ ಆಡ್ವಾಣಿಗೆ ಭಾರತ ರತ್ನ ; ಪ್ರಧಾನಿ ನರೇಂದ್ರ ಮೋದಿ ಘೋಷಣೆ 

03-02-24 02:01 pm       HK News Desk   ದೇಶ - ವಿದೇಶ

ಬಿಜೆಪಿ ಭೀಷ್ಮ ಎಂದೇ ಪರಿಗಣಿಸಲ್ಪಟ್ಟ, ರಾಮ ಜನ್ಮಭೂಮಿ ಚಳವಳಿಯ ರೂವಾರಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ಘೋಷಿಸಲಾಗಿದೆ.

ನವದೆಹಲಿ, ಫೆ.3: ಬಿಜೆಪಿ ಭೀಷ್ಮ ಎಂದೇ ಪರಿಗಣಿಸಲ್ಪಟ್ಟ, ರಾಮ ಜನ್ಮಭೂಮಿ ಚಳವಳಿಯ ರೂವಾರಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ಘೋಷಿಸಲಾಗಿದೆ. ಭಾರತ ರತ್ನ ಪ್ರಶಸ್ತಿ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. 

"ಶ್ರೀ ಎಲ್.ಕೆ. ಅಡ್ವಾಣಿಜಿ ಅವರಿಗೆ ಭಾರತ ರತ್ನ ನೀಡಲಾಗುವುದು ಎಂಬ ಸುದ್ದಿ ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗುತ್ತಿದೆ. ನಾನು ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಈ ಗೌರವವನ್ನು ಪಡೆದಿರುವುದಕ್ಕೆ ಅವರನ್ನು ಅಭಿನಂದಿಸಿದ್ದೇನೆ. ನಮ್ಮ ಕಾಲದ ಅತ್ಯಂತ ಗೌರವಾನ್ವಿತ ರಾಜನೀತಿಜ್ಞರಲ್ಲಿ ಒಬ್ಬರಾದ ಅವರು ಭಾರತದ ಅಭಿವೃದ್ಧಿಗೆ ನೀಡಿದ ಕೊಡುಗೆ ಸ್ಮರಣೀಯವಾಗಿದೆ" ಎಂದು ಪ್ರಧಾನಿ ಮೋದಿ ಬರೆದಿದ್ದಾರೆ. 

ಬಿಜೆಪಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಎಲ್‌.ಕೆ ಅಡ್ವಾಣಿ ಸುದೀರ್ಘ ಕಾಲದ ರಾಜಕೀಯ ಜೀವನದಲ್ಲಿದ್ದವರು. ಸಂಸದರಾಗಿ ದೇಶದ ಉಪ ಪ್ರಧಾನಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದವರು. 1990ರಲ್ಲಿ ರಾಮ ಜನ್ಮಭೂಮಿ ಚಳವಳಿಯ ಮುಂಚೂಣಿಯಲ್ಲಿದ್ದು ದೇಶಾದ್ಯಂತ ರಥಯಾತ್ರೆ ನಡೆಸಿದ್ದರು. ಆಮೂಲಕ ಬಿಜೆಪಿಗೆ ದೇಶ ವ್ಯಾಪಿ ವರ್ಚಸ್ಸು ಬರುವಂತೆ ಮಾಡುವಲ್ಲಿ ಶ್ರಮಿಸಿದ್ದರು. 2014ರಲ್ಲಿ ಗಾಂಧಿನಗರ ಕ್ಷೇತ್ರದಿಂದ ಕೊನೆಯ ಬಾರಿಗೆ ಸ್ಪರ್ಧಿಸಿದ್ದರು.‌ 

ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವುದರಿಂದ ಹಿಡಿದು ಭಾರತದ ಉಪ ಪ್ರಧಾನಿಯಾಗಿ ರಾಷ್ಟ್ರ ಸೇವೆಗೆ, ರಾಷ್ಟ್ರದ ಅಭಿವೃದ್ಧಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಬಿಜೆಪಿಯ ಕಟ್ಟರ್ ಸೈದ್ಧಾಂತಿಕ ಬಣವನ್ನು ಪ್ರತಿನಿಧಿಸುತ್ತಾರೆ ಎಂದೇ ಬಿಂಬಿತರಾಗಿದ್ದ ಆಡ್ವಾಣಿ ಅವರು, 2005 ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಅಲ್ಲಿ ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಹೊಗಳಿದ್ದಕ್ಕೆ ಸಂಘ ಪರಿವಾರದ ಟೀಕೆ ಎದುರಿಸಬೇಕಾಗಿ ಬಂದಿತ್ತು. 2014ರಲ್ಲಿ ಮೋದಿ ಮುನ್ನೆಲೆಗೆ ಬಂದ ಬಳಿಕ ಆಡ್ವಾಣಿ ರಾಜಕಾರಣದಿಂದ ಹಿನ್ನೆಲೆಗೆ ಸರಿದಿದ್ದರು.

Prime Minister Narendra Modi on Saturday announced the Bharat Ratna Award, the country’s highest civilian honour, to be conferred to Bharatiya Janata Party (BJP) patriarch Lal Krishna Advani.