ಬೃಹತ್ ಖೋಟಾ ನೋಟು ಜಾಲ ಬಯಲಿಗೆ ; ಉಪ್ಪಿನಂಗಡಿ ಬಳಿ ಫ್ಯಾಕ್ಟರಿ ಮಾಡಿಕೊಂಡಿದ್ದ ಏಳು ಮಂದಿ ಖದೀಮರ ಬಂಧನ, 500 ಮುಖಬೆಲೆಯ ನೋಟಿನ ಬಂಡಲ್ ಪತ್ತೆ !‌

16-07-26 02:02 pm       HK News Staffer   ಕ್ರೈಂ

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿಯಲ್ಲಿ ಖೋಟಾ ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದ ಬೃಹತ್ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದು ಐನೂರು ಮುಖಬೆಲೆಯ ನೋಟುಗಳ ಬಂಡಲ್ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ.

ಮಂಗಳೂರು, ಜುಲೈ 16: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿಯಲ್ಲಿ ಖೋಟಾ ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದ ಬೃಹತ್ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದು ಐನೂರು ಮುಖಬೆಲೆಯ ನೋಟುಗಳ ಬಂಡಲ್ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ. 

ಉಪ್ಪಿನಂಗಡಿ ಬಳಿಯ ಕಾಣಿಯೂರು ಗ್ರಾಮದ ಅಡಿಂಜೆ ಎಂಬಲ್ಲಿ ನಿನ್ನೆ ರಾತ್ರಿ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು ನಕಲಿ ನೋಟುಗಳನ್ನು ಪ್ರಿಂಟ್ ಮಾಡಿ ಮಾರಾಟಕ್ಕೆ ರೆಡಿ ಮಾಡುತ್ತಿದ್ದಾಗಲೇ ಅರೆಸ್ಟ್ ಮಾಡಿದ್ದಾರೆ. ಪುತ್ತೂರು ನಿವಾಸಿ, ಇಬ್ರಾಹಿಂ, ಕೇರಳದ ಕಾಸರಗೋಡು ನಿವಾಸಿ ಶರೀಫ್, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಿವಾಸಿ ಸಂದೀಪ್, ಕಾಸರಗೋಡು ನಿವಾಸಿ ಮೊಹಮ್ಮದ್ ನವಾಸ್, ಪುತ್ತೂರು ನಿವಾಸಿ ಸಲ್ಮಾನ್, ಬೆಳ್ತಂಗಡಿ ನಿವಾಸಿ  ಸಿರಾಜುದ್ದಿನ್ ಮತ್ತು ಇರ್ಷಾದ್ ಬಂಧಿತರು. 

ಖಚಿತ ಮಾಹಿತಿ ಮೇರೆಗೆ ದಕ್ಷಿಣ ಕನ್ನಡ ಎಸ್ಪಿ ಅರುಣ್ ನೇತೃತ್ವದ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದ್ದು ನಾಲ್ಕು ಮನೆಗಳಿದ್ದ ಕಟ್ಟಡವನ್ನು ಬಾಡಿಗೆ ಪಡೆದು ನಕಲಿ ನೋಟು ತಯಾರಿಸುವ ಫ್ಯಾಕ್ಟರಿ ಮಾಡಿಕೊಂಡಿದ್ದರು. ಬೆಳ್ತಂಗಡಿಯ ಸಿರಾಜುದ್ದೀನ್ ಈ ನಕಲಿ ನೋಟು ಜಾಲದ ಮಾಸ್ಟರ್ ಮೈಂಡ್ ಎನ್ನಲಾಗಿದ್ದು ದಾಳಿಯ ವೇಳೆ 500 ಮುಖಬೆಲೆಯ ನಕಲಿ‌ ನೋಟುಗಳ ಬಂಡಲ್ ಪತ್ತೆಯಾಗಿದೆ. 

ಕಾಣಿಯೂರು ಬಳಿಯ ಅಡಿಂಜೆ ನಿವಾಸಿ ಇದ್ರಿಸ್ ಎಂಬವರಿಗೆ ಸೇರಿದ ನೂತನ ಕಟ್ಟಡದಲ್ಲಿ ಮೂರು ಮನೆಗಳನ್ನು ಬಾಡಿಗೆಗೆ ಪಡೆದಿದ್ದ ಸಿರಾಜುದ್ದೀನ್, ಅದರಲ್ಲಿ ಪ್ರಿಂಟರ್ ಇನ್ನಿತರ ಅತ್ಯಾಧುನಿಕ ಯಂತ್ರಗಳನ್ನು ಇಟ್ಟು ನಕಲಿ ನೋಟು ಪ್ರಿಂಟ್ ಮಾಡುತ್ತಿದ್ದರು. ದಾಳಿ ಸಂದರ್ಭ ನೋಟು ಪ್ರಿಂಟ್ ಮಾಡಲು ಬಳಸುವ ಪೇಪರ್ ಬಂಡಲ್, ವಿವಿಧ ಮಾದರಿಯ ಸೀಲ್ ಗಳು, ಪ್ರಿಂಟರ್, ಸ್ಕ್ಯಾನರ್ ಸೇರಿದಂತೆ ಇನ್ನಿತರ ವಸ್ತುಗಳು ಪತ್ತೆಯಾಗಿವೆ. RBI ಸೆಕ್ಯೂರಿಟಿ ಟ್ರೇಡ್ ಗಳನ್ನೂ ರೆಡಿ ಮಾಡಿಕೊಂಡು ಇರಿಸಿದ್ದರು. 

ಯಾರಿಗೂ ಶಂಕೆ ಬರದ ರೀತಿಯಲ್ಲಿ ನಕಲಿ‌ ನೋಟು ತಯಾರಿಸುವ ಕಾರ್ಖಾನೆಯನ್ನು ಮಾಡಿಕೊಂಡಿದ್ದರು. ನೋಟುಗಳನ್ನು ಪ್ರಿಂಟ್ ಮಾಡಿ ಬೇರೆ ಕಡೆಯಲ್ಲಿ ಸಪ್ಲೈ ಮಾಡಲು ಸ್ಕೆಚ್ ಹಾಕಿದ್ದರು. ಒಂದು ತಿಂಗಳಿನಿಂದ ಈ ಕೆಲಸ ಮಾಡುತ್ತಿದ್ದು ಹೆಚ್ಚಿನ ತನಿಖೆ ಆಗಬೇಕಾಗಿದೆ ಎಂದು ದಕ್ಷಿಣ ಕನ್ನಡ ಎಸ್ಪಿ ಅರುಣ್ ಕುಮಾರ್ ತಿಳಿಸಿದ್ದಾರೆ.