ಡಿಕೆಶಿ ಸಂಪುಟಕ್ಕೆ 19 ಸಚಿವರ ಸೇರ್ಪಡೆ ; ಮಹಿಳಾ ಕೋಟಾದಲ್ಲಿ ಕೊನೆಕ್ಷಣದ ಕ್ಲೈಮ್ಯಾಕ್ಸ್, ಗಾಯತ್ರಿ ಶಾಂತಗೌಡಗೆ ತಪ್ಪಿದ ಸಚಿವ ಗಾದಿ !

03-08-26 08:44 pm       HK News Staffer   ಕರ್ನಾಟಕ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದ ವಿಸ್ತರಣೆ ಸೋಮವಾರ ನಡೆದಿದ್ದು, ಒಟ್ಟು 19 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಹೈಕಮಾಂಡ್ ಬಿಡುಗಡೆ ಮಾಡಿದ್ದ ಅಂತಿಮ ಪಟ್ಟಿಯಲ್ಲಿದ್ದ ಚಿಕ್ಕಮಗಳೂರು ಮೂಲದ ಎಂಎಲ್‌ಸಿ ಗಾಯತ್ರಿ ಶಾಂತೇಗೌಡ ಅವರ ಹೆಸರು ಕೊನೆ ಕ್ಷಣದಲ್ಲಿ ಕೈಬಿಡಲ್ಪಟ್ಟಿದ್ದು ಪ್ರಮಾಣ ವಚನ ಸ್ವೀಕರಿಸದೆ ದೂರ ಉಳಿದಿದ್ದಾರೆ.

ಬೆಂಗಳೂರು, ಆಗಸ್ಟ್ 3: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದ ವಿಸ್ತರಣೆ ಸೋಮವಾರ ನಡೆದಿದ್ದು, ಒಟ್ಟು 19 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಹೈಕಮಾಂಡ್ ಬಿಡುಗಡೆ ಮಾಡಿದ್ದ ಅಂತಿಮ ಪಟ್ಟಿಯಲ್ಲಿದ್ದ ಚಿಕ್ಕಮಗಳೂರು ಮೂಲದ ಎಂಎಲ್‌ಸಿ ಗಾಯತ್ರಿ ಶಾಂತೇಗೌಡ ಅವರ ಹೆಸರು ಕೊನೆ ಕ್ಷಣದಲ್ಲಿ ಕೈಬಿಡಲ್ಪಟ್ಟಿದ್ದು ಪ್ರಮಾಣ ವಚನ ಸ್ವೀಕರಿಸದೆ ದೂರ ಉಳಿದಿದ್ದಾರೆ. 

ಬೆಂಗಳೂರಿನ ಲೋಕಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. 20 ಸಚಿವರ ಪಟ್ಟಿಯಲ್ಲಿ ಮಧ್ಯಾಹ್ನ ವೇಳೆಗೆ ಮಂಕಾಳ ವೈದ್ಯ ಹೆಸರಿನ ಬದಲು ಎಸ್.ಎಸ್. ಮಲ್ಲಿಕಾರ್ಜುನ ಹೆಸರು ಸೇರ್ಪಡೆಯಾಗಿತ್ತು. ಆದರೆ ಗಾಯತ್ರಿ ಶಾಂತೇಗೌಡ ಅವರ ಹೆಸರು ಬದಲಾವಣೆ ಆಗಿರಲಿಲ್ಲ. 

ಸಂಜೆ ಐದು ಗಂಟೆ ವೇಳೆಗೆ ಇನ್ನೇನು ಪ್ರಮಾಣವಚನ ಸಮಾರಂಭ ನಡೆಯುತ್ತದೆ ಎನ್ನುವಾಗ ಗಾಯತ್ರಿ ಶಾಂತಗೌಡರ ಹೆಸರು ಕೈಬಿಡಲಾಗಿದೆ ಎನ್ನುವ ಸುದ್ದಿ ಬಂದಿತ್ತು. ಗಾಯತ್ರಿ ಅವರಿಗೆ ಸಿಎಂ ಕಚೇರಿಯಿಂದ ಕರೆ ಬಂದಿಲ್ಲ ಮತ್ತು ಸಿದ್ದರಾಮಯ್ಯ ಪ್ರಮಾಣ ಸ್ವೀಕರಿಸದಂತೆ ಸೂಚಿಸಿದ್ದಾರೆ ಎನ್ನುವ ಮಾಹಿತಿ ಬಂದಿತ್ತು. ಮತ್ತೊಂದು ಮೂಲದ ಪ್ರಕಾರ, ಗಾಯತ್ರಿ ಶಾಂತಗೌಡ ಅವರು ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಿ ಗೆದ್ದಿದ್ದಾರಾದರೂ, ಇನ್ನೂ ಅಧಿಕೃತವಾಗಿ ಎಂಎಲ್‌ಸಿ ಆಗಿ ಪ್ರಮಾಣ ವಚನ ಸ್ವೀಕರಿಸಿಲ್ಲ. ಶಾಸಕಿಯಾಗಿ ಅಥವಾ ಪರಿಷತ್ ಸದಸ್ಯೆಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲೇ ಸಚಿವ ಸ್ಥಾನ ನೀಡುವುದು ಪಕ್ಷದೊಳಗೆ ತೀವ್ರ ಅಸಮಾಧಾನ ಮತ್ತು ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಹಿರಿಯ ನಾಯಕರ ಸಲಹೆಯ ಮೇರೆಗೆ ಕೊನೆ ಕ್ಷಣದಲ್ಲಿ ಅವರನ್ನು ಕೈಬಿಡಲಾಗಿದೆ. 

ಗಾಯತ್ರಿ ಶಾಂತೇಗೌಡ ಅವರು ಪ್ರಮಾಣ ವಚನ ಸ್ವೀಕರಿಸದ ಕಾರಣ, ಸದ್ಯ ವಿಸ್ತರಣೆಯಾಗಿರುವ ಡಿಕೆಶಿ ಸಂಪುಟದಲ್ಲಿ ಯಾವುದೇ ಮಹಿಳಾ ಶಾಸಕರಿಗೆ ಸ್ಥಾನ ಸಿಕ್ಕಿಲ್ಲ. ಪ್ರಮಾಣ ವಚನ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೈರಾಗಿದ್ದರು. ಹಿಂದಿನ ಸಂಪುಟದಲ್ಲಿ ಸಚಿವರಾಗಿದ್ದ ಸಂತೋಷ್ ಲಾಡ್, ಬಿ. ನಾಗೇಂದ್ರ, ಶಿವರಾಜ್ ತಂಗಡಗಿ, ಬಿ.ಜೆಡ್. ಜಮೀರ್ ಅಹ್ಮದ್ ಖಾನ್, ಎಸ್.ಎಸ್. ಮಲ್ಲಿಕಾರ್ಜುನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರೆ, ಹೊಸಬರಾಗಿ ವಿಜಯಾನಂದ ಕಾಶಪ್ಪನವರ್, ಕೆ.ಎಂ. ಶಿವಲಿಂಗೇಗೌಡ, ಪಿ.ಎಂ. ನರೇಂದ್ರಸ್ವಾಮಿ, ರುದ್ರಪ್ಪ ಲಮಾಣಿ, ಕೆ.ಎಸ್.ಬಸವಂತಪ್ಪ, ಟಿ. ರಘುಮೂರ್ತಿ, ಪುಟ್ಟರಂಗಶೆಟ್ಟಿ, ಲಕ್ಷ್ಮಣ ಸವದಿ ಸೇರಿದಂತೆ ಒಟ್ಟು 19 ಶಾಸಕರು ಮಂತ್ರಿಗಳಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಖಾಲಿ ಇರುವ ಮಹಿಳಾ ಕೋಟಾಕ್ಕೆ ಯಾರು ಸೇರ್ಪಡೆ ಆಗಲಿದ್ದಾರೆ ಎನ್ನುವ ಕುತೂಹಲ ಮುಂದುವರಿದಿದೆ.