Shivamogga, Gold Chain Robbery, Police: ಕಾಂಗ್ರೆಸ್ ಪ್ರತಿಭಟನೆಯಲ್ಲಿ ಕರ್ತವ್ಯ ನಿರತ ಮಹಿಳಾ ಅಧಿಕಾರಿಯ ಚಿನ್ನದ ಕರಿಮಣಿಗೆ ಕನ್ನ ; ಮಾಂಗಲ್ಯ ಕಳಕೊಂಡು ಕಣ್ಣೀರಿಟ್ಟ ಎಎಸ್ಐ ! 

18-12-25 02:26 pm       HK News Desk   ಕರ್ನಾಟಕ

ಕಾಂಗ್ರೆಸ್ ಪಕ್ಷದ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಕೊರಳಲ್ಲಿದ್ದ 40 ಗ್ರಾಂ ತೂಕದ ಮಾಂಗಲ್ಯ ಸರವನ್ನೇ ಕಳ್ಳರು ಎಗರಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 

Photo credits : TV9 Kannada

ಶಿವಮೊಗ್ಗ, ಡಿ.18 : ಕಾಂಗ್ರೆಸ್ ಪಕ್ಷದ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಕೊರಳಲ್ಲಿದ್ದ 40 ಗ್ರಾಂ ತೂಕದ ಮಾಂಗಲ್ಯ ಸರವನ್ನೇ ಕಳ್ಳರು ಎಗರಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಗಾಂಧಿ ಕುಟುಂಬದ ವಿರುದ್ಧ ಬಿಜೆಪಿ ನಾಯಕರು ಪಿತೂರಿ ಮಾಡಿದ್ದಾರೆಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಿದ್ದರು. ಈ ವೇಳೆ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಹಾಕಲಾಗಿತ್ತು. ಮುತ್ತಿಗೆ ಹಾಕಿದ ಕಾಂಗ್ರೆಸ್ ಕಾರ್ಯಕರನ್ನು ಕೊನೆಗೆ ಪೊಲೀಸರು ಬಂಧಿಸಲು ಮುಂದಾಗಿದ್ದರು. ಇದೇ ವೇಳೆ, ತಳ್ಳಾಟ- ಜಟಾಪಟಿ ನಡೆದಿದ್ದು ಎಎಸ್‌ಐ ಅಮೃತಾ ಅವರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುತ್ತಿದ್ದಾಗ ಚಿನ್ನದ ಕರಿಮಣಿ ನಾಪತ್ತೆಯಾಗಿದೆ.

ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯ ಎಎಸ್ಐ ಅಮೃತಾ ಸೇರಿ ಮಹಿಳಾ ಸಿಬಂದಿಯೂ ಕರ್ತವ್ಯದಲ್ಲಿದ್ದರು. ಚಿನ್ನದ ಮಾಂಗಲ್ಯ ಸರ ಮಿಸ್ ಆಗಿರುವುದು ತಿಳಿಯುತ್ತಿದ್ದಂತೆ ಅಧಿಕಾರಿ ಸ್ಥಳದಲ್ಲೇ ಕಣ್ಣೀರು ಹಾಕಿದ ಘಟನೆ ನಡೆಯಿತು. ಪ್ರತಿಭಟನೆ ಕಾರ್ಯಕ್ರಮದಲ್ಲಿ ಕರ್ತವ್ಯ ನಿರತ ಅಧಿಕಾರಿಯ ಚಿನ್ನದ ಸರವೇ ಕಳವಾಗಿರುವುದು ಇಲಾಖೆಗೆ ಮತ್ತು ಸಹೋದ್ಯೋಗಿಗಳ ನಡುವೆ ಮುಜುಗರ ತಂದಿದೆ. ಸ್ಥಳದಲ್ಲಿದ್ದ ಇತರ ಪೊಲೀಸ್ ಅಧಿಕಾರಿಗಳು ಅಮೃತಾ ಅವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬುವ ಪ್ರಯತ್ನ ಮಾಡಿದರು. 

ಪೊಲೀಸರು ಕಳವು ಘಟನೆ ಬಗ್ಗೆ ತೀವ್ರ ತನಿಖೆ ಆರಂಭಿಸಿದ್ದಾರೆ. ಪ್ರತಿಭಟನೆಯ ವೇಳೆ ಸೆರೆಹಿಡಿಯಲಾದ ವಿಡಿಯೋ ತುಣುಕುಗಳು ಮತ್ತು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಕಳ್ಳರ ಪತ್ತೆಗೆ ಜಾಲ ಬೀಸಲಾಗಿದೆ. ಕಾಂಗ್ರೆಸ್ ಪ್ರತಿಭಟನೆಯ ಗದ್ದಲದ ನಡುವೆ ಈ ದುಷ್ಕೃತ್ಯ ಎಸಗಿದವರು ಯಾರು ಎಂಬುದು ಪೊಲೀಸರ ತನಿಖೆಯಿಂದಲೇ ತಿಳಿಯಬೇಕಿದೆ.

An incident that has caused embarrassment within the police department occurred in Shivamogga on December 18, when unidentified miscreants allegedly stole a gold mangalsutra from a woman police officer who was on bandobast duty during a Congress party protest.