Yatnal expulsion, Ramesh Jarkiholi: ಯತ್ನಾಳ್​ ಉಚ್ಚಾಟನೆ ವಿಚಾರ ಒಂದು ತಿಂಗಳು‌ ಮೊದಲೇ ಗೊತ್ತಿತ್ತು , ನೂರಕ್ಕೆ ನೂರರಷ್ಟು ಈ ಉಚ್ಚಾಟನೆ ರದ್ದಾಗುತ್ತೆ ; ನಮ್ಮ ನಾಯಕ ಒಂಟಿ ಅಲ್ಲ, ಬೆಂಬಲಕ್ಕೆ ನಿಂತ ರಮೇಶ್‌ ಜಾರಕಿಹೊಳಿ

27-03-25 06:41 pm       HK News Desk   ಕರ್ನಾಟಕ

ಶಾಸಕ ಯತ್ನಾಳ್​ ಉಚ್ಚಾಟನೆ ವಿಚಾರ ಒಂದು ತಿಂಗಳು‌ ಮೊದಲೇ ಗೊತ್ತಿತ್ತು. ಹೈಕಮಾಂಡ್ ಉತ್ತರ ಕೊಟ್ಟಾಗಲೇ ಸ್ವಲ್ಪ ವಾಸನೆ ಬಡಿದಿತ್ತು. ಉಚ್ಚಾಟನೆ ತಡೆಹಿಡಿಯುತ್ತಾರೆ ಅಂದುಕೊಂಡಿದ್ದೆವು. ಆದರೆ, ನೂರಕ್ಕೆ ನೂರರಷ್ಟು ಈ ಉಚ್ಚಾಟನೆ ರದ್ದಾಗುತ್ತದೆ. ಯತ್ನಾಳ್​ ಬಿಜೆಪಿಯಲ್ಲೇ ಗಟ್ಟಿಯಾಗಿ ಮುಂದುವರಿಯುತ್ತಾರೆ. ಅದೇ ರೀತಿ ಯತ್ನಾಳ್​ ಒಂಟಿ ಅಲ್ಲ ಎಂದು‌ ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಬೆಳಗಾವಿ, ಮಾ 27: ಶಾಸಕ ಯತ್ನಾಳ್​ ಉಚ್ಚಾಟನೆ ವಿಚಾರ ಒಂದು ತಿಂಗಳು‌ ಮೊದಲೇ ಗೊತ್ತಿತ್ತು. ಹೈಕಮಾಂಡ್ ಉತ್ತರ ಕೊಟ್ಟಾಗಲೇ ಸ್ವಲ್ಪ ವಾಸನೆ ಬಡಿದಿತ್ತು. ಉಚ್ಚಾಟನೆ ತಡೆಹಿಡಿಯುತ್ತಾರೆ ಅಂದುಕೊಂಡಿದ್ದೆವು. ಆದರೆ, ನೂರಕ್ಕೆ ನೂರರಷ್ಟು ಈ ಉಚ್ಚಾಟನೆ ರದ್ದಾಗುತ್ತದೆ. ಯತ್ನಾಳ್​ ಬಿಜೆಪಿಯಲ್ಲೇ ಗಟ್ಟಿಯಾಗಿ ಮುಂದುವರಿಯುತ್ತಾರೆ. ಅದೇ ರೀತಿ ಯತ್ನಾಳ್​ ಒಂಟಿ ಅಲ್ಲ ಎಂದು‌ ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ನಗರದಲ್ಲಿಂದು ಈ ಕುರಿತು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯದ ಜನರ ಭಾವನೆ ತಿಳಿದು ಮಾತಾಡಬೇಕು ಎಂದು ನಿನ್ನೆ ಮಾತಾಡಿರಲಿಲ್ಲ. ಯತ್ನಾಳ್​ ‌ನಮ್ಮ ಪಕ್ಷ ಮತ್ತು ಸಮುದಾಯದ ದೊಡ್ಡ ನಾಯಕ. ಇವತ್ತಿಗೂ ಅವರು ನಮ್ಮ ನಾಯಕ. ಅದೇ ರೀತಿ ಪಕ್ಷದ‌ ನಿರ್ಣಯ ಪ್ರಶ್ನಿಸುವ ದೊಡ್ಡ ಮನುಷ್ಯನೂ ನಾನಲ್ಲ.‌ ಈ ರೀತಿ ಹೈಕಮಾಂಡ್ ಯಾಕೆ ನಿರ್ಣಯ ತೆಗೆದುಕೊಂಡಿದೆ ಎಂಬ ಬಗ್ಗೆ ನಾಳೆ ಬೆಂಗಳೂರಿನಲ್ಲಿ ಸಭೆ ಸೇರುತ್ತೇವೆ. ಯತ್ನಾಳ್​​ ಕೂಡ ‌ಬೆಂಗಳೂರಿಗೆ ಬರುತ್ತಾರೆ. ನಾವೆಲ್ಲರೂ ಸೇರಿ ಚರ್ಚಿಸುತ್ತೇವೆ ಎಂದರು.

ಕೇಂದ್ರದ ಶಿಸ್ತುಸಮಿತಿಗೆ ಯತ್ನಾಳ್​ ಅವರಿಂದ ಪತ್ರ ಬರೆಸಿ, ಪುನರ್‌ ಪರಿಶೀಲನೆ ‌ಮಾಡುವಂತೆ ಹೈಕಮಾಂಡ್ ಗೆ ಮನವಿ ಮಾಡಿಕೊಳ್ಳುತ್ತೇವೆ. ನಮ್ಮಿಂದಲೂ ತಪ್ಪು ಆಗಿರಬಹುದು. ನಮ್ಮಲ್ಲಿನ ನ್ಯೂನತೆ ಸರಿಪಡಿಸಿಕೊಂಡು ಪಕ್ಷದಲ್ಲಿ ಮುಂದುವರಿಯುತ್ತೇವೆ ಎಂದರು.

ಯತ್ನಾಳ್​ ಉಚ್ಚಾಟನೆ ಆಗಬಾರದಿತ್ತು. ನಮ್ಮ ಮನಸ್ಸಿಗೆ ನೋವಾಗಿದೆ. ದೊಡ್ಡ ಸಮುದಾಯದ ನಾಯಕನ ವಿರುದ್ಧ ಕ್ರಮ ಕೈಗೊಳ್ಳಬಾರದಿತ್ತು. ನಮ್ಮ ಪಕ್ಷದ ನಾಯಕರು ಯತ್ನಾಳರ‌ನ್ನು ಬಳಸಿಕೊಳ್ಳಬೇಕಿತ್ತು. ಯಾರ ಕಡೆಯಿಂದ ತಪ್ಪಾಗಿದೆ ಎಂಬುದನ್ನು ನೋಡಿಕೊಂಡು, ಪಕ್ಷಕ್ಕೆ ತಿಳಿಹೇಳುತ್ತೇವೆ. ಆದಷ್ಟು ಬೇಗನೇ ಉಚ್ಚಾಟನೆ ಆದೇಶ ಹಿಂಪಡೆಯುತ್ತಾರೆ ಅಂತಾ ನೂರಕ್ಕೆ ನೂರು ವಿಶ್ವಾಸವಿದೆ ಎಂದು ರಮೇಶ್​ ಜಾರಕಿಹೊಳಿ ಹೇಳಿದರು.

ಶಾಸಕರಾದ ಸೋಮಶೇಖರ ಮತ್ತು ಹೆಬ್ಬಾರ ಅವರನ್ನು ಯಾಕೆ ಉಚ್ಚಾಟನೆ ಮಾಡಲಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಬಹಳ ಪ್ರೀತಿ ಇದ್ದವರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ. ಬೇಕಾದವರು ಹೊರಗೆ ಹೋಗಲಿ ಎಂಬುವರನ್ನು ಹೈಕಮಾಂಡ್ ಕೇರ್ ಮಾಡುವುದಿಲ್ಲ ಎಂದು ಮಾರ್ಮಿಕವಾಗಿ ಜಾರಕಿಹೊಳಿ ಹೇಳಿದರು.

ಹಿಂದೆ ವಿಜಯೇಂದ್ರ ಬಗ್ಗೆ ಮಾತಾಡಿದ ಪ್ರತಿ ಶಬ್ದಕ್ಕೂ ನಾನು ಬದ್ಧನಿದ್ದೇನೆ. ಅದು ಇವತ್ತಿಗೆ ಬೇಡ. ಯತ್ನಾಳ್​ ಅವರ ಉಚ್ಚಾಟನೆ ಹಿಂಪಡೆಯುವಂತೆ ನಾವೆಲ್ಲಾ ಒಟ್ಟಾಗಿ ಹೈಕಮಾಂಡ್ ಬಳಿ ಮನವಿ ಮಾಡಿಕೊಳ್ಳುತ್ತೇವೆ. ಇನ್ನು ಅತೀ ಶೀಘ್ರದಲ್ಲೇ ಎಲ್ಲಾ ಸಮಸ್ಯೆ ಮತ್ತು ಗೊಂದಲಗಳು ಬಗೆಹರಿಯಲಿವೆ. ನಮ್ಮ ಪಕ್ಷ ಮತ್ತಷ್ಟು ಗಟ್ಟಿಯಾಗುವ ವಿಶ್ವಾಸ ನಮಗಿದೆ. ನಾನು, ಯತ್ನಾಳ್​ ಮತ್ತು ನಮ್ಮ ಟೀಂ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಬಿಜೆಪಿಯಲ್ಲೇ ಇದ್ದಕೊಂಡು 2028ರ ಚುನಾವಣೆಯಲ್ಲಿ 120-130 ಸೀಟ್ ಗೆಲ್ಲಿಸಿ ಮತ್ತೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದರು.

ಅದೊಂದು ಕೆಟ್ಟ ಘಳಿಗೆ. ಸೂರ್ಯ, ಚಂದ್ರನಿಗೂ ಗ್ರಹಣ ಹಿಡಿಯುತ್ತದೆ. ಹೈಕಮಾಂಡ್ ಜೊತೆಗೆ ನಿನ್ನೆಯೇ ಮಾತಾಡಿದ್ದೇನೆ. ಇದರ ಹಿಂದೆ ಯಾರ ಕೈವಾಡ ಇದೆ ಎಂಬ ಬಗ್ಗೆ ನಾನು ಮಾತಾಡಲ್ಲ. ಯತ್ನಾಳ್​ ಜೊತೆಗೆ ನಾವಿದ್ದೇವೆ. ಯತ್ನಾಳ ಒಂಟಿ ಅಲ್ಲ ಎಂದು ರಮೇಶ್​ ಜಾರಕಿಹೊಳಿ ಯತ್ನಾಳ ಪರ ಬ್ಯಾಟಿಂಗ್ ಬೀಸಿದರು.

ಹೈಕಮಾಂಡ್‌ ನ ಟಾಪ್ 10 ನಾಯಕರ ಜೊತೆಗೆ ನಿನ್ನೆ ‌ನಾನು ಮಾತನಾಡಿದ್ದೇವೆ. ಕೆಟ್ಟ ಘಳಿಗೆ, ಉಚ್ಚಾಟನೆ ರದ್ದುಪಡಿಸಲು ನಾವು ಹೈಕಮಾಂಡ್ ಗೆ ಮನವರಿಕೆ ಮಾಡುತ್ತೇವೆ. ಪಕ್ಷಕ್ಕಾಗಿ ಸ್ವಾರ್ಥ ಇಲ್ಲದೇ ನ್ಯಾಯಯುತವಾಗಿ ಯತ್ನಾಳ್​ ದುಡಿದಿದ್ದಾರೆ. ಹಾಗಾಗಿ, ನೋವಿನಲ್ಲಿ‌ ಪಕ್ಷದ ವಿರುದ್ಧ ಮಾತಾಡದಂತೆ ಯತ್ನಾಳ್​ ಅವರಿಗೆ ಕುಮಾರ ಬಂಗಾರಪ್ಪ ಫೋನ್ ಮಾಡಿ ಮಾತನಾಡಿದ್ದಾರೆ. ನನಗೆ ಮಾತನಾಡಲು ಆಗಿಲ್ಲ ಎಂದು ರಮೇಶ್​ ಜಾರಕಿಹೊಳಿ ಹೇಳಿದರು.

ಬಿಜೆಪಿ ನಮಗೆ ತಂದೆ-ತಾಯಿ ಸಮಾನ, ತಪ್ಪು ಗ್ರಹಿಕೆಯಿಂದ ಆಗಿರಬಹುದು. ಹೈಕಮಾಂಡ್ ‌ಜೊತೆಗೆ ಮಾತನಾಡುತ್ತೇವೆ. ರಾಷ್ಟ್ರೀಯ ಮಟ್ಟದ ನಾಯಕರ ಮೇಲೆ ನಮಗೆ ವಿಶ್ವಾಸ ಇದೆ. ಪುನಃ ಯತ್ನಾಳ್​ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತಾರೆ. ರಾಜ್ಯಕ್ಕೆ ಒಳ್ಳೆಯ ಸೇವೆ ಕೊಡುವ ವಿಶ್ವಾಸ ನಮಗಿದೆ. ಇನ್ನು ವಿಜಯೇಂದ್ರ ಬಗ್ಗೆ ನಾನು ಇಂದು ಮಾತನಾಡಲ್ಲ, ಹಿಂದಿನ ಮಾತಿಗೆ ನಾನು ಬದ್ಧನಿದ್ದೇನೆ ಎಂದು ರಮೇಶ್​ ಜಾರಕಿಹೊಳಿ ಸ್ಪಷ್ಟಪಡಿಸಿದರು.

ನಾಳೆ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿ ಕುಮಾರ ಬಂಗಾರಪ್ಪ ಮನೆ ಇಲ್ಲವೇ ಬೇರೆ ಎಲ್ಲಾದರೂ ಸಭೆ ಮಾಡುತ್ತೇನೆ. ರಾಷ್ಟ್ರೀಯ ನಾಯಕರ ಜೊತೆಗೆ ಮಾತನಾಡಿದ್ದೇನೆ. ಅವರ ಮೇಲೆ ನನಗೆ ವಿಶ್ವಾಸವಿದೆ. ಯತ್ನಾಳ್​ ಅವರು ಮತ್ತೆ ಬಿಜೆಪಿಯಲ್ಲಿ ಗಟ್ಟಿಯಾಗಿ ಇರುತ್ತಾರೆ. ಪಕ್ಷವನ್ನು ನಾವು ಕಟ್ಟುತ್ತೇವೆ ಎಂದು ರಮೇಶ್​ ಜಾರಕಿಹೊಳಿ ಹೇಳಿದರು.

ವಿರೋಧಿ ಬಣಕ್ಕೂ‌ ಯತ್ನಾಳ್​ ಉಚ್ಚಾಟನೆಗೂ ಯಾವುದೇ ಸಂಬಂಧ ಇಲ್ಲ. ವಿರೋಧಿ ಬಣಕ್ಕೂ ಇದು ಎಚ್ಚರಿಕೆ ಗಂಟೆ ಎಂದು ಹರಿಹಾಯ್ದರು.

Former minister and MLA Ramesh Jarkiholi said that their team will hold a meeting in Bengaluru on Friday (March 28) and discuss the developments about the veteran leader MLA Basanagouda Patil Yatnal's explusion from the party.