ಮಂಜೇಶ್ವರ ; ಹೊಸಂಗಡಿ ಬಳಿ ಕೂಲಿ ಕಾರ್ಮಿಕನ ಹತ್ಯೆಗೈದು ಪರಾರಿ, ದಾವಣಗೆರೆ ಮೂಲದ ವ್ಯಕ್ತಿ ಮಂಗಳೂರಿನಲ್ಲಿ ಸೆರೆ

07-09-26 04:09 pm       HK News Staffer   ಕ್ರೈಂ

ಕೇರಳ ಗಡಿಭಾಗ ಮಂಜೇಶ್ವರದ ಹೊಸಂಗಡಿ ಬಳಿಯ ಅಂಗಡಿಪದವು ಎಂಬಲ್ಲಿ ವಲಸೆ ಕಾರ್ಮಿಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಮೂಲದ 31 ವರ್ಷದ ವ್ಯಕ್ತಿಯನ್ನು ಮಂಜೇಶ್ವರ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ.

ಮಂಗಳೂರು, ಸೆ.7: ಕೇರಳ ಗಡಿಭಾಗ ಮಂಜೇಶ್ವರದ ಹೊಸಂಗಡಿ ಬಳಿಯ ಅಂಗಡಿಪದವು ಎಂಬಲ್ಲಿ ವಲಸೆ ಕಾರ್ಮಿಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಮೂಲದ 31 ವರ್ಷದ ವ್ಯಕ್ತಿಯನ್ನು ಮಂಜೇಶ್ವರ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ರಾಮ್ ನಾಯಕ್ (31) ಬಂಧಿತ ಆರೋಪಿ. ಕೃತ್ಯ ಎಸಗಿ ಮಂಗಳೂರಿನ ಪಡೀಲ್ ಪ್ರದೇಶದಿಂದ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ಈತನನ್ನು ಸೆರೆಹಿಡಿದಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿಯ ಲಿಂಗನಾಯಕನಹಳ್ಳಿ ನಿವಾಸಿ ರಮೇಶ್ (38) ಕೊಲೆಯಾದ ದುರ್ದೈವಿ. ಶುಕ್ರವಾರ ಸಂಜೆ ಅಂಗಡಿಪದವಿನಲ್ಲಿ ವಲಸೆ ಕಾರ್ಮಿಕರು ವಾಸಿಸುತ್ತಿದ್ದ ಎರಡು ಅಂತಸ್ತಿನ ಬಾಡಿಗೆ ಮನೆಯ ಅಡುಗೆ ಮನೆಯಲ್ಲಿ ರಮೇಶ್ ಶವವಾಗಿ ಪತ್ತೆಯಾಗಿದ್ದರು. ಶವ ಪರೀಕ್ಷೆಯಲ್ಲಿ ಎದೆಯ ಭಾಗಕ್ಕೆ ಆಳವಾಗಿ ಚೂರಿಯಿಂದ ಇರಿದಿದ್ದೇ ಸಾವಿಗೆ ಕಾರಣ ಎಂದು ಕಂಡುಬಂದಿತ್ತು. 

ಪೋಲಿಸರ ಮಾಹಿತಿಯಂತೆ, ರಾಮ್ ನಾಯಕ್ ಮತ್ತು ರಮೇಶ್ ಸ್ನೇಹಿತರಾಗಿದ್ದು, ಒಟ್ಟಿಗೆ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಸಂಜೆ ಇಬ್ಬರೂ ಕೊಠಡಿಯಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದಾಗ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ತೀವ್ರ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಆಕ್ರೋಶಗೊಂಡ ರಾಮ್ ನಾಯಕ್, ರಮೇಶ್‌ಗೆ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದ್ದ.

ಅದೇ ಮನೆಯಲ್ಲಿದ್ದ ಮತ್ತೊಬ್ಬ ಕಾರ್ಮಿಕ ಕೃಷ್ಣಪ್ಪ ಎಂಬವರು ಅಡುಗೆ ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ರಮೇಶ್‌ ಅವರ ದೇಹವನ್ನು ಕಂಡು ತಕ್ಷಣವೇ ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮನೆ ಮಾಲೀಕರು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಮಂಜೇಶ್ವರ ಠಾಣೆ ಇನ್ಸ್‌ಪೆಕ್ಟರ್ ಎಂ.ವಿ.ವಿಷ್ಣುಪ್ರಸಾದ್ ನೇತೃತ್ವದ ತನಿಖಾ ತಂಡ ಕಾರ್ಯಾಚರಣೆ ನಡೆಸಿ, ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಮಂಗಳೂರಿನಲ್ಲಿ ವಶಕ್ಕೆ ಪಡೆದಿದೆ.