ಆರೈಕೆ ನೆಪದಲ್ಲಿ ಬಂದ್ಲು ರಾಕ್ಷಸಿ ; ಚಿನ್ನಕ್ಕಾಗಿ 80ರ ವೃದ್ಧಗೆ ವಿಷವುಣಿಸಿ ಭೀಕರ ಹತ್ಯೆ, ಇನ್‌ಸ್ಪೆಕ್ಟರ್ ಟಿ.ಡಿ. ನಾಗರಾಜ್ ತನಿಖೆಗೆ ಫಲ, ಮೂವರಿಗೆ ಜೀವಾವಧಿ ಶಿಕ್ಷೆ !

29-07-26 08:56 pm       HK News Staffer   ಕ್ರೈಂ

ಚಿನ್ನಾಭರಣ ದೋಚುವ ಉದ್ದೇಶದಿಂದ ವೃದ್ಧೆಗೆ ಮೊದಲು ವಿಷವುಣಿಸಿ, ಬಳಿಕ ಉಸಿರುಗಟ್ಟಿಸಿ ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಐದು ವರ್ಷಗಳ ಹಿಂದಿನ ಈ ಸಂಚಲನಕಾರಿ ಪ್ರಕರಣಕ್ಕೆ ಮಂಗಳವಾರ ತೆರೆಬಿದ್ದಿದ್ದು, ನ್ಯಾಯಾಲಯದ ತೀರ್ಪು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿದೆ ಎಂದು ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ್ ತಿಳಿಸಿದ್ದಾರೆ.

ಮಂಗಳೂರು, ಜುಲೈ 29: ಚಿನ್ನಾಭರಣ ದೋಚುವ ಉದ್ದೇಶದಿಂದ ವೃದ್ಧೆಗೆ ಮೊದಲು ವಿಷವುಣಿಸಿ, ಬಳಿಕ ಉಸಿರುಗಟ್ಟಿಸಿ ಬರ್ಬರವಾಗಿ ಹತ್ಯೆಗೈದ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಐದು ವರ್ಷಗಳ ಹಿಂದಿನ ಈ ಸಂಚಲನಕಾರಿ ಪ್ರಕರಣಕ್ಕೆ ಮಂಗಳವಾರ ತೆರೆಬಿದ್ದಿದ್ದು, ನ್ಯಾಯಾಲಯದ ತೀರ್ಪು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿದೆ ಎಂದು ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ್ ತಿಳಿಸಿದ್ದಾರೆ.

ಜೀವಾವಧಿ ಶಿಕ್ಷೆಗೆ ಗುರಿಯಾದವರು ಅಮ್ಟಾಡಿ ಹೀರಾ ನಿವಾಸಿ ವಿಲ್ಮಾ ಪ್ರಸ್ಚಿತಾ ಬಾರೆಟ್ಟೊ (30), ನರಿಕೊಂಬು ಅಂತರಹೌಸ್ ನಿವಾಸಿ ಸತೀಶ್ (33) ಹಾಗೂ ನರಿಕೊಂಬು ಪದಕಟ್ಟೆ ಹೊಯಿಗೆಬೈಲು ನಿವಾಸಿ ಚರಣ್ ಕುಮಾರ್ (34).

ಆರೈಕೆ ನೆಪದಲ್ಲಿ ರೂಪಿಸಿದ್ದ ಕೊಲೆ ಸಂಚು;

2021ರ ಜನವರಿ 25ರಂದು ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಪಾಂಡೀಲಿ ನಿವಾಸಿ ಬೆನೆಡಿಕ್ಟ್ ಕಾರ್ಲೊ (80) ಹಾಗೂ ಪಾರ್ಶ್ವವಾಯು ಪೀಡಿತರಾಗಿದ್ದ ಅವರ ಪತಿ ಇನಾಸ್ ಕಾರ್ಲೊ ಅವರ ಆರೈಕೆಗಾಗಿ ವಿಲ್ಮಾ ಕಳೆದ ಎರಡು ತಿಂಗಳಿನಿಂದ ಕೆಲಸ ಮಾಡುತ್ತಿದ್ದರು. ಮನೆಯಲ್ಲಿದ್ದ ಅಪಾರ ಚಿನ್ನಾಭರಣದ ಮೇಲೆ ಕಣ್ಣಿಟ್ಟಿದ್ದ ವಿಲ್ಮಾ, ಅದನ್ನು ದೋಚಲು ಪರಿಚಯದ ಸತೀಶ್ ಜೊತೆ ಸಂಚು ರೂಪಿಸಿದ್ದಳು. ಸತೀಶ್ ಸಲಹೆಯಂತೆ ಬೆನೆಡಿಕ್ಟ್ ಅವರಿಗೆ ಆಹಾರದೊಂದಿಗೆ ವಿಷ ಬೆರೆಸಿ ನೀಡಲಾಗಿತ್ತು. ವಿಷ ಸೇವನೆಯಿಂದ ಅವರು ಅರೆಪ್ರಜ್ಞಾವಸ್ಥೆಗೆ ತಲುಪಿದ ಬಳಿಕ ವಿಲ್ಮಾ ಮತ್ತೊಮ್ಮೆ ಸತೀಶ್‌ಗೆ ಕರೆ ಮಾಡಿ, ಕೊಲೆ ಯೋಜನೆಯನ್ನು ಪೂರ್ಣಗೊಳಿಸಲು ಮುಂದಾದಳು.

ತಲೆದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ

ಸತೀಶ್ ತನ್ನ ಪರಿಚಯದ ಚರಣ್ ಕುಮಾರ್‌ನನ್ನು ಮನೆಗೆ ಕಳುಹಿಸಿದ್ದು, ಆತ ವಿಲ್ಮಾ ಜೊತೆ ಸೇರಿ ತಲೆದಿಂಬು ಹಾಗೂ ಬೈರಾಸ್ ಬಳಸಿ ಬೆನೆಡಿಕ್ಟ್ ಅವರನ್ನು ಉಸಿರುಗಟ್ಟಿಸಿ ಹತ್ಯೆಗೈದಿದ್ದಾನೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

₹2.75 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ

ಕೊಲೆ ಬಳಿಕ ಆರೋಪಿಗಳು ಮೃತ ವೃದ್ದೆಯ ಕುತ್ತಿಗೆಯಲ್ಲಿದ್ದ ಕರಿಮಣಿ ಸರ, ಕಿವಿಯೋಲೆ, ಬಳೆ, ಉಂಗುರ, ಚೈನ್ ಸೇರಿದಂತೆ 61.070 ಗ್ರಾಂ ತೂಕದ ಸುಮಾರು ₹2.75 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದರು.

ಅನುಮಾನಾಸ್ಪದ ಸಾವು ಕೊಲೆ ಪ್ರಕರಣವಾಗಿ ಬಯಲು

2021ರ ಜನವರಿ 26ರಂದು ಪ್ರಕರಣ ಬೆಳಕಿಗೆ ಬಂದಾಗ ಆರಂಭದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿತ್ತು. ಬಳಿಕ ತನಿಖೆ ನಡೆಸಿದ ಪೊಲೀಸರು ಇದು ಪೂರ್ವಯೋಜಿತ ಕೊಲೆ ಎಂಬುದನ್ನು ಪತ್ತೆಹಚ್ಚಿ ಕೊಲೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದರು.

32 ಸಾಕ್ಷಿದಾರರ ವಿಚಾರಣೆ ಬಳಿಕ ತೀರ್ಪು;

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು 44 ಸಾಕ್ಷಿದಾರರ ಪೈಕಿ 32 ಮಂದಿಯ ಸಾಕ್ಷ್ಯವನ್ನು ಪರಿಗಣಿಸಿ ಮೂವರನ್ನೂ ದೋಷಿಗಳೆಂದು ತೀರ್ಮಾನಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೆ, ಆರೋಪಿಗಳು ಪಾವತಿಸಬೇಕಾದ ₹33,000 ದಂಡದ ಮೊತ್ತದಲ್ಲಿ ₹8,000 ಸರ್ಕಾರಕ್ಕೆ ಹಾಗೂ ₹25,000 ಮೃತರ ಪುತ್ರ ರೊನಾಲ್ಡ್ ಕಾರ್ಲೊ ಅವರಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ತನಿಖೆಯನ್ನು ಅಂದಿನ ಪೊಲೀಸ್ ನಿರೀಕ್ಷಕ ಟಿ.ಡಿ. ನಾಗರಾಜ್ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದು, ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ಅಂದಿನ ಪೊಲೀಸ್ ನಿರೀಕ್ಷಕ ಟಿ.ಡಿ. ನಾಗರಾಜ್ ಅವರ ಸೂಕ್ಷ್ಮ ಹಾಗೂ ವೈಜ್ಞಾನಿಕ ತನಿಖೆಯೇ ಈ ಪ್ರಕರಣಕ್ಕೆ ಮಹತ್ವದ ತಿರುವು ನೀಡಿತ್ತು. ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಕೊಲೆ ಎಂದು ಸಾಬೀತುಪಡಿಸಿ, ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದ ಮುಂದೆ ಮಂಡಿಸುವಲ್ಲಿ ಅವರ ತನಿಖೆ ಪ್ರಮುಖ ಪಾತ್ರ ವಹಿಸಿದೆ.