ತ್ರಿಶ್ಶೂರಿನಿಂದ ಚಿನ್ನಾಭರಣ ಕದ್ದು ಮಂಗಳೂರಿಗೆ ಬಂದು ಸಿಕ್ಕಿಬಿದ್ದ ಕುಖ್ಯಾತ ಮನೆಗಳ್ಳತನ ಆರೋಪಿ ; 93 ಗ್ರಾಮ್ ಚಿನ್ನ ವಶಕ್ಕೆ

09-05-26 10:29 pm       HK News Desk   ಕ್ರೈಂ

ನಗರದ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ತಪಾಸಣೆ ನಡೆಸಿದಾಗ ಆತನ ಕೈಯಲ್ಲಿ ಅಪಾರ ಪ್ರಮಾಣದ ಚಿನ್ನದ ಆಭರಣಗಳು ಪತ್ತೆಯಾಗಿದ್ದು ವಿಚಾರಣೆಯಲ್ಲಿ ಅವುಗಳನ್ನು ತ್ರಿಶ್ಶೂರಿನಿಂದ ಕದ್ದು ತಂದದ್ದೆಂದು ತಿಳಿಸಿದ್ದರಿಂದ ವಶಕ್ಕೆ ಪಡೆದಿದ್ದಾರೆ.

ಮಂಗಳೂರು, ಮೇ 9: ನಗರದ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ತಪಾಸಣೆ ನಡೆಸಿದಾಗ ಆತನ ಕೈಯಲ್ಲಿ ಅಪಾರ ಪ್ರಮಾಣದ ಚಿನ್ನದ ಆಭರಣಗಳು ಪತ್ತೆಯಾಗಿದ್ದು ವಿಚಾರಣೆಯಲ್ಲಿ ಅವುಗಳನ್ನು ತ್ರಿಶ್ಶೂರಿನಿಂದ ಕದ್ದು ತಂದದ್ದೆಂದು ತಿಳಿಸಿದ್ದರಿಂದ ವಶಕ್ಕೆ ಪಡೆದಿದ್ದಾರೆ. 

ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲೂಕಿನ ಕಾಞಂಗಾಡ್ ನಿವಾಸಿ ಆಶಿಫ್ ಪಿ.ಎಚ್. (25) ಬಂಧಿತ ಆರೋಪಿ. ರೈಲು ನಿಲ್ದಾಣದಲ್ಲಿ ಅಲೆದಾಡುತ್ತಿದ್ದ ಆತನ ಜೊತೆಗಿದ್ದ ಬ್ಯಾಗ್ ತಪಾಸಣೆ ನಡೆಸಿದಾಗ, 93.5 ಗ್ರಾಂ ತೂಕದ ಚಿನ್ನಾಭರಣಗಳು ಪತ್ತೆಯಾಗಿವೆ. ಇದರಲ್ಲಿ 4 ಬಳೆಗಳು, 3 ಹಾರಗಳು, 4 ಉಂಗುರಗಳು, ಚೈನ್, ಬ್ರೇಸ್‌ಲೆಟ್ ಹಾಗೂ ಸ್ಟಡ್‌ಗಳಿದ್ದವು. 

ಕೇರಳದ ತ್ರಿಶೂರ್ ಜಿಲ್ಲೆಯ ಪಾವರಟ್ಟಿ ಠಾಣೆಯಲ್ಲಿ ಮೇ 6ರಂದು ದಾಖಲಾದ ಕಳ್ಳತನ ಪ್ರಕರಣದಲ್ಲಿ ಹತ್ತು ಪವನ್ ಬಂಗಾರ ಕಳವಾಗಿರುವುದು ತಿಳಿದುಬಂದಿತ್ತು. ಬಳಿಕ ಕೇರಳ ಪೊಲೀಸರನ್ನು ಸಂಪರ್ಕಿಸಿ, ಆರೋಪಿಯನ್ನು ವಿಚಾರಣೆ ನಡೆಸಿದಾಗ ಮನೆ ಕಳವು ಪ್ರಕರಣ ಒಪ್ಪಿಕೊಂಡಿದ್ದಾನೆ. ಎರ್ನಾಕುಳಂ ಮತ್ತು ಕಾಸರಗೋಡು ಜಿಲ್ಲೆಯ ವ್ಯಾಪ್ತಿಯಲ್ಲಿ 12ಕ್ಕೂ ಹೆಚ್ಚು ಮನೆ ಕಳವು ಪ್ರಕರಣಗಳಲ್ಲಿ ಅಶ್ರಫ್ ಆರೋಪಿಯಾಗಿದ್ದು ಕೋರ್ಟಿನಿಂದ ವಾರಂಟ್‌ಗಳಿದ್ದರೂ, ತಲೆಮರೆಸಿಕೊಂಡು ಓಡಾಡುತ್ತಿದ್ದ. ಪಾವರಟ್ಟಿ ಪೊಲೀಸರು ಮಂಗಳೂರಿಗೆ ಬಂದು ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.