ಸಾಲ ಕೊಟ್ಟ ಮಹಿಳೆಯ ಜೀವ ತೆಗೆದ ಕಟುಕರು; ಅಪಘಾತದ ನಾಟಕವಾಡಿ ಪೊಲೀಸರಿಗೇ ದೂರು, ಖಾಕಿ ಬಲೆಗೆ ಬಿದ್ದ ಐವರು

09-05-26 08:29 pm       HK News Staffer   ಕ್ರೈಂ

ಹಣಕ್ಕಾಗಿ ಸಾಲ ನೀಡಿದ್ದ ಮಹಿಳೆಯನ್ನು ಸಿನಿಮೀಯ ಶೈಲಿಯಲ್ಲಿ ಅಪಘಾತವೆಸಗಿ ಹತ್ಯೆ ಮಾಡಿದ ಬೆಚ್ಚಿಬೀಳಿಸುವ ಪ್ರಕರಣವನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಚಾಣಾಕ್ಷತನದಿಂದ ಭೇದಿಸಿದ್ದು, ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು, ಮೇ 9: ಹಣಕ್ಕಾಗಿ ಸಾಲ ನೀಡಿದ್ದ ಮಹಿಳೆಯನ್ನು ಸಿನಿಮೀಯ ಶೈಲಿಯಲ್ಲಿ ಅಪಘಾತವೆಸಗಿ ಹತ್ಯೆ ಮಾಡಿದ ಬೆಚ್ಚಿಬೀಳಿಸುವ ಪ್ರಕರಣವನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಚಾಣಾಕ್ಷತನದಿಂದ ಭೇದಿಸಿದ್ದು, ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ವಿಜಯಲಕ್ಷ್ಮಿ ಕೊಲೆಯಾದ ಮಹಿಳೆ. ಘಟನೆಗೆ ಸಂಬಂಧಿಸಿದಂತೆ ಪ್ರದೀಪ್, ರಾಕೇಶ್, ಮಂಜುನಾಥ್, ಚೇತನ್ ಹಾಗೂ ಯೋಹಾನ್ ಎಂಬುವವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಏಪ್ರಿಲ್ 21ರಂದು ಕುರುಬರಹಳ್ಳಿಯ ಪೈಪ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿಜಯಲಕ್ಷ್ಮಿಗೆ, ಪೂರ್ವಸಂಚಿನಂತೆ ಆರೋಪಿಯಾದ ರಾಕೇಶ್ ವೇಗವಾಗಿ ಬೈಕ್ ಚಲಾಯಿಸಿ ಡಿಕ್ಕಿ ಹೊಡೆದಿದ್ದ. ಬಳಿಕ ಇತರ ಆರೋಪಿಗಳು ಆಟೋದಲ್ಲಿ ಬಂದು ರಕ್ಷಿಸುವ ನಾಟಕವಾಡಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ವಿಜಯಲಕ್ಷ್ಮಿ ಏಪ್ರಿಲ್ 27ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ಸಂಬಂಧ ವಿಜಯನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿತ್ತು.

ಆದರೆ ಪ್ರಕರಣದ ತನಿಖೆ ವೇಳೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಪೊಲೀಸರಿಗೆ ಅಪಘಾತ ಉದ್ದೇಶಪೂರ್ವಕವಾಗಿ ನಡೆದಿರುವುದು ಗೊತ್ತಾಗಿದೆ. ಬೈಕ್ ಸವಾರ ನೇರವಾಗಿ ಮಹಿಳೆಗೆ ಗುದ್ದಿರುವುದು ಸ್ಪಷ್ಟವಾಗಿದ್ದು, ಇದು ಕೊಲೆ ಎಂಬ ಅನುಮಾನ ಗಟ್ಟಿಯಾಗಿತ್ತು.

ತನ್ನ ಮೇಲೆ ಅನುಮಾನ ಬಾರದಂತೆ ಮಾಡಲು ಆರೋಪಿ ರಾಕೇಶ್, ಅಪಘಾತ ನಡೆದ ಎರಡು ದಿನಗಳ ಬಳಿಕ ತಾನೇ ಪೊಲೀಸ್ ಠಾಣೆಗೆ ಹೋಗಿ, “ನಾನು ಮಹಿಳೆಯನ್ನು ರಕ್ಷಿಸಿದ್ದೇನೆ, ಅಪಘಾತ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ” ಎಂದು ದೂರು ನೀಡಿದ್ದ ಎನ್ನಲಾಗಿದೆ.

ಇನ್ನೊಂದೆಡೆ, ಗಾಯಾಳು ಮಹಿಳೆಯನ್ನು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆಕೆಯ ಪರ್ಸ್‌ನಲ್ಲಿದ್ದ ಮನೆ ಕೀಯನ್ನು ಆರೋಪಿ ಪ್ರದೀಪ್ ಕದ್ದಿದ್ದ. ಬಳಿಕ ನೇರವಾಗಿ ವಿಜಯಲಕ್ಷ್ಮಿ ಮನೆಗೆ ಹೋಗಿ ಹಣಕ್ಕಾಗಿ ಹುಡುಕಾಟ ನಡೆಸಿದ್ದ. ಈ ವೇಳೆ ಮನೆ ಮಾಲೀಕರು ಅನುಮಾನ ವ್ಯಕ್ತಪಡಿಸಿದಾಗ, “ಆಧಾರ್ ಕಾರ್ಡ್ ತೆಗೆದುಕೊಳ್ಳಲು ಬಂದಿದ್ದೇವೆ” ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದ. ಈ ಕುರಿತು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಕಳ್ಳತನ ಯತ್ನದ ದೂರು ದಾಖಲಾಗಿತ್ತು.

ಹತ್ಯೆಗೆ ಕಾರಣವೇನು?

ಕುರುಬರಹಳ್ಳಿ ನಿವಾಸಿಯಾಗಿದ್ದ ವಿಜಯಲಕ್ಷ್ಮಿ ಒಬ್ಬಂಟಿಯಾಗಿ ವಾಸವಿದ್ದು, ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದರು. ಸ್ಥಳೀಯ ನಿವಾಸಿ ಚೇತನ್ ಹಲವು ವರ್ಷಗಳಿಂದ ಪರಿಚಯ ಹೊಂದಿದ್ದು, ಮಹಿಳೆಯಿಂದ ಸಾಲ ಪಡೆದಿದ್ದ ಎನ್ನಲಾಗಿದೆ.

ಮಹಿಳೆ ಬಳಿ ಹೆಚ್ಚಿನ ಹಣವಿದೆ ಎಂದು ಭಾವಿಸಿದ ಚೇತನ್ ಈ ವಿಚಾರವನ್ನು ಸಹಚರ ಪ್ರದೀಪ್‌ಗೆ ಹೇಳಿದ್ದ. ಬಳಿಕ ಇತರ ಆರೋಪಿಗಳೊಂದಿಗೆ ಸೇರಿ ಸಂಚು ರೂಪಿಸಿ ಹತ್ಯೆ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳ್ಳತನ ಯತ್ನ ಪ್ರಕರಣದಲ್ಲಿ ಮೊದಲಿಗೆ ಪ್ರದೀಪ್ ಬಂಧನಕ್ಕೊಳಗಾಗಿದ್ದು, ವಿಚಾರಣೆ ವೇಳೆ ಕೊಲೆ ಸಂಚಿನ ರಹಸ್ಯ ಬಯಲಾಗಿತ್ತು. ಈ ಮಾಹಿತಿ ಆಧರಿಸಿ ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ.

ಪ್ರಕರಣದ ಮೊದಲ ಆರೋಪಿ ಪ್ರದೀಪ್ ಕುಮಾರಸ್ವಾಮಿ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದರೆ, ಮಂಜುನಾಥ್ ಶೇಷಾದ್ರಿಪುರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಕಸ್ಟಡಿಯಲ್ಲೇ ಆರೋಪಿ ಸಾವು;

ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ರೌಡಿ ಮಂಜುನಾಥ್‌ನನ್ನು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ನಡೆಸುವ ವೇಳೆ ಹೊಟ್ಟೆ ನೋವು ಎಂದು ಹೇಳಿದ್ದ. ಹೀಗಾಗಿ ಮೇ 2ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಮೇ 5ರಂದು ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.