ಬಸ್ ಚಲಿಸುತ್ತಿರುವಾಗಲೇ ಡ್ರೈವರ್ ಗೆ ಹೃದಯಾಘಾತ; ಪ್ರಯಾಣಿಕರ ಪ್ರಾಣ ಉಳಿಸಿ ಜೀವ ಬಿಟ್ಟ ಚಾಲಕ

08-05-26 06:20 pm       HK News Staffer   ಕ್ರೈಂ

ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಚಾಲಕನಿಗೆ ಹಠಾತ್ ಹೃದಯಾಘಾತ ಸಂಭವಿಸಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಡಿಕೇರಿ ಸಮೀಪದ ತಾಳತ್ ಮನೆ ಬಳಿ ಇಂದು ಮುಂಜಾನೆ ಸಂಭವಿಸಿದೆ.

ಮಡಿಕೇರಿ, ಮೇ 8: ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಚಾಲಕನಿಗೆ ಹಠಾತ್ ಹೃದಯಾಘಾತ ಸಂಭವಿಸಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಡಿಕೇರಿ ಸಮೀಪದ ತಾಳತ್ ಮನೆ ಬಳಿ ಇಂದು ಮುಂಜಾನೆ ಸಂಭವಿಸಿದೆ.

‘ಪೂರ್ಣಿಮಾ ಟ್ರಾವೆಲ್ಸ್’ ಬಸ್‌ ಬೆಂಗಳೂರಿನಿಂದ ಮಡಿಕೇರಿಯಿಂದ ಕಡೆಗೆ ಹೊರಟ್ಟಿತ್ತು. ಬೆಳಗ್ಗೆ ಐದು ಗಂಟೆ ಸುಮಾರಿಗೆ ತಾಲೂಕಿನ ತಾಳತ್ ಮನೆ ಬಳಿ ಚಲಿಸುತ್ತಿದ್ದ ವೇಳೆ ಬಸ್‌ನಲ್ಲೇ ಚಾಲಕನಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ಇದರಿಂದ ಬಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಇಳಿಜಾರಿಗೆ ವಾಲಿಕೊಂಡಿದೆ.

ಹೃದಯಾಘಾತವಾಗುತ್ತಿದ್ದಂತೆಯೇ ಚಾಲಕ ತನ್ನ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡು ಬಸ್ ಅನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದ್ದಾನೆ. ತೀವ್ರ ನೋವಿನ ನಡುವೆಯೂ ಬಸ್‌ ಚಾಲಕ ಬಸ್ ಅನ್ನು ಚರಂಡಿಯ ಸಮೀಪ ನಿಲ್ಲಿಸಲು ಯಶಸ್ವಿಯಾಗಿದ್ದು, ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಘಟನೆ ವೇಳೆ ಬಸ್ ಸ್ವಲ್ಪ ವಾಲಿಕೊಂಡಿದ್ದರೂ, ಪ್ರಯಾಣಿಕರ ಜೀವಕ್ಕೆ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ತೀವ್ರ ಹೃದಯಾಘಾತದಿಂದ ಚಾಲಕ ಬಸ್‌ನಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಮಡಿಕೇರಿ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸ್ ರಸ್ತೆ ಬದಿಯಲ್ಲಿ ನಿಂತಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ನಂತರ ಆತಂಕಗೊಂಡಿದ್ದ ಪ್ರಯಾಣಿಕರಿಗೆ ಬದಲಿ ವಾಹನಗಳ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರನ್ನು ಸುರಕ್ಷಿತವಾಗಿ ಗಮ್ಯಸ್ಥಾನಕ್ಕೆ ಕಳುಹಿಸಲಾಗಿದೆ.