ಪೋಕ್ಸೋ ಕೇಸ್ ಭಯಕ್ಕೆ ಠಾಣೆಯಲ್ಲೇ ಕೀ ನುಂಗಿದ ಆರೋಪಿ ; 10 ಕೆಜಿ ಬಾಳೆಹಣ್ಣು ತಿನ್ನಿಸಿ ಚಿಕಿತ್ಸೆ ನೀಡಿದ ವೈದ್ಯರು, ನಿಟ್ಟುಸಿರು ಬಿಟ್ಟ ಪೊಲೀಸರು !

08-05-26 06:12 pm       HK News Staffer   ಕ್ರೈಂ

ಅಪ್ರಾಪ್ತ ಬಾಲಕಿಯ ನಾಪತ್ತೆ ಪ್ರಕರಣದಲ್ಲಿ ಬಂಧಿತನಾಗಿದ್ದ ಯುವಕನೊಬ್ಬ, POCSO ಪ್ರಕರಣದ ಭಯದಿಂದ ಪೊಲೀಸ್ ಠಾಣೆಯಲ್ಲೇ ಲಾಕರ್ ಕೀಯನ್ನೇ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ವಿಚಿತ್ರ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಈ ಹೈಡ್ರಾಮಾ ಪೊಲೀಸರು ಹಾಗೂ ವೈದ್ಯರನ್ನು ಕೆಲಕಾಲ ತೀವ್ರ ಆತಂಕಕ್ಕೆ ದೂಡಿದ್ದು ಬಳಿಕ ಎಲ್ಲವೂ ನಿರಾಳವಾಗಿದೆ.

ಬೆಂಗಳೂರು, ಮೇ 8: ಅಪ್ರಾಪ್ತ ಬಾಲಕಿಯ ನಾಪತ್ತೆ ಪ್ರಕರಣದಲ್ಲಿ ಬಂಧಿತನಾಗಿದ್ದ ಯುವಕನೊಬ್ಬ, POCSO ಪ್ರಕರಣದ ಭಯದಿಂದ ಪೊಲೀಸ್ ಠಾಣೆಯಲ್ಲೇ ಲಾಕರ್ ಕೀಯನ್ನೇ ನುಂಗಿ ಆತ್ಮಹತ್ಯೆಗೆ ಯತ್ನಿಸಿದ ವಿಚಿತ್ರ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಈ ಹೈಡ್ರಾಮಾ ಪೊಲೀಸರು ಹಾಗೂ ವೈದ್ಯರನ್ನು ಕೆಲಕಾಲ ತೀವ್ರ ಆತಂಕಕ್ಕೆ ದೂಡಿದ್ದು ಬಳಿಕ ಎಲ್ಲವೂ ನಿರಾಳವಾಗಿದೆ.

ಆರೋಪಿಯನ್ನು ಬಳ್ಳಾರಿ ಮೂಲದ ಕಾರ್ತಿಕ್ ಅಲಿಯಾಸ್ ರಾಮು ಎಂದು ಗುರುತಿಸಲಾಗಿದ್ದು, ಏಪ್ರಿಲ್ 24ರಂದು ದಾಖಲಾಗಿದ್ದ 17 ವರ್ಷದ ಅಪ್ರಾಪ್ತೆಯ ಮಿಸ್ಸಿಂಗ್ ಪ್ರಕರಣದ ಸಂಬಂಧ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು.

ಠಾಣೆಯಲ್ಲೇ ಆತ್ಮಹತ್ಯೆ ಯತ್ನ?

ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿದ್ದ ಪೊಲೀಸರು, ವಿಚಾರಣೆ ವೇಳೆ POCSO ಕಾಯ್ದೆಯಡಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ್ರಂತೆ. ಇದರಿಂದ ಆತಂಕಗೊಂಡ ಕಾರ್ತಿಕ್, ಠಾಣೆಯಲ್ಲಿದ್ದ ಲಾಕರ್ ಕೀಯನ್ನೇ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಈ ಅಚ್ಚರಿಯ ಬೆಳವಣಿಗೆ ಠಾಣೆಯಲ್ಲಿದ್ದ ಪೊಲೀಸರನ್ನೇ ಬೆಚ್ಚಿಬೀಳುವಂತೆ ಮಾಡಿತು. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ತಕ್ಷಣವೇ ಆರೋಪಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

ಲಾಕಪ್ ಡೆತ್ ಭಯಕ್ಕೆ ಪೊಲೀಸರ ಟೆನ್ಷನ್;

ಘಟನೆ ಬಳಿಕ ‘ಲಾಕಪ್ ಡೆತ್’ ಆರೋಪ ಎದುರಾಗುವ ಭಯದಿಂದ ಪೊಲೀಸರು ಸಂಪೂರ್ಣ ಎಚ್ಚರಿಕೆ ವಹಿಸಿದ್ದರು. ಮೂರು ದಿನಗಳ ಕಾಲ ಆಸ್ಪತ್ರೆಯಲ್ಲೇ ಆರೋಪಿ ಮೇಲೆ ಕಣ್ಣಿಟ್ಟಿದ್ದ ಖಾಕಿ ಪಡೆ, ಚಿಕಿತ್ಸೆ ಪ್ರಕ್ರಿಯೆಯನ್ನೂ ನಿಕಟವಾಗಿ ಮೇಲ್ವಿಚಾರಣೆ ಮಾಡಿದೆ.

10 ಕೆಜಿ ಬಾಳೆಹಣ್ಣು ಚಿಕಿತ್ಸೆ!

ವೈದ್ಯರು ಶಸ್ತ್ರಚಿಕಿತ್ಸೆಗೆ ಮೊರೆ ಹೋಗದೆ, ಸಹಜ ವಿಧಾನದಲ್ಲಿ ಕೀಯನ್ನು ಹೊರತೆಗೆಸುವ ನಿರ್ಧಾರ ಕೈಗೊಂಡರು. ಅದಕ್ಕಾಗಿ ಆರೋಪಿಗೆ ಸುಮಾರು 10 ಕೆಜಿ ಬಾಳೆಹಣ್ಣು ತಿನ್ನಿಸಲಾಯಿತು. ಜೀರ್ಣಾಂಗದ ಮೂಲಕ ಲೋಹದ ಕೀ ಸುರಕ್ಷಿತವಾಗಿ ಹೊರಬರಲು ಈ ವಿಧಾನ ನೆರವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಕೊನೆಗೆ ಮಲ ವಿಸರ್ಜನೆ ವೇಳೆ ಕೀ ಹೊರಬಂದಿದ್ದು, ಬಳಿಕ ಪೊಲೀಸರು ನಿಟ್ಟುಸಿರು ಬಿಟ್ಟಿದ್ದಾರೆ.

ಪೊಲೀಸರಿಗೆ ವಾರ್ನಿಂಗ್
ಈ ಪ್ರಕರಣದಲ್ಲಿ ಸ್ವಲ್ಪ ಹೆಚ್ಚು-ಕಡಿಮೆ ಆಗಿದ್ದರೂ ದೊಡ್ಡ ವಿವಾದ ಸೃಷ್ಟಿಯಾಗುವ ಸಾಧ್ಯತೆ ಇತ್ತು. ಹೀಗಾಗಿ ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಬಾರದು ಎಂದು ಹಿರಿಯ ಅಧಿಕಾರಿಗಳು ಸಂಬಂಧಪಟ್ಟ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ರಾಮುವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, POCSO ಕಾಯ್ದೆಯಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜೊತೆಗೆ ಪೊಲೀಸ್ ಠಾಣೆಯೊಳಗೆ ಆತ್ಮಹತ್ಯೆಗೆ ಯತ್ನಿಸಿದ ಆರೋಪದಡಿ ಮತ್ತೊಂದು ಪ್ರತ್ಯೇಕ ಪ್ರಕರಣವೂ ದಾಖಲಾಗಿದೆ.

ಸದ್ಯ ಅಪ್ರಾಪ್ತೆಯ ನಾಪತ್ತೆ ಪ್ರಕರಣದ ತನಿಖೆಯನ್ನು ಮಾದನಾಯಕನಹಳ್ಳಿ ಪೊಲೀಸರು ಮುಂದುವರಿಸಿದ್ದಾರೆ.