ಕಾರ್ಕಳದಲ್ಲಿ ಪೊಲೀಸರ ಮೇಲೆ ಕಾರು ಹರಿಸಲು ಯತ್ನ ; ಆರೋಪಿಗಳ ತನಿಖೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜಾಲ ಬಹಿರಂಗ, ಐವರ ಬಂಧನ

29-03-26 06:03 pm       HK News Staffer   ಕ್ರೈಂ

ಕಾರ್ಕಳ ಮತ್ತು ಶಿರ್ವ ಪ್ರದೇಶಗಳಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸಿದ ಪ್ರಕರಣ ಹಾಗೂ ಕ್ರಿಕೆಟ್ ಬೆಟ್ಟಿಂಗ್ ಜಾಲದಲ್ಲಿ ತೊಡಗಿದ್ದ ಆರೋಪದಡಿ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಕಾರ್ಕಳ ಮತ್ತು ಶಿರ್ವ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ, ಮಾರ್ಚ್ 29: ಕಾರ್ಕಳ ಮತ್ತು ಶಿರ್ವ ಪ್ರದೇಶಗಳಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಪೊಲೀಸರ ಮೇಲೆ ದಾಳಿ ಮಾಡಲು ಯತ್ನಿಸಿದ ಪ್ರಕರಣ ಹಾಗೂ ಕ್ರಿಕೆಟ್ ಬೆಟ್ಟಿಂಗ್ ಜಾಲದಲ್ಲಿ ತೊಡಗಿದ್ದ ಆರೋಪದಡಿ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಕಾರ್ಕಳ ಮತ್ತು ಶಿರ್ವ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ಮೇಲೆ ವಾಹನ ಹಾರಿಸಲು ಯತ್ನ:

ಮೊದಲ ಘಟನೆ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಹಂಚಿಕಟ್ಟೆ ಸಮೀಪದ ಹೋಂಡಾ ಶೋರೂಮ್ ಬಳಿ ನಡೆದಿದೆ. ಕಾರ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಪ್ರಸನ್ನ ಎಂ.ಎಸ್. ನೇತೃತ್ವದ ತಂಡ ಬಂಗ್ಲೆಗುಡ್ಡೆ ವೃತ್ತದಿಂದ ಬರುತ್ತಿದ್ದ ಕಪ್ಪು ಕಾರನ್ನು ತಡೆಗಟ್ಟಲು ಪ್ರಯತ್ನಿಸಿತು.

ಆದರೆ, ಕಾರಿನಲ್ಲಿದ್ದ ಆರೋಪಿಗಳು ವಾಹನ ನಿಲ್ಲಿಸುವ ಬದಲು ಪೊಲೀಸರ ಮೇಲೆಯೇ ಹರಿಸಲು ಯತ್ನಿಸಿದ್ದು, ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರ್ವ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಮಂಜುನಾಥ ಮರಬಾಡ ಅವರ ತಂಡಕ್ಕೆ ಅದೇ ಕಾರು ಸಂಶಯಾಸ್ಪದವಾಗಿ ಬೆಳ್ಮಣ್ ದಿಕ್ಕಿನಿಂದ ಬರುತ್ತಿರುವ ಮಾಹಿತಿ ಲಭ್ಯವಾಯಿತು. ವಾಹನವನ್ನು ತಡೆದಾಗ ಚಾಲಕ ಮೊದಲು ವೇಗ ಕಡಿಮೆ ಮಾಡಿದರೂ, ಬಳಿಕ ಪೊಲೀಸ್ ಅಧಿಕಾರಿಯನ್ನು ತಳ್ಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ. ಕೊನೆಗೆ ಶಿರ್ವ ಪಟ್ಟಣದಲ್ಲಿ ಪೊಲೀಸರು ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್ ಜಾಲ ಬಹಿರಂಗ:

ಬಂಧಿತರನ್ನು ನಾಡೂರು ನಿವಾಸಿ ಸುದರ್ಶನ್ ಶೆಟ್ಟಿ (29), ಹೆರೂರು ನಿವಾಸಿ ಕಾರ್ತವ್ಯ ಶೆಟ್ಟಿ (27), ಮೂಡೂರು ನಿವಾಸಿ ಅರುಣ್ ಶೆಟ್ಟಿ (29), ಹೆಬ್ರಿಯ ಬೇಳಂಜೆ ನಿವಾಸಿ ತೇಜಸ್ (28) ಹಾಗೂ ಬೈಂದೂರು ತಾಲೂಕಿನ ಶಿರೂರು ನಿವಾಸಿ ಪ್ರಜ್ವಲ್ ಶೆಟ್ಟಿ (29) ಎಂದು ಗುರುತಿಸಲಾಗಿದೆ.

ತನಿಖೆ ವೇಳೆ, ಆರೋಪಿಗಳು ಸಂಘಟಿತ ಕ್ರಿಕೆಟ್ ಬೆಟ್ಟಿಂಗ್ ಜಾಲದಲ್ಲಿ ತೊಡಗಿದ್ದು, ಜನರನ್ನು ಹಣ ಹೂಡಿಕೆ ಮಾಡಲು ಪ್ರೇರೇಪಿಸಿ ಮೋಸ ಮಾಡುತ್ತಿದ್ದರೆಂಬುದು ಬೆಳಕಿಗೆ ಬಂದಿದೆ. ಅಕ್ರಮ ಜೂಜಾಟದ ಮೂಲಕ ವಂಚನೆ ನಡೆಸುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.