ಹೊಸ ಬಾವಿ ಕೊರೆಯುತ್ತಿದ್ದ ವೇಳೆ ದುರಂತ ; ಮೂವತ್ತು ಅಡಿ ಎತ್ತರದಿಂದ ಬಿದ್ದ ಮಣ್ಣು ತುಂಬಿದ ಕಬ್ಬಿಣದ ಬಕೆಟ್! ಶಿವಮೊಗ್ಗ ಮೂಲದ ಕಾರ್ಮಿಕ ದಾರುಣ ಸಾವು, ಕುತ್ತಾರಿನಲ್ಲಿ ಘಟನೆ

27-03-26 09:32 pm       HK News Staffer   ಕ್ರೈಂ

ಹೊಸ ಬಾವಿ ಕೊರೆಯುವ ಕಾಮಗಾರಿ ನಡೆಸುತ್ತಿದ್ದ ವೇಳೆ ಕ್ರೇನ್ ನ ಕೊಕ್ಕೆಯಿಂದ ಬೇರ್ಪಟ್ಟ ಮಣ್ಣು ತುಂಬಿದ್ದ ಕಬ್ಬಿಣದ ಬಕೆಟ್ ಮೂವತ್ತು ಅಡಿ ಎತ್ತರದಿಂದ ತಲೆಯ ಮೇಲೆ ಬಿದ್ದ ಪರಿಣಾಮ ವಲಸೆ ಕಾರ್ಮಿಕನೋರ್ವ ದಾರುಣ ಮೃತಪಟ್ಟ ದುರ್ಘಟನೆ ಇಂದು ಸಂಜೆ ಕುತ್ತಾರು ಪದವಿನ ಸಲಾತ್ ನಗರ ಎಂಬಲ್ಲಿ ನಡೆದಿದೆ.

ಉಳ್ಳಾಲ, ಮಾ.27: ಹೊಸ ಬಾವಿ ಕೊರೆಯುವ ಕಾಮಗಾರಿ ನಡೆಸುತ್ತಿದ್ದ ವೇಳೆ ಕ್ರೇನ್ ನ ಕೊಕ್ಕೆಯಿಂದ ಬೇರ್ಪಟ್ಟ ಮಣ್ಣು ತುಂಬಿದ್ದ ಕಬ್ಬಿಣದ ಬಕೆಟ್ ಮೂವತ್ತು ಅಡಿ ಎತ್ತರದಿಂದ ತಲೆಯ ಮೇಲೆ ಬಿದ್ದ ಪರಿಣಾಮ ವಲಸೆ ಕಾರ್ಮಿಕನೋರ್ವ ದಾರುಣ ಮೃತಪಟ್ಟ ದುರ್ಘಟನೆ ಇಂದು ಸಂಜೆ ಕುತ್ತಾರು ಪದವಿನ ಸಲಾತ್ ನಗರ ಎಂಬಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಮಲ್ಲಾಪುರ ನಿವಾಸಿ ಶಿವಕುಮಾರ ಜಿ.ಕೆ ( 30)ಮೃತ ವ್ಯಕ್ತಿ. ಉಳ್ಳಾಲ ತಾಲೂಕಿನ ಕುತ್ತಾರುವಿನ ಸಲಾತ್ ನಗರದ ಖಾಲಿ ಸೈಟೊಂದರಲ್ಲಿ ಹೊಸ ಬಾವಿ ಅಗೆಯುತ್ತಿದ್ದ ವೇಳೆ ಶುಕ್ರವಾರ ಸಂಜೆ 4.30 ರ ವೇಳೆಗೆ ದುರ್ಘಟನೆ ನಡೆದಿದೆ. ಒಟ್ಟು ಆರು ಜನ ಕೂಲಿ ಕಾರ್ಮಿಕರಲ್ಲಿ ಶಿವಕುಮಾರ್ ಸೇರಿ ಮೂವರು ಕಾರ್ಮಿಕರು ಮೂವತ್ತು ಅಡಿ ಆಳದ ಬಾವಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಕ್ರೇನ್ ಮೂಲಕ ಕಬ್ಬಿಣದ ಬಕೆಟಲ್ಲಿ ಮಣ್ಣನ್ನು ಮೇಲಕ್ಕೆತ್ತುತ್ತಿದ್ದ ಸಂಧರ್ಭ ಕ್ರೇನಿನ ಕೊಕ್ಕೆಯಿಂದ ಬೇರ್ಪಟ್ಟ ಮಣ್ಣು ತುಂಬಿದ ಬಕೆಟ್ ನೇರವಾಗಿ ಕಾರ್ಮಿಕ ಶಿವ ಕುಮಾರ್ ಅವರ ತಲೆಯ ಮೇಲೆ ಬಿದ್ದಿದೆ. ಗಂಭೀರ ಗಾಯಗೊಂಡಿದ್ದ ಶಿವಕುಮಾರ್ ನನ್ನು ಮೇಲಕ್ಕೆತ್ತಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ದಾರಿ ಮಧ್ಯದಲ್ಲಿಯೇ ಅವರು ಮೃತಪಟ್ಟಿದ್ದಾರೆ. 

ಬಾವಿಯೊಳಗಿದ್ದ ಇತರ ಇಬ್ಬರು ಕಾರ್ಮಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿವಕುಮಾರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಮೃತ ಶಿವಕುಮಾರ್ ವಿವಾಹಿತರಾಗಿದ್ದು ತನ್ನ ಪತ್ನಿ ಮತ್ತು ಮೂರು ವರ್ಷದ ಗಂಡು ಮತ್ತು ಒಂದು ವರ್ಷದ ಹೆಣ್ಣು ಮಗಳೊಂದಿಗೆ ತೊಕ್ಕೊಟ್ಟಿನ ಬಾಡಿಗೆ ಮನೆಯಲ್ಲಿ ವಾಸವಿದ್ದರು. ನಿನ್ನೆಯಷ್ಟೆ ಪತ್ನಿ ಮತ್ತು ಮಕ್ಕಳನ್ನ ಅವರು ಊರಿಗೆ ಕಳುಹಿಸಿಕೊಟ್ಟಿದ್ದರಂತೆ. ಶಿವಕುಮಾರ್ ಅವರು ಎರಡು ವಾರಗಳ ಹಿಂದಷ್ಟೆ ತನ್ನ ಕಿರಿಯ ಮಗಳ ಮೊದಲ ವರ್ಷದ ಹುಟ್ಟಿದ ಹಬ್ಬವನ್ನ ಸಂಭ್ರಮದಿಂದ ಆಚರಿಸಿದ್ದರು.