ಅಕ್ರಮ ಸಂಬಂಧ ಶಂಕೆ ; ತಾಯಿಯನ್ನ ನಿಂದಿಸಿದ್ದಕ್ಕೆ ಇಬ್ಬರನ್ನು ಕೊಚ್ಚಿ ಕೊಂದ ಬಾಲಕ, ತಾಯಿಗಾಗಿ ಬೆಂಗಳೂರಿನಲ್ಲಿ ಡಬಲ್ ಮರ್ಡರ್ !

26-03-26 06:48 pm       HK News Staffer   ಕ್ರೈಂ

ಅಪ್ರಾಪ್ತ ಬಾಲಕನೊಬ್ಬ ಮಾಡಿದ ಡಬಲ್‌ ಮರ್ಡರ್‌ ಇಡೀ ರಾಜ್ಯ ರಾಜಧಾನಿಯನ್ನೇ ಬೆಚ್ಚಿ ಬೀಳಿಸಿದೆ.  ಪೀಣ್ಯಾ HMT ಲೇಔಟ್‌ನಲ್ಲಿ 16 ವರ್ಷದ ಬಾಲಕ ಮಚ್ಚಿನಿಂದ ಕೊಚ್ಚಿ ಅಕ್ಕ ತಮ್ಮನನ್ನು ಭೀಕರವಾಗಿ ಹತ್ಯೆಗೈದಿದ್ದಾನೆ.

ಬೆಂಗಳೂರು, ಮಾರ್ಚ್ 26: ಅಪ್ರಾಪ್ತ ಬಾಲಕನೊಬ್ಬ ಮಾಡಿದ ಡಬಲ್‌ ಮರ್ಡರ್‌ ಇಡೀ ರಾಜ್ಯ ರಾಜಧಾನಿಯನ್ನೇ ಬೆಚ್ಚಿ ಬೀಳಿಸಿದೆ.  ಪೀಣ್ಯಾ HMT ಲೇಔಟ್‌ನಲ್ಲಿ 16 ವರ್ಷದ ಬಾಲಕ ಮಚ್ಚಿನಿಂದ ಕೊಚ್ಚಿ ಅಕ್ಕ ತಮ್ಮನನ್ನು ಭೀಕರವಾಗಿ ಹತ್ಯೆಗೈದಿದ್ದಾನೆ.

ಯಮುನಾ (36) ಮತ್ತು ಆಕೆಯ ಸಹೋದರ ಸುದೀಪ್ (34) ಮೃತ ವ್ಯಕ್ತಿಗಳು.

ಬಾಲಕನ ತಾಯಿ ಛಾಯಾಗೆ ಮೃತ ಯಮುನಾ ಪತಿ ಮಲ್ಲೇಗೌಡನ ಜೊತೆ ಅಕ್ರಮ ಸಂಬಂಧ ಇತ್ತು ಎಂಬ ಆರೋಪ ಕೇಳಿ ಬಂದಿದೆ. ಈ ವಿಚಾರದಲ್ಲಿ ಸ್ಪಷ್ಟನೆ ಪಡೆಯಲು ಯಮುನಾ ಮತ್ತು ಆಕೆಯ ಸಹೋದರ ಸುದೀಪ್ ಛಾಯಾ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಮೂವರಿಗೆ ಮಾತಿಗೆ ಮಾತು ಬೆಳೆದು ವಾಗ್ವಾದಕ್ಕೆ ತಿರುಗಿದೆ. ಈ ವೇಳೆ ಛಾಯಾಳನ್ನ ನಯನಾ ಹಾಗೂ ಸುದೀಪ್‌ ನಿಂದಿಸಿದ್ದಾರೆ. ಇದರಿಂದ ಕೋಪಗೊಂಡ ಛಾಯಾಳ ಅಪ್ರಾಪ್ತ ಮಗ ಮನೆಗೆ ಬಂದಿದ್ದ ಅಕ್ಕ - ತಮ್ಮನ ಮೇಲೆ ಹಲ್ಲೆ ಮಾಡಿದ್ದು, ಮಚ್ಚಿನಿಂದ ಹೊಡೆದು ಇಬ್ಬರನ್ನು ಕೊಲೆ ಮಾಡಿದ್ದಾನೆ.

ಪೀಣ್ಯಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಡಿಸಿಪಿ ನಾಗೇಶ್ ಮತ್ತು FSL ತಂಡವೂ ಸ್ಥಳಕ್ಕೆ ಆಗಮಿಸಿ ತಾಂತ್ರಿಕ ಪರಿಶೀಲನೆ ನಡೆಸಿದ್ದಾರೆ. ಬಾಲಕನಿಂದ ನಡೆದ ಕ್ರೂರ ಕೃತ್ಯಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಸಂಗ್ರಹಣೆ, ಸಿಸಿಟಿವಿ ದಾಖಲೆ ಪರಿಶೀಲನೆ ಮತ್ತು ಕುಟುಂಬದ ಸದಸ್ಯರ ವಿವರಣೆಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ.

ಇತ್ತೀಚೆಗೆ ಅಪ್ರಾಪ್ತ ಬಾಲಕರು ಹಲ್ಲೆ, ಕೊಲೆ ಮುಂತಾದ ಗಂಭೀರ ಅಪರಾಧಗಳಲ್ಲಿ ಭಾಗವಹಿಸುತ್ತಿರುವ ವರದಿಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ. ಈ ಪ್ರಕರಣವು ಮಕ್ಕಳ ಭವಿಷ್ಯ ಮತ್ತು ಸಮಾಜದ ಸುರಕ್ಷತೆಯ ಪ್ರಶ್ನೆಯಾಗಿದೆ.