ಕ್ರಿಕೆಟ್ ಆಟದ ದ್ವೇಷದಲ್ಲಿ ಸಹಪಾಠಿಗೆ ಹಲ್ಲೆ ; ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು, ಶಿವಮೊಗ್ಗದಲ್ಲಿ ಭುಗಿಲೆದ್ದ ಆಕ್ರೋಶ, ಏಳು ಮಂದಿ ಅಪ್ರಾಪ್ತರ ಬಂಧನ, 15 ಲಕ್ಷ ಪರಿಹಾರ ಘೋಷಣೆ 

24-02-26 06:01 pm       HK News Staffer   ಕ್ರೈಂ

ಕ್ರಿಕೆಟ್ ಆಟದ ದ್ವೇಷದಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ 15 ವರ್ಷದ ಬಾಲಕನೊಬ್ಬನ ಮೇಲೆ ಸಹಪಾಠಿಗಳೇ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ಶಿವಮೊಗ್ಗದಲ್ಲಿ ಭಾರೀ ಆಕ್ರೋಶದ ಅಲೆ ಎಬ್ಬಿಸಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಘಟನೆ ಸಂಬಂಧಿಸಿ ಏಳು ಮಂದಿ ಅಪ್ರಾಪ್ತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ‌

ಶಿವಮೊಗ್ಗ, ಫೆ.24 :ಕ್ರಿಕೆಟ್ ಆಟದ ದ್ವೇಷದಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ 15 ವರ್ಷದ ಬಾಲಕನೊಬ್ಬನ ಮೇಲೆ ಸಹಪಾಠಿಗಳೇ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ಶಿವಮೊಗ್ಗದಲ್ಲಿ ಭಾರೀ ಆಕ್ರೋಶದ ಅಲೆ ಎಬ್ಬಿಸಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಘಟನೆ ಸಂಬಂಧಿಸಿ ಏಳು ಮಂದಿ ಅಪ್ರಾಪ್ತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ‌

ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಸಂಕೇತ್ ಹತ್ಯೆಯಾದ ಹುಡುಗನಾಗಿದ್ದು. ನಿನ್ನೆ ರಾತ್ರಿ ಶಾಲೆಯಲ್ಲಿ ವಿಶೇಷ ತರಗತಿ ಮುಗಿಸಿ ರಾತ್ರಿ 8.30ರ ಹೊತ್ತಿಗೆ ಮನೆಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ದಾರಿಯಲ್ಲಿ ಹೋಗುತ್ತಿದ್ದಾಗ ಸ್ನೇಹಿತ ಗಿರೀಶ್ ಜೊತೆಗೆ ಅನ್ಯ ಕೋಮಿನ ಮೂವರು ಅಪ್ರಾಪ್ತ ಯುವಕರು ಜಗಳವಾಡುತ್ತಿದ್ದರು. ಸಂಕೇತ್ ಅವರ ಜಗಳ ಬಿಡಿಸಲು ಹೋಗಿದ್ದು ಈ ವೇಳೆ ಸಂಕೇತ್‌ ಎದೆಗೆ ಗುದ್ದಿದ್ದಾರೆ. ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದು ಕೂಡಲೇ ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಿ ಸಂಕೇತ್‌ ಮೃತಪಟ್ಟಿದ್ದ. ಇದರಿಂದ ಕೊಲೆ ಮಾಡಿದ ಅನ್ಯ ಕೋಮಿನ ಬಾಲಕರ ವಿರುದ್ಧ ಆಕ್ರೋಶ ಕೇಳಿಬಂದಿದೆ.

ಬೆಳೆದು ನಿಂತ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ಓದಿ ದೊಡ್ಡವನಾಗಿ ಒಳ್ಳೆ ಕೆಲಸಕ್ಕೆ ಹೋಗಿ ನಿಮ್ಮನ್ನೆಲ್ಲಾ ಚೆನ್ನಾಗಿ ನೋಡಿಕೊಳ್ತಿನಿ ಎಂದು ಹೇಳುತ್ತಿದ್ದ.  ಆದರೆ ಈಗ ಅವನೇ ಇಲ್ಲವಾಗಿದ್ದಾನೆ ಎಂದು ಕುಟುಂಬಸ್ಥರು ಅಲವತ್ತುಕೊಂಡಿದ್ದಾರೆ. ಹಲ್ಲೆಗೈದ ಅಪ್ರಾಪ್ತ ಯುವಕರು ಸಂಕೇತ್ ಜೊತೆಗೆ ಓದಿದವರೇ ಆಗಿದ್ದು ಎಸ್.ಎಸ್.ಎಲ್.ಸಿ. ಡ್ರಾಪ್ ಔಟ್ ಆಗಿದ್ದರು.

ಯುವಕರು ಗಾಂಜಾ ಮತ್ತಿನಲ್ಲಿ ಈ ರೀತಿ ಮಾಡಿರಬೇಕು ಎಂಬ ಸಂಶಯ ಉಂಟಾಗಿದೆ. ಅಲ್ಲದೆ, ಕೋಮು ದ್ವೇಷದ ಭಾವನೆಯೂ ಕೆದಕುವ ಸ್ಥಿತಿಯಾಗಿದೆ. ಸ್ಥಳೀಯರು ಮಾತ್ರ, ನಮ್ಮ ಬಡಾವಣೆಯಲ್ಲಿ ಈ ರೀತಿ ಇರಲಿಲ್ಲ. ಹೊರಗಿನಿಂದ ಬಂದವರಿಂದ ಈ ರೀತಿ ಆಗುತ್ತಿದೆ. ನಾವು ಬಡಾವಣೆಯಲ್ಲಿ ಅಣ್ಣ, ತಮ್ಮಂದಿರಂತೆ ಬದುಕುತ್ತಿದ್ದೇವೆ.  ಆದರೆ 15 - 16 ವರ್ಷಗಳ ಬಾಲಕರು ಈ ರೀತಿ ಮಾಡಿರುವುದು ಆಶ್ಚರ್ಯ ತಂದಿದೆ. ಆರೋಪಿಗಳ ಬಗ್ಗೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಶವ ಮೆರವಣಿಗೆಯಲ್ಲಿ ಹಿಂದುಗಳ ಜೊತೆಗೆ ಮುಸ್ಲಿಮರೂ ಸೇರಿದ್ದರು.

ಮರಣೋತ್ತರ ಪರೀಕ್ಷೆ ಬಳಿಕ ಸಂಕೇತ್ ಮನೆ ಬಳಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಮೃತದೇಹವನ್ನು ರಸ್ತೆ ನಡುವೆ ಇಟ್ಟು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಪರಿಹಾರ ನೀಡುವಂತೆಯೂ ಆಗ್ರಹಿಸಿದರು. ಈ ವೇಳೆ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಫೋನ್ ಕರೆ ಮಾಡಿದ ಮಾಜಿ ಡಿಸಿಎಂ ಈಶ್ವರಪ್ಪ, ಕೂಡಲೇ ಪರಿಹಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿಗೆ ದೂರವಾಣಿ ಮೂಲಕ ಪರಿಹಾರ ನೀಡಲ ಸಿಎಂ ಸಿದ್ಧರಾಮಯ್ಯ ಸೂಚಿಸಿದ್ದಾರೆ. ಸಿಎಂ ಪರಿಹಾರ ನಿಧಿಯಿಂದ 10 ಲಕ್ಷ ರೂ. ಹಾಗೂ 5 ಲಕ್ಷ ರೂ. ಶಿಕ್ಷಣ ಇಲಾಖೆಯಿಂದ ಪರಿಹಾರ ನೀಡುವುದಾಗಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಘೋಷಣೆ ಮಾಡಿದರು.