ಬಂದಿದೆ ಉಪ್ಪು ನೀರನ್ನು ಸಿಹಿ ನೀರು ಮಾಡುವ ಯಂತ್ರ ; ಆಳಸಮುದ್ರ ಬೋಟ್ಗಳಿಗೆ ಲಾಭ ಆಗಬಲ್ಲುದೇ ತಂತ್ರಜ್ಞಾನ ?

03-09-21 05:43 pm       Mangaluru Correspondent   ಕರಾವಳಿ

ಮೀನುಗಾರರ ಈ ರೀತಿಯ ಸಂಕಷ್ಟಕ್ಕೆ ಉತ್ತರ ಎನ್ನುವಂತೆ ಈಗ ಸಮುದ್ರದ ಉಪ್ಪು ನೀರನ್ನು ಶುದ್ಧಗೊಳಿಸುವ ತಂತ್ರಜ್ಞಾನ ಬಂದಿದೆ.

ಮಂಗಳೂರು, ಸೆ.3: ಸಾಮಾನ್ಯವಾಗಿ ಕಡಲಿಗೆ ಮೀನುಗಾರಿಕೆ ತೆರಳುವ ಬೋಟ್ ಕಾರ್ಮಿಕರು ಹೋಗುವಾಗಲೇ ಕುಡಿಯಲು ಬೇಕಾದಷ್ಟು ನೀರನ್ನು ಒಯ್ಯುತ್ತಾರೆ. ಒಂದು ವಾರ ಅಥವಾ 15 ದಿನಗಳ ಕಾಲ ಕಡಲಿನಲ್ಲೇ ಇದ್ದು ಬರುವ ಮಂದಿ 4-5 ಸಾವಿರ ಲೀಟರ್ ನಷ್ಟು ನೀರನ್ನು ಒಯ್ಯಬೇಕಾಗುತ್ತದೆ. ಅಷ್ಟೇ ಅಲ್ಲ, ಸುತ್ತ ನೀರಿನ ನಡುವೇ ಇದ್ದರೂ, ಕುಡಿಯುವ ನೀರನ್ನು ಮಿತವಾಗಿ ಬಳಸಬೇಕಾಗುತ್ತದೆ. 10-12 ಮಂದಿಗೆ ಬೇಕಾಗುವಷ್ಟು ನೀರನ್ನು ಒಯ್ಯುವುದು ಮತ್ತು ಅದನ್ನು ಕೊನೆಯ ವರೆಗೂ ಉಳಿಸಿಕೊಳ್ಳುವುದೇ ದೊಡ್ಡ ಸಾಹಸ.

ಆದರೆ, ಮೀನುಗಾರರ ಈ ರೀತಿಯ ಸಂಕಷ್ಟಕ್ಕೆ ಉತ್ತರ ಎನ್ನುವಂತೆ ಈಗ ಸಮುದ್ರದ ಉಪ್ಪು ನೀರನ್ನು ಶುದ್ಧಗೊಳಿಸುವ ತಂತ್ರಜ್ಞಾನ ಬಂದಿದೆ. ಅತ್ತ ಸಮುದ್ರದಿಂದಲೇ ಉಪ್ಪು ನೀರನ್ನು ಪೈಪ್ ನಲ್ಲಿ ಹೀರಿಕೊಂಡು ಇತ್ತ ಕಡೆಯಿಂದ ಶುದ್ಧ ನೀರನ್ನು ಹೊರಬಿಡುವ ಯಂತ್ರ ಬಂದಿದ್ದು ಅದರ ಪ್ರಾತ್ಯಕ್ಷಿಕೆಯನ್ನು ಮಂಗಳೂರಿನಲ್ಲಿ ನಡೆಸಲಾಯ್ತು. ಮೀನುಗಾರಿಕೆ ಸಚಿವ ಎಸ್. ಅಂಗಾರ ಮಾಧ್ಯಮ ಸದಸ್ಯರನ್ನು ಬೋಟಿನಲ್ಲಿ ಸಮುದ್ರ ತೀರಕ್ಕೆ ಕರೆದೊಯ್ದು ಅಲ್ಲಿಯೇ ಉಪ್ಪು ನೀರನ್ನು ಸಂಗ್ರಹಿಸಿ, ಯಂತ್ರದಲ್ಲಿ ಸಿಹಿಯಾಗಿ ಬಂದ ನೀರನ್ನು ಸ್ವತಃ ಕುಡಿದು ತೋರಿಸಿದರು.

ವಿದೇಶದಲ್ಲಿ ಈ ರೀತಿಯ ತಂತ್ರಜ್ಞಾನ ಸಾಮಾನ್ಯ ಆಗಿದ್ದರೂ, ಭಾರತದಲ್ಲಿ ಇನ್ನೂ ಇದು ಚಾಲ್ತಿಗೆ ಬಂದಿಲ್ಲ. ಮಂಗಳೂರಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ, ಹೊಸ ರೀತಿಯ ತಂತ್ರಜ್ಞಾನವನ್ನು ಮೀನುಗಾರಿಕೆ ಇಲಾಖೆಯಿಂದ ಜಾರಿಗೆ ತರಲು ಚಿಂತನೆ ನಡೆದಿದೆ. ಆಸ್ಟ್ರೇಲಿಯಾ ಮೂಲದ ಕಂಪನಿ ತಯಾರಿಸುವ ಈ ತಂತ್ರಜ್ಞಾನವನ್ನು ಒಂದು ಬೋಟಿಗೆ ಅಳವಡಿಸಲು 4 ಲಕ್ಷ ರೂಪಾಯಿ ಬೇಕು ಎನ್ನಲಾಗುತ್ತಿದೆ. ಆದರೆ, ಇಷ್ಟು ದುಬಾರಿ ಆಗಿರುವ ಯಂತ್ರವನ್ನು ನೇರವಾಗಿ ಖರೀದಿಸುವುದು ಮೀನುಗಾರರಿಗೆ ಕಷ್ಟ ಆಗುತ್ತೆ ಅನ್ನುವ ನೆಲೆಯಲ್ಲಿ ಮೀನುಗಾರಿಕೆ ಇಲಾಖೆಯಿಂದಲೇ 50 ಶೇ. ಸಬ್ಸಿಡಿ ನೀಡುವ ಚಿಂತನೆ ಇದೆ.

ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಜಂಟಿ ಅನುದಾನದಲ್ಲಿ ಸಬ್ಸಿಡಿ ನೀಡಲು ಸಿದ್ಧತೆ ನಡೆದಿದೆ. ಆದರೆ, ಇದಿನ್ನೂ ಪೂರ್ತಿಯಾಗಿ ಜಾರಿಗೆ ಬಂದಿಲ್ಲ. ಈ ಬಗ್ಗೆ ಮೀನುಗಾರರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಬಗ್ಗೆ ನೋಡಿಕೊಂಡು ಜಾರಿಗೆ ಯೋಜನೆ ಹಾಕಲಾಗಿದೆ. ಕರಾವಳಿಯಲ್ಲಿ ಮೂರು ಸಾವಿರದಷ್ಟು ಮೀನುಗಾರಿಕಾ ಬೋಟ್ ಗಳಿದ್ದು, ಹೆಚ್ಚಿನವರು ಒಲವು ತೋರಿದರೆ, ಯಂತ್ರವನ್ನು ಸಬ್ಸಿಡಿ ದರದಲ್ಲಿ ಸರಕಾರ ಒದಗಿಸಲು ಪ್ಲಾನ್ ಇದೆ.

ಈ ಬಗ್ಗೆ ಆಳಸಮುದ್ರಕ್ಕೆ ತೆರಳುವ ಬೋಟಿನ ಮಾಲಕರಾದ ಮಂಗಳೂರಿನ ರಾಜರತ್ನ ಸನಿಲ್ ಅವರಲ್ಲಿ ಕೇಳಿದಾಗ, ಇದೇನೂ ದೊಡ್ಡ ಲಾಭ ಅಂತ ತೋರುವುದಿಲ್ಲ. ಈಗ ನಮಗೆ ಒಂದು ಸಾವಿರ ರೂ.ಗೆ ಆರು ಸಾವಿರ ಲೀಟರ್ ಟ್ಯಾಂಕಿ ನೀರು ಸಿಗುತ್ತದೆ. ಹತ್ತನ್ನೆರಡು ದಿನಗಳಲ್ಲಿ ಆಳಸಮುದ್ರಕ್ಕೆ ತೆರಳಿ, ಮೀನುಗಾರಿಕೆ ನಡೆಸಿಕೊಂಡು ಬರುವ ಬೋಟ್ ಗಳಲ್ಲಿ ಹತ್ತು ಜನ ಕಾರ್ಮಿಕರು ಇರುತ್ತಾರೆ. ಇವರಿಗೆ ಆರು ಸಾವಿರ ಲೀಟರ್ ನೀರು ಧಾರಾಳ ಸಾಕಾಗುತ್ತದೆ. ವರ್ಷದಲ್ಲಿ 15-20 ಬಾರಿ ಬೋಟ್ ಸಮುದ್ರಕ್ಕೆ ತೆರಳುತ್ತದೆ. ಈಗ ಹೊಸ ತಂತ್ರಜ್ಞಾನಕ್ಕಾಗಿ ಸಬ್ಸಿಡಿ ಕಳೆದು ಎರಡು ಲಕ್ಷ ಹಾಕಿದ್ರೂ ನಮಗೆ ವೇಸ್ಟ್. 15 ಸಲ ಹೋಗಿ ಬರಲು ನೀರು ಒಯ್ಯುವುದಾದರೆ 15 ಸಾವಿರ ರೂ. ಸಾಕು. ಹಾಗಿರಬೇಕಿದ್ದರೆ, ಈ ಯಂತ್ರಕ್ಕೆ ಹಣ ಸುರಿದು ಅದನ್ನು ಪ್ರತಿ ತಿಂಗಳು ರಿಪೇರಿ ಮಾಡಿಕೊಂಡು ಕೂರುವುದು ಕಷ್ಟ. ನಮಲ್ಲಿ ಬೇಕಾದಷ್ಟು ಸಿಹಿ ನೀರು ಇದೆ, ನೀರು ಇಲ್ಲದ ಜಾಗಕ್ಕೆ ಮಾತ್ರ ಆಗಬಹುದು ಎನ್ನುತ್ತಾರೆ. 

Mangalore New technology  Machine that converts Salt water into fresh water invented for boats.